ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿರುವ ಲಲಿತ ನೇರ ಸ್ವಭಾವದ ಆದರೆ ಅಷ್ಟೇ ಮೃದು ಹೃದಯದ ಹೆಣ್ಣು ಮಗಳು. ತಾನಾಗಿಯೇ ಈಕೆಯನ್ನು ಬಯಸಿ ಮದುವೆಯಾದ ವ್ಯಕ್ತಿ ಆಕೆಯ ಸೋದರ ಮಾವ ಮಧುಸೂದನ. ಪ್ರೀತಿಸಿ ಮದುವೆಯಾದ ಪತಿ, ಸ್ವಂತ ಮನೆ, ಮಾಡಲು ಒಂದು ಉದ್ಯೋಗ. ಆಕೆಯ ಜೀವನ ಸ್ವರ್ಗಕ್ಕೆ ಕಿಚ್ಚು ಹಚ್ಚು ಎನ್ನುವಂತೆ ಇತ್ತು.
ಆದರೆ ವಿಧಿಯ ಆಟ ಬೇರೆಯೇ ಇತ್ತು. ಅವರಿಬ್ಬರ ಪ್ರೀತಿಯ ಫಲವಾಗಿ ಹುಟ್ಟಿದ ಗಂಡು ಮಗು ಒಂದು ವರ್ಷದವರೆಗೆ ದಷ್ಟಪುಷ್ಟವಾಗಿ ಚೆನ್ನಾಗಿಯೇ ಇತ್ತು. ಆದರೆ ಒಂದು ವರ್ಷದ ನಂತರವೂ ಕೂಡ ಮಗು ಅತ್ತಿತ್ತ ನೋಡದೆ, ಶಬ್ದ ಬಂದ ಕಡೆ ತಿರುಗದೆ ಇದ್ದಾಗ ಬಾಯಿಂದ ಆ ಎಂಬ ಶಬ್ದ ಬಿಟ್ಟು ಬೇರೇನು ಬರದೇ ಹೋದಾಗ ಮಗುವಿಗೆ ಕಿವಿ ಕೇಳಿಸುವುದಿಲ್ಲವೇನು ಎಂಬ ಅನುಮಾನ ಆಕೆಗೆ ಶುರುವಾಯಿತು. ಹಾಗೆಂದು ಮನೆಯಲ್ಲಿ ಎಲ್ಲರನ್ನೂ ಮಗುವಿನ ಈ ನಡವಳಿಕೆಯ ಕುರಿತು ಹೇಳಿದಾಗ ಕೆಲ ಮಕ್ಕಳಿಗೆ ಹೀಗೆಯೇ ತಡವಾಗುತ್ತದೆ ಎಂಬ ಸಿದ್ದ ಉತ್ತರಗಳನ್ನು ಪಡೆದಳಾಕೆ. ಗಂಡನು ಕೂಡ ಈ ಕುರಿತು ನಿರ್ಲಕ್ಷಿಸಿದಾಗ ಆಕೆಯು ಕೂಡ ಕೆಲ ದಿನಗಳ ಕಾಲ ಸುಮ್ಮನಿದ್ದಳು.
ಒಂದೆರಡು ತಿಂಗಳು ಕಳೆದ ನಂತರ ಕುಟುಂಬದ ಸ್ನೇಹಿತರೊಬ್ಬರು ತಮ್ಮ ಪುಟ್ಟ ಮಗುವಿನೊಂದಿಗೆ ಇವರ ಮನೆಗೆ ಬಂದರು. ತನ್ನ ಮಗುವಿನ ವಯಸ್ಸಿನ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ನಡೆದಾಡುವುದನ್ನು ಕೈ ಮಾಡಿ ವಸ್ತುಗಳನ್ನು ಎಳೆಯುವುದನ್ನು ಮಾತನಾಡಲು ಮತ್ತು ಗಮನ ಸೆಳೆಯಲು ಪ್ರಯತ್ನಿಸುವುದನ್ನು ಕಂಡು ಆಕೆಗೆ ಮಗುವಿನ ಕುರಿತ ತನ್ನ ಸಂದೇಹ ನಿಜವೆನಿಸಿತು.
ಅಂತೆಯೇ ಈ ಬಾರಿ ಹಠ ಮಾಡಿ ಗಂಡನೊಂದಿಗೆ ಕಿವಿ ಮೂಗು ಮತ್ತು ಗಂಟಲ ತಜ್ಞರ ಬಳಿ ಪರೀಕ್ಷೆಗಾಗಿ ಕರೆದೊಯ್ದಳು. ಮುದ್ದಾದ ಮಗು ತಾಯಿಯ ಸೊಂಟದಿಂದ ವೈದ್ಯರ ಪರೀಕ್ಷಾ ಟೇಬಲ್ ಗೆ ಸ್ಥಳಾಂತರಿಸಲ್ಪಟ್ಟಿತು. ಮೂಲ ಪರೀಕ್ಷೆ ಮುಗಿದ ನಂತರ ವೈದ್ಯರು ಇನ್ನೂ ಹಲವಾರು ಪರೀಕ್ಷೆಗಳನ್ನು ಮಾಡಿದ ನಂತರ ಪಾಲಕರನ್ನು ಕರೆದರು. ಕೊಂಚ ಆತಂಕದಿಂದ ವೈದ್ಯರ ಕೋಣೆ ಹೊಕ್ಕ ದಂಪತಿಗಳಿಗೆ ಮಗು ಸಾಮಾನ್ಯ ಮಕ್ಕಳಂತೆ ಇಲ್ಲ ಎಂಬುದನ್ನು ಮನಗಾಣಿಸಿದ ವೈದ್ಯರು ಮಗುವಿಗೆ ಸಂಪೂರ್ಣವಾಗಿ ಕಿವಿ ಕೇಳುವುದಿಲ್ಲ ಇದರಿಂದಾಗಿ ಮಾತನಾಡುವುದಕ್ಕೂ ತೊಂದರೆ ಆಗಬಹುದು ಎಂದು ಹೇಳಿದರು. ಹೆಚ್ಚಿನ ಪರೀಕ್ಷೆಗಾಗಿ ಮಗುವನ್ನು ನರರೋಗ ತಜ್ಞರ ಬಳಿ ಕರೆದೊಯ್ಯಲು ಸಲಹೆ ನೀಡಿದರು.
ಅಂತೆಯೇ ಮಗುವನ್ನು ಹೊತ್ತು ದಂಪತಿಗಳು ನರರೋಗ ತಜ್ಞರನ್ನು ಭೇಟಿಯಾದರು. ಅಲ್ಲಿಯೂ ಕೂಡ ಅವರಿಗೆ ನಿರಾಶೆಯೇ ಕಾದಿತ್ತು. ಅವರ ಮಗು ಹಲವಾರು ಸಮಸ್ಯೆಗಳನ್ನು ಹೊಂದಿರುವ, ಯಾವುದೇ ವೈದ್ಯಕೀಯ ಪರಿಹಾರಕ್ಕೂ ಜಗ್ಗದ ತೊಂದರೆಗಳನ್ನು ಹೊಂದಿದೆ ಎಂಬ ವೈದ್ಯರ ನುಡಿ ದಂಪತಿಗಳ ಭರವಸೆಯನ್ನು ಮಣ್ಣುಗೂಡಿಸಿತು. ಆದರೆ ಅದರ ಜೊತೆಗೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಿ ಲಾಲನೆ ಪಾಲನೆ ಮಾಡಿದರೆ ಮಗು ತನ್ನ ಮಟ್ಟಿಗೆ ತಾನು ತನ್ನ ಕೆಲಸ ಮಾಡಿಕೊಂಡು ಹೋಗುವಷ್ಟು ಸುಧಾರಿಸಬಹುದು ಮತ್ತು ಕಿವಿ ಕೇಳಿಸದ ಮಕ್ಕಳಿಗೆ ಇರುವ ಸ್ಪೀಚ್ ಥೆರಪಿ ಕೊಡುವ ಮೂಲಕ ಮಗುವಿಗೆ ಮಾತು ಬರುವಂತೆ ಮಾಡಬಹುದು ಎಂದು ಹೇಳಿದರು. ಕೊಂಚ ಸಮಾಧಾನಗೊಂಡ ಲಲಿತ ಗಂಡನೊಂದಿಗೆ ಹೊರಗೆ ಬಂದಳು. ಗಂಡನ ಮುಖದ ಗಂಟುಗಳು ಸಡಿಲಗೊಳ್ಳದೆ ಇರುವುದನ್ನು ಕಂಡು ಕೊಂಚ ಆತಂಕವಾದರೂ ಈಗ ತಾನೇ ಆಘಾತಕಾರಿ ವಿಷಯವನ್ನು ಕೇಳಿರುವುದರಿಂದ ಮನಸ್ಸಿಗೆ ಬೇಸರವಾಗಿರಬಹುದು ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡಳು.
ಮುಂದಿನ ಎರಡೇ ದಿನಗಳಲ್ಲಿ ಮಧುಸೂದನ ಆಕೆಗೆ ಮಗುವನ್ನು ಯಾವುದಾದರೂ ಅನಾಥಾಶ್ರಮಕ್ಕೆ ಬಿಟ್ಟು ಬರೋಣ. ಯಾವುದೇ ರೀತಿಯ ಚಿಕಿತ್ಸೆ ಪ್ರಯೋಜನಕಾರಿಯಾಗುವುದಿಲ್ಲ ಎಂದು ತಣ್ಣಗೆ ಹೇಳಿದಾಗ ಕುಳಿತಲ್ಲಿಯೇ ಕುಸಿದು ಹೋದಳು ಲಲಿತ. ಒಂದೆರಡು ದಿನಗಳ ಕಾಲ ಯೋಚಿಸಿದಳು ಆಕೆ. ಆತನ ಹುಟ್ಟಿಗೆ ಕಾರಣರಾದ ತಾವೇ ಆತನನ್ನು ಅನಾಥಾಶ್ರಮಕ್ಕೆ ಬಿಡುವುದು ಆಕೆಗೆ ಸಮ್ಮತವಿರಲಿಲ್ಲ. ಗಂಡನೊಂದಿಗೆ ಈ ಕುರಿತು ಮಾತನಾಡಲು ಮಧುಸೂದನ ಆಕೆಯ ಮಾತುಗಳಿಗೆ ಅವಕಾಶವನ್ನು ನೀಡಲಿಲ್ಲ. ನಿನಗೆ ನಾನು ಬೇಕೋ ಮಗು ಬೇಕೋ ಯೋಚಿಸು.... ನಿನಗೆ ನಾನು ಬೇಕೆಂದರೆ ಮಗುವನ್ನು ಅನಾಥಾಶ್ರಮಕ್ಕೆ ಬಿಡಲು ಒಪ್ಪಿಕೋ. ಮಗುವೆ ಬೇಕೆಂದರೆ ನಿನಗೆ ನನ್ನ ಮನೆಯಲ್ಲಿ ಸ್ಥಳವಿಲ್ಲ ಎಂದು ತನ್ನ ಕೊನೆಯ ನಿರ್ಧಾರವನ್ನು ತಿಳಿಸಿ ಮನೆಯಿಂದ ಹೊರಗೆ ನಡೆದನು.
ಕಾಲ ಕೆಳಗಿನ ನೆಲವೇ ಕುಸಿದಂತ ಅನುಭವವಾಗಿ ಅಲ್ಲಿಯೇ ಇದ್ದ ಕುರ್ಚಿ ಒಂದರಲ್ಲಿ ಕುಳಿತುಕೊಂಡ ಲಲಿತ ಸಾಕಷ್ಟು ಹೊತ್ತು ಅಳುತ್ತಲೇ ಇದ್ದಳು. ಕೊನೆಗೊಮ್ಮೆ ತನ್ನ ಕಣ್ಣೀರು ಒರೆಸಿಕೊಂಡ ಆಕೆ ನಿಧಾನವಾಗಿ ಮಗುವಿನ ಮತ್ತು ತನ್ನ ಬಟ್ಟೆ ಬರೆಗಳನ್ನು ಬ್ಯಾಗಿಗೆ ತುಂಬಿದಳು. ತನ್ನೆಲ್ಲ ಸರ್ಟಿಫಿಕೇಟ್ಗಳನ್ನು ಜೋಡಿಸಿಕೊಂಡಳು. ಒಂದು ಪುಟ್ಟ ಕಾಗದದಲ್ಲಿ ಗಂಡನಿಗೆ... ನಿಮಗೆ ಇನ್ನೊಬ್ಬ ಹೆಂಡತಿ ಸಿಗಬಹುದು ಆದರೆ ನನ್ನ ಮಗನಿಗೆ ನಾನು.... ಅವನ ತಾಯಿ ಬೇಕೇ ಬೇಕು ಎಂದು ಬರೆದು ಕಣ್ಣಿಗೆ ಕಾಣುವಂತೆ ಟೇಬಲ್ಲಿನ ಮೇಲಿಟ್ಟು... ಒಂದು ಕೈಯಲ್ಲಿ ಮಗುವನ್ನು ಮತ್ತೊಂದು ಕೈಯಲ್ಲಿ ತನ್ನ ಬ್ಯಾಗನ್ನು ಹಿಡಿದುಕೊಂಡು ಮನೆಯ ಹೊಸಿಲು ದಾಟಿದಳು.
-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ