ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ಜನವರಿ 12, 2024ರಂದು ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಲಿದೆ.
ವಿವೇಕಾನಂದ ಜಯಂತಿ ಆಚರಣೆ:
ಪ್ರತೀ ವರ್ಷದಂತೆ ಈ ವರ್ಷವೂ ಜನವರಿ 12, 2024ರಂದು ನೆಹರುನಗರ ವಿವೇಕಾನಂದ ಕಾಲೇಜಿನ ಆವರಣದ ವಿವೇಕಾನಂದ ಬಯಲು ಮಂದಿರದಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಲಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠ ಕಾರ್ಯಕ್ರಮದ ಹಿನ್ನೆಲೆಯಲ್ಲಿ “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ವಿವೇಕಾನಂದ ಜಯಂತಿಯ ಕಾರ್ಯಮಕ್ರಮ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ ಹಾಗೂ ಅಂಕಣಗಾರರಾದ ಶ್ರೀ ಪ್ರಕಾಶ್ ಮಲ್ಪೆ ಭಾಗವಹಿಸಲಿದ್ದಾರೆ.
ಏಳು ಸಾವಿರ ಮಂದಿಯ ನಿರೀಕ್ಷೆ:
ವಿವೇಕಾನಂದ ಆವರಣದಲ್ಲಿ ನಡೆಯಲಿರುವ ಈ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಕಾಲೇಜು, ವಿವೇಕಾನಂದ ಪದವಿ ಪೂರ್ವ ಕಾಲೇಜು, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಸೆಂಟ್ರಲ್ ಸ್ಕೂಲ್ (ಸಿಬಿಎಸ್ಸಿ), ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್.), ವಿವೇಕಾನಂದ ಕಾನೂನು ಕಾಲೇಜು, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ವತಿಯಿಂದ ನಡೆಸುತ್ತಿರುವ ಪ್ರೌಢ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಹೆತ್ತವರು, ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
ವಿವೇಕಾನಂದ ಕಾಲೇಜ್ ಇತಿಹಾಸ ಒಂದು ನೋಟ:
1915ರಲ್ಲಿ ಅನೇಕ ಹಿರಿಯರ ಪರಿಶ್ರಮದಿಂದ ಪುತ್ತೂರು ಎಜುಕೇಶನ್ ಸೊಸೈಟಿ (ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘ) ಅಸ್ಥಿತ್ವಕ್ಕೆ ಬಂತು. ಈ ಕೇಂದ್ರದ ಅಂಗವಾಗಿ 1916ರಲ್ಲಿ ಪುತ್ತೂರಿನಲ್ಲಿ ಶಾಲೆಯೊಂದನ್ನು ಆರಂಭಿಸಲಾಯಿತು. 1921ರಲ್ಲಿ ಆ ಶಾಲೆಯನ್ನು ಡಿಸ್ಟ್ರಿಕ್ ಬೋರ್ಡ್ಗೆ ಹಸ್ತಾಂತರಿಸಲಾಯಿತಾದರೂ ಪ್ರತೀ ವರ್ಷ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಪುತ್ತೂರು ಎಜುಕೇಶನ್ ಸೊಸೈಟಿ ಅಸ್ಥಿತ್ವದಲ್ಲಿ ಉಳಿಯಿತೆನ್ನುವುದು ಗಮನಾರ್ಹ ವಿಚಾರ. ತದನಂತರ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಎಂದು ಮರುನಾಮಕರಣಗೊಂಡು, 1965ರಲ್ಲಿ ವಿವೇಕಾನಂದ ಕಾಲೇಜು ವಿದ್ಯಾವರ್ಧಕ ಸಂಘದ ಒಂದು ಅಂಗ ಸಂಸ್ಥೆಯಾಗಿ ಸಮಾಜಮುಖಿ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಪ್ರಸ್ತುತ 80 ಸಂಸ್ಥೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಜೊತೆಗೆ ವಿವೇಕಾನಂದ ಮಹಾವಿದ್ಯಾಲವು ಸ್ವಾಯತ್ತ ಸಂಸ್ಥೆಯಾಗಿ ಮುಂದಡಿಯಿಟ್ಟಿರುವುದು ಗಮನಾರ್ಹ ವಿಚಾರ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯವೇ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೊಳಗೊಂಡ ಶುದ್ಧ, ಸರಳ ಮತ್ತು ಆಧುನಿಕ ಶಿಕ್ಷಣವನ್ನು ನೀಡುವುದು. ಮಾತ್ರವಲ್ಲದೆ ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ, ರಾಷ್ಟ್ರ ಸೇವೆಯ ಚೈತನ್ಯವನ್ನು ಉದ್ದೀಪನಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಡತೆ,ಉತ್ತಮ ಹವ್ಯಾಸ-ಸದಾಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ.
ಬೆಂಗಳೂರು ರಂಗ ಪುತ್ಥಳಿ ಕಲಾವಿದರಿಂದ ಬೊಂಬೆಯಾಟ:
ಸಭಾ ಕಾರ್ಯಕ್ರಮದ ನಂತರ ಸ್ವಾಮೀ ವಿವೇಕಾನಂದರ ಜೀವನ ಚರಿತ್ರೆ ಆಧಾರಿತ ಪ್ರಸಂಗವನ್ನು ಸೂತ್ರ ಮತ್ತು ಸಲಾಕೆ ಬೊಂಬೆಯಾಟದ ಮೂಲಕ ರಂಗ ಪುತ್ಥಳಿ ಬೊಂಬೆಯಾಟದ ಕಲಾವಿದರು, ಬೆಂಗಳೂರು ಪ್ರಸ್ತುತ ಪಡಿಸಲಿದ್ದಾರೆ.
ವಾಲ್ಮೀಕಿ ರಾಮಾಯಣ ಕುರಿತ ಚಿತ್ರ ಪ್ರದರ್ಶನ:
ಹಿಂದೂ ಧರ್ಮದ ಪ್ರಮುಖ ಎರಡು ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಕೃತಿಗಳಲ್ಲಿ ಅಚ್ಚಾಗಿರುವ ರಾಮಾಯಣದ ಸಾಮಾಜಿಕ ಮೌಲ್ಯಗಳು, ಪರಂಪರೆ, ಸಂಪ್ರಾದಾಯ, ವಿಚಾರಧಾರೆಗಳನ್ನು ಪಸರಿಸುವ ನಿಟ್ಟಿನಲ್ಲಿ 2024ರ ವಿವೇಕ ಜಯಂತಿಯ ವಿಶೇಷ ಆಕರ್ಷಣೆಯಾಗಿ ಭರತಕಂಡದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ರಾಮಾಯಣದ ನೈಜ ಘಟನಾಧಾರಿತ ಚಿತ್ರ ಪ್ರದರ್ಶನವಿರಲಿದೆ.
ಶ್ರೀರಾಮ ಕಥಾ ವೈಭವ:
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ವತಿಯಿಂದ ಶ್ರೀರಾಮ ಕಥಾ ವೈಭವವು ಜನವರಿ 14, 2024ರಂದು ವಿವೇಕನಗರ, ತೆಂಕಿಲ, ಪುತ್ತೂರಿನಲ್ಲಿ ಸಂಜೆ 5.30 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.
ಶ್ರೀರಾಮ ಪ್ರಾಣ ಪ್ರತಿಷ್ಠ ಸಪ್ತಾಹ ಸರಣಿ ವಿಚಾರ ಸಂಕಿರಣ:
ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠ ಸಮಾರಂಭದ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಜನವರಿ 13ರಿಂದ 22ರ ವರೆಗೆ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವನ್ನು ಜನವರಿ 13ರಂದು ಡಾ. ಕೆ ಯಂ ಕೃಷ್ಣ ಭಟ್, ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಇವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಯುವಪೀಳಿಗೆಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾಡುತ್ತಿದೆ. ಈ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜನವರಿ 22ರಂದು ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೆ ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದಾರೆ.
-ಡಾ. ಕೆ.ಯಂ. ಕೃಷ್ಣ ಭಟ್
ಕಾರ್ಯದರ್ಶಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ