ಶ್ರೀರಾಮ ಕಥಾ ಲೇಖನ ಅಭಿಯಾನ-28: ಶಂಕರ ರಾಮ- ಶಂಕರಾಚಾರ್ಯರು ಕಂಡ ಅದ್ವೈತ ರಾಮ

Upayuktha
0



- ಉಂಡೆಮನೆ ವಿಶ್ವೇಶ್ವರ ಭಟ್ಟ


'ಶಿವಶಿವ ರಾಮರಾಮ'- ನಮ್ಮ ಚಿಕ್ಕಂದಿನ ದಿನಗಳಲ್ಲಿ ಮುಸ್ಸಂಜೆಯ ಹೊತ್ತಿಗೆ ದೇವರ ದೀಪ ಬೆಳಗಿ; ಶಂಖ ಊದಿದ ಬಳಿಕ ನಾವೆಲ್ಲರೂ ಸೇರಿ ಹೇಳಲೇಬೇಕಾಗಿದ್ದ ಅದ್ವೈತ (ಶಿವ-ರಾಮರು ಬೇರೆ ಬೇರೆಯಲ್ಲ ಎನ್ನುವ ಅರ್ಥದಲ್ಲಿ) ಮಂತ್ರ. ಅಂದು ಹಿರಿಯರ ಒತ್ತಡದಲ್ಲಿ ಹೇಳಬೇಕಾಗಿದ್ದರೂ ಇಂದು ಆ ಮಂತ್ರವನ್ನು ನೆನಪಿಸುವಾಗ ಅದ್ವೈತತತ್ತ್ವವು ನಮ್ಮೊಳಗೆ ಸೇರಿ ಬೆಳೆಯಲು ಅದು ಬೀಜವಾಗಿತ್ತು ಎನ್ನುವುದು ನನ್ನ ಮಟ್ಟಿಗೆ ಅನುಭವ ಜನ್ಯ. ಶಿವ- ರಾಮ ಈ ಎರಡು ಪದಗಳ ಅರ್ಥದಲ್ಲಿ ಸಾಮ್ಯವಿದೆ. ಮನೋಹರ, ಮಂಗಳ, ಆನಂದ.. ಮುಂತಾದ ಅರ್ಥಗಳಿವೆ. ಶಿವ ಪದಕ್ಕೆ ವೇದವೆನ್ನುವ ಅರ್ಥವೂ ಇದೆ. ಇದು ರಾಮ ಪದಕ್ಕೆ ಕಾಣಿಸುತ್ತಿಲ್ಲ. ಶಿವನು ಉಮೆಯಲ್ಲಿ 'ರಾಮ ನಾಮವು ಸಹಸ್ರನಾಮಗಳಿಗೆ ಸಮವಾದುದು' ಎಂದು ಹೇಳುವುದನ್ನು ವಿಷ್ಣು ಸಹಸ್ರನಾಮದ ಫಲಶ್ರುತಿಯಲ್ಲಿ ನಾವು ಕಾಣುತ್ತೇವೆ. ಇದರ ಇನ್ನೊಂದು ಮಗ್ಗುಲನ್ನು ನೋಡಿದರೆ ವೇದವೂ (ಶಿವ)ರಾಮನಾಮದ ಮಹಿಮೆಯನ್ನು ಸಾರುತ್ತದೆ ಎಂದು ಅರ್ಥೈಸಬಹುದಲ್ಲವೇ?


ಶಂಕರಾಚಾರ್ಯರ ರಾಮಭುಜಂಗಪ್ರಯಾತ ಸ್ತೋತ್ರದ ಒಂದು ನುಡಿಯಲ್ಲಿ 'ಕಾಶಿಯಲ್ಲಿ ಮರಣೋನ್ಮುಖರಾಗಿರುವ ಭಕ್ತರ ಕಿವಿಯಲ್ಲಿ ಶಿವನು ರಾಮನಾಮೋಚ್ಚಾರಣೆಯನ್ನು ಮಾಡುತ್ತಾನೆ' ಎನ್ನುವುದು ಬರುತ್ತದೆ. 'ಶಂಕರಂ ಶಂಕರಾಚಾರ್ಯಂ'- ಇದು ನಮ್ಮ ದೃಢವಾದ ನಂಬಿಕೆ. ಶಂಕರನು ತನ್ನ ಮಾತನ್ನು ಶಂಕರಾಚಾರ್ಯನಾಗಿ ಮತ್ತೊಮ್ಮೆ ಈ ಸ್ತೋತ್ರದ ಮೂಲಕ ಹೇಳುತ್ತ ದೃಢಪಡಿಸಿದನೆನಿಸುತ್ತದೆ. ಇಷ್ಟು ಮಾತ್ರವಲ್ಲ! ರಾಮನ ವ್ಯಕ್ತಿತ್ವವನ್ನು, ರಾಮ ಪದದ ಅರ್ಥವನ್ನು ಶಂಕರಾಚಾರ್ಯರು ಈ ಸ್ತೋತ್ರದಲ್ಲಿ ಅನನ್ಯ ಎನ್ನುವಂತೆ  ಬಣ್ಣಿಸಿದ್ದಾರೆ. 


ವಿಶುದ್ಧಂ ಪರಂ ಸಚ್ಚಿದಾನಂದರೂಪಂ ಗುಣಾಧಾರಮಾಧಾರಹೀನಂ ವರೇಣ್ಯಮ್।

ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ ಸುಖಾಂತಂ ಸ್ವಯಂ ರಾಮ ರಾಮ ಪ್ರಪದ್ಯೇ।।

ರಾಮನೆಂದರೆ ಆನಂದ. ಆನಂದ ಎಂದರೇನು? ಎಂದರೆ- ರಾಮ. ಪರಮಶುದ್ಧನಾದ ರಾಮನು ಆನಂದಸ್ವರೂಪನಾಗಿದ್ದಾನೆ. ಅವನು ಸತ್ತ್ವ, ರಜ ತಮಗಳೆಂಬ ತ್ರಿಗುಣಗಳಿಗೆ ಅತೀತನಾದವನು. ಆದರೆ ರಾಮನು ತ್ರಿಗುಣಾಧಾರನು (ಈ ಗುಣಗಳಿಗೆ ಆಧಾರನು). ರಾಮನು ಆಧಾರನಾಗಿರುವ ಆದರೆ ಆಧಾರರಹಿತನಾದ ಮಹಾತ್ಮನಾಗಿದ್ದಾನೆ! ಬೆಳಗುವವನು ಆದರೂ ರಹಸ್ಯಮಯನು. ಅವನು ಎಲ್ಲರಿಗೂ ಎಲ್ಲವಕ್ಕೂ ನೆಲೆಯಾಗಿರುವವನು, ತನಗೆ ತಾನೇ ನೆಲೆಯಾಗಿರುವವನು. ಮಂಗಲಮಯ(ಶಿವ)ನಾದ ರಾಮನು  ಮಾರಕಗಳಿಂದ  ಪಾರುಮಾಡುವ ಶಾಶ್ವತನಾದ ತಾರಕನು. ಅವನಿಗೆ ಶರಣು ಎನ್ನುತ್ತಾರೆ ಶಂಕರರು.



ಮಾನನೀಯನಾಗಿರುವ, ನಿರಾಕಾರನಾಗಿರುವ ರಾಮನು ಮಹಾಧಿಪತಿ, ಕಲಾಧಿಪತಿ, ಸುರಾಧಿಪತಿ, ನರಾಧಿಪತಿ, ಭೂಪತಿಯಾಗಿದ್ದಾನೆ. ಅವನು ನಿಜಾರ್ಥದ ಅನಾಥ. ಅವನಿಗೆ ಅವನೇ ನಾಥ.ಅವನಿಗೆ ನಾಥನೆನ್ನುವವರು ಯಾರೂ ಇಲ್ಲ.


ಯದಾವರ್ಣಯತ್ಕರ್ಣಮೂಲೇಂತಕಾಲೇ ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್।

ತದೇಕಂ ಪರಂ ತಾರಕಬ್ರಹ್ಮರೂಪಂ ಭಜೇsಹಂ ಭಜೇsಹಂ ಭಜೇsಹಂ  ಭಜೇsಹಂ।।

ರಾಮರಾಮ ಎಂಬ ತಾರಕ ಮಂತ್ರವನ್ನು ಶಿವನು ಬದುಕಿನ ಕೊನೆಯ ಕಾಲದಲ್ಲಿರುವವರ ಕಿವಿಯಲ್ಲಿ ಉಸುರುತ್ತಾನೆಂದರೆ 'ರಾಮ' ಪದದ ಮಹಿಮೆ, ರಾಮನ ವ್ಯಕ್ತಿತ್ವ ಎಂತಹದ್ದಿರಬೇಕು! ತಾರಕ ಬ್ರಹ್ಮರೂಪನಾದ ಏಕೈಕನಾದ ಪರಮಾತ್ಮನನ್ನು ಭರಿಸುತ್ತಾ ಇರುತ್ತೇನೆಂದು ಆಚಾರ್ಯರು ಹೇಳುತ್ತಾರೆ. ಇದು ಅವರು ನಮಗಿತ್ತ ಕರೆಯೂ ಹೌದಲ್ಲವೇ?


ಆಲಿಸಿ: ಆದಿ ಶಂಕರಾಚಾರ್ಯ ವಿರಚಿತ ಶ್ರೀರಾಮಭುಜಂಗಪ್ರಯಾತಸ್ತೋತ್ರಮ್


ಇಂತಹ ರಾಮನು ಮಂದಾರ ಕಲ್ಪವೃಕ್ಷದಡಿಯಲ್ಲಿರುವ ರತ್ನಪೀಠದಲ್ಲಿ ವೀರಾಸನದಲ್ಲಿ ಚಿನ್ಮುದ್ರೆಯೊಂದಿಗೆ ವಿರಾಜಮಾನನಾಗಿದ್ದಾನೆ ಎಂದು ಆಚಾರ್ಯರು ವರ್ಣಿಸುತ್ತಾರೆ. ರಾಮನು ವೀರನೂ ಹೌದು ಜ್ಞಾನವನ್ನು ಧಾರೆಯೆರೆವ ಆನಂದ ಸ್ವರೂಪಿಯೂ ಹೌದು. ಅವನು ಜ್ಞಾನಾನಂದಮಯಿ ಶಿಕ್ಷಣದ ಶಿಕ್ಷಕ- ಲೋಕಗುರು! ಕಲ್ಪವೃಕ್ಷದಡಿಯಲ್ಲಿ ಕುಳಿತ ರಾಮನು ಕಲ್ಪನರಶ್ರೇಷ್ಠ.


ಕಾಲಿನಲ್ಲಿ ಕಾಲ್ಗೆಜ್ಜೆ, ಕೊರಳಿನಲ್ಲಿ ಕೌಸ್ತುಭದಿಂದ ಕಂಗೊಳಿಸುವ ರತ್ನಹಾರ. ಇದರೊಂದಿಗೆ ದುಂಬಿಗಳನ್ನು ಸೆಳೆಯುತ್ತಿರುವ ಸುವಾಸಿತ ಮಧುತುಂಬಿದ ಮಂದಾರ ಮಾಲೆ(ಭಕ್ತವತ್ಸಲ, ಪ್ರಜಾವತ್ಸಲನಾದ ರಾಮನೆದೆಯಲ್ಲಿ ಒಲವಿನ ಜೇನು ತುಂಬಿದ ಕಾರಣದಿಂದಲ್ಲವೆ ಮಾತನಾಡಲು ಕಲಿತಂದಿನಿಂದ ಮಾತು ಬೀಳುವ ತನಕ ನಾವು ರಾಮರಾಮ ಎನ್ನುತ್ತಿರುವುದು! ಅದು ಸಾಧ್ಯವಾಗದಾಗ ಮನದಲ್ಲಿಯೇ ರಾಮಜಪ. ಅದೂ ಸಾಧ್ಯವಾಗದಾಗ ಶಿವನೇ ನಮ್ಮ ಕಿವಿಯಲ್ಲುಸುರಿ ರಾಮಾನಂದವನ್ನು ತುಂಬುತ್ತಾನೆ. ಅಂತ್ಯಕಾಲದಲ್ಲಿ ಚಿಂತನೆ ನಡೆಸುವಂತೆ ಮಾಡುತ್ತಾನೆ). ಪೀತಾಂಬರದ ಶೋಭೆಯನ್ನು ಹೆಚ್ಚಿಸುವ ಹೊಳೆಯುವ ಒಡ್ಯಾಣ. ಚೆಂದುಟಿಗಳ ಚೆಲುವನಾದ ರಾಮನು ಸೀತೆ-ಲಕ್ಷ್ಮಣ-ಭರತ ಶತ್ರುಘ್ನರೊಂದಿಗೆ ಇದ್ದು ಆನಂದವನ್ನೀಯುತ್ತಿದ್ದಾನೆ. ಕೋಟಿಸೂರ್ಯರ ಬೆಳಕಿನಲ್ಲಿ ಬೆಳಗುತ್ತಿರುವ ರಾಮನ ಪಾದವು ಬ್ರಹ್ಮ ರುದ್ರಾದಿಗಳ ಕಿರೀಟಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಅವನು ದೇವರ ದೇವ. ಅವನ ಪಾದತಳದಲ್ಲಿ ಬದ್ಧಾಂಜಲಿಯಾಗಿ, ರಾಮಸೇವೆಗಾಗಿ ಸದಾ ಹಂಬಲಿಸುತ್ತ ಆಸೀನನಾಗಿರುವ ಆಂಜನೇಯ. ಅವನಿಗೆ ರಾಮನು ಚಿನ್ಮುದ್ರೆಯೊಂದಿಗೆ ಜ್ಞಾನೋಪದೇಶವನ್ನು ನೀಡುತ್ತಿದ್ದಾನೆ. ಆಂಜನೇಯನಲ್ಲದೆ  ಸಮಸ್ತ ಕಪಿನಾಯಕರು, ರಾಜರುಗಳೂ ಜ್ಞಾನಪಾನದಲ್ಲಿ ಆನಂದಿತರಾಗಿದ್ದಾರೆ.


ತ್ವಮೇವಾಸಿ ದೈವಂ ಪರಂ ಮೇ ಯದೇಕಂ ಸುಚೈತನ್ಯಮೇತತ್ತ್ವದನ್ಯಂ ನ ಮನ್ಯೇ।

ಯತೋsಭೂದಮೇಯಂ ವಿಯದ್ವಾಯುತೇಜೋ-ಜಲೋರ್ವ್ಯಾದಿಕಾರ್ಯಂ ಚರಂ ಚಾಚರಂ ಚ।।

ರಾಮನು ಏನಲ್ಲ! ದೈವವೂ ಅವನೇ, ಚೈತನ್ಯವೂ ಅವನೇ! ಪಂಚಭೂತಗಳಾದ ಪೃಥ್ವಿ, ಆಕಾಶ, ವಾಯು, ಜಲ ಮತ್ತು ತೇಜಸ್ಸುಗಳು ಅವನೇ! ಎಲ್ಲವೂ ಅವನಿಂದಲೇ ಆಗಿವೆ(ತೇನ ವಿನಾ ತೃಣಮಪಿ ನ ಚಲತಿ). ಈ ಎಲ್ಲವುಗಳಲ್ಲು ನಾವು ಆನಂದವನ್ನು ಕಾಣಬಹುದಾಗಿದೆ. ಸಚ್ಚಿದಾನಂದ ಸ್ವರೂಪದ, ವೇದವೇದ್ಯನಾದ, ಪುಣ್ಯಲಭ್ಯನಾದ ರಾಮನು ತನ್ನ ಭಕ್ತರಲ್ಲಿ ಸದಾ ಅನುರಕ್ತನಾದವನು. ಅದುವೇ ಅವನಿಗೆ ಆನಂದ!!


ವಿಶ್ವದ ಸೃಷ್ಟಿಕರ್ತ- ಪಾಲಕ-ಸಂಹಾರಕನೂ ಅವನೇ ಆಗಿದ್ದಾನೆ. ವಿಶ್ವದ ಕಣ್ಣಾಗಿರುವ ಅವನು ಅದರ ತಾಯಿಯೂ ತಂದೆಯೂ ಆಗಿದ್ದಾನೆ. ಅಕ್ಷರಗಳಲ್ಲಿ ಬಣ್ಣಿಸಲು ಅಸದಳವಾದ ರಾಮನ ಪಾವನ ಚಾರಿತ್ರ್ಯದ ಸ್ಮರಣೆ ಮಾಡಿದರೆ, ರಾಮನಾಮಾಮೃತವನ್ನು ಸವಿದರೆ ಸಾವೂ ನಮ್ಮ ಸಮೀಪಕ್ಕೆ ಬರದು! ಎಂದು ಶಂಕರರು ಉದ್ಗರಿಸುತ್ತಾರೆ.


ಅವನ ಸಾಹಸ ಅಸಾಮಾನ್ಯ. ಬಾಲ್ಯದಲ್ಲಿಯೇ ಶಿವಧನುಸ್ಸನ್ನು ಮುರಿದ ರಾಮನು ಪ್ರಚಂಡ ಪ್ರತಾಪಿ. ಪಾದದ ದೂಳಿನ ಸ್ಪರ್ಶಮಾತ್ರದಿಂದ ಚೈತನ್ಯವರಳಿಸಿದ ಮಹಾತ್ಮ. ಅವನ ನಾಮ ಸ್ಮರಣೆಯಿಂದ ಭವಾಬ್ಧಿಯನ್ನು ದಾಟಬಲ್ಲೆವು.

ರಾಮನ ವ್ಯಕ್ತಿತ್ವ ಅತ್ಯಪೂರ್ವ. ಅದನ್ನು ಆಚಾರ್ಯರು ಹೀಗೆ ಚಿತ್ರಿಸಿದ್ದಾರೆ- ಸೀತೆಯೊಂದಿಗಿರದ ಸೀತಾರಾಮನನ್ನು, ಲಕ್ಷ್ಮಣನೊಂದಿಗಿರದ ಲಕ್ಷ್ಮಣಾಗ್ರಜನನ್ನು, ಸಮುದ್ರದ ಅಹಮಿಕೆಯನ್ನು ಮುರಿಯದ ಪ್ರತಾಪಿಯನ್ನು, ಅಸುರ ವಂಶದ ಸಹಿತ ರಾವಣನನ್ನು ವಧಿಸದ ರಾವಣಾರಿ ಅಸುರಾರಿಯನ್ನು, ಸುಗ್ರೀವನ ಸಖ್ಯವನ್ನು ಮಾಡದವನನ್ನು, ವಂದನೀಯವಾದ ಸಿಟ್ಟು ಇರದವನನ್ನು,ಬಂಧುಗಳ ಸಮೇತ ಪ್ರಯಾಣ ಮಾಡದವನನ್ನು, ದಂಡಕಾರಣ್ಯದಲ್ಲಿ ವಾಸಮಾಡದವನನ್ನು, ಸುಜ್ಞಾನಿ-ಚಿನ್ಮುದ್ರೆಯನ್ನು ಧರಿಸದವನನ್ನು ರಾಮನೆಂದು, ದೇವರೆಂದು ಹೇಗೆ ಕರೆಯಲಿ?. ಅವನು ಪತ್ನೀವ್ರತಸ್ಥ ಪತಿ, ತಮ್ಮಂದಿರ ಒಲವಿನ ಹಿರಿಯಣ್ಣ(ಒಟ್ಟಿಗೆ ಎನ್ನುವಂತೆ ಜನಿಸಿ ಒಟ್ಟಿಗೆ ಇಹಲೋಕದ ಬದುಕನ್ನು ಕೊನೆಗಾಣಿಸಿದವರು). ವಿನಂತಿಯನ್ನು ಧಿಕ್ಕರಿಸಿದ ವರುಣನ ಸೊಕ್ಕಡಗಿಸಿದ, ಲೋಕಕ್ಕೆ ಅಮಂಗಳವನ್ನುಂಟುಮಾಡುವ ರಾವಣಾದಿ ಅಸುರರನ್ನು ವಧಿಸಿದ ವಂದನೀಯ ಕೋಪಿಷ್ಠ! ತನ್ನ ವ್ಯಕ್ತಿತ್ವಕ್ಕೆ ಕಳಂಕ ಬಂದೀತೆಂಬುದನ್ನು ಚಿಂತಿಸದೆ ಮಿತ್ರ ಸುಗ್ರೀವನಿಗಾಗಿ ಮಿಡಿದ ದುಡಿದ ಸ್ನೇಹಿತ. ರಾವಣವಧೆಯ ಬಳಿಕ ಅವರಿವರೆನ್ನದೆ ಎಲ್ಲರನ್ನು ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಕರೆದೊಯ್ದ ಬಂಧುಪ್ರೇಮಿ, ಕೃತಜ್ಞತೆಯ ಮಹಾಮೂರ್ತಿ. ದಂಡಕಾರಣ್ಯದಲ್ಲಿ ಮಾಡಿದ ವನವಾಸವನ್ನು ಆನಂದದಿಂದ ಕಳೆದ ಕರ್ತವ್ಯಪರಾಯಣನು (ಪಿತೃವಾಕ್ಯ ಪರಿಪಾಲನೆ).


ರಾಮನೇನಲ್ಲ!?

ಹೇ ರಾಮ, ಹೇ ಸೀತಾಪತೇ, ಹೇ ರಾವಣಾರಿ, ಹೇ ಖರಾರಿ, ಹೇ ಮುರಾರಿ, ಹೇ ಅಸುರಾರಿ,ಹೇ ಪರಮಾತ್ಮ, ಹೇ ಸರ್ವಬಂಧು ಎನ್ನುತ್ತಾ ಸ್ತುತಿಸಲು ಅರ್ಹನಾದವನು ರಾಮ ಎಂದು ಶಂಕರಾಚಾರ್ಯರು ರಾಮನನ್ನು ಸ್ತುತಿಸುತ್ತಾರೆ. ಇದರೊಂದಿಗೆ ಲೌಕಿಕರಾದ ನಮ್ಮ ಹೊಣೆಗಾರಿಕೆಗಳನ್ನೂ ನೆನಪಿಸುತ್ತಾರೆ. ಭಕ್ತವತ್ಸಲ-ಶರಣಾಗತ ವತ್ಸಲನನ್ನು, ಪ್ರಸನ್ನನನ್ನು, ವೇದಸಾರನನ್ನು ದಿನನಿತ್ಯ ಭಜಿಸುತ್ತಿರಬೇಕು. ಅದು ಹೇಗೆಂದರೆ-

ಸದಾ ರಾಮ ರಾಮೇತಿ ರಾಮಾಮೃತಂ ತೇಸದಾ ರಾಮಮಾನಂದ ನಿಷ್ಯಂದಕಂದಮ್।

ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮಂತರ್ಭಜೇ ತಂ ನಿತಾಂತಮ್।। (ಸದಾ 'ರಾಮರಾಮ' ಎಆನಂದವೇ ತುಂಬಿದ ರಾಮಾಮೃತವನ್ನು ಪ್ರಸನ್ನನಾಗಿ ಕುಡಿಯುವ ನಮಿಸುವ ಹನುಮಂತನಂತೆ! ಅಂತಹ ಹನುಮ ನಮಗೆ ರಾಮಸಾಯುಜ್ಯ ಪ್ರಾಪ್ತಿಗೆ ಆದರ್ಶ. ಅವನನ್ನು ನಮ್ಮೆದೆಯೊಳಗಿರಿಸಿ ರಾಮನನ್ನು ಭಜಿಸಬೇಕು ಪೂಜಿಸಬೇಕು ಆರಾಧಿಸಬೇಕೆಂದು ಶಂಕರರು ಕರೆ ನೀಡುತ್ತಾರೆ. ನಿಸ್ವಾರ್ಥ ಸೇವೆಯೇ ರಾಮಪ್ರಾಪ್ತಿಗಿರುವ ದಾರಿ. ಅಲ್ಲವೇ?" .....ರಾಮಭಟನಾಗು ನೀ- ಮಂಕುತಿಮ್ಮ" ಎನ್ನುವ ಕಗ್ಗದ ಕವಿಯ ಸಾಲುಗಳು ನೆನಪಿಗೆ ಬರುತ್ತವೆ.


ಶಂಕರನಾದ ರಾಮನ ನಿತ್ಯಸ್ಮರಣೆಯೇ ನಿತ್ಯಾನಂದಕ್ಕಿರುವ ಏಕೈಕ ದಾರಿ ಎಂದು ಶಂಕರಾಚಾರ್ಯರು ತಮ್ಮ ರಾಮಭುಜಂಗ ಪ್ರಯಾತ  ಸ್ತೋತ್ರದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.

ಶಂಕsರs ನಾರಾಯೇಣಾ ಶಿವ-

ಶಂಕsರs ನಾರಾಯೇಣಾ

ಶಂಕರ ನಿನ್ನ ನೆನೆವುದೆಂದರೆ 

ಹರ್ಷಿsಸುವುದು ನಾಲೀsಗೇ...


ಶೈಶವಾವಸ್ಥೆಯಲ್ಲಿರುವ ಮಗುವಿಗೆ ಎಣ್ಣೆ ಹಚ್ಚುವ ಸಂದರ್ಭದಲ್ಲಿ ಅದಕ್ಕೆ ಹಿತವಾಗಿ ಕೇಳಿಸುವಂತೆ ಹಾಡುವ ಈ ಹಾಡಿಗೆ, ನಾವು ಹೇಳುತ್ತಿದ್ದಂತಹ 'ಶಿವಶಿವ ರಾಮರಾಮ' ಮಹಾಮಂತ್ರಕ್ಕೆ ತಲೆಬಾಗುತ್ತಾ, ಇವೆರಡನ್ನೂ ನೀಡಿದ ನಮ್ಮ ಅನಾಮಿಕ ಹಿರಿಹಿರಿಯರಿಗೆ ನಮಿಸುತ್ತಾ 'ಶಂಕರ ರಾಮ'ವನ್ನು ನಾನು ಕಂಡಂತೆ ತಮ್ಮೆದುರಿಗಿಸಿದ್ದೇನೆ. ತಪ್ಪುಗಳಿದ್ದರೆ ಕ್ಷಮೆಯಿದೆ ತಾನೇ?



- ಉಂಡೆಮನೆ ವಿಶ್ವೇಶ್ವರ ಭಟ್ಟ

(94492 82939)

ಗುರುಕೃಪಾ ಉಂಡೆಮನೆ, ರೆಂಕೆದಗುತ್ತು ಬೆಳ್ತಂಗಡಿ, 574214



ಲೇಖಕರ ಸಂಕ್ಷಿಪ್ತ ಪರಿಚಯ:

ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟ: ನಿವೃತ್ತ ಪ್ರಾಂಶುಪಾಲ, ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಮಿತಿಯ ಸದಸ್ಯ, ಮಾನವ ಸಂಪನ್ಮೂಲ ಅಭಿವೃದ್ಧಿಯ ರಾಷ್ಟ್ರೀಯ ತರಬೇತುದಾರ, ಹವ್ಯಾಸಿ ಭಾಷಾಂತರಗಾರ, ಗಮಕ ಕಲಾವಿದ. 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top