ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ತಂಡದವರು ಕರ್ನಾಟಕದ ಕಲೆ ಯಕ್ಷಗಾನವನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ.
ಬೆಂಗಳೂರು: ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥರಾದ ಕೆ. ಗೌರಿ ಅವರು ಯಕ್ಷಗಾನದ ವೇಷ ಭೂಷಣಗಳ ಪರಿಚಯ, ಕಥಾ ಪ್ರಸಂಗಗಳ ಆಯ್ಕೆ ವಿಧಾನ, ಭಾಗವತಿಕೆ, ಬಳಸುವ ವಾದನಗಳು ಹೀಗೆ ಯಕ್ಷರಂಗದ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು. ವಿದ್ಯಾರ್ಥಿಗಳು, ಶಿಕ್ಷಕರ ಪ್ರಶ್ನೆಗಳಿಗೆ ಗೌರಿ ಮತ್ತು ತಂಡದವರು ಉತ್ತರಿಸಿದರು.
ಶಾಲಾಕಾಲೇಜುಗಳಲ್ಲಿ ಯಕ್ಷಗಾನ ಅಥವಾ ಕರ್ನಾಟಕದ ಯಾವುದೇಕಲಾ ಪ್ರಕಾರವನ್ನು ಪರಿಚಯಿಸುವುದು ತೀರಾಮುಖ್ಯ. ಇದರಿಂದ ಮಕ್ಕಳೂ ಆ ಬಗ್ಗೆ ಆಸಕ್ತಿ ವಹಿಸುವ ಅವಕಾಶ ಹೇರಳವಾಗಿದೆ. ಆ ಮೂಲಕ ಯಕ್ಷಗಾನದಂತಹ ಕಲೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಒಯ್ಯುವ ಒಳ್ಳೆಯ ಕಾರ್ಯ ಮಾಡಿದಂತಾಗುತ್ತದೆ ಎಂದರು. ಶಾಲಾಮಕ್ಕಳು ಆಸಕ್ತಿಯಿದ್ದರೆ ಉಚಿತವಾಗಿ ಕಲಿಸಿಕೊಡಲಾಗುವುದು ಎಂದು ಗೌರಿಯವರು ಪ್ರಕಟಿಸಿದರು.
ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ್ ಮಾತನಾಡಿ, ಯಕ್ಷಗಾನ ಕಲೆಯನ್ನು ಮಹಿಳಾ ತಂಡವೊಂದು ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ಕಲಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಬಳಿಕ "ಕೃಷ್ಣ ಲೀಲೆ, ಕಂಸ ವಧೆ" ಎಂಬ ಯಕ್ಷಗಾನ ಪ್ರದರ್ಶನ ನೆರವೇರಿತು. ಶ್ರೀಮತಿಯರಾದ ಕೆ. ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್ ಮತ್ತು ಕುಮಾರಿ ಧೃತಿ ಅಮ್ಮೆಂಬಳ ಮುಮ್ಮೇಳದಲ್ಲಿದ್ದರು. ಭಾಗವತರಾಗಿ ಶಂಕರ ಬಾಳಕುದ್ರು, ಮದ್ದಲೆಯಲ್ಲಿ ಗೌತಮ್ ಸಾಸ್ತಾನ್ ಮತ್ತು ಚೆಂಡೆಯಲ್ಲಿ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು. ಮುಖ್ಯಶಿಕ್ಷಕರಾದ ವೆಂಕಟೇಶ್ ಮೂರ್ತಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ