ಶ್ರೀರಾಮ ಕಥಾ ಲೇಖನ ಅಭಿಯಾನ-11: ಶ್ರೀರಾಮ ಪಟ್ಟಾಭಿಷೇಕ ಮುಹೂರ್ತ

Upayuktha
0

ಚಿತ್ರ ಕೃಪೆ: ಪ್ರೊ| ಜಿ. ವೆಂಕಟಸುಬ್ಬಯ್ಯ ಸಂಪಾದಿತ ಸಚಿತ್ರ ರಾಮಾಯಣ ದರ್ಶನ ಕೃತಿ.



-ಡಾ. ಭಾರತಿ ರವೀಂದ್ರ, ಬೆಂಗಳೂರು 


ಶ್ರೀಮದ್ ವಾಲ್ಮೀಕಿ ಮುನಿಗಳು ಶ್ರೀರಾಮನ ಆಯನವನ್ನು ಅನುಸರಿಸಿ ಬರೆದ ರಾಮಾಯಣ ಗ್ರಂಥವು ಜಗತ್ತಿನ ಪ್ರಥಮ ಕಾವ್ಯವಾಗಿ ಪ್ರಸಿದ್ಧಿಯಾಗಿದೆ. ‘ಈ ಸೃಷ್ಟಿ ಇರುವ ತನಕವೂ ರಾಮಾಯಣ ಎಂಬ ಮಹಾಕಾವ್ಯವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ’ ಎಂಬ ಪ್ರಶಸ್ತಿಯ ಮಾತೊಂದು ಇದೆ ಪರಂಪರೆಯಲ್ಲಿ. ಇದು ಏಕಕಾಲದಲ್ಲಿ ವಾಲ್ಮೀಕಿಯನ್ನೂ, ರಾಮಾಯಣವನ್ನೂ, ರಾಮನನ್ನೂ ನಿತ್ಯ ಸತ್ಯವನ್ನಾಗಿಸಿದೆ.


ರಾಮಾಯಣದಲ್ಲಿ ಬರುವ ಒಂದು ಮುಖ್ಯವಾದ ಸನ್ನಿವೇಶವೆಂದರೆ, ಅದು ಶ್ರೀರಾಮನ ಪಟ್ಟಾಭಿಷೇಕ. ರಾಮಾಯಣಕ್ಕೆ ಒಂದು ಮುಖ್ಯ ತಿರುವನ್ನು ನೀಡಿದ ಸನ್ನಿವೇಶ. ಪಟ್ಟಾಭಿಷೇಕಕ್ಕೆಂದು ಇಟ್ಟ ಮುಹೂರ್ತದಲ್ಲಿ ಪಟ್ಟಾಭಿಷೇಕವಾಗದೇ ವನವಾಸಕ್ಕೆ ತೆರಳುವಂತಾಯಿತು. ಕುಲಪುರೋಹಿತರಾದ ಶ್ರೀವಸಿಷ್ಠರು, ಶ್ರೀರಾಮಚಂದ್ರನ ಯುವರಾಜ ಪಟ್ಟಾಭಿಷೇಕಕ್ಕೆಂದು ಗೊತ್ತು ಮಾಡಿದ ಮುಹೂರ್ತದಲ್ಲಿ ಶ್ರೀರಾಮಚಂದ್ರನು ವನವಾಸಕ್ಕೆ ಹೊರಡುವನು. ಹಾಗಾಗಿ ಜ್ಯೋತಿಷ್ಯ ಸುಳ್ಳು ಎಂದು ವಾದಿಸುವವರಿದ್ದಾರೆ. ಶ್ರೀವಸಿಷ್ಠರು ಬ್ರಹ್ಮರ್ಷಿಗಳು, ಅವರು ತಪ್ಪು ಮಾಡುವ ಹಾಗಿಲ್ಲ. ಜ್ಯೋತಿಷ್ಯವು ವೇದಾಂಗ, ವೇದವೂ ಸುಳ್ಳಾಗುವುದಿಲ್ಲ. ಹಾಗಾದರೆ, ಈ ಮುಹೂರ್ತದಲ್ಲಿ ಪಟ್ಟಾಭಿಷೇಕದ ಬದಲು ಶ್ರೀರಾಮಚಂದ್ರನಿಗೆ ವನವಾಸ ಲಭಿಸಿತಲ್ಲ.. ಇದು ಏಕೆ? ಎಂದು ನೋಡೋಣ.


ನಮ್ಮ ಸನಾತನ ಧರ್ಮಕ್ಕೆ ವೇದಗಳೇ ಆಧಾರ. ವೈದಿಕ ಆಚರಣೆಗೆ ವೇದಗಳೇ ಮೂಲ. ವೇದ ವಿಹಿತವಾದ ಕರ್ಮಾಚರಣೆಗೆ ಜ್ಯೋತಿಷ್ಯ ಶಾಸ್ತ್ರದ ಜ್ಞಾನವಿರಲೇ ಬೇಕು. ವೈದಿಕ ಅನುಸರಣೆಗೆ ಮಾತ್ರವಲ್ಲದೇ, ಜನ ಸಾಮಾನ್ಯರಿಗೂ ನಿತ್ಯ ವ್ಯವಹಾರಕ್ಕೆ, ಕಾಲನಿರ್ಣಯದ ಅನಿವಾರ್ಯತೆಗಾಗಿ ಆವಿರ್ಭವಿಸಿದ ಶಾಸ್ತ್ರವೇ ಜ್ಯೋತಿಷ್ಯಶಾಸ್ತ್ರ. ವೇದದ ಷಡಾಂಗಗಳಲ್ಲಿ ಒಂದಾದ ಜ್ಯೋತಿಷ್ಯವು ವೇದಪುರುಷನ ಕಣ್ಣುಗಳಾಗಿರುವುದು ವಿಶೇಷ. ನಾವಿಂದು ನಮ್ಮೆಲ್ಲಾ ಕಾರ್ಯಗಳಿಗೂ ಗಡಿಯಾರ ಮತ್ತು ಕ್ಯಾಲೆಂಡರನ್ನು ಅವಲಂಬಿಸಿದರೆ, ರಾಮಾಯಣದ ಯುಗದಲ್ಲಿ ಜ್ಯೋತಿಷ್ಯವೇ ಕಾಲಮಾನವನ್ನು ಅಳೆಯುವ ಸಾಧನವಾಗಿತ್ತು. ರಾಮಾಯಣವನ್ನು ಓದಿದಾಗ ತಿಳಿಯುವುದು- ಕಥೆಯ ಪ್ರತೀ ಪ್ರಮುಖ ಘಟ್ಟಗಳಲ್ಲೂ ರವಿ, ಚಂದ್ರ, ಗ್ರಹಗಳು ಮತ್ತು ನಕ್ಷತ್ರಗಳ ವಿವರಣೆಗಳಿಂದಲೇ ತುಂಬಿದೆ ಎಂದು.


ರಾಮನ ವನವಾಸ ಮತ್ತು ಪ್ರಾರಬ್ಧ ಕರ್ಮದ ಸುಳಿವು:

ರಾಮನು ಪ್ರೌಢಾವಸ್ಥೆಗೆ ಬಂದಾಗ ದಶರಥನು, ಮಗನಾದ ರಾಮಚಂದ್ರನಿಗೆ ಯುವರಾಜ ಪಟ್ಟಾಭಿಷೇಕ ಮಾಡಿ ತಾನು ವಾನಪ್ರಸ್ಥಕ್ಕೆ ಹೋಗಲು ತೀರ್ಮಾನಿಸುವನು. ಈ ವಿಚಾರವಾಗಿ ಕುಲಗುರುಗಳಾದ ವಸಿಷ್ಠರಿಗೆ ಒಂದು ಒಳ್ಳೆ ಮುಹೂರ್ತವನ್ನು ಗೊತ್ತು ಮಾಡುವಂತೆ ಕೇಳಿಕೊಂಡ.


ರಾಮನ ಪಟ್ಟಾಭಿಷೇಕವನ್ನು, ಪಟ್ಟಾಭಿಷೇಕಕ್ಕೇ ಉತ್ತಮ ನಕ್ಷತ್ರವೆನಿಸಿದ ಪುಷ್ಯ ನಕ್ಷತ್ರದಲ್ಲಿಟ್ಟು, ಪಟ್ಟಾಭಿಷೇಕಕ್ಕೆ ತಯಾರಿ ಮಾಡಿಕೊಳ್ಳಲು ಹೇಳುವರು ವಸಿಷ್ಠರು. ಆದರೆ, ಆ ನಕ್ಷತ್ರ, ಆ ಮುಹೂರ್ತದಲ್ಲೇ ರಾಮ ವನವಾಸಕ್ಕೆ ತೆರಳುವಂತಾಗಿದ್ದು ದುರದೃಷ್ಟಕರ. ಒಳ್ಳೇ ಮುಹೂರ್ತ ಇಟ್ಟ ಬೆನ್ನಲ್ಲೇ ದಶರಥನಿಗೆ ಅಪಶಕುನಗಳು ಗೋಚರಿಸಿ, ಗ್ರಹಗತಿಯೂ ಕೆಟ್ಟ ಉಲ್ಲೇಖ ರಾಮಾಯಣದಲ್ಲಿದೆ. ಇದಕ್ಕೆ ಕಾರಣವೇನು? ಎಂದು ಯೋಚಿಸಿದಾಗ ಜ್ಯೋತಿಷ್ಯ ಶಾಸ್ತ್ರ ನಮಗೆ ಉತ್ತರ ಕೊಡುವುದು. ನಮ್ಮ ಇಂದಿನ ಕಷ್ಟ ಅಥವಾ ಸುಖಗಳಿಗೆ ನಮ್ಮ ಪ್ರಾರಬ್ಧಕರ್ಮವೇ ಮೂಲ ಎನ್ನುವುದು ಜ್ಯೋತಿಷ್ಯ. ಅದರ ಮೂಲ ಹುಡುಕಿದಾಗ, ರಾಮಾಯಣದಲ್ಲಿ ಮಹತ್ವದ ತಿರುವುಗಳಿಗೆಲ್ಲ ‘ಮಾತೇ’ ಮೂಲ ಕಾರಣವೆಂದು ತೋರುವುದು.


1. ದಶರಥನು ವೃದ್ಧಾಪ್ಯದಲ್ಲಿ ಮಕ್ಕಳಿಂದ ದೂರವಾಗಲು ಶ್ರವಣಕುಮಾರನ ತಂದೆ-ತಾಯಿಗಳು ನೀಡಿದ್ದ ಶಾಪದ ‘ಮಾತೇ’ ಕಾರಣ.

2. ರಾಮನು ವನವಾಸಕ್ಕೆ ಹೋಗಬೇಕಾಗಿ ಬಂದದ್ದು, ದಶರಥನು ಕೈಕೇಯಿಗೆ ನೀಡಿದ್ದ ‘ಮಾತಿ’ನಿಂದಾಗಿಯೇ.

3. ಮಾರೀಚನ ಮೋಸದ ‘ಮಾತಿ’ನಿಂದಾಗಿಯೇ ಸೀತೆಯ ಅಪರಹರಣವಾದದ್ದು.

4. ‘ಮಾತಿನ’ ಮರ್ಮ ಅರಿತಿದ್ದ ಹನುಮಂತನ ಮೂಲಕವೇ ಕಾಡಿನಲ್ಲಿದ್ದ ರಾಮನಿಗೂ ಅಶೋಕವನದಲ್ಲಿದ್ದ ಸೀತೆಗೂ ಹೃದಯದ ಸೇತುವೆ ಒದಗಿದ್ದು.

5. ಸೀತೆಯ ಮೇಲೆ ಎರಗಿದ ಅಪವಾದದ ‘ಮಾತಿ’ನಿಂದಾಗಿಯೇ ಅವಳು ಪುನಃ ಕಾಡಿನ ಪಾಲಾದದ್ದು.

-ಹೀಗೆ ಕಾವ್ಯದ ಹುಟ್ಟಿನಿಂದ ಕೊನೆಯ ತನಕವೂ ಮಾತಿನ ವಿವರ್ತಗಳ ಅಂದರೆ, ಅಲೆಗಳ ಪರಿಣಾಮವೇ ಕಾರಣವಾಗಿದೆ.


ಹಾಗಾಗಿ ದಶರಥನಿಗಿದ್ದ ಶಾಪ, ಕೈಕೇಯಿಗಿತ್ತ ವಚನಗಳೆಲ್ಲವೂ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಒದಗಿ ಬಂದದ್ದು ಪ್ರಾರಬ್ಧಕರ್ಮದ ಸುಳಿವಾಗಿದೆ. ಒಳ್ಳೆಯ ಮುಹೂರ್ತಗಳಿಂದಲೇ ಪ್ರಾರಬ್ಧ ಕರ್ಮಗಳನ್ನು ಗೆಲ್ಲಲು ಸಾಧ್ಯವಿಲ್ಲ..!! ಹಾಗಾಗಿಯೇ ವಿಧಿಗನುಸಾರವಾಗಿ ರಾಮ ಪಟ್ಟಾಭಿಷಕ್ತನಾಗುವ ಬದಲು ಅದೇ ನಕ್ಷತ್ರದಲ್ಲಿ ವನವಾಸಕ್ಕೆ ಹೊರಟು ನಿಂತಾಗ ಲಕ್ಷ್ಮಣ ಕೋಪಗೊಳ್ಳುವನು. ಅವನನ್ನು ಸಮಾಧಾನ ಪಡಿಸುತ್ತಾ- ‘ಸುಖ-ದುಃಖ, ಶಾಂತಿ-ಕೋಪ, ಲಾಭ-ನಷ್ಟ. ಎಲ್ಲ ರೀತಿಯ ತಪ್ಪುಗಳು ಪ್ರಾರಬ್ಧ ಕರ್ಮದಂತೆ(ವಿಧಿ) ಸಂಭವಿಸುವುದು, ಎಂದು ರಾಮನೇ ಇದರ ರಹಸ್ಯವನ್ನು ಅರಿತುಕೊಂಡು ತನ್ನ ಜೀವನವನ್ನು ಸಂತೋಷ ಮತ್ತು ಶಾಂತಿಯುತವಾಗಿಸಲು ತನ್ನನ್ನು ತಾನು ನಡೆಸಿಕೊಳ್ಳಬೇಕು’ ಎಂದು ರಾಮನೇ ನುಡಿಯುವನು.


ಫಲಿಸಿದ ಮುಹೂರ್ತ:

ಇತ್ತ ವಸಿಷ್ಠರಿತ್ತ ಮುಹೂರ್ತವೂ ಫಲಿಸದೇ ಇರಲಿಲ್ಲ. ಶ್ರೀರಾಮನು ಸಾಮಾನ್ಯ ರಾಜಕುಮಾರನಾಗಿ ಜನಿಸಿದ್ದರೂ, ಮುಂದೆ ಆದರ್ಶ ಪುರುಷೋತ್ತಮನಾಗುವ ಮತ್ತು ರಾಜಾಧಿರಾಜನಾಗುವ ಯೋಗವಿರುವುದನ್ನು ತ್ರಿಕಾಲಜ್ಞಾನಿಗಳಾದ ವಸಿಷ್ಠರು ಅರಿತು ಅದಕ್ಕೆ ತಕ್ಕ ಸನ್ನಿವೇಶಗಳನ್ನು ಕಲ್ಪಿಸಿಕೊಡುವ ಉದ್ದೇಶದಿಂದಲೇ ಮುಹೂರ್ತವನ್ನು ಗೊತ್ತುಮಾಡಿದ್ದರು.


ರಾಜಾಧಿರಾಜನಾಗಬೇಕಾದರೆ, ಅಶ್ವಮೇಧಯಾಗ ಅಥವಾ ರಾಜಸೂಯ ಯಾಗ ಮಾಡಬೇಕಿತ್ತು. ಇದಕ್ಕೆ ಎಲ್ಲಾ ಸಣ್ಣ ರಾಜರನ್ನು ಜಯಿಸಿ, ಅವರಿಂದ ಕಪ್ಪಕಾಣಿಕೆ ಪಡೆದು ಯಾಗಮಾಡಬೇಕು. ಈ ರೀತಿ ಜಯಿಸಲು ರಕ್ತಪಾತವಾಗಬೇಕಿತ್ತು. ಆದರೆ ಶ್ರೀರಾಮನ ಸ್ವಭಾವ ಅಂತಹುದಲ್ಲ ಎಂದು ಜಾತಕದಲ್ಲೇ ಸೂಚನೆಯಿದೆ. ಶ್ರೀರಾಮ ಎಷ್ಟೇ ಶೂರನಾದರೂ, ಸಾತ್ವಿಕ ಮನೋಭಾವನೆಯುಳ್ಳವನಾಗಿ ಸ್ವಾರ್ಥಕ್ಕೋಸ್ಕರ, ಅಕಾರಣವಾಗಿ ರಕ್ತಪಾತವಾಗುವುದಕ್ಕೆ ರಾಮನ ಮನಸ್ಸು ಎಂದೂ ಒಪ್ಪುವುದಿಲ್ಲ. ಪ್ರೀತಿ, ವಿಶ್ವಾಸ ಮತ್ತು ಉಪಕಾರಗಳಿಂದ ವಿಶ್ವಾಸ ಗಳಿಸುವ ಮನೋಭಾವ ರಾಮನದ್ದು. ಈ ಸನ್ನಿವೇಶಗಳ ನಿರ್ಮಾಣ ಮಾಡಿಕೊಡುವುದೇ ವಸಿಷ್ಠರ ಮುಹೂರ್ತದ ಪ್ರಭಾವ.


ಪಟ್ಟಾಭಿಷೇಕಕ್ಕೆ ಬಹಳ ಶುಭಕರವಾದ ಪುಷ್ಯ ನಕ್ಷತ್ರವೇ, ಪ್ರಯಾಣಕ್ಕೂ ಶ್ರೇಷ್ಠವಾದ ನಕ್ಷತ್ರ. ಹಾಗಾಗಿ ವನವಾಸಕ್ಕೆ ಹೊರಟ ರಾಮ, ಎಲ್ಲೆಡೆ ಸಂಚರಿಸಿ, ದುಷ್ಟರನ್ನೆಲ್ಲಾ ಸಂಹರಿಸಿದ. ರಾಮನು ಇನ್ನೂ ಚಿಕ್ಕವನಿರುವಾಗಲೇ ವಿಶ್ವಾಮಿತ್ರರೊಡನೆ ಪೂರ್ವಭಾವಿಯಂತೆ ಅರಣ್ಯಕ್ಕೆ ಬಂದಿದ್ದನು. ಆಗ ಯಜ್ಞ ಕಂಟಕರಾದ ರಾಕ್ಷಸರನ್ನು ಸಂಹರಿಸಿ, ವಿಶ್ವಾಮಿತ್ರರಿಂದ ಯುದ್ಧದ ಅನೇಕ ತಂತ್ರ, ಮಂತ್ರಗಳ ಉಪದೇಶ ಪಡೆದಿದ್ದನಷ್ಟೇ. ಅವುಗಳ ಉಪಯೋಗವಾಗಬೇಕಿತ್ತು. ದುಷ್ಟರನ್ನು ನಿಗ್ರಹಿಸಿ ಕ್ಷತ್ರಿಯನ ಕರ್ತವ್ಯ ಮತ್ತು ಧರ್ಮಕಾರ್ಯ ನಡೆಯಬೇಕಾದರೆ ಹೀಗೆ ವಿಶ್ವಾಸದ ಯಾತ್ರೆ ಹೊರಡಲೇಬೇಕಿತ್ತು. ರಾಮ ವನವಾಸಕ್ಕೆ ಬಾರದೇ ಇದ್ದಿದ್ದರೆ, ಅನೇಕ ರಕ್ಕಸರ, ದುಷ್ಟರ ಸಂಹಾರ ಆಗುತ್ತಲೇ ಇರಲಿಲ್ಲ. ಅನೇಕ ಭಕ್ತರ ಉದ್ಧಾರವೂ ಆಗುತ್ತಿರಲಿಲ್ಲ. ರಾಮನು ಎಲ್ಲ ಶತ್ರುಗಳನ್ನು ಸಂಹರಿಸಿಯೇ ಪಟ್ಟಾಭಿಷೇಕ ಸ್ವೀಕರಿಸಿದ್ದು. ಪ್ರಾರಬ್ಧ ಕರ್ಮದಂತೆ ಎಲ್ಲವೂ ನಡೆದು ಪಟ್ಟಾಭಿಷಕ್ತನಾಗಿ ಅನೇಕ ವರ್ಷಗಳ ಕಾಲ ರಾಜನಾಗಿ ರಾಮ-ರಾಜ್ಯವೆಂದು ಹೆಸರು ಗಳಿಸಿ ಪ್ರಖ್ಯಾತನಾದನು. ವನವಾಸದ ಬದಲು ವನಸಂಚಾರ ಮಾಡಿ, ಎಲ್ಲ ರಾಜರುಗಳ ವಿಶ್ವಾಸ ಮತ್ತು ಮುನಿಶ್ರೇಷ್ಠರ ಆಶೀರ್ವಾದವನ್ನು ಪಡೆದ ಈ ಒಂದು ಸನ್ನಿವೇಶ ಎಷ್ಟು ಅರ್ಥಗರ್ಭಿತವಾಗಿದೆ…!!! ಈ ರೀತಿಯ ದಿಗ್ವಿಜಯದ ಪ್ರಯಾಣದ ಉದ್ದೇಶವೇ ಪಟ್ಟಾಭಿಷೇಕಕ್ಕೆ ನಾಂದಿ.


ಉಪಸಂಹಾರ: ಮೇಲ್ನೋಟಕ್ಕೆ ಪಟ್ಟಾಭಿಷೇಕದ ಮುಹೂರ್ತ, ವನಸಂಚಾರಕ್ಕೆ ಮುಹೂರ್ತವೆನ್ನಿಸಿದರೂ, ಇದು ರಾಜಾಧಿರಾಜನಾಗುವುದಕ್ಕೆ ನಾಂದಿ. ಈ ಮುಹೂರ್ತ ಬಲದಿಂದಲೇ ಶ್ರೀರಾಮನು ಆ ಸೇತು ಹಿಮಾಲಯಪರ್ಯಂತ, ಅನೇಕ ಋಷಿಗಳ, ಅರಸರ, ಸಾಮಾನ್ಯರ ಸಂಪರ್ಕವಾಗುವುದರ ಮೂಲಕ ಮಾನವಕೋಟಿಯ ವಿಶ್ವಾಸಕ್ಕೆ ಪಾತ್ರನಾಗಿ ಜನಾನುರಾಗಿಯಾದ. ಈ ಜನಾನುರಾಗದಿಂದಲೇ ಶ್ರೀರಾಮಚಂದ್ರನು ಚಿರನಾಗಿದ್ದಾನೆ. ಅವನ ಪ್ರಯಾಣ-ರಾಮನ ಅಯನ-ರಾಮಾಯಣವು ಮನುಷ್ಯನ ಕಥೆಯಾಗಿದೆ. ಬ್ರಹ್ಮನ ವರದಿಂದ ಅವಧ್ಯನಾದ ರಾವಣನನ್ನು ಸಂಹರಿಸಲು ಅವತರಿಸಿ ಬಂದನು. ಮಾನವನು ಅನುಕರಿಸಬೇಕಾದ ಗುಣಲಕ್ಷಣಗಳನ್ನು ತೋರಿ ಆದರ್ಶ ಜೀವನದ ಮಾದರಿಯಾಗಿರುವನು.




ವಿಳಾಸ:

Bharathi Ravindra # GF 001, Sai skanda apartment,

4th cross ,Near Reliance club, Annapurneshwari layout 

JP Nagar 7 th phase , Bangalore – 62   ph: 9972206258


ಲೇಖಕರ ಕಿರು ಪರಿಚಯ:

ಡಾ. ಭಾರತಿ ರವೀಂದ್ರ: ಬೆಂಗಳೂರು ನಿವಾಸಿಯಾದ ಇವರು, ಕನ್ನಡ ಎಂ.ಎ. ಮಾಡಿದ ನಂತರ, ತಮ್ಮನ್ನು ಜ್ಯೋತಿಷ್ಯಶಾಸ್ತ್ರದ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಆಸಕ್ತಿಯಿಂದ ಆರಂಭಿಸಿದ ಈ ಓದು ಸಂಶೋಧನೆವರೆಗೂ ಕರೆದೊಯ್ಯಿತು. “ಚಂದ್ರಮಾ ಮನಸೋ ಜಾತಃ” ಎಂಬ ಶೀರ್ಷಿಕೆಯಡಿಯಲ್ಲಿ ಚಂದ್ರ ಮತ್ತು ಮನಸ್ಸಿನ ಬಗ್ಗೆ ಸಂಶೋಧನಾ ಪ್ರಬಂಧನವನ್ನು ಅಮೆರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಅನೇಕ ಜ್ಯೋತಿಷ್ಯ ಕಾರ್ಯಾಗಾರಗಳಲ್ಲಿ ಜ್ಯೋತಿಷ್ಯ ವಿಷಯವನ್ನು ಮಂಡಿಸಿದ್ದಾರೆ. ಹಲವೆಡೆ ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಉಪನ್ಯಾಸಗಳನ್ನೂ ನೀಡಿದ್ದಾರೆ. ಪತ್ರಿಕೆಗಳಿಗೆ ಜ್ಯೋತಿಷ್ಯ ಲೇಖನಗಳನ್ನೂ, ವರ್ಷಫಲ ಭವಿಷ್ಯವನ್ನೂ ಬರೆದಿರುವರು. ದಾಸ ಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಪ್ರಸ್ತುತ ದಾಸ ಸಾಹಿತ್ಯದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top