ದೂರವಾಣಿ ಕರೆ..... ಭಗಿನಿ ರಜನಿ "ನಮ್ಮ ಬೀಗರು ನಿಮ್ಮ ಮನೆಗೆ ಬರುತ್ತಾರೆ ಸಂಜೆ, ಶ್ರೀಧರಣ್ಣ ಇದ್ದಾರಾ?'
ಹಾಂ, ಬರಲಿ, ಇದ್ದಾರೆ. ಪ್ರತ್ಯುತ್ತರಿಸಿದೆ. 5 ನಿಮಿಷದಲ್ಲಿ ಆಜಾನುಬಾಹು, ಹಸನ್ಮುಖಿ ವ್ಯಕ್ತಿಯೊಬ್ಬರು ಮನೆ ಒಳಗೆ ಪ್ರವೇಶಿಸುತ್ತಲೇ "ನಾನು ವಿ.ಬಿ. ಕುಳಮರ್ವ' ಎಂದು ಪರಿಚಯಿಸಿಕೊಂಡರು.
ನಮ್ಮ ಜೊತೆಗೆ ನಿಂತಿದ್ದ ನನ್ನ ಮೊಮ್ಮಗಳು "ನೀವು ಕುಳಮರ್ವರೆ, ನಿಮ್ಮ "ಕಸುಬುದಾರರು" ಪದ್ಯ ನಮಗೆ 4ನೇ ತರಗತಿ ಸವಿ ಕನ್ನಡದಲ್ಲಿತ್ತು. ನಾನು ಕಂಠ ಪಾಠ ಮಾಡಿದ್ದೇನೆ. ನಮಗೆ ಅಚ್ಚರಿ, ಅವರಿಗೆ ಸಂತೋಷ. ಅವಳ ಹತ್ತಿರ ಕನ್ನಡಕ್ಕೆ ಸಂಬಂಧ ಪಟ್ಟ ಕೆಲವು ವಿಷಯ ಮಾತನಾಡುವಾಗ ಮೊದಲ ನೋಟಕ್ಕೆ ಇವರು ನಿಗರ್ವಿ ಎಂದುಕೊಂಡೆ.
ಕುಳಮರ್ವರ ಸಾಹಿತ್ಯದ ಬಗ್ಗೆ ಆಗಾಗ್ಯೆ ನನ್ನ ಯಜಮಾನರು ಹೇಳುವುದಿತ್ತು. ಆದರೆ ನನ್ನ ಯಜಮಾನರಿಗೂ ಅವರ ಮುಖ ಪರಿಚಯ ಇರಲಿಲ್ಲ. ಅವರಿಬ್ಬರ ಸಾಹಿತ್ಯ ಸಾಂಗತ್ಯ ದೂರವಾಣಿ ಕರೆಗೆ ಮಾತ್ರ ಸೀಮಿತವಾಗಿತ್ತು. ಮನೆ ಪ್ರವೇಶಿಸುತ್ತಲೇ ಪಟಪಟನೆ ತಮ್ಮ ಪರಿಚಯ ಹೇಳಿ ಕೊಂಡಾಗ ನನಗನಿಸಿದ್ದು "ಇವರು ಗಡಿನಾಡ ಸಾಹಿತ್ಯ ನಿಧಿ".
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕುಂಬಳೆ ಸಮೀಪದ ನಾರಾಯಣಮಂಗಲದ ವೆಂಕಪ್ಪ ಭಟ್ಟರೇ ವಿ.ಬಿ. ಕುಳಮರ್ವ. ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಜಂಬೆಹಳ್ಳಿ ಗದ್ದೆಮನೆಯಿಂದ, ಸುಮಾರು 403 ವರ್ಷಗಳ ಹಿಂದೆಯೇ ಇವರ ಹಿರಿಯರು ಇಕ್ಕೇರಿ ಅರಸರ ಹೇಳಿಕೆ ಮೇರೆಗೆ ಕಾಸರಗೋಡಿನಲ್ಲಿ ನೆಲೆ ನಿಂತವರು. ಕುಳಮರ್ವ ಎಂಬುದು ಗದ್ದೇಮನೆ ವಂಶಸ್ಥರ ಒಂದು ಶಾಖೆ. ಅದರಲ್ಲಿ ಇವರು ಹತ್ತನೇ ತಲೆಮಾರಿನವರಂತೆ. ಸುಮಾರು 45 ವರ್ಷಗಳಿಂದಲೂ ಕಾಸರಗೋಡಿನ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿಯುತ್ತಿ ರುವ ಕನ್ನಡ ರೂವಾರಿ ಶಿಕ್ಷಣತಜ್ಞ, ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಶಿಬಿರ ಸಂಯೋಜಕರು, ಸಾಹಿತ್ಯ ಸಂಘಟನೆ, ಬರಹ ಕೂಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮಲ್ಲಿರುವ ಜ್ಞಾನವನ್ನು ಬೇರೆಯವರಿಗೆ ಎರೆಯುತ್ತಿದ್ದಾರೆ.
ಕೇರಳ ಸರ್ಕಾರದ ಕನ್ನಡ ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೈಪಿಡಿ ರಚನಾ ಸಮಿತಿ ಸದಸ್ಯರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪೆರ್ಲದಲ್ಲಿ ಸಾಹಿತ್ಯ ಸಂಘ ಸ್ಥಾಪಿಸಿ ಸುಮಾರು 30 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರಲ್ಲದೆ ಸಾವಿರಕ್ಕೂ ಹೆಚ್ಚು ಗೋಷ್ಠಿ ಇವರ ಸ್ವಂತ ಖರ್ಚಿನಿಂದ ನೆಡೆಸಿದ್ದು ವಿಶೇಷವೇ ಸರಿ. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರವೃತ್ತಿಯಲ್ಲಿ ಸದಾ ಕ್ರಿಯಾಶೀಲರು. ಮಿಮಿಕ್ರಿ, ಪ್ರಾಣಿಕ್ ಹೀಲಿಂಗ್, ಕೃಷಿ ಇವರ ಇತರೆ ಹವ್ಯಾಸಗಳು. ಕಲೆ, ಸಾಹಿತ್ಯ, ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಇವರು ಒಂದರ್ಥ ದಲ್ಲಿ ಅಜಾತಶತ್ರು. ಬಾಲ್ಯ ದಿಂದಲೂ ಇವರಿಗೆ ಸಾಹಿತ್ಯದಲ್ಲಿ ಆಸಕ್ತಿ. ಓದುವ ದಾಹ, ಸಾಹಿತಿಗಳ ಒಡನಾಟ ದಿಂದ ಸಾಹಿತಿಯಾಗಿಯೂ, ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ಶಿಸ್ತಿನ ಗುಣದಿಂದಾಗಿ ಆದರ್ಶ ಶಿಕ್ಷಕರಾಗಿದ್ದರು.
ವಿ.ಬಿ. ಕುಳಮರ್ವ ರಚಿಸಿದ ಸುಮಾರು 8 ಸಾವಿರ ಚಂದೋಬದ್ಧ ಆಶು ಮುಕ್ತಕಗಳು. ಹಿರಿ, ಕಿರಿಯರಿಗೆ ಮುದ ನೀಡುವಂತಿವೆ.
ಸುಲಭ ರಾಮಾಯಣ l ಕಥನ ಕವನ, ಹವಿಸವಿ ಕೋಶವೆಂಬ ಹವ್ಯಕ ಕನ್ನಡ ನಿಘಂಟು ಸುಮಾರು 480 ಪುಟಗಳನ್ನು ಹೊಂದಿದ್ದು ಹತ್ತು ಸಾವಿರಕ್ಕಿಂತಲೂ ಹವಿ ಗನ್ನಡ ಪದಗಳಿವೆ. ದೀವಿಗೆ, ಪಾರ್ಥಸಾರಥಿ, ವ್ಯವಹಾರ ಮಾರ್ಗದರ್ಶಿ ಇನ್ನಿತರ ಕೃತಿಗಳು.ಇವರದೇ ಆದ ಸೌಮ್ಯ ಪ್ರಕಾಶನ, ಸುಮಾರು 10 ಸಾವಿರ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ, ಪುರಾತನ ತಾಳೆಯೋಲೆಗಳಿವೆ. ಇದು ಅವರ ಸಾಹಿತ್ಯಾಸಕ್ತಿಯ ಇನ್ನೊಂದು ಮಜಲುಗಳು.ಅವರ ಇತ್ತೀಚಿನ ಸಂಶೋಧನೆ "ಉಮಲ ರಗಳೆ, ಹಾಗೂ ವಿಮಲ ರಗಳೆ. ಇದುವರೆಗೂ ಇವರು 20 ಪುಸ್ತಕಗಳನ್ನು ಪ್ರಕಟಿಸಿದ್ದು, ಇನ್ನೂ ಹದಿಮೂರು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಅಂತೆಯೇ ಇವರ ಭಾಷಾ ಪಾಂಡಿತ್ಯ, ಪ್ರೌಢಿಮೆಯಿಂದಾಗಿ ರಾಜ್ಯ ಮಟ್ಟದಲ್ಲಿ 19 ಪ್ರಶಸ್ತಿಗಳು ಅರಸಿ ಬಂದಿವೆ. ಅನೇಕ ಸಂಘ, ಸಂಸ್ಥೆಗಳ ಸನ್ಮಾನ, ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕೇರಳ ರಾಜ್ಯ ಶಾಲಾ ಪಠ್ಯ ಪುಸ್ತಕದಲ್ಲಿ ನಾಟಕಗಳು, ಕವನಗಳು, ಮೌಲ್ವಿಕ ಲೇಖನಗಳು ಪ್ರಕಟವಾಗಿವೆ, ಆಗುತ್ತಿವೆ. ನನ್ನ ಮೊಮ್ಮಗಳು ಆದ್ಯಾ ಅವರನ್ನು ಗುರುತಿಸಿದ್ದು ಕರ್ನಾಟಕ ರಾಜ್ಯ ಕನ್ನಡ ನಾಲ್ಕನೇ ತರಗತಿ ಸವಿಗನ್ನಡದ ಕಸುಬುದಾರ ಪದ್ಯದಿಂದ.
ಕಾಂತಾವರ ಕನ್ನಡ ಸಂಘವು ತನ್ನ ಮುವತ್ತನೇ ವರ್ಷದ ಸಾಧನೆ ಗಳನ್ನು ನೆನಪಿಸುವ ಸಾಹಿತ್ಯ ಸಂಸ್ಕೃತಿ ಸಿಂಚನ ಗ್ರಂಥ ಮಾಲೆಗೆ ವಿ. ಬಿ. ಕುಳಮರ್ವರ ಜೀವನ ಗಾಥೆ "ಗಡಿನಾಡ ಸಾಹಿತ್ಯ ಶ್ರೀನಿಧಿ ವಿ.ಬಿ. ಕುಳಮರ್ವ "ಕೃತಿಯನ್ನು ಸಮರ್ಪಿಸಿದೆ. ಇವರದು ಸಂತೃಪ್ತ ಕುಟುಂಬ. ಪತ್ನಿ ಶ್ರೀಮತಿ ಲಲಿತಾ ಲಕ್ಷ್ಮಿ ಕುಳಮರ್ವ ವಿಶ್ರಾಂತ ಜಿಲ್ಲಾ ವಿದ್ಯಾಧಿಕಾರಿ, ಮಗಳು ರಾಜ್ಯಶ್ರೀ ಅಭಿಯಂತರೆ, ಇನ್ನೋರ್ವ ಮಗಳು ಡಾಕ್ಟರ್ ಕಾವ್ಯಶ್ರೀ ನಿಮಾನ್ಸ್ ಬೆಂಗಳೂರು ಮನೋರೋಗ ತಜ್ಞೆ. ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಕುರಿತಾದ ಸಂಶೋಧನೆ ಸಾಕಷ್ಟು ಇವರಿಂದ ನಡೆದಿದೆ. ಹಾಗೆಂದು ಇವರು ಒಂದೇ ಭಾಷೆಗೆ ಅಂಟಿಕೊಂಡವರಲ್ಲ, ಇಂಗ್ಲಿಷ್, ಮಲೆಯಾಳಿ ಮೂರೂ ಭಾಷೆಗಳಲ್ಲಿ ಅಷ್ಟೇ ಪ್ರಭುತ್ವವಿದೆ.
ಒಬ್ಬ ಪ್ರತಿಭಾನ್ವಿತ ಸಾಹಿತಿ ಇರಬಹುದು, ಮತ್ತೊಬ್ಬರು ಉತ್ತಮ ಸಹೃದಯರಿರಬಹುದು. ಹಾಗೆಯೇ ಇನ್ನೊಬ್ಬರು ಸಾಹಿತ್ಯ, ಸಾಂಸ್ಕೃತಿಕ ಸಂಘಟಕರಿರಬಹುದು. ಆದರೆ ಈ ಮೂವರೂ ಒಬ್ಬರೇ ಆಗಿರುವುದು ತುಂಬಾ ವಿರಳ. ಇಂಥ ಅಪರೂಪದ ಸಾಹಿತಿ, ಸಹೃದಯ, ಸಂಘಟಕ ನಮ್ಮ ಮನೆಗೆ ಬಂದುದರಿಂದ ಸಾಹಿತ್ಯ ವಿಚಾರವಾಗಿ ಚರ್ಚಿಸಲು ಸಾಧ್ಯವಾಗಿ, ಇವರ ಜೊತೆಗಿನ ಒಡನಾಟ ಖುಷಿ ಕೊಟ್ಟಿತು.
-ಶ್ರೀಧರ ಶರ್ಮಾ, ಸಾಗರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ