ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?
ಎಂಬ ಬಸವಣ್ಣನವರ ಮಾತಿನಂತೆ ನೋಡುವವರ ಕಣ್ಣಿಗೆ ಇವರು ಕೋಪಿಷ್ಠನಂತೆ ಕಂಡರೂ ಮನಸ್ಸು ಮಾತ್ರ ಶುದ್ಧ ಹಾಲಿನಂತೆ. ಇವರೊಂದಿಗೆ ಮಾತನಾಡಿದವರಿಗೆ ಮಾತ್ರ ಇವರ ವ್ಯಕ್ತಿತ್ವ ಅರಿವಾಗುತ್ತದೆ.
ಇವರು ಮೂಲತಃ ಕಾಡುಗೋಡಿ ವೈಟ್ಫೀಲ್ಡ್ ಬೆಂಗಳೂರಿನ ತಾಯಿ ಜಯಮ್ಮ ಇವರ ದ್ವಿತೀಯ ಪುತ್ರ ಸುಭಾಷ್.ಎಸ್. ವೃತ್ತಿಯಲ್ಲಿ ಸಾಮಾಜಿಕ ಹೋರಾಟಗಾರರು.
ಕೆಲಸ ಅಂದರೆ ಸಾಕು ನಿಷ್ಠೆ ಪ್ರಾಮಾಣಿಕತೆಯಿಂದ ದುಡಿವವರು. ಇವರು ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಹಾಗೂ ಉತ್ತಮ ಸಾಮಾಜಿಕ ಹೋರಾಟಗಾರರು. ಬಡತನ ಎಂಬುದು ಇವರ ಕಣ್ಣಿಗೆ ಕಟ್ಟಿದಂತಿದೆ. ಯಾಕೆಂದರೆ ಬಡತನದಲ್ಲೇ ಬೆಳೆದು ಬಂದವರು. ರಾತ್ರಿ ಹಗಲೆನ್ನದೆ ನಿದ್ದೆಗೆಟ್ಟು ಕೆಲಸ ಮಾಡುವವರು. ಇವರೊಮ್ಮೆ ಮಾತು ಕೊಟ್ಟರೆ ಮುಗಿಯಿತು ಆ ಕೆಲಸ ಆಗುವವರೆಗೂ ಹಗಲು -ರಾತ್ರಿ ಎನ್ನದೇ ಛಲ ತೊಟ್ಟು ಕೆಲಸ ಮಾಡಿ ತೋರಿಸುವರು . ಬಡತನದ ಅರಿವಿರುವವರು ಹಾಗಾಗಿ ಬೀದಿ ಬದಿಯಲ್ಲಿ ಇರುವ ಅನಾಥರು, ಮಕ್ಕಳು, ವೃದ್ದರು, ಹಸಿದವರ ಕಂಡರೆ ಇವರ ಮನಸ್ಸು ಒಡೆದಂತಾಗಿ ಅವರಿಗೆ ಸಹಾಯ ಮಾಡದೆ ಮುಂದೆ ಸಾಗುವವರಲ್ಲ. ದುಡಿತದ ದುಡಿಮೆಯನ್ನು ಎತ್ತಿಡದೆ ಬಡವರಿಗಾಗಿ ಮೀಸಲಿಟ್ಟು ಸಹಾಯ ಮಾಡುವ ಹೃದಯ ಶ್ರೀಮಂತಿಕೆಯ ವ್ಯಕ್ತಿ ಇವರದು.
ಇವರ ಬಗ್ಗೆ ಬರೆಯಲು ಕುಳಿತರೆ ಮುಗಿಯದು. ಸಮಾಜದಲ್ಲಿ ನೊಂದು ಬೆಂದವರು ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮುಂದೆ ಬರುವಂತವರು.ತನಗಾಗಿ ಏನು ಅಲ್ಲ ಸಮಾಜದ ಒಳಿತಿಗಾಗಿ ಹಿತಕ್ಕಾಗಿ ನಾನೆಂದೂ ಮುಂದೆ ಇರುವೆ.ಸಮಾಜದಲ್ಲಿ ಇರುವಂತಹ ಅದೆಷ್ಟೋ ಬಡವರ ಪರವಾಗಿ ಶೋಷಿತರ ಪರವಾಗಿ ನೊಂದವರ ಪರವಾಗಿ ನಿಂತು ದೀನರ ಧ್ವನಿಯಾಗಿ ಅವರ ಬೇಕು ಬೇಡಗಳಿಗೆ ಬೆನ್ನೆಲುಬಾಗಿ ನಿಲ್ಲುವಂತಹ ಅನನ್ಯ ಚೇತನ. ಸಮಾಜ ಸೇವೆ ಬಗ್ಗೆ ಬರೆಯಲು ಪದಗಳೇ ಸಾಲದು. ಮಾಡಿರುವಂತಹ ಕೆಲಸ -ಕಾರ್ಯ,ಇವರು ತೆಗೆದುಕೊಂಡಂತಹ ಜವಾಬ್ದಾರಿಯನ್ನು ಅರ್ಧದಲ್ಲಿ ಕೈ ಬಿಟ್ಟದ್ದು ಇವರ ಇತಿಹಾಸದಲ್ಲಿ ಇಲ್ಲ. ಸಹಾಯ ಮಾಡುವ ಭರವಸೆ ಕೊಟ್ಟರೆ ಅದು ನೆರವೇರುತ್ತದೆ ಎಂಬ ಭರವಸೆಯನ್ನು ಜನ ಇವರ ಮೇಲೆ ಇಡುತ್ತಾರೆ. ಕತ್ತಲಿನಲ್ಲಿರುವ ಕುಟುಂಬದ ಬಡ ಜನರ ಕಣ್ಣೀರು ಒರೆಸಿದ ಕರುಣಾಮಯಿ.ಅಶಕ್ತರ ಪರವಾಗಿ ನಿಲ್ಲುವವರಿಗೆ ಶತ್ರುಗಳು ಹೆಚ್ಚು ಎಂಬಂತೆ ಇವರಿಗೂ ಶತ್ರುಗಳ ಸಂಖ್ಯೆ ಏನು ಕಡಿಮೆ ಇಲ್ಲ. ಇಷ್ಟೇ ಅಲ್ಲದೇ ಭ್ರಷ್ಟ ಅಧಿಕಾರಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ರಣ ಹದ್ದಿನಂತೆ ಬೇಟೆಯಾಡಿ ನಿಗ್ರಹಿಸುವ ವೀರರಿವರು.
ಕಲೆ ಎಂಬುದು ಎಲ್ಲರಿಗೂ ಒಲಿಯದು ಅದರಲ್ಲೂ ವಿಶೇಷವಾಗಿ ಇವರಿಗೆ ಬರವಣಿಗೆಯ ಮೇಲೆ ಅಪಾರವಾದ ಆಸಕ್ತಿ ವೃತ್ತಿಯಾಗಿ ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರು. ಪ್ರವೃತ್ತಿಯಾಗಿ ಸಾಹಿತ್ಯದಲ್ಲೂ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸುತ್ತ ಸಾಮಾಜಿಕ ಜಾಲತಾಣದ ಕವನ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ತಮ್ಮ ಬರವಣಿಗೆಯ ಮೇಲಿನ ಆಸಕ್ತಿಯನ್ನು ಮುಂದುವರೆಸಿಕೊಂಡಿದ್ದಾರೆ.
ಇವರ ಕಲಾ ಜೀವನದ ಪಯಣ ಇದೇ ರೀತಿ ಸಾಗುತ್ತಾ ಹಲವಾರು ಪ್ರಶಸ್ತಿ -ಪುರಸ್ಕಾರಗಳು ಇವರನ್ನು ಅರಸುತ್ತಾ ಬರಲಿ ಎಂಬುದು ನನ್ನ ಆಶಯ.
ಜಾತಿ ಧರ್ಮ ಮೀರಿದ ಜನಸೇವೆ ಇವರದ್ದು. ತನಗೆ ಏನು ಬೇಡ ಸಮಾಜಕ್ಕೆ ಸರ್ವಸ್ವ ಎಂಬ ಸಿದ್ಧಾಂತದ ನಿಯಮವನ್ನು ಮೈಗೂಡಿಸಿಕೊಂಡು ಬದುಕನ್ನು ನೊಂದ ಬಡ ಜನರಿಗಾಗಿ ತನ್ನನ್ನು ಸಮರ್ಪಸಿಕೊಂಡಿರುವ ವಿಶಾಲ ಹೃದಯದವರು.ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ದೇವರು ಇನ್ನಷ್ಟು ಶಕ್ತಿ ತುಂಬಲಿ.ಕತ್ತಲೆಯ ಬದುಕಿಗೆ ಬೆಳಕು ಚೆಲ್ಲಿ ಸ್ಫೂರ್ತಿ ತುಂಬಿದವರು. ಸಹಾಯ ಮಾಡಲು ಹಣ ಅಂತಸ್ತು ಬೇಡ ಮುಕ್ತವಾದ ಶುಭ್ರ ಮನಸು ಬೇಕು ಅನ್ನೋದು ಇವರ ಭಾವ.
✍️ ಪ್ರಿಯಾ ಸುಳ್ಯ
ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ನಿ. ಸುಳ್ಯ
ದಕ್ಷಿಣ ಕನ್ನಡ ಜಿಲ್ಲೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ