ತನ್ನಿಮಿತ್ತ ಲೇಖನ: ಶ್ರೀ ವಿದ್ಯಾಪ್ರಸನ್ನ - ಗುರು ವೈಭವ

Upayuktha
0

ಡಿ 26- ಸೋಸಲೆ ವ್ಯಾಸರಾಜ ಯತಿ ಪರಂಪರೆಯ ಶ್ರೀ ವಿದ್ಯಾಪ್ರಸನ್ನ ತೀರ್ಥರ ಆರಾಧನಾ ಮಹೋತ್ಸವ



- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ರಿದಾಸ ಸಾಹಿತ್ಯದ ಮೇರುಸದೃಶರಾದ ಶ್ರೀವ್ಯಾಸರಾಜಯತಿವರ್ಯರ ಬಳಿಕ ವ್ಯಾಸರಾಜಮಠ ಪರಂಪರೆಯ ಬಹುತೇಕ ಯತಿಗಳು ಶಾಸ್ತ್ರಾಧ್ಯಯನ ಮತ್ತು ಸಂಸ್ಕೃತ ಪಾಂಡಿತ್ಯಕ್ಕೆ ವಿಶೇಷ ಗಮನ ನೀಡಿದರಾದರೂ ಕೀರ್ತನೆ ಮತ್ತಿತರ ಕೃತಿಗಳನ್ನು ರಚಿಸುವತ್ತ ಗಮನಹರಿಸಲಿಲ್ಲ. ಈ ಕೊರತೆಯನ್ನು ತುಂಬಿದ ಯತಿಗಳು ಶ್ರೀ ವಿದ್ಯಾಪ್ರಸನ್ನತೀರ್ಥರು.


ಸುಮಾರು 250ಕ್ಕೂ ಹೆಚ್ಚು ಕೀರ್ತನೆ-ದೇವರ ನಾಮಗಳನ್ನು ರಚಿಸಿರುವ ಶ್ರೀವಿದ್ಯಾಪ್ರಸನ್ನರು ಭಗವಂತನ ಮಹಿಮೆಯನ್ನು ತಮ್ಮ ಕೃತಿಗಳಲ್ಲಿ ಮನದಣಿಯ ವರ್ಣಿಸಿ, ಭಕ್ತರ ಮನಸ್ಸಿಗೆ ಪ್ರಸನ್ನತೆ ಒದಗಿಸುವತ್ತ ಹೆಚ್ಚಿನ ಗಮನ ನೀಡಿದ್ದಾರೆ. ಪ್ರಸನ್ನ ಎನ್ನುವುದು ಶ್ರೀಪಾದಂಗಳವರ ಯತಿನಾಮವಿರುವಂತೆಯೇ, ಅನ್ವರ್ಥನಾಮವೂ ಹೌದು. ಶ್ರೀ ಶ್ರೀವ್ಯಾಸರಾಜ ಗುರುಪರಂಪರೆಗೆ ತಮ್ಮ ಕೃತಿರಚನಾ ಕೌಶಲ್ಯದ ಮೂಲಕ ಕೀರ್ತಿ-ಗೌರವಗಳನ್ನು ತಂದಿತ್ತ ಶ್ರೀವಿದ್ಯಾಪ್ರಸನ್ನ ಶ್ರೀಪಾದರಿಗೆ ನಾವೆಲ್ಲರೂ ಚಿರಋಣಿಗಳು. 


ಇತ್ತೀಚಿನ ದಿನಗಳಲ್ಲಿ ಹರಿದಾಸ ಸಾಹಿತ್ಯದಲ್ಲಿ ಸ್ವತಂತ್ರ ರಚನೆಗಳು ಕಡಿಮೆಯಾಗುತ್ತ ಬಂದಿವೆ. ಇದು ವ್ಯಸನದ ಬೆಳವಣಿಗೆ, ಧಾರ್ಮಿಕ ಚಿಂತನೆ ಮತ್ತು ಆಚರಣೆಗಳು ಸಡಿಲವಾಗುತ್ತಿರುವ ಇಂದಿನ ಪರಿಸರದಲ್ಲಿ ಸಂಪ್ರದಾಯ, ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯನ್ನು ಸದೃಢಗೊಳಿಸಲು ದಾಸ ಸಾಹಿತ್ಯ ಪ್ರಧಾನ ಶಕ್ತಿ. ಇಂತಹ ಬೆಳವಣಿಗೆಯ ಹಿನ್ನೆಲೆಯಲ್ಲಿ 20ನೆಯ ಶತಮಾನದಲ್ಲಿ ಹರಿದಾಸ ಸಾಹಿತ್ಯವನ್ನು ಚೈತನ್ಯಪೂರ್ಣವನ್ನಾಗಿ ಬೆಳೆಸಿದವರು ಶ್ರೀ ವ್ಯಾಸರಾಜ ಮಠ ಪರಂಪರೆಯ 37ನೆಯ ಯತಿವರ್ಯ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥರು. ಸಂಖ್ಯಾ ದೃಷ್ಟಿಯಿಂದ ಹರಿದಾಸ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಯತಿಗಳ ಪೈಕಿ ಸೋದೆಯ ಶ್ರೀವಾದಿರಾಜತೀರ್ಥರನ್ನು ಬಿಟ್ಟರೆ ಹೆಚ್ಚು ಕೀರ್ತನೆಗಳನ್ನು ಬರೆದವರು ಶ್ರೀವಿದ್ಯಾಪ್ರಸನ್ನತೀರ್ಥರು.


ಇವರ ಪೂರ್ವಾಶ್ರಮದ ಹೆಸರು ತೆÀಕ್ಕಲೂರು ವೆಂಕಟನರಸಿಂಹಾಚಾರ್ಯ. ಇವರ ಜನನ ಕ್ರಿ. ಶ. 1899. ತಂದೆ ಪ್ರಖ್ಯಾತ ಸಂಸ್ಕೃತ ವಿದ್ವಾಂಸ ತೆಕ್ಕಲೂರು ಅಹೋಬಲಾಚಾರ್ಯ. ತಾಯಿ ಸತ್ಯಭಾಮಮ್ಮ (31ನೇ ಸಂಸ್ಥಾನಾಧಿಪತಿ ಶ್ರೀ ಶ್ರೀವಿದ್ಯಾಸಿಂಧುತೀರ್ಥರ ಪೂವಾಶ್ರಮದ ಪುತ್ರಿ) ನಂತರ ಮುಂದೆ 1903ರಲ್ಲಿ ಅಹೋಬಲಾಚಾರ್ಯರು ಶ್ರೀ ಶ್ರೀವಿದ್ಯಾರತ್ನಾಕರತೀರ್ಥರಾಗಿ ಶ್ರೀ ವ್ಯಾಸರಾಜಮಠದ 35ನೆಯ ಪೀಠಾಧಿಪತಿಗಳಾದರು.


ವೆಂಕಟನರಸಿಂಹನನ್ನು ತಮ್ಮನ್ನು ಮೀರಿಸುವ ಚತುಶ್ಯಾಸ್ತ್ರ ಕೋವಿದನನ್ನಾಗಿ ಮಾಡುವ ಆಸೆ ತಂದೆಗೆ. ಹೀಗಾಗಿ ಆತನಿಗೆ ಸಂಸ್ಕøತ ಭಾಷೆಯ ತಳಹದಿ ಮೇರೆಗೆ ಶಿಕ್ಷಣ ವ್ಯವಸ್ಥೆ ಮಾಡಿದರು ತಂದೆ ಅಹೋಬಲಾಚಾರ್ಯರು. ಸ್ವಭಾವ ಸಹಜವಾಗಿ ತಾಯಿಗೆ ತಮ್ಮ ಮಗ ಲಾಭದಾಯಕ ವೃತ್ತಿಗೆ ಅನುವಾಗುವ ವಿಶ್ವವಿದ್ಯಾಲಯ ಪದವಿ ಗಳಿಸಬೇಕೆಂಬ ಹಿರಿಯಾಸೆ. ತಾಯಿಯ ಛಲ ಹಿರಿದಾಗಿ ವೆಂಕಟನರಸಿಂಹ ಮೈಸೂರು-ಬೆಂಗಳೂರುಗಳಲ್ಲಿ ಓದಿ ಬಿಎ ಬಿಎಲ್ ಪದವಿಗಳಿಸಿ ವಕೀಲಿವೃತ್ತಿ ಆರಂಭಿಸಿದ. 15ನೇ ವಯಸ್ಸಿನಲ್ಲಿ ತನ್ನ ಅಕ್ಕನ ಮಗಳನ್ನು ಮದುವೆಯಾದ.


ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಅಧಿಕಾರಿಯಾಗುವ ಅವಕಾಶ ಇನ್ನೇನು ಲಭಿಸಲಿದೆ ಎನ್ನುವ ಸಂದರ್ಭದಲ್ಲಿ (1935) ಶ್ರೀ ವಿದ್ಯಾವಾರಿಧಿತೀರ್ಥರ ದೇಹಸ್ಥಿತಿ ವಿಷಮಗೊಂಡಿತು. ಲೌಕಿಕ ಅಧಿಕಾರ, ಸ್ಥಾನಮಾನ, ಸಂಪತ್ತು-ಇವೆಲ್ಲವನ್ನು ಯುವ ವಕೀಲ ವೆಂಕಟನರಸಿಂಹ ತ್ಯಾಗಮಾಡಿದ.


ಶ್ರೀವ್ಯಾಸರಾಜ ಸಂಸ್ಥಾನದ ಧರ್ಮಾಧಿಪತ್ಯವನ್ನು ವಹಿಸಿಕೊಂಡ ತೆಕ್ಕಲೂರು ವೆಂಕಟನರಸಿಂಹಾಚಾರ್ಯರು ಪೀಠದ 37ನೆಯ ಸಂಸ್ಥಾನಾಧಿಪತಿಯಾಗಿ ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮಿಗಳಾದರು. ಸನ್ಯಾಸಾಶ್ರಮದ ಆಡಂಬರರಹಿತ ತತ್ವ ಶ್ರೀ ವಿದ್ಯಾಪ್ರಸನ್ನರ ಯತಿಜೀವನದ ನಿತ್ಯಮಂತ್ರವಾಯಿತು.


ವಿದ್ಯಾಪ್ರಸನ್ನತೀರ್ಥರು ಬಯಸಿದ್ದು ವಿದ್ಯಾಧಿಕಾರ. ಆದರೆ ಅವರಿಗೆ ಸಿಕ್ಕಿದ್ದು ಪರವಿದ್ಯಾಧಿಕಾರ. ಕಾನೂನು ಪದವಿಯನ್ನು ಪಡೆದು ನ್ಯಾಯವಾÀದಿಗಳಾಗಿದ್ದ ಅವರು ಶಾಸನಸಭೆಯ ಅಧಿಕಾರದ ಕನಸನ್ನೂ ಹೊಂದಿದ್ದರು. ಆದರೆ ಅವರಿಗೆ ದೊರೆತದ್ದು ಹರಿಶಾಸನ ಸಭೆಯ ಅಧಿಕಾರ. ಯತ್ಯಾಶ್ರಮ ಸ್ವೀಕರಿಸಿದ ಮೇಲೆ ಅವರೇ ಹೇಳುವಂತೆ ಹೊಸ ಚೈತನ್ಯ ವಿಕಸಿತವಾಯಿತು. ಆತಂಕಗಳು ದೂರವಾದವು. ಹರಿ ಇಚ್ಛೆಯಂತೆ ನಡೆಯುವುದೇ ಶ್ರೇಷ್ಠ ಮಾರ್ಗವೆಂದು ತೋರಿತು.


ಸಖ್ಯ- ವಾತ್ಸಲ್ಯ ಭಾವಸಂಗಮ 

ಹರಿದಾಸ-ಯತಿವರ್ಯ ಶ್ರೀ ವಿದ್ಯಾಪ್ರಸನ್ನತೀರ್ಥರು ಸುಮಾರು 300 ಹಾಡುಗಳನ್ನು ರಚಿಸಿದ್ದಾರೆ. ತಾವು ಬರೆದ ಹಾಡುಗಳನ್ನು ತಾವೇ ಹಾಡಿ, ಇತರರಿಗೂ ಹಾಡುವುದನ್ನು ಕಲಿಸಿದುದು ಇವರ ವಿಶೇಷ ಗುಣ. ವಿದ್ಯಾಪ್ರಸನ್ನರು ರಚಿಸಿದ ಕೆಲವು ಕೃತಿಗಳು ಅವರ ಕಾಲದಲ್ಲೇ ಅತ್ಯಂತ ಜನಪ್ರಿಯವಾದದ್ದು ಹೆಮ್ಮೆಯ ಸಂಗತಿ. ಇವರ ಕೀರ್ತನೆಗಳ ಬಹುಭಾಗ ಕೃಷ್ಣನ ಬಾಲಲೀಲೆಗಳಿಗೆ ಮೀಸಲಾಗಿದೆ. ಭಾಗವತದ ಅಧ್ಯಯನ ಮತ್ತು ಪ್ರವಚನದಿಂದ ಹಾಡುಗಳನ್ನಾಗಿ ಹೆಣೆದವರು ಇವರು. ಅಪಾರವಾದ ಜೀವನ ಸತ್ಯಗಳ ಅನುಭವ, ಪ್ರೌಢವಾದ ಚಿಂತನೆ ಒಳಗೊಂಡ ಕೃತಿಗಳನ್ನು ರಚಿಸಿದ ಯತಿ ಶ್ರೀವಿದ್ಯಾಪ್ರಸನ್ನರಿಗೆ ಆಸ್ತಿಕ ಅಮೂಹ ಚಿರಋಣಿ. 

ಔಪಚಾರಿಕತೆ, ಕೃತಕ ಶಿಷ್ಠಾಚಾರ ಮತ್ತು ಆಡಂಬರವನ್ನು ಎಂದೂ ಸಹಿಸದ ದಾಸರು ಯತಿವರ್ಯ ವಿದ್ಯಾಪ್ರಸನ್ನರು.ಮನೆ ಮನೆಯೂ ಹರಿಯ ಆಲಯವಾಗಬೇಕು ಎಂಬುದು ವಿದ್ಯಾಪ್ರಸನ್ನತೀರ್ಥರ ಆಸೆ. ಇಂದಿನ ಪರಿಸ್ಥಿತಿಯಲ್ಲಿ ಮನುಷ್ಯನ ಸದಾಚಾರವನ್ನು ದೂರವಾಗಿಸುವ ಯಾವುದೇ ಹೊಸ ನೀತಿಗಳ ಕಲ್ಪನೆಯಿಂದ ಲೋಕಹಿತ ಸಾಧನೆಯಾಗಲಾರದು ಎಂಬುದು ಇವರ ಸ್ಪಷ್ಟ ನಿಲುವು.


ಆಟವಾಡಬೇಕು, ನಾಟಕವಿದು ಹಳೆ ನಾಟಕ, ಬೇಸಾಯ ಮಾಡಬೇಕು, ಸ್ವಾಂತವ ತೊಳೆಯುತಲಿರಬೇಕು, ಭೋಗ ಬೇರಿಹುದಣ್ಣ, ಭಿಕ್ಷಾಂದೇಹಿ -ಈ ಕೀರ್ತನೆಗಳನ್ನು ಲೌಕಿಕ ವಿಷಯಗಳಿಗಾಗಿ ಉದಾಹರಿಸಬಹುದು. ವಿದ್ಯಾಪ್ರಸನ್ನತೀಥ್ರ ನೀತಿಸಾರ 200 ಪದಗಳ ದೀರ್ಘಕೃತಿ. ಲೋಕಾನುಭವದ ಹಿನ್ನೆಲೆಯಲ್ಲಿ ನಿರೂಪಿಸಿದ ನೀತಿ ಮಾತುಗಳಿಂದ ತುಂಬಿದೆ ಈ ಕೃತಿ. ಹರಿಕೀರ್ತನೆ, ಆತ್ಮಶೋಧನೆ, ಲೋಕನೀತಿ, ಸಂಪ್ರದಾಯ ಹಾಡುಗಳು ಇವುಗಳ ಜೊತೆಗೆ ಕೂಡಿಟ್ಟ ಕೈ ಮತ್ತು ಜಿಹ್ವಾಚಾಪಲ್ಯ ಎಂಬ ನಾಟಕಗಳನ್ನು ವಿದ್ಯಾಪ್ರಸನ್ನತೀರ್ಥರು ಬರೆದಿದ್ದಾರೆ. 


ಮಾನವೀಯ ಅಂತಃಕರಣದ ಸಂತಶ್ರೇಷ್ಠ

1948ರಲ್ಲಿ ಆದಾಗ ತಾನೆ ಸ್ವಾತಂತ್ರ್ಯ ಬಂದಿತು. ಸಂವಿಧಾನ ಇನ್ನೂ ರಚನೆಯಾಗಿರಲಿಲ್ಲ. ಇಂತಹ ಕಾಲದಲ್ಲಿ ದೇವಾಲಯಗಳಿಗೆ ಹರಿಜನ ಪ್ರವೇಶವೆನ್ನುವುದು ದೊಡ್ಡ ರಾಜಕೀಯ ಆಂದೋಲನವಾದಾಗ, ಸಂಪ್ರದಾಯಸ್ಥ ಪೀಠವೊಂದರ ಅಧಿಪತಿಯಾಗಿ ಅದಕ್ಕೆ ಸ್ಪಂದಿಸಿದರು ಇವರು. ದಲಿತೋದ್ಧಾರವೆನ್ನುವುದು ರಾಜಕೀಯ ಪೊಳ್ಳುತನದಿಂದ ಆಗುವಂಥದಲ್ಲ ಎನ್ನುವುದನ್ನು ಪೂರ್ವಾಗ್ರಹಿ ಎಂಬ ಆರೋಪಕ್ಕೂ ಅಂಜದೆ ಪ್ರತಿಪಾದಿಸಿದರು. ಇದು ಇವರ ಮಾನವೀಯತೆ ಮತ್ತು ಅನುಕಂಪಕ್ಕೆ ಸಾಕ್ಷಿ. 


ಊರ ಮಕ್ಕಳಿಗೆ ಮಠದಲ್ಲಿ ಇವರು ಕೇವಲ ಸಂಸ್ಕøತ ಭಾಷೆಯಲ್ಲಿ ಉಪನಿಷತ್ ಸಾರವನ್ನು ಮಾತ್ರ ಕಲಿಸುವ ವ್ಯವಸೇ ಮಾಡಿರಲಿಲ್ಲ. ಹೈಸ್ಕೂಲ ಮಕ್ಕಳನ್ನು ಕರೆಸಿ ಕೂಡಿಸಿಕೊಂಡು, ಗಣಿತ ಮತ್ತು ಇಂಗ್ಲಿಷ್ ಪಾಠಗಳನ್ನು ಸ್ವತಃ ಹೇಳಿಕೊಡುತ್ತಿದ್ದರು. ಮಠ ಕಟ್ಟಿಸಿ ದೇವರ ಪೂಜೆ ಸಲ್ಲಿಸಿ ಮೋಕ್ಷ ಕೊಡಿಸಿರೆಂಬ ಕೋರಿಕೆಯೊಂದಿಗೆ ಜಮೀನು ಕೊಡಬಂದ ದಾನಿಯೊಬ್ಬರ ಮನವೊಲಿಸಿ ಚೌಕಸಂದ್ರಗ್ರಾಮದಲ್ಲಿ ಹೆಂಚಿನ ಮನೆ ಕಟ್ಟಿಸಿ ಮಠದ ಸಿಬ್ಬಂದಿ ಮಕ್ಕಳಿಗೆ ಸಾಶನ (ಸಾಶನ ಸರಿಯಾಗಿದೆ) ಹಾಸ್ಟೆಲ್ ಮಾಡಿ ಕಾಲೇಜು ವಿದ್ಯಾಭ್ಯಾಸ ಕೊಡಿಸಿದ್ದು, ಇವರ ಪೀಠಾಧಿಪತ್ಯದ ಮುಖಂಡತ್ವ. ತಾಲೂಕು ಮಂಡಲಿಯವರು ಹೈಸ್ಕೂಲು ತೆರೆಯುವ ಪ್ರಸ್ತಾವಿಟ್ಟಾಗ, ಅದು ವ್ಯಾಸರಾಜಪುರದಲ್ಲೇ ಆಗಬೇಕೆಂದು ಮಠದ ಒಂದು ಭಾಗವನ್ನೇ ಅದಕ್ಕೆ ಉಚಿತವಾಗಿ ಆಶ್ರಯವಿತ್ತರು. 

ಹಿಂದೆ ಸೋಸಲೆಯ ವ್ಯಾಸರಾಜಮಠದ ಆವರಣದಲ್ಲಿ ಬಹುದೊಡ್ಡ ಹೂದೋಟ ಮತ್ತು ತುಳಸಿವನ ಬೆಳೆಸಿದ್ದರು ಶ್ರೀವಿದ್ಯಾಪ್ರಸನ್ನತೀರ್ಥರು. ಸ್ವಯಂ ಹೂಗಿಡಗಳಿಗೆ ನೀರು ಉಣಿಸಿ, ಕಳೆಕಿತ್ತು, ಹೂವು-ತುಳಸಿ ಬಿಡಿಸಿ ತರುವುದು ಇವರ ದಿನನಿತ್ಯದ ಪೂಜಾವ್ಯವಸ್ಥೆಯ ಪ್ರಕ್ರಿಯೆಯಾಗಿತ್ತು. ತಮ್ಮ ಜೀವಿತಕಾಲದಲ್ಲಿ ಸಾವಿರಾರು ತುಳಸಿ ಸಸಿಗಳನ್ನು ಭಕ್ತಾದಿಗಳಿಗೆ ದಾನ ಮಾಡಿದ ಹೆಗ್ಗಳಿಕೆ ಇವರದು. 


ಇದೆಲ್ಲಕ್ಕಿಂತ ಇವರು ಮಾಡುತ್ತಿದ್ದ ಮತ್ತೊಂದು ಅತಿ ಮುಖ್ಯ ಕಾರ್ಯವೆಂದರೆ ಪೂಜೆಗೆ ಸ್ವತಃ ಹೂ ಕಟ್ಟಿ ದೈವ ವಿಗ್ರಹಳಿಗೆ ಮುಡಿಸುವ ಕೈಂಕರ್ಯ. ಮಠದ ಶಿಷ್ಯರೆಲ್ಲರೂ ಹೂಕಟ್ಟಲು ಹಾಜರಿರಲೇಬೇಕು. ಹೀಗೆ ಹೂವುಕಟ್ಟುವಾಗ ಶ್ರೀವಿದ್ಯಾಪ್ರಸನ್ನತೀರ್ಥರು ಬರೆದು, ಹಾಡಿ ಹಾಡಿಸಿದ ಕೀರ್ತನೆ ಇದಾಗಿದೆ.

ಹೂ ಬೇಕೆ ಹೂವು ಪರಿಮಳದ ಹೂವು|

ವಿಜ್ಞಾನ- ಅಧ್ಯಾತ್ಮ ಸಮ್ಮಿಲನ – ಮಹಾದಾರ್ಶನಿಕ 

ಮೂಲತಃ ಇವರು ವಿಚಾರಶೀಲರು. ಉತ್ತಮವಾಗ್ಮಿ. ಸಮರ್ಥ ಸಂಘಟಕರು, ದಾರ್ಶನಿಕ ಚಿಂತಕರು, ವಿಶ್ವಕುಟುಂಬಿ. ತುಂಬು ತುಳುಕುವ ಸಮಾಜಸೇವಾ ಉತ್ಸಾಹ ಇವರಿಗಿತ್ತು. ಪ್ರಗತಿಗಾಮಿ ಚಿಂತನೆಗಳತ್ತ ಒಲುವು ತುಂಬಿಕೊಂಡವರು. ಇಂತಹ ತುಂಬು ಜವ್ವನದ ವ್ಯಕ್ತಿ ಸನ್ಯಾಸಾಶ್ರಮ ಸ್ವೀಕರಿಸಿದುದು ಭಗವಂತನ ಇಚ್ಛೆಯೇ. 


ತಮ್ಮ ಚೇತನ-ಚಿಂತನಗಳನ್ನು ಹರಿದಾಸ ಸಾಹಿತ್ಯ ರಚನೆಗೆ ಮುಡುಪಾಗಿಟ್ಟ ಇವರ ದೃಢ ನಿರ್ಧಾರ ಆದರಣಿಯ. ಮೊದಮೊದಲು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹೊರಹೊಮ್ಮಿದ ಇವರ ದಾಸಸಾಹಿತ್ಯ ಕೃತಿಗಳು ಬರುಬರುತ್ತಾ ಜೀವನದ ಎಲ್ಲ ಪ್ರಾಕಾರಗಳನ್ನು ಸುಲಭವಾಗಿ ಮೈಗೂಡಿಸಿಕೊಂಡದ್ದು ನಮ್ಮ ಸೌಭಾಗ್ಯ. 

ಭಗವಂತನೊಡನೆ ನೇರಮಾತುಕತೆ ನಡೆಸಿ ಎಂದು ಹೇಳಿಕೊಟ್ಟ ದಾಸರು ಇವರು. ವಾಸುದೇವ ನಿನ್ನ ದಾಸನಾಗುವ ಆಸೆಯೋ ಎನಗೆ ಎನ್ನುವ ಮೂಲಕ ಸಾಮಾನ್ಯ ಭಕ್ತನ ಮನೋಭೂಮಿಕೆಯನ್ನು ವರ್ಣಿಸಿದವರು ಇವರು. ಜಗವನುದ್ಧರಿಸಿದ ಸುಂದರ ನಿನ್ನ ಮೊಗ ನೋಡಲು ನಮಗೆಲ್ಲ ಸಂಭ್ರಮವೋ ಎನ್ನುವ ಇವರ ಮಾತು ದಾಸಸಾಹಿತ್ಯದ ಮುಕ್ತಾಫಲಗಳು. 


ವಿಶ್ವದ ಶ್ರೇಷ್ಠ ಕವಿ ಜಾನ್ ನ್ಮೂಮನನ್ನು ಬರೆದ Lead Kindly Light ಕವಿತೆಯನ್ನು ಇಡೀ ಪ್ರಪಂಚವೇ ಧನ್ಯತೆಯಿಂದ ಸ್ಮರಿಸುತ್ತದೆ. ಕನ್ನಡ ಮಣ್ಣಿನಲ್ಲಿ ಇದೇ ಚಿಂತನೆಯ ಪ್ರತಿಕೃತಿಯನ್ನು ಶ್ರೀವಿದ್ಯಾಪ್ರಸನ್ನರು ಪಡಿಮೂಡಿಸಿದ್ದಾರೆ. ತೋರಿಸಯ್ಯ ಬೆಳಕು, ದೇವತೋರಿಸಯ್ಯಾ ಬೆಳಕು ಎನ್ನುವ ಇವರ ದೇವರನಾಮ ವಿಶ್ವಸಾಹಿತ್ಯದಿಂದ ದಾಸಸಾಹಿತ್ಯಕ್ಕೆ ಹರಿದು ಬಂದ ಜ್ಞಾನಾಮೃತ. 


ಪಾಶ್ಚಾತ್ಯ ಧರ್ಮಶಾಸ್ತ್ರ ಹಾಗೂ ಭಾರತೀಯ ಸ್ಮøತಿ, ಶೃತಿ, ಪುರಾಣಗಳ ತೌಲನಿಕ ಸಮೀಕ್ಷೆಯ ಬಗೆಗೆ ಶ್ರೀವಿದ್ಯಾಪ್ರಸನ್ನರು ಗಂಭೀರ ಚಿಂತನೆ ನಡೆಸಿದರು. ಅಂದಿನ ಕಾಲದ ಪ್ರಖ್ಯಾತ ಸಂಸ್ಕøತ ವಿದ್ವಾಂಸ ನೆರೂರು ಕೃಷ್ಣಾಚಾರ್ಯರೊಂದಿಗೆ ಯುವ ಯತಿ ನಡೆಸುತ್ತಿದ್ದ ಸಂವಾದ ನಮ್ಮೆಲ್ಲರಿಗೂ ಶಿಕ್ಷಣದಂತಿತ್ತು. 


ಖ್ಯಾತ ಆಡಳಿತಗಾರ ಸರ್.ಸಿ.ಪಿ. ರಾಮಸ್ವಾಮಿ ಐಯ್ಯರ್‍ರವರು ಇವರ ಖ್ಯಾತಿಯನ್ನು ತಿಳಿದು ಇವರೊಂದಿಗೆ ಚರ್ಚಿಸಲು ಸೋಸಲೆ ವ್ಯಾಸರಾಜಮಠಕ್ಕೆ ಬಂದ ಘಟನೆಯಂತೂ ರಾಜ್ಯಾದ್ಯಂತ ಆಕರ್ಷಕ ಸುದ್ಧಿಯಾಯಿತು. ಪ್ರಾಯಶಃ ಸರ್ ಸಿ.ಪಿ.ಯವರಿಗೆ ಮಾಧ್ವ ಯತಿಯೊಬ್ಬರ ದಾರ್ಶನಿಕ ಚಿಂತನೆಯು ಬೆಳಕು ತೋರಿದಂತೆ ಭಾಸವಾಗಿದ್ದರೆ ಅಚ್ಚರಿಯೇನಲ್ಲ. 


ಶ್ರೀವಿದ್ಯಾಪ್ರಸನ್ನರು ರಚಿಸಿದ ಶ್ರೀಸುಮಧ್ವವಿಜಯ ಸಾರಸಂಗ್ರಹವೆಂಬ 65 ಚರಣಗಳ ನೀಳ್ಗವನ ಅತ್ಯುತ್ತಮ ಹೋಲಿಕೆ. ದಾಸಸಾಹಿತ್ಯ ಅಭ್ಯಾಸಿಗಳು ಒಮ್ಮೆಯಾದರೂ ಓದಲೇ ಬೇಕಾದ ಕಾವ್ಯಕೃತಿ ಇದು. 


ವಿಚಾರಶೀಲತೆಯನ್ನು ಭಕ್ತ ಬೆಳೆಸಿಕೊಳ್ಳಬೇಕು. ಪ್ರಪಂಚ ಬದಲಾಗುತ್ತಿರುವುದೆಂಬ ಪ್ರಜ್ಞೆ ಆತನಲ್ಲಿರಬೇಕು. ಜೀವನ ವಿಕಾಸಕ್ಕೆ ಮತ್ತು ಮುಕ್ತಿ ಮಾರ್ಗಕ್ಕೆ ಭಕ್ತಿ ಎಷ್ಟು ಅಗತ್ಯವೋ ವಿಚಾರಶೀಲತೆಯೂ ಅಷ್ಟೇ ಮುಖ್ಯ. ಆಧ್ಯಾತ್ಮದ ಜೊತೆಜೊತೆಗೆ ವೈಜ್ಞಾನಿಕ ದೃಷ್ಟಿಯೂ ಬೇಕು. ವಿಜ್ಞಾನದ ಬಗೆಗೆ ನಮಗಿರುವ ತಪ್ಪು ಕಲ್ಪನೆ ವಿಕಾಸಕ್ಕೆ ಸರಿ ಎನಿಸುವುದಿಲ್ಲ. 1960ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಮಧ್ವಮಹಾಮಂಡಲ ಸಭೆಯಲ್ಲಿ ಶ್ರೀ ಶ್ರೀವಿದ್ಯಾಪ್ರಸನ್ನತೀರ್ಥರು ಹೇಳಿದ ಈ ಮಾತುಗಳನ್ನೇ ದಾಸರಾಗಿ ಅವರು ನೀಡಿದ ಸಂದೇಶ ಎಂದು ಪರಿಗಣಿಸಬಹುದು. 

ಶ್ರೀಮತ್ಕೃಷ್ಣಪದಾಂಭೋಜಮಾನಸಂ ಕವಿಪುಂಗವಂ|

ಶ್ರೀಮದ್ವಿದ್ಯಾಪ್ರಸನ್ನಾಬ್ದಿಂ ಗುರುಂವಂದೇ ನಿರಂತರಂ||


ಐತಿಹಾಸಿಕ- ಪೌರಾಣಿಕ ಹಿನ್ನೆಲೆಯ ಪ್ರಾಕೃತಿಕ ಸೊಬಗಿನ ಬೆಂಗಳೂರಿಗೆ ಸಮೀಪವಿರುವ ನಗರ ಜಂಜಡಗಳಿಂದ ಮುಕ್ತವಾಗಿ ದೇವರಾಯನದುರ್ಗದ ಶ್ರೀ ಭೋಗ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಯೋಗ ನರಸಿಂಹ ದಿವ್ಯ ಸನ್ನಿಧಾನ ಆಸ್ತಿಕ ಭಕ್ತಕೋಟಿಯನ್ನು ತನ್ನೆಡೆಗೆ ಸೆಳೆಯುತ್ತಿರುವ ಪರಮ ಪಾವನ ತಾಣ. ಶ್ರೀಸನ್ನಿಧಿಯ ಪಕ್ಕದಲ್ಲೇ ಇರುವ ಕೊಡಿಗೇಹಳ್ಳಿ ಪ್ರಸನ್ನ ಶ್ರೀರಾಮ ಮಂದಿರ ಟ್ರಸ್ಟ್ (ರಿ)ನಲ್ಲಿ ಸಂಸ್ಥೆಯ ಸಾಮ್ರಾಟ್ ಪೋಷಕರಾಗಿದ್ದ ಸೋಸಲೆ ಶ್ರೀ ವ್ಯಾಸರಾಜ ಯತಿ ಪರಂಪರೆ, ಹರಿದಾಸ– ಯತಿವರ್ಯ, ಸಂತಶ್ರೇಷ್ಠ, ಶಕಪುರುಷ, ಯುಗಯೋಗಿ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವನ್ನು ಶ್ರೀ ಪಯೋನಿಧಿ ಸಭಾಂಗಣದಲ್ಲಿ ಮಾರ್ಗಶಿರ ಶುದ್ಧ ಹುಣ್ಣಿಮೆ– ಡಿಸೆಂಬರ್ 26, ಮಂಗಳವಾರ ಆಯೋಜಿಸಲಾಗಿದೆ.


ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರ  ಜೀವನ- ಸಾಧನೆ– ಮಹಿಮಾ ಕುರಿತು ಪ್ರವಚನ ನಂತರ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಿರಚಿತ ದೇವರನಾಮಗಳ ಗಾಯನ, ಅಲಂಕಾರ ಪಂಕ್ತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಮಾನ್ಯೇಜಿಂಗ್ ಟ್ರಸ್ಟೀ ಕೆ.ಎಂ.ಫಣಿರಾಜ್ ತಿಳಿಸಿರುತ್ತಾರೆ.


ಸಂಸ್ಥೆಯು ಇದೀಗ 80 ವಸಂತಗಳನ್ನು ಪೂರೈಸಿ ಹಲವಾರು ಧಾರ್ಮಿಕ- ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಅವಿರತವಾಗಿ ನಡೆಸಿಕೊಂಡುಬರುತ್ತಿದೆ. ಸಂಸ್ಥೆಯ ವತಿಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತವರ್ಗಕ್ಕೆ ಸಭಾಂಗಣ, ಪಾಕಶಾಲೆ, ಸ್ನಾನಗೃಹ ಸಕಲ ಸೌಕರ್ಯವಿರುವ ಕಟ್ಟಡವನ್ನು ಉಪನಯನ, ಮದುವೆ ಇನ್ನಿತರ ಕಾರ್ಯಕ್ರಮ ನಡೆಸಲು ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :  ದೂ: 098807 10168 


******

- ಡಾ. ಗುರುರಾಜ ಪೋಶೆಟ್ಟಿಹಳ್ಳಿ 

ಮೊಬೈಲ್ : 9739369621

ಇ-ಮೇಲ್ :  padmapranava@yahoo.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top