ಧರ್ಮಸ್ಥಳ: ಕಾವ್ಯಗಳು ಜನರಿಗೆ ತಲುಪಿದರೆ ಮಾತ್ರ ಸಾಹಿತ್ಯಕ್ಕೆ ನೈಜ ಅರ್ಥ ದೊರಕುತ್ತದೆ ಎಂದು ವಿದ್ವಾಂಸರು, ಖ್ಯಾತ ಗಮಕಿಗಳಾದ ಡಾ.ಎ.ವಿ ಪ್ರಸನ್ನ ಅಭಿಪ್ರಯಪಟ್ಟರು.
ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಮಂಗಳವಾರ ನಡೆದ 91 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾತನಾಡಿದರು. ಗಮಕ ಸಾಹಿತ್ಯವು ಕರ್ನಾಟಕಕ್ಕೆ ದೊರೆತ ಶ್ರೇಷ್ಠ ಸಾಹಿತ್ಯ. ಈ ಪ್ರಕಾರದಿಂದ ಸಾಮಾನ್ಯ ಜನರೂ ಸುಲಭವಾಗಿ ಕಾವ್ಯಗಳನ್ನು ಅರ್ಥೈಸಿಕೊಳ್ಳಬಹುದು. ಅರ್ಥವಾಗದ ಕ್ಲಿಷ್ಟ ಸಾಹಿತ್ಯವನ್ನೂ ಇದು ಸುಲಲಿತವಾಗಿಸುತ್ತದೆ. ಗಮಕ ಸಾಹಿತ್ಯವು ಮೂಲ ಕಾವ್ಯದ ಅರ್ಥ ಕೆಡದಂತೆ ಹಾಡಿನ ಮೂಲಕ ಜನರನ್ನು ತಲುಪುತ್ತದೆ ಎಂದರು.
ಕುಮಾರವ್ಯಾಸ, ರಾಘವಾಂಕ, ಹರಿಹರ, ರತ್ನಾಕರವರ್ಣಿ ಮೊದಲಾದ ಕವಿಗಳು ಗಮಕ ಸಾಹಿತ್ಯದ ಬೇರುಗಳು. ಆದರೆ ಕುಮಾರವ್ಯಾಸ ಸಾಹಿತ್ಯವು ಗಮಕಿಗಳನನ್ನು ಹೆಚ್ಚು ಸೆಳೆಯುವುದರಿಂದ ಕುಮಾರವ್ಯಾಸನನ್ನು 'ಗಮಕಿಗಳ ಕಾಮಧೇನು' ಎಂದು ಕರೆಯುತ್ತಾರೆ. ಇವನ ಸಾಹಿತ್ಯದ ವರ್ಣನೆಯಲ್ಲಿ ಸಾಮಾನ್ಯ ಜನರ ಜೀವನ ವಿಧಾನಗಳು ಅಳವಡಿಕೆಯಾದ್ದರಿಂದ ಈ ಸಾಹಿತ್ಯವು ಎಲ್ಲರಿಗೂ ಪ್ರಿಯವೆನಿಸುತ್ತದೆ ಎಂದು ತಿಳಿಸಿದರು.
ಕುಮಾರವ್ಯಾಸನು ಅಂದೇ ಕೃಷಿಯ ಮಹತ್ವವನ್ನು ತನ್ನ ಕಾವ್ಯಗಳಲ್ಲಿ ತಿಳಿಸಿದ್ದಾನೆ. ದುಂಬಿ ಹೇಗೆ ಹೂವಿಗೆ ನೋವಾಗದಂತೆ ಮಕರಂದವನ್ನು ಹೀರಿ, ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತದೆಯೋ ಹಾಗೇ ಸರ್ಕಾರವು ರೈತರಿಂದ ಕಂದಾಯ ತೆಗೆದುಕೊಂಡು ರೈತರ ಅಭಿವೃದ್ಧಿಗೆ ಬಳಸಬೇಕು ಎಂದು ಉದಾಹರಣೆಯ ಮೂಲಕ ತಿಳಿಸಿದರು.
ಸಾಹಿತ್ಯ ಸಮ್ಮೇಳನವನ್ನು ರಾಮಕೃಷ್ಣ ಬಿ.ಎನ್ ಉದ್ಘಾಟಿಸಿದರು. ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಡಾ.ಶ್ರೀಪಾದ ಶೆಟ್ಟಿ, ಪ್ರಕಾಶ ಬೆಳವಾಡಿ, ಡಾ. ಅಜ್ಜಕ್ಕಳ ಗಿರೀಶ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ದಿವಾಕರ ಕೊಕ್ಕಡ ಮತ್ತು ಡಾ.ರಾಜಶೇಖರ ಹಳೆಮನೆ ನಿರೂಪಿಸಿ, ಕೇಶವ ಗೌಡ ಪಿ ವಂದಿಸಿದರು.
- ಸುಚೇತಾ ಹೆಗಡೆ
ದ್ವಿತೀಯ ಎಂ.ಎ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ