ಧರ್ಮಸ್ಥಳ : ಸಂಸ್ಕೃತಿ ಮತ್ತು ಜ್ಞಾನವನ್ನು ಸುಲಲಿತವಾಗಿ ಮುಂದಿನ ಪೀಳಿಗೆಗೆ ದಾಟಿಸಲು ಸಾಹಿತ್ಯ ನೆರವಾಗಬಲ್ಲದು ಎಂದು ಕನ್ನಡ ಪ್ರಾಧ್ಯಾಪಕರು ಮತ್ತು ಲೇಖಕರಾದ ಡಾ. ಅಜಕ್ಕಳ ಗಿರೀಶ ಭಟ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಮಂಗಳವಾರದಂದು ಜರುಗಿದ 91ನೇಯ ಸಾಹಿತ್ಯ ಸಮ್ಮೇಳನದಲ್ಲಿ 'ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಂಸ್ಕೃತಿ ಬದಲಾದಂತೆ ಭಾಷೆಯ ವ್ಯಾಕರಣ ಕೂಡ ಬದಲಾಗುತ್ತದೆ. ಒಂದು ಭಾಷೆ ಅಮರ್ತ್ಯವಾಗಲು ಭಾಷೆಯ ಮೌಖಿಕ ಮತ್ತು ಲಿಖಿತ ಪರಂಪರೆಯ ವಿಕಸನವೇ ಕಾರಣ. ವಸ್ತುಸಾಕ್ಷಾತ್ಕಾರ ಸಾಹಿತ್ಯಲೋಕದ ಪ್ರಮುಖ ಗುರಿಯಾಗಲಿ. ಅಂದಾಗ ಮಾತ್ರವೇ ಅಂತರಂಗದ ವಿಶ್ಲೇಷಣೆಗೆ ಸಾಹಿತ್ಯ ಪ್ರಯೋಜನಕಾರಿಯಾಗಿ, ನಮ್ಮ ಮಸ್ತಿಷ್ಕದಲ್ಲಿ ಅರಿವುಂಟಾಗಲು ನೆರವಾಗುತ್ತದೆ.
ಒಟ್ಟಾರೆ ಬದುಕಲಿಕ್ಕೆ ಸಾಹಿತ್ಯದ ಅವಶ್ಯಕತೆಯಿಲ್ಲ, ಚೆನ್ನಾಗಿ ಬದುಕಲಿಕ್ಕೆ ಸಾಹಿತ್ಯವಿರಬೇಕು. ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಲೋಕಕ್ಕೆ ಸೇತುವಾಗಿ ಸಾಹಿತ್ಯ ನಿಲ್ಲಬಲ್ಲದು. ಆಡುಭಾಷೆ ಸರ್ವಕಾಲದಲ್ಲಿಯೂ ಏಕತಾನವಾಗಿತ್ತು. ಆದರೆ ನಿರಂತರ ಬದಲಾವಣೆ ಕಂಡದ್ದು ಕಾವ್ಯಶಾಸ್ತ್ರ ಮಾತ್ರವೇ. ಹೀಗಾಗಿ ಅದರ ಅಂತರ್ಯವಾದ ವ್ಯಾಕರಣವನ್ನು ಭಾಷಾಶಾಸ್ತ್ರ ಅಧ್ಯಯನಕಾರರು ಮತ್ತು ವಿದ್ಯಾರ್ಥಿಗಳು ಕಲಿಯಲಿ. ಇದರಿಂದ ಆಯಾ ಅಧ್ಯಯನಶಾಸ್ತ್ರಗಳನ್ನು ದೋಷವಿಲ್ಲದೇ ವ್ಯಕ್ತಪಡಿಸುವ ಸಾಮರ್ಥ್ಯ ಸಹಜವಾಗಿ ಬರುವುದು ಎಂದರು.
ಸಾಹಿತ್ಯದಲ್ಲಿ ಕಲ್ಪನಾಪ್ರಧಾನ ಮತ್ತು ತರ್ಕಪ್ರಧಾನ ಎಂಬ ಎರೆಡು ಪ್ರಕಾರಗಳಿವೆ. ಕಲ್ಪನಾಪ್ರಧಾನ ಸಾಹಿತ್ಯ ಇತರೆ ಎಲ್ಲ ರೀತಿಯ ಕಲೆಗಳನ್ನು ಪೋಷಿಸುವ ಕಾರ್ಯನಿರ್ವಹಿಸುತ್ತಿದೆ. ರಾಮಾಯಣ ಮತ್ತು ಮಹಾಭಾರತದಂತಹ ಸಾಹಿತ್ಯಗಳು ಹಲವು ಬಾರಿ ಮರುಸೃಷ್ಟಿಯಾಗಿವೆ. ಇಂದಿನ ಕಾಲಕ್ಕೆ ಅನುಗುಣವಾಗಿ ಇತರೆ ಸಾಹಿತ್ಯಗಳು ಕೂಡ ಮರುರೂಪಿತಗೊಳ್ಳಲಿ. ಇನ್ನೊಂದೆಡೆ ತರ್ಕಪ್ರಧಾನ ಸಾಹಿತ್ಯ ವ್ಯಕ್ತಿಯೋರ್ವನ ಅಭಿವ್ಯಕ್ತಿಯ ಕಲೆಯನ್ನು ಶ್ರೀಮಂತಗೊಳಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ನಿರ್ದೇಶಕರು ಮತ್ತು ವಿಜ್ಞಾನಿಗಳಾದ ಶ್ರೀ ರಾಮಕೃಷ್ಣ ಬಿ.ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ವಿದ್ವಾಂಸರು ಮತ್ತು ಗಮಕಿಗಳಾದ ಡಾ.ಎ.ವಿ. ಪ್ರಸನ್ನ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಬರಹಗಾರರಾದ ಶ್ರೀಪಾದ ಶೆಟ್ಟಿ, ರಂಗಕರ್ಮಿಗಳಾದ ಪ್ರಕಾಶ್ ಬೆಳವಾಡಿ ಸೇರಿದಂತೆ ಇತರೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ