ನವೆಂಬರ್ 19 ಯಾಜ್ಞವಲ್ಕ್ಯಂ ಜಯಂತಿ

Upayuktha
0

 ಯೋಗೀಶ್ವರ ಶ್ರೀ ಯಾಜ್ಞವಲ್ಕ್ಯಂ ಮಹರ್ಷಿ




ಭಾರತೀಯ ಭವ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಯಾಜ್ಞವಲ್ಕ್ಯಂರು ಪ್ರಾತಃಸ್ಮರಣೀಯರು. ಪಾಂಚಾಲ ದೇಶದ ಬ್ರಾಹ್ಮಣಶ್ರೇಷ್ಠರಾದ ದೇವರಾತ ಮತ್ತು ಸುನಂದಾದೇವಿಯವರ ಸುಪುತ್ರರೇ ಮಹಾತಪಸ್ವಿ ಯಾಜ್ಞವಲ್ಕ್ಯಂರು. ಎಂಟನೇ ವಯಸ್ಸಿನಲ್ಲಿ ವಿಧ್ಯುಕ್ತವಾಗಿ ಉಪನೀತರಾಗಿ ಬಾಷ್ಕಲ ಮಹರ್ಷಿಗಳಿಂದ ಋಗ್ವೇದವನ್ನು, ಜೈಮಿನಿಗಳಿಂದ ಸಾಮವೇದವನ್ನು ಅಭ್ಯಸಿಸಿ, ತಮ್ಮ ಸೋದರ ಮಾವಂದಿರಾದ ವೈಶಂಪಾಯನ ಮಹರ್ಷಿಗಳಲ್ಲಿ ಯರ್ಜುವೇದವನ್ನು ಅಧ್ಯಯನ ಮಾಡಲು ಅವರ ಗುರುಕುಲವನ್ನು ಸೇರಿದರು. ವೈಶಂಪಾಯನರಲ್ಲಿದ್ದ 360 ಮಂದಿ ಶಿಷ್ಯರಲ್ಲಿ ಅಗ್ರಗಣ್ಯರಾದರು. ಗುರುಗಳ ಮೆಚ್ಚುಗೆಗೆ ಪಾತ್ರರಾದರು. 


ಆದರೆ ವಿಧಿ ವಿಲಾಸ, ಗುರು-ಶಿಷ್ಯರಿಗೆ ಮನಸ್ತಾಪ ಬರುವಂತಹ ಸಂಚೊಂದನ್ನೊಡ್ಡಿತು. ಒಮ್ಮೆ ಮೇರು ಪರ್ವತದಲ್ಲಿ ಋಷಿಗಳೆಲ್ಲರೂ ಕಲೆತು ಧಾರ್ಮಿಕ ಸಮ್ಮೇಳನವೊಂದನ್ನು ವ್ಯವಸ್ಥೆ ಮಾಡಿದ್ದರು. ಆ ಸಮ್ಮೇಳನದಲ್ಲಿ ಪ್ರತಿಯೊಬ್ಬ ಋಷಿಯೂ ಭಾಗವಹಿಸಬೇಕಂದೂ, ಒಂದು ವೇಳೆ ಗೈರುಹಾಜರಾದಲ್ಲಿ ಅಂತಹವರಿಗೆ ‘ಬ್ರಹ್ಮಹತ್ಯಾ ದೋಷ’ ಪ್ರಾಪ್ತಿಯಾಗುವುದೆಂದೂ ಸಭೆಯಲ್ಲಿ ಘೋಷಿಸಲಾಯಿತು. 


ಆದರೆ ಸಮ್ಮೇಳನದ ದಿನ ಅನಿವಾರ್ಯ ಕಾರಣದಿಂದಾಗಿ (ಸಮ್ಮೇಳನಕ್ಕಿಂತಲೂ ಹೆಚ್ಚಿನ ಕರ್ತವ್ಯವೊಂದರಲ್ಲಿ ತೊಡಗಿದ್ದುದರಿಂದ) ವೈಶಂಪಾಯನರು  ಆ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಋಷಿವಾಕ್ಯದಂತೆ ಅವರಿಗೆ ಬ್ರಹ್ಮಹತ್ಯಾದೋಷವು ಪ್ರಾಪ್ತಿಯಾಯಿತು. ತದ್ದೋಷ ಪರಿಹರಾರ್ಥವಾಗಿ ತಮ್ಮ ಶಿಷ್ಯರೆಲ್ಲರೂ ಅನುಷ್ಠಾನ ಮಾಡಬೇಕೆಂದು ವೈಶಂಪಾಯನರು ಅಜ್ಞಾಪಿಸಿದರು. ಅನುಷ್ಠಾನದ ಬಗ್ಗೆ ಈ ಶಿಷ್ಯರಿಗೆ ಹೆಚ್ಚು ಸಾಮರ್ಥ್ಯವಿಲ್ಲದ ಕಾರಣ ನಾನ್ನೊಬ್ಬನೇ ಅನುಷ್ಠಾನ ಮಾಡಿ ತಮ್ಮ ದೋಷ ನಿವಾರಿಸುತ್ತೇನೆ ಎಂದರು ಯಾಜ್ಞವಲ್ಕ್ಯಂರು. 


ಈ ಬ್ರಾಹ್ಮಣನಿಂದೆ ವೈಶಂಪಾಯನರಿಗೆ ಹಿಡಿಸಲಿಲ್ಲ. ‘ವಿಪ್ರೋತ್ತಮರ ತೇಜೋವಧೆ ಮಾಡಿದ ನೀನು ನನ್ನ ಶಿಷ್ಯನಲ್ಲ. ಆದುದರಿಂದ ನನ್ನಿಂದ ಕಲಿತ ವಿದ್ಯೆಯನ್ನೆಲ್ಲ ಹಿಂದಿರುಗಿಸು’ ಎಂದು ಆಗ್ರಹಿಸಿದರು. ಯಾಜ್ಞವಲ್ಕ್ಯಂರು ತಮ್ಮ ಸೋದರಳಿಯ ಎಂಬುದನ್ನು ಮರೆತು ತಪ್ಪಿಗೆ ತಕ್ಕ ಶಿಕ್ಷೆಯನ್ನು ನೀಡಿದ ವೈಶಂಪಾಯನರ ಧರ್ಮನಿಷ್ಠೆಯನ್ನು ಎಷ್ಟು ಹೊಗಳಿದರು ಅಲ್ಪವೇ. ಶಿಷ್ಯನಿಗೆ ತಕ್ಕ ಗುರು. ಗುರುಗಳ ಕೋಪವನ್ನು ಶಮನಗೊಳಿಸಲು ಯಾಜ್ಞವಲ್ಕ್ಯಂರು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾದವು. 


ಗುರ್ವಾಜ್ಞೆಯನ್ನು ಪಾಲಿಸುವ ನಿಮಿತ್ತ ಯಾಜ್ಞವಲ್ಕ್ಯಂರು ತಾವು ವೈಶಂಪಾಯನರಿಂದ ಕಲಿತ ಸಮಸ್ತ ವಿದ್ಯೆಯನ್ನು ವಮನ ಮಾಡಿದರು. ತೇಜೋಮಯವಾದ ಆ ವಿದ್ಯೆಯು ವ್ಯರ್ಥವಾಗಬಾರದೆಂದು ವೈಶಂಪಾಯನರ ಇತರ ಶಿಷ್ಯರು ‘ತಿತ್ತರಿ ಪಕ್ಷಿ’ಗಳ ವೇಷಧರಿಸಿ ಅದನ್ನು ಭಕ್ಷಿಸಿದರು. ಇವರೇ ಮುಂದೆ ತೈತ್ತರೀಯರು ಎಂದು ಪ್ರಸಿದ್ಧರಾದರು. 


ವೈಶಂಪಾಯನ ಆಶ್ರಮದಿಂದ ಹೊರಟ ಯಾಜ್ಞವಲ್ಕ್ಯಂರು ಗಂಗಾತೀರಕ್ಕೆ ಬಂದು, ಸೂರ್ಯನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿದರು. ಇವರ ತಪಸ್ಸಿಗೆ ಮೆಚ್ಚಿ ಭಾಸ್ಕರನು ಪ್ರತ್ಯಕ್ಷನಾಗಿ ಇವರ ಕೋರಿಕೆಯಂತೆ ಯರ್ಜುವೇದವನ್ನು ಅಶ್ವರೂಪಿಯಾಗಿ ಅನುಗ್ರಹಿಸಿದ. ಆ ವೇದವೇ ಮುಂದೆ ಶುಕ್ಲ ಯರ್ಜುವೇದವೆಂದು ಪ್ರಖ್ಯಾತವಾಯಿತು. 


ಸೂರ್ಯದೇವನಿಂದಯಾಜ್ಞವಲ್ಕ್ಯಂರ ಮೂಲಕ ಜಗತ್ತಿಗೆ ಬಂದ ಶುಕ್ಲಯರ್ಜುವೇದವು ಶುದ್ಧವೂ ನಿರ್ಮಲವೂ ಸ್ಪಷ್ಟವೂ ಆಗಿದೆ. 


ಯಾಜ್ಞವಲ್ಕ್ಯಂರಿಂದ ಶುಕ್ಲಯರ್ಜುವೇದವನ್ನು ಕಲಿತ ಶಿಷ್ಯರಲ್ಲಿ ಕಣ್ವ, ಮಾಧ್ಯಂದಿನ ಮುಂತಾದ ಹದಿನೈದು ಪ್ರಮುಖರು. ಇವರಲ್ಲಿ ಕಣ್ವರು ಯಾಜ್ಞವಲ್ಕ್ಯಂರ ಪ್ರಥಮ ಶಿಷ್ಯರು. ಇವರು ದಕ್ಷಿಣ ಭಾರತದಲ್ಲಿ ಶುಕ್ಲ ಯರ್ಜುವೇದವನ್ನು ಪ್ರಚಾರ ಮಾಡಿದರು. ಈ ಋಷಿಯ ಹೆಸರಿನಲ್ಲಿಯೇ ಇದು ಕಣ್ವ ಶಾಖೆ ಅಥವಾ ಪ್ರಥಮ ಶಾಖೆ ಎಂಬುದಾಗಿ ಪ್ರಸಿದ್ಧವಾಗಿದೆ. 


ಅಗ್ನಿಷ್ಟೋಮ, ವಾಜಪೇಯ, ರಾಜಸೂಯ, ಅಶ್ವಮೇಧ ಮುಂತಾದ ಯಾಗಗಳಿಗೆ ಸಂಬಂಧಿಸಿದ ಮಂತ್ರಗಳಿವೆ. ಈ ಸಂಹಿತೆಯ ಕೊನೆಯ ಭಾಗವೇ ಈಶಾವಾಸ್ಯ ಉಪನಿಷತ್. ಇವರ ಕೀರ್ತಿಯನ್ನು ಕೇಳಿ ಕತ ಮಹರ್ಷಿಗಳು ತಮ್ಮ ಪುತ್ರಿಯಾದ ‘ಕಾತ್ಯಾಯಿನಿ ದೇವಿ’ಯನ್ನು ಇವರಿಗೆ ಪಾಣಿಗ್ರಹಣ ಮಾಡಿಸಿ ಗೃಹಸ್ಥಾಶ್ರಮ ಜೀವನಕ್ಕೆ ಕಾಲಿಡುವಂತೆ ಮಾಡಿದರು. ಯಾಜ್ಞವಲ್ಕ್ಯಂರಿಗೆ ಕಾತ್ಯಾಯಿನಿಯಲ್ಲದೇ ‘ಮೈತ್ರೇಯಿ’ ಎಂಬ ಇನ್ನೊಬ್ಬ ಪತ್ನಿಯಿದ್ದರೆಂಬುದು ‘ಯಾಜ್ಞವಲ್ಕ್ಯಂದ್ವೇಭಾರ್ಯೇ’ ಎಂಬ ಉಕ್ತಿಯಿಂದ ವ್ಯಕ್ತವಾಗುತ್ತದೆ. 


ಯಾಜ್ಞವಲ್ಕ್ಯಂರ ಜ್ಞಾನದ ಪರಾಕಾಷ್ಠೆಯನ್ನು ಜಗತ್ತಿಗೆ ಸಾರುವ ಒಂದು ಸಂದರ್ಭ ದೈವಯೋಗದಿಂದ ಒದಗಿಬಂತು. ರಾಜರ್ಷಿ ಜನಕನು ‘ಬಹುದಕ್ಷಿಣಾ’ ಎಂಬ ಯಾಗವೊಂದನ್ನು ಮಾಡಿ ಅದಕ್ಕೆ ಬ್ರಹ್ಮವೇತ್ತರಾದ ಹಲವು ವಿದ್ವಾಂಸರನ್ನು ಆಹ್ವಾನಿಸಿದನು. ಅಷ್ಟು ಜನರಲ್ಲಿ ನಿಜವಾದ ಬ್ರಹ್ಮಜ್ಞಾನಿ ಯಾರೆಂದು ತಿಳಿಯುವ ಕೂತೂಹಲ ಜನಕನಿಗುಂಟಾಯಿತು. ಆಗ ಜನಕ ಮಹಾರಾಜನು, ಹೇಮ ಖುರ ಶೃಂಗಾಭರಣಗಳಿಂದ ಭೂಷಿತವಾದ ಒಂದು ಸಾವಿರ ಕರೆಯುವ ಹಸುಗಳನ್ನು ಪಣವಾಗಿಟ್ಟು ‘ಈ ವಿಧ್ವತ್ಸಭೆಯಲ್ಲಿ ಬ್ರಹ್ಮಜ್ಞಾನಿಗಳು ಯಾರುಂಟೋ ಅವರು ಇದಕ್ಕೆ ನಾಥರು’ ಎಂದು ತುಂಬಿದ ಆ ಸಭೆಯಲ್ಲಿ ಘೋಷಿಸಿದ. ಸಭೆ ಸ್ತಂಭೀಭೂತವಾಯಿತು. ಎಲ್ಲೆಲ್ಲೂ ಮೌನಆವರಿಸಿತು. 


ಆಗ ಆ ಮೌನವನ್ನು ಮುರಿದು ಯಾಜ್ಞವಲ್ಕ್ಯಂರು ತಮ್ಮ ಶಿಷ್ಯರಿಗೆ ಹೇಳಿದರು. “ಈ ಗೋವುಗಳನ್ನು ನಮ್ಮ ಆಶ್ರಮಕ್ಕೆ ಹೊಡೆದುಕೊಂಡು ಹೋಗಿ”, ಆಶ್ವಾ, ಜಾರತ್ಕ್ರವ, ಆರ್ತಭಾಗ ಮೊದಲಾದ ಋಷಿವರೇಣ್ಯರು ಇದಕ್ಕೆ ಆಕ್ಷೇಪವೆತ್ತಿ ಯಾಜ್ಞವಲ್ಕ್ಯಂರನ್ನು ಬ್ರಹ್ಮ ಜಿಜ್ಞಾಸೆಗೆ ಆಹ್ವಾನಿಸಿದರು. ವಿಶೇಷವೆಂದರೆ ಯಾಜ್ಞವಲ್ಕ್ಯಂರನ್ನು ಪ್ರಶ್ನೆ ಮಾಡಿದವರಲ್ಲಿ ಬ್ರಹ್ಮವಾದಿನಿಯರಾದ ಗಾರ್ಗಿ, ವಾಚಕ್ನವಿ ಮುಂತದ ಸ್ತಿಯರು ಇದ್ದರೂ, ಯಾಜ್ಞವಲ್ಕ್ಯಂರು ಎಲ್ಲರನ್ನೂ ವಾದದಲ್ಲಿ ಜಯಿಸಿದುದೇ ಅಲ್ಲದೇ ತಮ್ಮ ಪ್ರಶ್ನೆಗಳಿಗೆ ಅವರು ನಿರುತ್ತರಾಗುವಂತೆ ಮಾಡಿದರು. ಯಾಜ್ಞವಲ್ಕ್ಯಂರೇ ಸರ್ವಶ್ರೇಷ್ಠ ಬ್ರಹ್ಮಜ್ಞಾನಿ ಎಂದು ಸಭೆ ಒಮ್ಮತದಿಂದ ನಿರ್ಣಯಿಸಿತು. ಇದರಿಂದ ಸಂತಸಗೊಂಡ ಜನಕರಾಜನು ಯಾಜ್ಞವಲ್ಕ್ಯಂರನ್ನು ತನ್ನ ಗುರುವಾಗಿ ಸ್ವೀಕರಿಸಿದ. 


ವೃದ್ಧಾಪ್ಯದಲ್ಲಿ ಯಾಜ್ಞವಲ್ಕ್ಯಂರು ವಾನಪ್ರಸ್ಥಾಶ್ರಮ ಸ್ವೀಕರಿಸಲು ಆರಣ್ಯಕ್ಕೆ ಹೊರಟಾಗ ಮೈತ್ರೇಯಿಯೂ ತನಗೆ ಪತಿಯಿಂದ ದೊರೆತ ಸಂಪತ್ತನ್ನೆಲ್ಲ ತ್ಯಜಿಸಿ ಪತಿಯ ಜೊತೆ ಆರಣ್ಯಕ್ಕೆ ಹೊರಟು ಮೋಕ್ಷಪತ್ನಿ ಎನಿಸಿದಳು. 


ಸೂರ್ಯದೇವನ ಆದೇಶದಂತೆ ಯಾಜ್ಞವಲ್ಕ್ಯಂರು ರಚಿಸಿದ ಮಹಾನ್ ಗ್ರಂಥವೇ ಶತಪಥ ಬ್ರಾಹ್ಮಣ. ಹೆಸರೇ ಹೇಳುವಂತೆ ಇದು ಶತಪಥ (ನೂರು ದಾರಿ) ವುಳ್ಳ ಗ್ರಂಥ. ಅತ್ಯಂತ ಪ್ರಾಚೀನವಾದ ಈ ಬ್ರಾಹ್ಮಣದಲ್ಲಿ ಯಜ್ಞವಿದ್ಯೆಯ ಸುಂದರ ವರ್ಣನೆ ಇದೆ. ಹದಿನೇಳು ಕಾಂಡಗಳಿಂದ ಕೂಡಿದ ಈ ಕಣ್ವ ಶತಪಥ ಬ್ರಾಹ್ಮಣದ ಕೊನೆಯ ಕಾಂಡವೇ ಬೃಹದಾರಣ್ಯಕ ಉಪನಿಷತ್. ದಶೋಪನಿಷತ್‌ಗಳಲ್ಲಿ ಇದು ಕಡೆಯದು. ಗಾತ್ರ, ಪಾತ್ರ, ವಿಷಯ ಮತ್ತು ವಿವರಣಾತ್ಮಕ ಟಿಪ್ಪಣಿಗಳಿಂದ ಕೂಡಿದ ಬೃಹದಾರಣ್ಯಕ ಉಪನಿಷತ್‌ಗೆ ಸಮನಾದ ಉಪನಿಷತ್ತು ಮತ್ತೊಂದಿಲ್ಲ. 


ಸ್ಮೃತಿಗಳು ಬಹಳಷ್ಟಿದ್ದರೂ ಮುಖ್ಯವಾದುವು ಇಪ್ಪತ್ತು ಮಾತ್ರ. ಇವುಗಳಲ್ಲಿ ಯಾಜ್ಞವಲ್ಕ್ಯಂ ಸ್ಮೃತಿ ಬಹು ಪ್ರಮುಖವಾದುದು. ಇದು ಧರ್ಮಸಮ್ಮತವಾದ ಸಾಮಾಜಿಕ ಜೀವನಧರ್ಮವನ್ನು ನಿರೂಪಿಸುತ್ತದೆ. ಇದರಲ್ಲಿ ಎಲ್ಲ ವಿಷಯಗಳು ಅತ್ಯಂತ ವ್ಯಾವಹಾರಿಕವಾಗಿಯೂ ನಿಖರವಾಗಿಯೂ ಹೇಳಿರುವುದರಿಂದ ಸಭ್ಯವೂ ಸುಸಂಸ್ಕೃತವೂ ಪವಿತ್ರವೂ ಆದ ಜೀವನಕ್ಕೆ ಇದು ದಾರಿದೀಪವಾಗಿದೆ. 


ಯಾಜ್ಞವಲ್ಕ್ಯಂ ಸ್ಮೃತಿಯಲ್ಲಿ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತ ಎಂದು ಮೂರು ಅಧ್ಯಾಯಗಳೂ, ಮೂವತ್ತೊಂದು ಪ್ರಕರಣಗಳು ಇವೆ. ವಿಜ್ಞಾನೇಶ್ವರ ಪಂಡಿತನೆಂಬುವರು ಯಾಜ್ಞವಲ್ಕ್ಯಂ ಸ್ಮೃತಿಗೆ ‘ಮಿತಾಕ್ಷರ’ ಎಂಬ ಟೀಕಾಗ್ರಂಥವನ್ನು ರಚಿಸಿದ್ದಾರೆ. ಇದು ಭಾರತೀಯ ಹಿಂದೂ ಕಾಯಿದೆಗೆ (ಹಿಂದೂಲಾ) ಪ್ರಮಾಣ ಗ್ರಂಥವಾಗಿದೆ. 


ಯೋಗ ಯಾಜ್ಞವಲ್ಕ್ಯಂದಲ್ಲಿ ಯೋಗದ ಮಹತ್ವ, ಆಸನಗಳ ವಿವರಣೆ ಮತ್ತು ಅವುಗಳ ಅವಶ್ಯಕತೆ, ಪ್ರಾಣಾಯಾಮದ ವಿಧಿ ವಿಧಾನಗಳು ಹೇಳಲ್ಪಟ್ಟಿದೆ. ವಿಷಯ ವಿಸ್ತಾರ ಮತ್ತು ನಿರೂಪಣೆಯಲ್ಲಿ ಪತಂಜಲಿಯ ಯೋಗಶಾಸ್ತಕ್ಕಿಂತಲೂ ಇದು ಹಿರಿದಾಗಿದೆ. ಪುರುಷರ ಜೊತೆಯಲ್ಲಿ ಮಹಿಳೆಯರೂ ಯೋಗಾಭ್ಯಾಸ ಮಾಡಬಹುದೆಂದು ಪ್ರತಿಪಾದಿಸಿದ ಪ್ರಥಮರು. ಸ್ವತಃ ಗಾರ್ಗಿ ವಾಚಕ್ಷವಿಗೆ ಪುರುಷರ ಜತೆಯಲ್ಲಿ ಆ ಕಾಲದಲ್ಲಿಯೇ ಯೋಗಾಭ್ಯಾಸ ಕಲಿಸಿದ್ದಾರೆ. 


ಶ್ರೀಕೃಷ್ಣನ ನಂತರ ಮತ್ತು ಈವರೆಗೆ ‘ಯೋಗೇಶ್ವರ’ ಎಂಬ ಸಂಭೋದನೆ ಪಡೆದ ಮತ್ತೊಬ್ಬ ಮಹಾಪುರುಷರೆಂದರೆ ಶ್ರೀ ಯಾಜ್ಞವಲ್ಕ್ಯಂರು ಮಾತ್ರ. ಮನುಷ್ಯನು ಭಗವದ್ಭಕ್ತಿ ಮತ್ತು ಸ್ವಪ್ರಯತ್ನ ಇವೆರಡರ ನೆರವಿನಿಂದ ಎಷ್ಟು ಮೇಲ್ಮಟ್ಟಕ್ಕೆ ಏರಬಹುದು, ಏರಿ ಮಹಾಕಾರ್ಯಗಳನ್ನು ಹೇಗೆ ಸಾಧಿಸಬಹುದು ಎಂಬುದಕ್ಕೆ ಯಾಜ್ಞವಲ್ಕ್ಯಂರ ಜೀವನ ಒಂದು ಉಜ್ವಲವಾದ ನಿದರ್ಶನ. 


ವೇದಾಂತವೇದ್ಯಂ ಸಕಲಾಗಮಜ್ಞಂ ದಯಾಸುಧಾ ಸಿಂಧುಮನಂತರೂಪಂ ಶ್ರೀಯಾಜ್ಞವಲ್ಕ್ಯಂ ಪರಿಪರ‍್ಣಚಂದ್ರಂ ಶ್ರೀಮದ್ಗುರುಂ ನಿತ್ಯಮಹಂ ನಮಾಮಿ


-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top