ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಎರಡನೇ ತಿಂಗಳ ಶ್ರಮದಾನ ಕಾರ್ಯಕ್ರಮ ಇಂದು (ನ.19) ಭಾನುವಾರ ಬೆಳಗ್ಗೆ 7.30 ಗಂಟೆಯಿಂದ 10 ಗಂಟೆಯ ತನಕ ಹಂಪನಕಟ್ಟೆ ಪರಿಸರದಲ್ಲಿ ಜರುಗಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ದಿವ್ಯ ಸಾನಿಧ್ಯದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ. ಪ್ರಸಾದ್ ಹಾಗೂ ಮಂಗಳೂರಿನ ಎಸ್. ಸಿ. ಎಸ್. ಆಸ್ಪತ್ರೆಯ ನಿರ್ದೇಶಕರಾದ ಡಾ. ಚಂದ್ರಶೇಖರ್ ಸೊರಕೆ ಜಂಟಿಯಾಗಿ ಹಸಿರು ನಿಶಾನೆ ತೋರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್, ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಡಾ. ಸತೀಶ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಬಿ.ಹೆಚ್.ವಿ. ಪ್ರಸಾದ್ ಮಾತನಾಡಿ, “ಮಂಗಳೂರು ರಾಮಕೃಷ್ಣ ಮಿಷನ್ ನ ಸ್ವಚ್ಛ ಮಂಗಳೂರು ಅಭಿಯಾನ ನಿಜಕ್ಕೂ ಪ್ರಶಂಸನಾರ್ಹ. ಇಂದು ಸರ್ಕಾರದ ಮಟ್ಟದಲ್ಲಿ ಸ್ವಚ್ಛ ಭಾರತ ಅಭಿಯಾನದ ಕುರಿತು ಯಾವುದೇ ಚರ್ಚೆ ನಡೆದರೂ ಮಂಗಳೂರು ರಾಮಕೃಷ್ಣ ಮಿಷನ್ ನ ಹೆಸರು ಬಂದೇ ಬರುತ್ತದೆ. ಅಷ್ಟರ ಮಟ್ಟಿಗೆ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಜನ ಮೆಚ್ಚುಗೆಯನ್ನು ಪಡೆದಿದೆ. ಈ ಕೀರ್ತಿ ರಾಮಕೃಷ್ಣ ಮಿಷನ್ ನ ಸ್ವಾಮೀಜಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಲ್ಲುತ್ತದೆ." ಎಂದು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕಪಡಿಸಿದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ, "ಮಂಗಳೂರು ರಾಮಕೃಷ್ಣ ಮಿಷನ್ 2014 ರಿಂದ ನಡೆಸಿದ ಮೊದಲು ಆವೃತ್ತಿಯ ಸ್ವಚ್ಛತಾ ಅಭಿಯಾನದ ಶ್ರೇಯಸ್ಸು ಅಭಿಯಾನದ ಮಂಗಳೂರಿನ ಜನತೆಗೆ ಹಾಗೂ ಸ್ವಯಂಸೇವಕರಿಗೆ ಸಲ್ಲುತ್ತದೆ. ಜನರಿಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ, ಎರಡನೇ ಆವೃತ್ತಿಯಲ್ಲಿ ತಿಂಗಳಿಗೆ ಒಂದು ಶ್ರಮದಾನ ಮತ್ತು ಜನ ಸಂಪರ್ಕ ಅಭಿಯಾನ ನಡೆಯುತ್ತಿದೆ. ಮಂಗಳೂರಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ" ಎಂದು ಕರೆನೀಡಿದರು.
ಗಣ್ಯರು ಸಾಂಕೇತಿಕವಾಗಿ ಹಂಪನಕಟ್ಟೆ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಅಭಿಯಾನದ ಸ್ವಯಂಸೇವಕರಾದ ದಿನೇಶ್ ಕರ್ಕೇರ, ಸೌರಜ್ ಮಂಗಳೂರು, ವಸಂತಿ ನಾಯಕ್, ಶಿವರಾಮ್ ಅಡ್ಡೂರ್, ಸುನಂದಾ, ಹಿಮ್ಮತ್ ಸಿಂಗ್, ತಾರಾನಾಥ್ ಆಳ್ವ, ಅನಿರುದ್ಧ್ ನಾಯಕ್, ಕುಮಾರ್ ಸತ್ಯನಾರಾಯಣ ಅವಿನಾಶ್ ಅಂಚನ್ ಇದರ ಜೊತೆಗೆ ಕ್ಲಾಕ್ ಟವರ್ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಉದಯ್ ಕೆ.ಪಿ., ಸತೀಶ್ ಗೌಡ, ರವಿ ಕೆ, ಪುನೀತ್ ಇದರ ಜೊತೆಗೆ ಕ್ಲಾಕ್ ಟವರ್ ಕೆಳಭಾಗದ ಕಾರಂಜಿಯ ಕೊಳಕು ನೀರನ್ನು ಹೊರತೆಗೆದು ಶುಚಿಗೊಳಿಸಿದರು.
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ರಾಕೇಶ್ ಕೃಷ್ಣ ಹಾಗೂ ನೇಹಾ ಶೆಟ್ಟಿ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ವೆನ್ಲಾಕ್ ಜಿಲ್ಲಾಸ್ಪತ್ರೆಯ ಆವರಣ ಗೋಡೆಯಿಂದ ಪ್ರಾರಂಭಿಸಿ ವಿಶ್ವವಿದ್ಯಾನಿಲಯ ಕಾಲೇಜಿನ ವರೆಗಿನ ಆವರಣ ಗೋಡೆಗಳ ಮೇಲಿನ ವರ್ಣಚಿತ್ರಗಳನ್ನು ನೀರು ಹಾಕಿ ಶುಚಿಗೊಳಿಸಿದರು, ಕೊಡಂಗೆ ಬಾಲಕೃಷ್ಣ ನಾಯಕ್ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಬಾಲಕೃಷ್ಣ ಭಟ್ ಹಾಗೂ ಯೋಗೀಶ್ ಕಾರ್ಯತ್ತಡ್ಕ ಟ್ಯಾಂಕರ್ ಮೂಲಕ ನೀರು ಹಾಕಿ ಆವರಣ ಗೋಡೆಗಳನ್ನು ಶುಚಿಗೊಳಿಸಿದರು.
"ಯುವ" ಸ್ವಯಂಸೇವಕರು ಭಾಗಿ:
ರಾಮಕೃಷ್ಣ ಮಠದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತೀ ವಾರಾಂತ್ಯದಲ್ಲಿ ನಡೆಯುತ್ತಿರುವ "ಯುವ" ಎಂಬ ಒಂದು ದಿನದ ನಿವಾಸಿ ಶಿಬಿರದ 20 ಶಿಬಿರಾರ್ಥಿಗಳು ನಿವೃತ್ತ ಯೋಧರಾದ ಶ್ರೀ ಬೆಳ್ಳಾಲ ಗೋಪಿನಾಥ್ ರಾವ್, ಶ್ರೀ ಗೋಪಾಲ್ ಹಾಗೂ ಸಿ. ಎ. ಅಭಿರಾಮ್ ಶಿವಕುಮಾರ್ ನೇತೃತ್ವದಲ್ಲಿ ಶ್ರಮದಾನದಲ್ಲಿ ಭಾಗವಹಿಸಿದರು. ಕ್ಲಾಕ್ ಟವರ್ ನಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ವರೆಗಿನ ರಸ್ತೆಯನ್ನು ಹಾಗೂ ಮಾರ್ಗ ವಿಭಾಜಕಗಳನ್ನು ಸ್ವಚ್ಛ ಮಾಡಿದರು.
ಈ ಸಂದರ್ಭದಲ್ಲಿ ಸೀತಾರಾಮ, ಉಮಾನಾಥ ಕೋಟೆಕಾರ್, ಸಂಜಯ್ ಪ್ರಭು, ಕಮಾಲಾಕ್ಷ ಪೈ, ಸತ್ಯನಾರಾಯಣ ಕೆ. ವಿ, ಮತ್ತಿತರ ಹಿರಿಯ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ಎಂ.ಆರ್.ಪಿ.ಎಲ್. ಪ್ರಾಯೋಜಕತ್ವ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸಹಕಾರದಲ್ಲಿ ಈ ಅಭಿಯಾನ ನಡೆಯುತ್ತಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ