ಶಕ್ತಿಯ ಆರಾಧನೆಯಿಂದ ಮನುಷ್ಯನ ಮೌಲ್ಯವರ್ಧನೆ

Upayuktha
0

ಉಚ್ಚಿಲ ದಸರಾದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಿಶ್ಲೇಷಣೆ



ಮಂಗಳೂರು: 'ಭಾರತೀಯರ ಹಬ್ಬಗಳು ಸುಖಾಸುಮ್ಮನೆ ಸಂಭ್ರಮಿಸುವುದಕ್ಕಾಗಿ ಇರುವುದಲ್ಲ; ಅವುಗಳಿಂದ ಸದ್ವಿಚಾರಗಳು ಮೊಳೆಯಬೇಕು. ನವವಿಧ ರೂಪದಿಂದ ಶಕ್ತಿದೇವತೆಯನ್ನು ಆರಾಧಿಸುವ ದಸರಾ ಮನುಷ್ಯನ ಐಹಿಕ ಜೀವನದ ಮೌಲ್ಯವರ್ಧನೆಗೆ ಬೇಕಾದ ವಿಪುಲ ಸಂದೇಶಗಳನ್ನು ಹೊಂದಿದೆ' ಎಂದು ಕರ್ನಾಟಕ ಜಾನಪದ- ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಚಿಂತಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.


ಅವರು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಮಹೋತ್ಸವದಲ್ಲಿ ನಾಲ್ಕನೇ ದಿನದ ಕಾರ್ಮಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡಿದರು.



'ನವರಾತ್ರಿಯಲ್ಲಿ ಮೂರು ಪ್ರಧಾನ ಶಕ್ತಿಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಯರಿಂದ ಯಶಸ್ಸು, ಸಂಪತ್ತು ಮತ್ತು ಜ್ಞಾನಗಳನ್ನು ಹೊಂದಿ ಮನುಷ್ಯನು ತನ್ನೊಳಗಿನ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಶರನ್ನವರಾತ್ರಿಯ ಆಚರಣೆ ದಾರಿ ಮಾಡಿಕೊಡುತ್ತದೆ. ಮಾನವ ತನ್ನ ಇಚ್ಛೆ, ಕ್ರಿಯೆ ಮತ್ತು ಜ್ಞಾನ ಶಕ್ತಿಗಳ ಮೂಲಕ ಸಮಾಜದಲ್ಲಿ ಗುರುತಿಸಲ್ಪಡಲು ಅಧ್ಯಾತ್ಮದ ಸರಳ ಅನುಸಂಧಾನ ಮಾಡಿಕೊಳ್ಳುವುದು ಅತ್ಯವಶ್ಯ' ಎಂದವರು ಹೇಳಿದರು.



'ನಾವೆಷ್ಟೇ ಸಾಧನೆ ಮಾಡಲಿ, ಅರ್ಥ ಸಂಪಾದನೆ ಮಾಡಲಿ ಪರೋಪಕಾರ ಬುದ್ಧಿ ಇಲ್ಲದೆ ಹೋದರೆ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ನಮ್ಮ ಸಂಪತ್ತಿನ ಒಂದಂಶ ಸಮಾಜಕ್ಕೆ ವಿನಿಯೋಗವಾಗಬೇಕು; ಪರರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸುಳ್ಳವರನ್ನು ಮಾತ್ರ ಸಮಾಜ ಗೌರವಿಸುತ್ತದೆ' ಎಂದು ಭಾಸ್ಕರ ರೈ ನುಡಿದರು.



ಉಚ್ಚಿಲ ದಸರಾ ರೂವಾರಿ ಹಾಗೂ ಮಹಾಲಕ್ಷ್ಮಿ ಕ್ಷೇತ್ರದ ಪ್ರಧಾನ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಶಾಲು- ಸ್ಮರಣಿಕೆ ನೀಡಿ ಸನ್ಮಾನಿಸಿದರು. ಉಡುಪಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top