ಕೆಲಸದಲ್ಲಿ ತಾದಾತ್ಮಕತೆ, ವ್ಯಾಮೋಹದಿಂದ ಯಶಸ್ಸು ಖಂಡಿತ ಸಾಧ್ಯ: ರಾಮದಾಸ್ ಪುತ್ತಿಗೆ
ನಿಟ್ಟೆ: 'ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಯಶಸ್ಸು ಹೊಂದಲು ಶಿಸ್ತು, ತಾದಾತ್ಮಕತೆ, ವ್ಯಾಮೋಹ ಅತೀ ಅಗತ್ಯ. ಕಲಿಕಾ ಪ್ರವೃತ್ತಿ ಜೀವನದುದ್ದಕ್ಕೂ ರೂಢಿತವಾಗಿರಬೇಕು. ಇಂದಿನ ವೃತ್ತಿಜೀವನ ತೀರಾ ಸಂಕೀರ್ಣ. ಯಶಸ್ಸು ಸುಲಭದಲ್ಲಿ ಪ್ರಾಪ್ತವಾಗುವುದಿಲ್ಲ ಅದನ್ನು ಅರಸಿಕೊಂಡು ಹೋಗುವ ಬದ್ಧತೆ, ವ್ಯಾಮೋಹ ಅಳವಡಿಸಿಕೊಂಡರೆ ಯಶಸ್ಸು ತನ್ನಿಂದ ತಾನಾಗಿಯೇ ಅರಸಿಕೊಂಡುಬರುತ್ತದೆ' ಎಂದು ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ರಾಮದಾಸ್ ಪುತ್ತಿಗೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಜಸ್ಟೀಸ್ ಕೆ ಎಸ್ ಹೆಗ್ಡೆ (ಎಂಬಿಎ) ಉದ್ಯಮಾಡಳಿತ ಸಂಸ್ಥೆಯ 24ನೇ ಬ್ಯಾಚ್ ಎಂಬಿಎ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಮಾತನಾಡಿದರು. ನಿಟ್ಟೆ ವಿದ್ಯಾಸಂಸ್ಥೆಗಳು ಇಂದು ಗುಣಮಟ್ಟದ ಉತ್ಕೃಷ್ಟತೆಗೆ ಮಹತ್ವ ನೀಡುವುದನ್ನು ಶ್ಲಾಘಿಸಿದರು.
ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನದ ಬಳಿಕ ಎಂಬಿಎ ಶೈಕ್ಷಣಿಕ ಟಾಪರ್ ಕು. ದೀಕ್ಷ ಅವರಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರೂ ಆದ ಎನ್ ವಿನಯ ಹೆಗ್ಡೆ ಅವರು ಪ್ರದಾನಗೈದರು. ಉತ್ತಮ ಎಂಬಿಎ ಹೊರಮ್ಮಿದ ವಿದ್ಯಾರ್ಥಿಯಾದ ಪ್ರಭು ಶ್ರೀನಿವಾಸ್ ಸತೀಶ್ ಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳಾದ ರಾಮದಾಸ್ ಪುತ್ತಿಗೆ ಅವರು ವಿತರಿಸಿದರು. ಉತ್ತಮ ಪ್ರಾಜೆಕ್ಟ್ ಗಾಗಿ ಕು. ಅಂಜಲಿ ಅವರಿಗೆ ರೂ.5000/- ಮತ್ತು ಪ್ರಶಸ್ತಿ ಪತ್ರವನ್ನು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳೂ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮಡಳಿತ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಪ್ರೊ| ಎಂ. ಎಸ್. ಮೂಡಿತ್ತಾಯ ಅವರು ನೀಡಿದರು.
ನಿಟ್ಟೆ ವಿವಿಯ ಕುಲಪತಿಗಳಾದ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ಅವರು ಮಾತನಾಡುತ್ತಾ, ಸಾಮರ್ಥ್ಯ ಮತ್ತು ನೈತಿಕ ಮೌಲ್ಯಗಳನ್ನು ರೂಪಿಸಿಕೊಂಡಾಗ ಜೀವನದಲ್ಲಿ ಪ್ರತಿಯೊಬ್ಬನು ಗೌರವಿಸಲ್ಪಡುತ್ತಾನೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ನಿಟ್ಟೆ ವಿವಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ. ಡಾ. ಗೋಪಾಲ ಮುಗೇರಾಯ ಅವರು ಮಾತನಾಡುತ್ತಾ, ಕಲಿಕೆಯಲ್ಲಿ ಆಸ್ಥೆ, ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವ, ಸೃಜನಶೀಲತೆ ಮತ್ತು ನಿಷ್ಠೆ ಭಾವೀ ಯುವಜನತೆ ಹೆಚ್ಚು ಗಮನಿಸಬೇಕಾದ ಅಂಶಗಳು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನ ನಿಟ್ಟೆ ವಿವಿಯ ಕುಲಾಧಿಪತಿ ಎನ್ ವಿನಯ ಹೆಗ್ಡೆ ವಹಿಸಿದ್ದು ದೇಶದ ಭವಿಷ್ಯದ ಹಿತಚಿಂತನೆ, ಕೌಟುಂಬಿಕ ಮೌಲ್ಯಗಳು, ತಾಳ್ಮೆ ಹಾಗೆಯೇ ಗಂಡಾಂತರಗಳನ್ನು ಎದುರಿಸುವ ಮನೋಸ್ಥೈರ್ಯಗಳನ್ನು ರೂಪಿಸಿಕೊಂಡು ಯಶಸ್ಸನ್ನು ಕಾಣಲು ಭಾವೀ ಮ್ಯಾನೇಜರುಗಳು ಉತ್ಸುಕರಾಗಬೇಕು ಎಂದರು.
ವೇದಿಕೆಯಲ್ಲಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ನಿರಂಜನ್ ಚಿಪ್ಲುನ್ಕರ್, ಪರೀಕ್ಷ ನಿಯಂತ್ರಕ ಡಾ. ಶ್ರೀನಿವಾಸ ರಾವ್, ನಿಟ್ಟೆ ಎಐಸಿನ ಸಿಇಒ ಡಾ. ಎ ಪಿ ಆಚಾರ್, ಪ್ರೊಫೆಸರ್ ಎಮಿರೆಟಸ್ ಡಾ. ಎನ್ ಎಸ್ ಶೆಟ್ಟಿ ಹಾಗೂ ಎಲ್ಲ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಹೆಚ್ ಕಿದಿಯೂರು ಅವರು ಅಥಿತಿಗಳನ್ನು ಸ್ವಾಗತಿಸಿ, ಪರಿಚಯಿಸಿ, ಸಂಸ್ಥೆಯ ಸಾಧನೆಗಳ ಪಟ್ಟಿ ವಾಚನಗೈದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ರಾಧಾಕೃಷ್ಣ ಶರ್ಮ ವಿದ್ಯಾರ್ಥಿಗಳ ಪಟ್ಟಿ ವಾಚನಗೈದರು. ಕು. ನಿಧಿ ಪ್ರಾರ್ಥಿಸಿದರು. ಡಾ. ಶೀತಲ್ ಕುಮಾರ್ ವಂದಿಸಿದರು. ಸಮಾರಂಭವನ್ನು ಡಾ. ಸುಧೀರ್ ರಾಜ್ ಕೆ. ಪ್ರೊ. ಕಾರ್ತಿಕ್ ಕುದ್ರೋಳಿ ಮತ್ತು ಪ್ರೊ. ರಾಕೇಶ್ ಶೆಟ್ಟಿ ನಿರೂಪಿಸಿದರು. ಡಾ. ಸುಧೀರ್ ರಾಜ್ ಕೆ ಸಂಯೋಜಿಸಿದರು, ರಾಷ್ಟ್ರಗೀತೆಯೊಂದಿಗೆ ಪದವಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ