ಹಣ ಮನುಷ್ಯನನ್ನು ಹೇಗೆ ಬೇಕಾದರೂ ಆಟವಾಡಿಸಬಹುದು. ಒಂದು ರೀತಿಯಲ್ಲಿ ಹೇಳುವುದಾದಾರೆ, ಮನುಷ್ಯನ ಜೀವನ ನಿಂತಿರುವುದೇ ಹಣವೆಂಬ ಅಸ್ತ್ರದ ಮೇಲೆ. ಹಣವಿದ್ದರೆ ಜನ ಎಂಬಂತಾಗಿದೆ ನಮ್ಮ ಪರಿಸ್ಥಿತಿ. ಇದರಿಂದ ನಮ್ಮಲೆಲ್ಲೋ ಮಾನವೀಯತೆ, ಮನುಷ್ಯತ್ವಗಳು ಕಣ್ಮರೆಯಾಗುವಂತೆ ಕಾಣಿಸುತ್ತಿದೆ. ಹಿಂದಿನ ಕಾಲದಲ್ಲಿ ಜನರು ಹಣವಿಲ್ಲದೆ ಹೋದರು, ಇದ್ದುದ್ದರಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಈಗಿನ ಕಾಲದ ಜನರಿಗೆ ದುಡ್ಡೇ ದೊಡ್ಡಪ್ಪ ಎಂಬಂತಾಗಿದೆ. ದುಡ್ಡಿನ ಮತ್ತಲ್ಲಿ ತೇಲುತ್ತಾ ಹೋಗುವುದರಡೆಗೆ ತಮ್ಮಲ್ಲಿರುವ ಪ್ರೀತಿ, ಕಾಳಜಿ, ಕರುಣೆ, ಮನುಷ್ಯತ್ವಗಳನ್ನು ಕಳೆದುಕೊಳ್ಳುತ್ತ ಬರುತ್ತಿದ್ದಾರೆ. ತನ್ನ ಕೈಯಲ್ಲಿ ಹಣವಿಲ್ಲದೆ ಹೋದರೆ ತಾನು ಸತ್ತೇ ಹೋಗುತ್ತೇನೆ ಎಂಬ ಚಿಂತನೆಯೆಡೆಗೆ ಮನುಷ್ಯ ಸಾಗಿಸುತ್ತಿದ್ದಾನೆ .
ಹುಟ್ಟಿನಿಂದಲೇ ಬಡತನವನ್ನು ಕಾಣುತ್ತಾ ಬರುವವರಿಗೆ ತಾನು ಒಂದು ಒಳ್ಳೆಯ ಜೀವನ ನಡೆಸಬೇಕು ಎಂಬ ಆಸೆ ಮೂಡುವುದು ಸಹಜ. ಆದರೆ ಅದೇ ಆಸೆಯೂ ಮಿತಿಮೀರಿದರೆ ತನ್ನ ಜೀವನಕ್ಕೆ ಕಂಟಕವಾಗಬಹುದು ಎಂಬುವುದು ಅವರು ಮರೆತಿರಬಹುದು. ಹಣದ ಮೋಹ ಎಷ್ಟಿದೆ ಎಂದರೆ ಒಬ್ಬರನ್ನು ಕೊಂದುಬಿಡುವಷ್ಟು ಬೆಳೆದಿದೆ. ತನ್ನ ಕುಟುಂಬದವರನ್ನು, ಗೆಳೆಯ,ಗೆಳತಿ ಮಾತ್ರವಲ್ಲದೇ,ತನ್ನ ತಂದೆ, ತಾಯಿಯರನ್ನು ಹಣದ ಮೋಹದಿಂದ ಕೊಲ್ಲುತ್ತಾರೆ. ಅಂತಹ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ಅತಿಯಾದ ಆಸೆ, ದುಃಖಕ್ಕೆ ಮೂಲ ಎಂಬುವುದು ಮನುಷ್ಯನಿಗೆ ತಿಳಿದಿಲ್ಲ. ತನ್ನಲ್ಲಿ ಹಣವಿದ್ದರೆ ಯಾರಿಗೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆ ಕೆಲವರಲ್ಲಿ ಮೂಡಿದೆ. ಹಣದ ವ್ಯಾಮೋಹ ಅತಿಯಾಗುತ್ತಾ ಹೋದಂತೆ ಮನುಷ್ಯ- ಮನುಷ್ಯರ ನಡುವೆ ಸಂಘರ್ಷಗಳು ಉಂಟಾಗುವುದನ್ನು ಕಾಣಬಹುದು. ಇದರಿಂದ ನಮ್ಮ ಸಮಾಜಕ್ಕೆ ಅನೇಕ ತೊಂದರೆಗಳು ಉಂಟಾಗುತ್ತದೆ.
ಹಣ ಮಾತ್ರ, ನಮ್ಮ ಜೀವನವೆಂದು ಹಲವು ಜನ ತಿಳಿದಿದ್ದಾರೆ. ಆದರೆ ಹಣಕ್ಕಿಂತ ಮಿಗಿಲಾಗಿ ನಮ್ಮ ಜೀವನದಲ್ಲಿ ಅನುಭವಿಸಬೇಕಾದದ್ದು ತುಂಬಾ ಇದೆ. ಹಣವೆಂಬುವುದು ಕ್ಷಣಿಕ. ಈಗ ನಮ್ಮ ಕೈಯಲ್ಲಿ ಇರಬಹುದು ಆದರೆ ಒಂದಲ್ಲ ಒಂದು ದಿನ ಅದು ನಮ್ಮ ಕೈ ಬಿಟ್ಟು ಹೋಗೆ ಹೋಗುತ್ತದೆ. ನಾವು ಯಾವತ್ತೂ ಬಂದ ದಾರಿಯನ್ನು ಮರೆಯಬಾರದು. ದುಡ್ಡು ಬರುವ ಮುನ್ನ ನಾವು ಹೇಗೆ ಜೀವನ ನಡೆಸುತ್ತಿದ್ದೆವೋ, ದುಡ್ಡು ಬಂದ ನಂತರವು ಅದು ಹಾಗೆ ಇರುವುದಿಲ್ಲ. ನಮ್ಮ ನಡೆ, ನಡತೆ, ವ್ಯಕ್ತಿತ್ವಗಳು ಬದಲಾಗುತ್ತಾ ಹೋಗುತ್ತದೆ. ಹಣವೆಂಬುದು ಯಾರನ್ನು ಹೇಗೆ ಬೇಕಾದರೂ ಆಟವಾಡಿಸುತ್ತದೆ. ಒಮ್ಮೆ ಅದು ನಮ್ಮ ಕೈ ಸೇರಿ ನಂತರ ಕೈಖಾಲಿಯಾಗುವಂತೆ ಮಾಡಿದರೆ ಹಲವು ತೊಂದರೆಗಳನ್ನು ನಾವು ಎದುರಿಸುವಂತೆ ಮಾಡುತ್ತದೆ. ಹಣವೊಂದ್ದಿದ್ದರೇ ಸಾಕಪ್ಪ ನಾವು ಏನನ್ನು ಬೇಕಾದರೂ ಸಾಧಿಸಬಹುದು, ನನಗೆ ಏನು ಆಗಲು ಸಾಧ್ಯವಿಲ್ಲ ಎಂದೆಲ್ಲಾ ಕೆಲವು ದುಷ್ಟ ಚಿಂತನೆಗಳು ನಮ್ಮಲ್ಲಿವೆ. ಹಣ ಮಾತ್ರ ನಮ್ಮ ಜೀವನವಲ್ಲ ಅದಕ್ಕಿಂತ ಮಿಗಿಲಾಗಿ ನಮ್ಮ ಜೀವನದಲ್ಲಿ ಅನೇಕ ವಿಚಾರಗಳಿರುವುದಂತು ಸತ್ಯ . ಆದರೆ ಅದನ್ನು ನಾವು ನೋಡುವುದಿಲ್ಲ ನೋಡುವ ಕಡೆ ಗಮನಹರಿಸುವುದು ಇಲ್ಲ. ನಮ್ಮ ಬದುಕನ್ನು ಕತ್ತಲೆಯಂತೆ ಆವರಿಸಿರುವ ಹಣದ ಮೋಹವನ್ನು ಹೋಗಲಾಡಿಸಿ. ಇದ್ದುದ್ದರಲ್ಲಿ ಇನ್ನೊಬ್ಬರ ಕಷ್ಟಕ್ಕೆ ನೆರವಾಗಿ, ಪ್ರೀತಿ, ಕಾಳಜಿ, ಮಾನವೀಯತೆ ಎಂಬ ಬೆಳಕನ್ನು ನಾವು ಕೈಯೊಡ್ಡಿ ಕರೆಯಬೇಕು, ಮಾತ್ರವಲ್ಲ ಅದನ್ನು ನಮ್ಮ ಜೀವನಕ್ಕೆ ಪಸರಿಸಬೇಕು. ಆಗ ಮಾತ್ರ ನಮ್ಮ ಬದುಕಿಗೊಂದು ಅರ್ಥ ಬರಬಹುದು.
ಆಶ್ರಿತ ಎಮ್
ಪ್ರಥಮ ಬಿ.ಎ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ