ಧರ್ಮಸ್ಥಳ: ಪ್ರಗತಿಪರ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಿಂದ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಮಿಜಾರುಗುತ್ತು ಶ್ರೀ ಆನಂದ ಆಳ್ವರ ನಿಧನದಿಂದ ದುಃಖವಾಗಿದೆ. ಅವರ ಸರಳ ಹಾಗೂ ಆದರ್ಶ ವ್ಯಕ್ತಿತ್ವ ನಮ್ಮ ಜಿಲ್ಲೆಯಲ್ಲಿ ಸದಾ ಸ್ಮರಣೀಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರಗತಿಪರ ಕೃಷಿಕರಾಗಿ ಅವರು ಕೃಷಿ ರಂಗದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಗೋವುಗಳ ಬಗ್ಯೆ ಅವರಿಗೆ ವಿಶೇಷ ಪ್ರೀತಿ, ಕಾಳಜಿ ಇತ್ತು. ಧರ್ಮಸ್ಥಳಕ್ಕೆ ಬಂದಾಗಲೆಲ್ಲ ಅವರು ಇಲ್ಲಿರುವ ಗೋ ಶಾಲೆಗೆ ಹೋಗಿ ಗೋವುಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸುತ್ತಿದ್ದರು. 1970ರ ದಶಕದಲ್ಲಿ ಅನೇಕ ಉದ್ಯಮಗಳನ್ನು ಅವರು ಪ್ರಾರಂಭಿಸಿ ಯುವ ಜನತೆಯನ್ನು ಪ್ರೋತ್ಸಾಹಿಸಿದರು. ತಮ್ಮ ಎಲ್ಲಾ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಶಿಸ್ತುಬದ್ಧವಾಗಿ, ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಿದ್ದಾರೆ. ಶಿಕ್ಷಣ ರಂಗದಲ್ಲಿ ಅವರ ಮಗ ಡಾ. ಮೋಹನ ಆಳ್ವರ ಸೇವೆ-ಸಾಧನೆ ಶ್ಲಾಘನೀಯವಾಗಿದೆ ಎಂದು ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶತಮಾನ ಕಂಡ ಮಿಜಾರುಗುತ್ತು ಆನಂದ ಆಳ್ವ ನಿಧನ
ಆನಂದ ಆಳ್ವರ ನಿಧನದಿಂದ ನನಗೆ ಅತೀವ ದುಃಖವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ಕುಡ್ಲ ತುಳುಕೂಟ ಸಂತಾಪ:
ಸಮಾಜದ ಧಾರ್ಮಿಕ-ಸಾಂಸ್ಕೃತಿಕ ನೇತಾರರಾಗಿದ್ದು, ನಮ್ಮ ತುಳುಕೂಟ (ರಿ) ಕುಡ್ಲ ಸಂಸ್ಥೆಗೆ ಸದಾ ಬೆಂಬಲ ನೀಡುತ್ತಾ ಬರುತಿದ್ದು ನೂರ ಏಳು ಸಾರ್ಥಕ ವತ್ಸರಗಳ ಜೀವನ ನಡೆಸಿದ ಮಿಜಾರು ಗುತ್ತು ಆನಂದ ಆಳ್ವರಿಗೆ ಐವತ್ತರ ಸಂಭ್ರಮದಲ್ಲಿರುವ ನಮ್ಮ ಕೂಟ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತಿದೆ ಎಂದು ಮರೋಳಿ ಬಿ.ದಾಮೋದರ ನಿಸರ್ಗ, ರವಿ ಅಲೆವೂರಾಯ, ಜೆ. ವಿ. ಶೆಟ್ಟಿ, ಚಂದ್ರಶೇಖರ ಸುವರ್ಣ ಮತ್ತು ಕೂಟದ ಸರ್ವಸದಸ್ಯರು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ