ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಘಟಿಕೋತ್ಸವ; 61 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Upayuktha
0

  • ಖಾಲಿ ಉಳಿಯುತ್ತಿರುವ ದಂತ ವೈದ್ಯಕೀಯ ಸೀಟುಗಳು- ದಂತ ವೈದ್ಯರಿಗೆ ನಿರುದ್ಯೋಗ ಭೀತಿ
  • ತಜ್ಞರು-ದಂತ ವೈದ್ಯಕೀಯ ಕಾಲೇಜುಗಳೊಂದಿಗೆ ಮಾತುಕತೆಗೆ ಸರಕಾರ ಪ್ರಸ್ತಾಪ




ಬೆಂಗಳೂರು: ಭರ್ತಿಯಾಗದೆ ಖಾಲಿ ಉಳಿಯುತ್ತಿರುವ ದಂತ ವೈದ್ಯಕೀಯ ಸೀಟುಗಳು ಹಾಗೂ ದಂತ ವೈದ್ಯಕೀಯ ಪದವೀಧರರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಬಂಧಿತರ ಸಭೆ ನಡೆಸುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಬಿಎಲ್ ಸುಜಾತಾ ರಾಥೋಡ್ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಜೊತೆಗೆ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಯುವ ವೈದ್ಯರಿಗೆ ಕರೆ ನೀಡಿದ್ದಾರೆ.



ನಗರದ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಆಸ್ಪತ್ರೆಯ ವಾರ್ಷಿಕ ಘಟಿಕೋತ್ಸವದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಡಾ. ಸುಜಾತಾ ರಾಥೋಡ್, ದಂತ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿವೆ. "ನಾವು ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ದಂತ ವೈದ್ಯಕೀಯ ಪದವೀಧರರಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚಿಸಬೇಕಿದೆ. ಬಹಳಷ್ಟು  ದಂತ ವೈದ್ಯಕೀಯ ಸೀಟುಗಳಿಗೆ ಬೇಡಿಕೆ ಇಲ್ಲದೆ ಅವು ವ್ಯರ್ಥವಾಗುತ್ತಿವೆ. ದೇಶದಲ್ಲಿ ಇಂದಿಗೂ ಅಗತ್ಯ ಪ್ರಮಾಣದಲ್ಲಿ ದಂತ ವೈದ್ಯರಿಲ್ಲ. ಈ ಕ್ಷೇತ್ರದಲ್ಲಿ ಇಂದಿಗೂ ಹಲವು ಸಮಸ್ಯೆಗಳಿವೆ. ಅವುಗಳನ್ನು ಗುರುತಿಸಬೇಕು ಮತ್ತು ಪರಿಹರಿಸಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.



ಆರೋಗ್ಯ ಸೇವಾ ವಲಯದಲ್ಲಿ ಕುಸಿಯುತ್ತಿರುವ ನೈತಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಇದನ್ನು ಮರುಸ್ಥಾಪಿಸುವ ಜವಾಬ್ದಾರಿ ಯುವ ವೈದ್ಯರದ್ದು" ಎಂದು ತಿಳಿಸಿದರು.



"ನೀವು ಸಮಾಜದಲ್ಲಿ ಜವಾಬ್ದಾರಿಯುತ ವೈದ್ಯರಾಗಿ ಸೇವೆ ಸಲಿಸಲು ಆರಂಭಿಸಿದ್ದೀರಿ. ಈ ಸೇವೆಯ ಅವಧಿಯಲ್ಲಿ ನೈತಿಕ ಮೌಲ್ಯಗಳನ್ನು  ಎತ್ತಿ ಹಿಡಿಯಲು ನೀವು ಮರೆಯಬೇಡಿ. ಯಾವಾಗಲೂ ಸರಿಯಾದ ರೀತಿಯಲ್ಲಿ ಉತ್ತಮವಾದದ್ದನ್ನು ಮಾಡಲು ಪ್ರಯತ್ನಿಸಿ, ”ಎಂದು ಅವರು ನವ ಪದವೀಧರರಿಗೆ ಕಿವಿ ಮಾತು ಹೇಳಿದರು.



ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಯ ಮಹತ್ವವನ್ನು ತಿಳಿಸಿದ ಡಾ.ಸುಜಾತಾ ಅವರು ಯುವ ವೈದ್ಯರು ಸಂಶೋಧನೆಗೆ ಹೆಚ್ಚು ಒಟ್ಟು ನೀಡಬೇಕು ಎಂದು ತಿಳಿಸಿದರು. "ನಾವು ಈ ದೇಶದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇವೆ. ಆದರೆ ನಾವು ಅನುಸರಿಸುವ ಚಿಕಿತ್ಸಾ ಮಾದರಿ ಪಾಶ್ಚಿಮಾತ್ಯ ದೇಶಗಳಲ್ಲಿ ಅಲ್ಲಿನ ಜನಸಂಖ್ಯೆಯ ಮೇಲೆ ನಡೆಸಿದ ಸಂಶೋಧನೆಗಳ  ಮೇಲೆ ಅವಲಂಬಿತವಾಗಿದೆ. ನಾವು ನಮ್ಮ ರೋಗಿಗಳ ಮೇಲೆ ಸಾಕಷ್ಟು ಸಂಶೋಧನೆ ಮಾಡಬೇಕು. ಅದು ನಮಗೆಲ್ಲರಿಗೂ ಕೀರ್ತಿ  ತಂದುಕೊಡುತ್ತವೆ” ಎಂದು ಅವರು ಹೇಳಿದರು.



ವೈಯಕ್ತಿಕ ಜೀವನ, ಸಮಾಜ ಸೇವೆ ಮತ್ತು ವೃತ್ತಿಪರ ಬದ್ಧತೆಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಅವರು ಯುವ ವೈದ್ಯರಿಗೆ ಸಲಹೆ ನೀಡಿದರು. ಸೋಮವಾರದಿಂದ ಶುಕ್ರವಾರದವರೆಗೆ ರೋಗಿಗಳ ಬಗ್ಗೆ ಕಾಳಜಿ ವಹಿಸಬೇಕು “ಆದರೆ ಶನಿವಾರವನ್ನು ನಿಮ್ಮ ಕುಟುಂಬಕ್ಕಾಗಿ ಮೀಸಲಿಡಿ. ಭಾನುವಾರದಂದು, ಕನಿಷ್ಠ ಅರ್ಧ ದಿನ, ಸಮುದಾಯ ಸೇವೆ ಸಲ್ಲಿಸಲು ಮೀಸಲಿಡಿ" ಎಂದು ಅವರು ಕರೆ ನೀಡಿದರು.



ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ. ಸಿರಿ ಕೃಷ್ಣ ಪಿ., ಪ್ರಾಂಶುಪಾಲೆ ಡಾ.ವಿನಯ ಎಸ್ ಪೈ, ಉಪ ಪ್ರಾಂಶುಪಾಲೆ ಡಾ.ಅಮನ್  ದೀಪ್ ಸೋಧಿ, ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಸ್ ಅಧ್ಯಕ್ಷ ಡಾ.ಸಂಜೀವ್ ನಾಯರ್ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ 61 ವಿದ್ಯಾರ್ಥಿಗಳಿಗೆ (ಪದವಿ ಮತ್ತು ಸ್ನಾತಕೋತ್ತರ ಪದವೀಧರರು) ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅತಿ ಹೆಚ್ಚಿನ ಅಂಕ ಗಳಿಸಿದ ಸಾಧನೆ ಮಾಡಿದ ಡಾ. ಸೈಯದಾ ಝೈಬಾ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top