ನವರಾತ್ರ ನಮಸ್ಯಾ: ಲಲಿತೋಪಾಖ್ಯಾನ ಪ್ರವಚನ- 6- ಅಕ್ಷರರೂಪ

Upayuktha
0

ನವರಾತ್ರಿಯ ಪರ್ವಕಾಲದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನುಗ್ರಹಿಸುತ್ತಿರುವ "ಲಲಿತೋಪಾಖ್ಯಾನ" ಪ್ರವಚನದ ಅಕ್ಷರರೂಪ.





ದೇವತೆಗಳು ಧರ್ಮದಲ್ಲಿದ್ದರೆ ಅಥವಾ ಮನುಷ್ಯರು ಧರ್ಮದಲ್ಲಿದ್ದರೆ ಅದು ದೊಡ್ಡ ಮಾತಲ್ಲ. ಆದರೆ, ಅಸುರರು ಕೂಡಾ ಧರ್ಮದಲ್ಲಿದ್ದರು ಎಂಬುದನ್ನು ನಿನ್ನೆಯ ಕಥೆಯಲ್ಲಿ ಗಮನಿಸಿದೆವು.


ಧರ್ಮಾಚರಣೆಯನ್ನು ಅವರು ಚೆನ್ನಾಗಿಯೇ ಮಾಡುತ್ತಿದ್ದರು. ಮೂರು ಸಂಗತಿಗಳು ಭಂಡಾಸುರನ ಸಾಮ್ರಾಜ್ಯವನ್ನು ಕಾಪಾಡಿತು. ಮೊದಲನೇಯದಾಗಿ ಗುರುವಿನಲ್ಲಿ ಶ್ರದ್ಧೆ. ಶುಕ್ರಾಚಾರ್ಯರಲ್ಲಿ ಚಂಚಲವಿಲ್ಲದ ಶ್ರದ್ಧೆ. ಅವರು ಹಾಕಿದ ಗೆರೆಯನ್ನು ದಾಟದೆ ಇರತಕ್ಕಂತಹ ಒಂದು ಮನಸ್ಸು. ಗುರುಕೃಪೆ ಒಂದು ಕಡೆಯಿಂದ ರಕ್ಷಾಕವಚವಾಗಿ ಭಂಡಾಸುರನ ಸಾಮ್ರಾಜ್ಯವನ್ನು ಕಾಪಾಡುತ್ತಿದ್ದರೆ, ಇನ್ನೊಂದು ಕಡೆ, ಶಿವಭಕ್ತಿ. ಯಾರಿಂದ ತಾನು ಸೃಷ್ಟಿಗೊಂಡನೋ ಅಂತಹ ಶಿವನ ಕುರಿತು ಅಚಲವಾದ ಭಕ್ತಿ, ನಿತ್ಯಾರ್ಚನೆ. ಹೀಗೆ ಒಂದು ಕಡೆ ಗುರುಕೃಪೆ, ಇನ್ನೊಂದು ಕಡೆ ಶಿವಕೃಪೆ. ಮೂರನೇಯದಾಗಿ ಆಚರಣೆಗಳು. ಯಜ್ಞ, ಯಾಗಾದಿಗಳು, ದಾನ, ತಪಸ್ಸು, ಇವುಗಳನ್ನು ರಾಕ್ಷಸರು ಮನೆಮನೆಗಳಲ್ಲಿ ಮಾಡುತ್ತಿದ್ದರು. ಇದು ಕೂಡಾ ರಕ್ಷಣೆ. ಈ ಮೂರು ಕಾರ್ಯಗಳು, ತಮ್ಮ ಕರ್ಮ, ಶಿವಕೃಪೆ ಹಾಗೂ ಗುರುಕೃಪೆಯು ಅಸುರರನ್ನು ಕಾಪಾಡಿತು. ಇವುಗಳನ್ನು ನಾವು ಜೀವನದಲ್ಲಿ ಇಟ್ಟುಕೊಳ್ಳಬೇಕಾಗಿದೆ. ಜೀವನಕ್ಕೆ ಗುರುವಿನ ಕರುಣೆ, ದೇವರ ಅನುಗ್ರಹ ಬೇಕು. ಇವೆರಡನ್ನೂ ಸಂಪಾದನೆ ಮಾಡಬೇಕು ಎಂದರೆ ನಮ್ಮ ಆಚರಣೆ ಸರಿಯಾಗಿರಬೇಕು. 


ಉದಾಹರಣೆಗೆ ಸಂಧ್ಯಾವಂದನೆ ಹಾಗೂ ಅದರ ಮಹತ್ವ :

ಸಂಧ್ಯಾಹೀನಃ ಅಶುಚಿಃ ನಿತ್ಯಂ

ಅನರ್ಹಃ ಸರ್ವ ಕರ್ಮಸು

ಯಾರು ಸಂಧ್ಯಾವಂದನೆಯನ್ನು ಮಾಡುವುದಿಲ್ಲವೋ ಅವನು ಅನುಕ್ಷಣವೂ ಅಶುಚಿ. ಸ್ನಾನ ಮಾಡಿರಬಹುದು ಅಥವಾ ಇನ್ನೇನೇ ಮಾಡಿದರೂ ಅಶುಚಿಯೇ. ಸಂಧ್ಯಾವಂದನೆ ಮಾಡದಿದ್ದರೆ ಅಶುಚಿ ಮಾತ್ರ ಅಲ್ಲ, ಅವನು ಯಾವ ಕರ್ಮ ಮಾಡಲೂ ಅನರ್ಹನಾಗಿರುತ್ತಾನೆ. ನಮ್ಮಲ್ಲಿ ಎಷ್ಟೋ ಮಂದಿ ಹೇಳಿಕೊಂಡು ಬರುತ್ತಾರೆ, ಪೂಜೆ, ಪುನಸ್ಕಾರ, ದಾನ, ಧರ್ಮಾದಿಗಳನ್ನು ಮಾಡಿದರೂ ಕಷ್ಟಗಳು ಬಂದಿವೆ ಎಂದು. ಆದರೆ ಸಂಧ್ಯಾವಂದನೆ ಮಾಡದೆ ಇವು ಯಾವುದನ್ನು ಮಾಡಿದರೂ ಪ್ರಯೋಜನವಿಲ್ಲ. ಇವೆಲ್ಲ ವಿಫಲ. ಸಂಧ್ಯೆಯ ಬಳಿಕ ಮಾಡುವ ಕರ್ಮಗಳಿಗೆ ಫಲವಿದೆ. ಸಂಧ್ಯೆಯನ್ನು ಮಾಡದೆ ಸತ್ಕಾರ್ಯ ಮಾಡಿದರೆ ಫಲವಿಲ್ಲ, ಯಾಕೆಂದರೆ ನಮಗೆ ಅರ್ಹತೆಯೇ ಬರುವುದಿಲ್ಲ. ನಾವು ಶುಚಿಯೇ ಆಗಿರುವುದಿಲ್ಲ. ಶುಚಿ ಆಗಬೇಕಾದರೆ ಸಂಧ್ಯೆ ಆಗಬೇಕು. ರಾತ್ರೆಯ ಪಾಪ ಕಳೆಯಬೇಕೆಂದರೆ ಬೆಳಿಗ್ಗೆ ಸಂಧ್ಯಾವಂದನೆ ಮಾಡಬೇಕು. ಹಗಲಿನ ಪಾಪ ಕಳೆಯಬೇಕೆಂದರೆ ಸಂಜೆಯ ಸಂಧ್ಯಾವಂದನೆ ಮಾಡಬೇಕು. ರೂಪಾಂತರದಲ್ಲಿ ಹೆಣ್ಣು ಮಕ್ಕಳಿಗೂ ಇದೆ. ಹನುಮಂತ ಲಂಕೆಯ ಅಶೋಕವನದಲ್ಲಿ ಸೀತೆಯನ್ನು ಹುಡುಕುತ್ತಾ ಇರುತ್ತಾನೆ. ಅಲ್ಲೊಂದು ನದಿ ಕಾಣಿಸುತ್ತದೆ. ಅಲ್ಲಿಯೇ ಕಾದರೆ ಸೀತೆ ಸಂಧ್ಯೆಗೆ ಬರುವಾಗ ಸಿಗುತ್ತಾಳೆ ಎಂಬ ವಿಶ್ವಾಸ ಅವನಿಗೆ. ಅವತ್ತಿನ ಕಾಲದ ಸಂಸ್ಕಾರ ಹೇಗಿತ್ತು ಎಂಬುದು ನಾವಿಲ್ಲಿ ಆಲೋಚಿಸತಕ್ಕದ್ದು. ಅದು ಹರಿವಾಣ, ಚೆಂಬು, ಪಂಚಪಾತ್ರೆ, ಭಸ್ಮಗಳಿದ್ದು ಆಗಬೇಕೆಂದಿಲ್ಲ. ಸಂ-ಧ್ಯಾ, ಧ್ಯಾ ಎಂದರೆ ಧ್ಯಾನ ಎಂದರ್ಥ. ಪರತತ್ವದಲ್ಲಿ ಕೆಲನಿಮಿಷದ ಕಾಲ ಮನಸ್ಸನ್ನು ಕೇಂದ್ರೀಕರಿಸಿದರೆ, ಭಗವಂತನಿಗೆ ಅರ್ಪಿಸಿದರೆ ಅದುವೇ ಸಂಧ್ಯಾವಂದನೆ. ಇಲ್ಲದಿದ್ದರೆ ಅವನು ಅನರ್ಹ ಎಂದೆನಿಸಿಕೊಳ್ಳುತ್ತಾನೆ. ದಾನಧರ್ಮ, ಪೂಜೆ ಎಲ್ಲವನ್ನು ಮಾಡಿಯೂ ತೊಂದರೆ ಬಂತು ಎಂದಾದರೆ ಸಂಧ್ಯಾ ಮಾಡಲಿಲ್ಲ ಎಂದರ್ಥ. ಒಳ್ಳೆಯದು ಬರದಿರಬಹುದು, ದೋಷಗಳು ಬರಬಹುದು. ಅಶುಚಿಯಾಗಿ ಯಾವ ಕರ್ಮ ಮಾಡಿದರೂ, ಅನರ್ಹರಾಗಿ ಯಾವ ಕರ್ಮ ಮಾಡಿದರೂ ದೋಷ ಬರಬಹುದು. ಏನೇ ಕೆಲಸ ಮಾಡುತ್ತಿದ್ದರೂ ಮೊದಲು ನಿತ್ಯದ ಸಂಧ್ಯಾವಂದನೆ ಮಾಡಬೇಕು.


ಅಸುರರು ತಮ್ಮ ಆಚರಣೆಗಳನ್ನು ಬಹಳ ಚೆನ್ನಾಗಿ ಇಟ್ಟುಕೊಂಡರು. ಹಾಗಾಗಿ ಬಹಳ ಕಾಲ ಚೆನ್ನಾಗಿದ್ದರು. ದೇವತೆಗಳು ಯಾವತ್ತೂ ಚೆನ್ನಾಗಿರುತ್ತಾರೆ, ಕಾರಣ ಅವರು ತಮ್ಮ ಕರ್ಮದ ಮೂಲಕವೇ ಅಲ್ಲಿಗೆ ಹೋಗಿರುವಂತದ್ದು. ನೂರು ಯಜ್ಞಗಳನ್ನು ಮಾಡಿ ಇಂದ್ರನು ಇಂದ್ರನಾದ ಎಂಬ ಮಾತಿದೆ.


ಅಸುರರು ಕೂಡಾ ನಮಗೊಂದು ಪಾಠವನ್ನು ಹೇಳುತ್ತಾರೆ. ನಿಮಗೆ ಗುರುಭಕ್ತಿ, ದೇವಭಕ್ತಿ ಇದ್ದರೆ, ನಿಮ್ಮ ನಿತ್ಯದ ಆಚರಣೆಗಳನ್ನು ಸರಿಯಾಗಿ ಶ್ರದ್ಧೆಯಲ್ಲಿ ಮಾಡಿದರೆ, ಭಗವದುಪಾಸನೆಗಳನ್ನು, ಹೋಮ, ದಾನ, ಪೂಜೆಗಳನ್ನು ಸರಿಯಾಗಿ ಮಾಡಿದರೆ ಅವುಗಳು ನಿಮ್ಮನ್ನು ಕಾಪಾಡುತ್ತದೆ ಎಂಬುದಾಗಿ. ನಾವು ಅಷ್ಟೋ ಇಷ್ಟೋ ಮಾಡುತ್ತೇವೆ. ಒಳ್ಳೆಯದಾಗುವುದು ಕಾಣುತ್ತಿಲ್ಲವೆಂದು ಹೇಳಿ ಬಿಟ್ಟುಬಿಡುತ್ತೇವೆ. ಅದು ಹಾಗಲ್ಲ. ಇರುವುದು ಇದ್ದರೆ, ಅದೇ ದೊಡ್ಡ ಲಾಭ, ದೇಹ ಉಳಿದಿದೆ, ಉಸಿರು ಉಳಿದಿದೆ ಹಾಗೂ ಒಂದಷ್ಟು ಶುಭಗಳು ಉಳಿದುಕೊಂಡಿವೆ ಎಂದರೆ ಅದುವೇ ದೊಡ್ಡ ಲಾಭ. ಹೊಸತು ಬರುವ ವಿಚಾರ ಆಮೇಲೆ. ಈಗಿನ ಕಾಲದ ಮನಸ್ಥಿತಿ ಹೇಗೆಂದರೆ, ಬೆಳವಣಿಗೆ (improvement) ಕಾಣಬೇಕು. ಏನೂ ಕಾಣದಿದ್ದಲ್ಲಿ ಕಾರ್ಯ ಕೈಬಿಡುವುದು, ಹಾಗಲ್ಲ. ಎರಡು ಮಹತ್ವದ ವಿಚಾರವೇನೆಂದರೆ; ಒಂದು "ಇರುವುದು ಉಳಿಯಬೇಕು". ಇನ್ನೊಂದು "ಕೆಡುಕು ಬರಬಾರದು".


ಉದಾಹರಣೆಗೆ: ಯಾವುದಾದರೂ ದೊಡ್ಡ ಖಾಯಿಲೆ ಬಂದಾಗ ವೈದ್ಯರು ನೋಡುವ ವಿಚಾರವೇನೆಂದರೆ, ಆರೋಗ್ಯ ಇನ್ನಷ್ಟು ಕೆಡಬಾರದು. ಇನ್ನಷ್ಟು ಕೆಡದಿದ್ದರೆ ಅದುವೇ improvement. ಕಾಯಿಲೆ ಹಿಂದೆ ಬರುವಂತಹದ್ದು ಇನ್ನೊಂದು ಮಜಲು ಎಂದು ಪರಿಗಣಿಸಬಹುದು. ಮೊದಲ ವಿಚಾರ ಯಾವುದೆಂದರೆ ಖಾಯಿಲೆ ಮುಂದುವರಿಯಬಾರದು.


ದೇವ ಮಂದಿರ, ಪೂಜೆ, ಪ್ರಸಾದಗಳೆಲ್ಲಾ ಜೀವನದ ಅಲಂಕಾರಗಳು. ಇವು ಮನಸ್ಸಿನ ಉದ್ಧಾರಕ್ಕಾಗಿ ಇರುವವುಗಳು. ಪರಿಶುದ್ಧ ಮನವೆಂಬುದೇ ವರ. ಹಾಗಾಗಿ ಯೋಗಕ್ಷೇಮ ಎಂಬುದನ್ನು ವಿಚಾರಿಸುತ್ತೇವೆ.

ಇಲ್ಲದ ಒಳಿತು ಬಂದರೆ ಯೋಗ

ಇರುವ ಒಳಿತು ಉಳಿದುಕೊಂಡರೆ ಕ್ಷೇಮ

ಇವೆರಡು ಸಂಗತಿಗಳು. ಈಗ ಶಬ್ದಗಳು ಮಾತ್ರ ರೂಢಿಯಲ್ಲಿ ಉಳಿದುಕೊಂಡಿದೆ. ನಿಜಾರ್ಥವು ಇಂತಿದೆ.


ಹಾಗಾಗಿ ಈ ಗುರುಭಕ್ತಿ, ದೇವಭಕ್ತಿ, ಆಚರಣೆಗಳು ಅಸುರರನ್ನು ರಕ್ಷಿಸಿತು ಎಂಬುದಾಗಿ ಭಂಡಾಸುರನ ಪ್ರಕರಣದಲ್ಲಿ ಕಾಣುತ್ತೇವೆ. ಒಬ್ಬ ದುಷ್ಟ ಎಂದರೆ ಅವನಲ್ಲಿ ಎಲ್ಲವೂ ತ್ಯಾಜ್ಯವೇ ಎಂದು ಅರ್ಥವಲ್ಲ. ಒಳ್ಳೆಯವನಲ್ಲಿ ಕೆಟ್ಟದ್ದೂ ಇರಬಹುದು. ಕೆಟ್ಟವರಲ್ಲಿ ಎಲ್ಲೋ ಒಂದು ಕಡೆ ಒಳ್ಳೆಯದೂ ಇರಬಹುದು. ಒಳ್ಳೆಯವರು ಎಲ್ಲರಿಗೂ ಒಳ್ಳೆಯವರಾಗಿರುವುದಿಲ್ಲ, ಯಾವಾಗಲೂ ಒಳ್ಳೆಯವರಾಗಿರುವುದಿಲ್ಲ. ಮತ್ತು  ಕೆಟ್ಟವರು ಎಲ್ಲರಿಗೂ, ಯಾವಾಗಲೂ ಕೆಟ್ಟವರಾಗಿರುವುದಿಲ್ಲ. ಕೆಟ್ಟವರು ಯಾವುದಾದರೂ ಕೆಲ ಸಂದರ್ಭದಲ್ಲಿ ಒಳ್ಳೆಯವರಾಗುತ್ತಾರೆ. ನಾವು ಲಲಿತಾಪರಮೇಶ್ವರಿಯಿಂದ ಕಲಿಯುವುದು ಮುಂದಿನ ವಿಚಾರ. ಅವಳು ದೇವಿ. ಅವಳಿಂದ ಕಲಿಯುವ ಮುನ್ನ ನಾವು ಅಸುರರಿಂದ ಕಲಿಯಬೇಕಾದ್ದಿದೆ. ರಾಕ್ಷಸ ಕುಲಕೋಟಿ ಎಲ್ಲರೂ ಸೇರಿ ಸತ್ಕಾರ್ಯವನ್ನು ಮಾಡುತ್ತಿದ್ದರು. ಗುರುಭಕ್ತಿ, ದೇವಭಕ್ತಿ, ಸತ್ಕರ್ಮಗಳು ಮೂಲಾಧಾರ ನಮ್ಮ ಜೀವನಕ್ಕೆ. ಒಂದು ಪಂಚಾಂಗ ಇದ್ದ ಹಾಗೆ ಅದನ್ನು ನಾವು ಕೆಡಿಸಿಕೊಳ್ಳಬಾರದು. 



ಅದೇ ದೇವತೆಗಳು ತಮ್ಮ ಕಾರ್ಯದಲ್ಲಿ ಕಾಮನನ್ನು ಯಾಕೆ ಛೂ ಬಿಟ್ಟರು. ದೇವರು ಎಷ್ಟು ದೊಡ್ಡವನು ಎಂದು ತಿಳಿಯದೇ ಹೋಯಿತೇ? ಕಾಮನಿಂದ ಶಿವನನ್ನು ಎಚ್ಚರಗೊಳಿಸುವುದು  ಸಾಧ್ಯವೆಂದು ಹೇಗೆ ಗ್ರಹಿಸಿದರು? ಶಿವನ ಮಗನಿಂದ ತಾರಕಾಸುರನ ಸಂಹಾರ ಎಂಬುದು ಶಿವನಿಗೆ ಗೊತ್ತಿಲ್ಲವೇ? ಅಥವಾ ಕರುಣಾಳು ಶಿವನಿಗೆ ಕಾಲದೇಶಗಳ ಪರಿಜ್ಞಾನವಿಲ್ಲವೇ? ಅಂತಹಾ ಶಿವನಿಂದ ತಮ್ಮ ಕಾರ್ಯವನ್ನು ತಾವೇ ಮಾಡಿಸುವೆವು ಎಂಬಂತೆ ಹೋದರೆ ಏನಾಗಬಹುದು?! 


ಶಿವನ ಎರಡು ದೃಷ್ಟಿ, ಒಂದರಲ್ಲಿ ಕಾಮನು ಸುಟ್ಟುರಿದು ಬೂದಿಯಾದ. ಇನ್ನೊಂದು ದೃಷ್ಟಿ ದೇವತೆಗಳನ್ನು ಅರುವತ್ತು ಸಾವಿರ ವರ್ಷಗಳ ಕಾಲ ಉರಿಸಿತು. 'ಕರ್ತಾ ಕಾರಯಿತಾ ಚೈವ', ಪಾಪವನ್ನು ಮಾಡಿದವನು ಮನ್ಮಥ. ಅವನಿಗೆ ಸಣ್ಣ ಶಿಕ್ಷೆ. ಮಾಡಿಸಿದವರು ದೇವತೆಗಳು. ಅವರಿಗೊಂದು ಬಗೆಯ ನರಕವಿದು. ಭಂಡಾಸುರನೆಂಬ ನರಕದಲ್ಲಿ ಬಿದ್ದು ಅರುವತ್ತು ಸಾವಿರ ವರ್ಷಗಳ ಕಾಲ ನರಳಾಡಿದರು ದೇವತೆಗಳು. ಯಾಕೆಂದರೆ ದೇವತೆಗಳು ಅವರಿಗೆ ಯೋಗ್ಯವಲ್ಲದ ಕೆಲಸವನ್ನು ಮಾಡಿದ್ದರು. ದೊಡ್ಡವರಲ್ಲಿ ಸಣ್ಣ ಬುದ್ಧಿ ತೋರಿಸಿದ್ದರು. ಶಿವನಲ್ಲಿ ಹೋಗಿ ತಮ್ಮ ಜಾಣ್ಮೆಯನ್ನುಪಯೋಗಿಸಿದರು. 


ಭಂಡಾಸುರ ಎನಿಸಿದ ಒಂದು ಜೀವ. ಆ ಜೀವದಲ್ಲಿ ಪಾಪಗಳು ತುಂಬಾ ಉಂಟು. ಪುಣ್ಯಗಳೂ ತುಂಬಾ ಉಂಟು. ಆ ಜಾತಿಯೇ ಹಾಗೆ. ಭಂಡಾಸುರನಾಗಲೀ, ರಾವಣನಾಗಲೀ ಇವರು ವಿಪರೀತ ಪುಣ್ಯ, ವಿಪರೀತ ಪಾಪಗಳನ್ನು ಹೊಂದಿದ ಜೀವ. ಅವರ ಪಾಪವು ಪರ್ವತಾಕಾರ, ಪುಣ್ಯವು ಸಾಗರದಾಕಾರ. ಭಂಡಾಸುರನ ಪಾಪದ ಪರಿಣಾಮವಾಗಿ ಅವನು ಅಸುರ ನಾಯಕನಾದ, ಶೋಣಿತನಗರಿಯನ್ನು ಕಟ್ಟಿದ, ಬ್ರಹ್ಮಾಂಡವನ್ನು ಪೀಡಿಸಿದ, ದೇವಲೋಕವನ್ನು, ದೇವತೆಗಳನ್ನು ಪೀಡಿಸಿದ. ಇದು ಅವರೊಳಗಿನ ಅಸುರತ್ವ. ಅವನಲ್ಲಿ ಪುಣ್ಯವೂ ಉಂಟು. ಶಿವನಿಂದ ಸುಟ್ಟ ಭಸ್ಮದಿಂದ ಹುಟ್ಟಿ ಬರುವುದು ಅಥವಾ ಶಿವಗಣವು ಆಕೃತಿ ಕೊಟ್ಟು, ಶಿವನ ದೃಷ್ಟಿಯೇ ಜೀವ ಕೊಡಬೇಕಾದರೆ ಸಣ್ಣ ಪುಣ್ಯದಿಂದ ಅದು ಸಾಧ್ಯವಿಲ್ಲ. ಅವನ ಸಂಹಾರಕ್ಕೆ ಸಾಕ್ಷಾತ್ ತ್ರಿಪುರಸುಂದರಿಯೇ ಬರಬೇಕಾದರೆ, ಅವನಿರುವಲ್ಲಿಗೆ ಬಂದು ಅವನೊಂದಿಗೆ ಸೆಣಸಬೇಕೆಂದರೆ, ಆಕೆಯ ಕೈಯಿಂದ ಮುಕ್ತಿ ಪಡೆಯಬೇಕೆಂದರೆ ಬಹಳ ದೊಡ್ಡ ಪುಣ್ಯವಿರಬೇಕು. ರಾವಣನೂ ಹಾಗೆಯೇ. ರಾಮಾವತಾರ ಮಾಡಿಸುವಷ್ಟು, ಈ ಲೋಕಕ್ಕೆ ಮಾತ್ರವಲ್ಲ ಲಂಕೆಗೆ, ತನ್ನ ಮನೆಯ ಬಾಗಿಲಿಗೆ ರಾಮನು ಬಂದು ರಾಮನ ಕೈಯಿಂದಲೇ ಮತ್ತು ರಾಮನನ್ನು ನೋಡುನೋಡುತ್ತಿದ್ದಂತೆಯೇ ಕಣ್ಣುಮುಚ್ಚುವಂತಹ ಪುಣ್ಯ ಅವನದ್ದು. ಇದು ಅಲ್ಪ ಪುಣ್ಯದಿಂದ ಆಗುವಂತಹದ್ದಲ್ಲ. ಅಷ್ಟೇ ಪಾಪವೂ ಉಂಟು. ಪುರಾಣದ ಖೂಳರು ಮಹಾಪುಣ್ಯವಂತರು ಹಾಗೂ ಮಹಾಪಾಪಿಷ್ಠರು. ಎರಡೂ ಸೇರಿ ವಿಚಿತ್ರ ರೂಪ ಏರ್ಪಡುವಂತಹದ್ದು.

 

ಅರುವತ್ತು ಸಹಸ್ರ ವರ್ಷಗಳಿಂದ ದೇವತೆಗಳು ಉರಿಯುತ್ತಿದ್ದಾರೆ. ಅರುವತ್ತು ಸಹಸ್ರ ವರ್ಷಗಳ ನಂತರ ಭಂಡಾಸುರನ ಪುಣ್ಯ ಮುಗಿಯಲು ಬಂದಿತೋ ಅಥವಾ ದೇವತೆಗಳ ಪಾಪ ಕಳೆಯುತ್ತಾ ಬಂದಿತೋ ಏನೋ! ಹಾಗಾಗಿ ದೇವತೆಗಳ ಕುರಿತು ಹರಿಗೊಂದು ಕರುಣೆ ಬಂತು. ದಿನೇ ದಿನೇ ಭಂಡಾಸುರ ವರ್ಧಮಾನ, ಇಂದ್ರ ಹೀಯಮಾನ ಆಗುತ್ತಿದ್ದಾನೆ.  ದೇವತೆಗಳು ಕ್ಷೀಣಿಸುತ್ತಿದ್ದರು. ಮನುಷ್ಯರು ನೀಡುವ ಹವಿಸ್ಸೇ ಅವರಿಗೆ ಭೋಜನ. ಆದರೆ ಈಗ ಅವರಿಗೆ ಹೊಟ್ಟೆಗಿಲ್ಲ. ಅವರ ಆತ್ಮವೂ ಕುಗ್ಗಿದೆ, ಭಂಡಾಸುರ ಮತ್ತಷ್ಟು ಬಲಿಷ್ಠನಾಗುತ್ತಿದ್ದಾನೆ. ಹೀಗೆ ಮುಂದುವರೆದರೆ, ಭಂಡಾಸುರ ಶಾಶ್ವತನಾಗುವನು. ದೇವತೆಗಳು ಇಲ್ಲವಾಗಬಹುದು. ಹೀಗೆ ಆಗಬಾರದು. ಏಕೆಂದರೆ ಅಗ್ನಿ, ವಾಯು ಮೊದಲಾದ ದೇವತೆಗಳು ಸೃಷ್ಟಿಗೆ ಉಪಕಾರಿಗಳು. ವಾಯು ತನಗಾಗಿ ಅಲ್ಲ ನಮಗಾಗಿ ಇರುವುದು. ಭಂಡಾಸುರ ಹಾಗಲ್ಲ. ಆತ ತನಗಾಗಿಯೇ ಇರುವುದು. ಇಬ್ಬರಲ್ಲಿನ ದೊಡ್ಡ ವ್ಯತ್ಯಾಸವಿದೆ ಅದುವೇ, 'ಸ್ವಾರ್ಥ'. ಕೊನೆಗೂ ಹರಿಗೆ ಕನಿಕರ ಬಂತು ದೇವತೆಗಳ ಮೇಲೆ. ಕನಿಕರವು ಮೊದಲೂ ಇತ್ತು, ಆದರೆ ದಾಸರು ಹೇಳಿದಂತೆ, 

ನಾ ಮಾಡಿದ ಕರ್ಮ ಫಲ ಬಲವಂತವಾದರೆ,

ನೀ ಏನ ಮಾಡುವೆಯೋ ರಂಗ ಎಂಬಂತೆ. 

ಪಾಪಗಳು ಅನುಭವಿಸಿಯೇ ಮುರಿಯಬೇಕು ವಿನಃ ಬೇರೆ ಪರಿಹಾರವಿಲ್ಲ. ಹರಿಯ ಮನಸ್ಸಿನಲ್ಲಿ ಕರುಣೆಯ ಕುಡಿಯೆದ್ದಿರುವುದು ದೇವತೆಗಳಿಗೆ ಗೊತ್ತಿಲ್ಲ. ವಿಷ್ಣುವಿನ ನಡೆಗಳೆಲ್ಲಾ ಬಹಳ ಸೂಕ್ಷ್ಮವಾಗಿರುತ್ತದೆ. ಹೀಗಾಗಿಯೇ ಅವನನ್ನು  'ಕಪಟನಾಟಕರಂಗ' ಎನ್ನುವುದು. ಮನಸ್ಸಿನಲ್ಲೇನಿದೆ ಎನ್ನುವುದು ಎದುರಿರುವವರಿಗೆ ತಿಳಿಯದು. ಹರಿಯು ಯಾಕಾಗಿ ಆ ಹೆಜ್ಜೆಯಿಟ್ಟ ಎಂಬುದು ಗೊತ್ತಾಗುವುದಿಲ್ಲ. ಅವನದು ದೂರಗಾಮಿ ಚಿಂತನೆಗಳು. ಭಂಡಾಸುರನನ್ನು ಯುದ್ಧ ಮಾಡಿ ಗೆಲ್ಲುವುದು ಅಸಾಧ್ಯ. ಯಾಕೆಂದರೆ ಎದುರಾಳಿಯ ಬಲವೂ ಅವನಿಗೆ ಸಿಗುವಂತಹ ವರದಾನವಿದೆ. ಅಸ್ತ್ರ, ಶಸ್ತ್ರ, ಶ್ವೇತಚ್ಛತ್ರದ ವರದಾನವೂ ಇದೆ. ಎಲ್ಲಾ ಬಾರಿ ಯುದ್ಧದಿಂದ ಗೆಲ್ಲಲು ಸಾಧ್ಯವಿಲ್ಲ, ಬುದ್ಧಿವಂತಿಕೆ, ಯುಕ್ತಿಯೂ ಬೇಕು. ಇಲ್ಲಿ ಬೇಕಾಗಿರುವುದು ಯುಕ್ತಿ. 


ಆಧುನಿಕ ಆರೋಗ್ಯ ಶಾಸ್ತ್ರವು ಕಣ್ಣಿಗೆ ಕಾಣಿಸುವ ಲಕ್ಷಣಗಳಿಗೆ ಮದ್ದು ನೀಡುತ್ತದೆ. ಆದರೆ ಭಾರತೀಯ ಆರೋಗ್ಯ ಶಾಸ್ತ್ರವು "ನಿದಾನಂತು ಆದಿಕಾರಣಂ" ಮೂಲಕಾರಣವನ್ನು ಕಂಡು ಅಲ್ಲಿಂದಲೇ ಅದನ್ನು ತೆಗೆದು ಹಾಕಲು ಯತ್ನಿಸುತ್ತಿದೆ. 

                                 

ಅಂತೆಯೇ, ಭಂಡಾಸುರನನ್ನು ಶಕ್ತಿಯಿಂದ ಗೆಲ್ಲಲು ಸಾಧ್ಯವಿಲ್ಲ. ಯುಕ್ತಿಯಿಂದಲೇ ಗೆಲ್ಲಬೇಕು. ಭಂಡಾಸುರನ ರಕ್ಷಣೆಯ ಮೂಲ ಕಾರಣವೇನು ಎಂಬುದನ್ನು ತಿಳಿದು, ರಕ್ಷಾಕವಚವನ್ನು ತೆಗೆದರೆ ಮಾತ್ರ ಅವನನ್ನು ಗೆಲ್ಲಬಹುದು. ಸತ್ಕರ್ಮ, ಗುರುಭಕ್ತಿ, ದೇವಭಕ್ತಿಯೇ ಭಂಡಾಸುರನ ರಕ್ಷಣಾಕವಚ. ಆ ಕವಚವನ್ನು ತೆಗೆಯಬೇಕು ಎಂದರೆ, ಈ ಮೂರೂ ಕಾರ್ಯಗಳಿಂದ ಅವರು ವಿಮುಖರಾಗಬೇಕು. ಅದು ಮೊದಲು ಮಾಡಬೇಕಾದ ಕಾರ್ಯ. ಅದಕ್ಕಾಗಿಯೇ ಹರಿಯು ಮತ್ತೆ ಮೋಹಿನಿಯಾದನು.  

       

ಮೋಹಿನಿ ಮಾಡುವುದು ಒಂದೇ ಕೆಲಸ. ಆಕೆ ಆ ಒಂದು ಕೆಲಸದಲ್ಲಿ ಎಲ್ಲವನ್ನೂ ಮಾಡಿಬಿಡುತ್ತಾಳೆ. ಮೋಹಿನಿಗೆ ಮೋಹಗೊಳಿಸುವುದೊಂದೇ ಕೆಲಸ. 

"ಜ್ಞಾನಿನಾಮಪಿಚೇತಾಂಸೀ ದೇವಿ ಭಗವತೀ ಹಿ ಸಾ|

ಬಲಾದಾಕೃಷ್ಯಮೋಹಾಯ ಮಹಾಮಾಯಾ ಪ್ರಯೇಚ್ಛತಿ||"


ತ್ರಿಪುರಸುಂದರಿ, ರಾಜರಾಜೇಶ್ವರಿ ಆಕೆ ಏನು ಮಾಡುತ್ತಾಳೆ ಎಂದರೆ, ಜ್ಞಾನಿಗಳಾಗಿದ್ದರೂ ಅಂತವರ ಮನಸ್ಸನ್ನು ಕೂಡಾ ಬಲವಾಗಿ ಎಳೆದು ಮೋಹಗೊಳಿಸುತ್ತಾಳೆ. ಜಗತ್ತನ್ನು ನಡೆಸಲು ಬೇಕದು. ಹಾಗಾಗಿ ಅಂತಹ ಮೋಹಿನಿಯ ಸೃಷ್ಟಿಯಾಯಿತು. ಆ ಲೋಕಮಾಯೆಗೆ ಶ್ರೀಹರಿ "ಹೋಗು ಆ ಭಂಡಾಸುರ ಹಾಗು ಅವನ ಅನುಯಾಯಿಗಳನ್ನು ಹರಿಭಕ್ತಿ, ಶಿವಭಕ್ತಿ, ಗುರುಭಕ್ತಿಯಿಂದ ವಿಮುಖರಾಗುವಂತೆ ಮಾಡು" ಎಂದು ಕಳಿಸಿದ. ದೇವರ ದೇವ ಶ್ರೀಹರಿ ಸತ್ಕರ್ಮಗಳಿಂದ ತಪ್ಪಿಸುವಂತೆ ಏಕೆ ಆದೇಶ ಮಾಡಿದ ಎನ್ನುವ ಪ್ರಶ್ನೆ ಸಹಜ. ವಾಮಾಚಾರ ಮಾಡುವವರು ಕೂಡ ಗಾಯತ್ರಿಯನ್ನು ಬಳಸುತ್ತಾರೆ, ಹಿಂದುಮುಂದಾಗಿ. ಅವರು ಮಾಡುವ ಯಜ್ಞ ಯಾಗಗಳು ಒಳ್ಳೆಯದಾದರೂ ಅದರ ಫಲವನ್ನು ಬಳಸುವುದೆಲ್ಲಿ ಎಂದು ನೋಡಬೇಕು.


ರಾವಣನ ತಾಯಿ ಕೈಕಸೆಯ ತಂದೆ ಸುಮಾಲಿ ಆಕೆಯನ್ನು ವಿಶ್ರವಸರ ಬಳಿ ಸಂತಾನ ಪ್ರಾಪ್ತಿಗಾಗಿ ಕಳುಹಿಸುತ್ತಾನೆ. ಮಾಲಿ, ಸುಮಾಲಿ, ಮಾಲ್ಯವಂತ ಈ ಮೂವರು ಸಹೋದರರು ಲೋಕೋಪದ್ರವಕಾರಿಗಳು. ಹರಿಯ ಜೊತೆ ಸೆಣಸಾಡಿ ಸೋತು ಪಾತಾಳ ಸೇರಿ ಮತ್ತೆ ಅಧಿಕಾರ ಪಡೆಯುವ ಆಸೆಯಲ್ಲಿದ್ದಾರೆ. ಅದಕ್ಕೆ ಸಮರ್ಥನಾದವನು ಹುಟ್ಟಿಬರಬೇಕು. ಅದು ರಾಕ್ಷಸರಿಂದ ಸಾಧ್ಯವಿಲ್ಲ, ಹಾಗಾಗಿ ಒಬ್ಬ ಬ್ರಹ್ಮರ್ಷಿಯಿಂದ ಸಂತತಿ ಪಡೆದುಕೊಳ್ಳಲು ಆಕೆಯನ್ನು ಕಳುಹಿಸುತ್ತಾನೆ. ಹಾಗೆ ಹುಟ್ಟಿದವರು ರಾವಣ, ಕುಂಭಕರ್ಣ, ಶೂರ್ಪನಖಿ. ಆಕೆ ವಿಶ್ರವಸರ ಬಳಿ ಹೋಗಿ ಪ್ರಸ್ತಾಪಿಸಿದಾಗ ಅವರು ಒಪ್ಪಿಗೆಯನ್ನಿತ್ತು "ನೀನು ಬಂದು ಕೇಳಿದ ಸಮಯ ಘೋರವಾಗಿರುವುದರಿಂದ ಮಕ್ಕಳು ಕೂಡ ಘೋರರಾಗಿ, ಲೋಕಕಂಟಕರಾಗಿರುತ್ತಾರೆ" ಎಂದು ಹೇಳುತ್ತಾರೆ. ಆಕೆ ಅಂಗಲಾಚಿ ತನಗೆ ಒಳ್ಳೆಯ ಮಕ್ಕಳನ್ನು ಕೊಡುವಂತೆ ಬೇಡಿದಾಗ ವಿಶ್ರವಸರು "ನಿನಗೆ ಧರ್ಮಾತ್ಮ, ಸತ್ಯವಂತನಾದ ಒಬ್ಬ ಮಗನನ್ನು  ಕರುಣಿಸುತ್ತೇನೆ" ಎಂದರು. ಅವನು ವಿಭೀಷಣ. ಇದರ ಅರ್ಥ ಏನೆಂದರೆ ರಾವಣನಿಗೆ ಶಕ್ತಿ ರಾಕ್ಷಸರಿಂದಲ್ಲ ಬ್ರಹ್ಮರ್ಷಿಗಳ ಕುಲದಿಂದ, ಆದರೆ ಬುದ್ಧಿ ರಾಕ್ಷಸ ಕುಲದಿಂದ. 


ಭಂಡಾಸುರ ಮಾತ್ರವಲ್ಲ ಹಲವು ರಾಕ್ಷಸರು ಯಜ್ಞ ಯಾಗಗಳನ್ನು ಮಾಡುತ್ತಿದ್ದರು. ರಾವಣ, ಪ್ರಹಸ್ತ ಹಾಗೂ ಅವರ ಬಳಗವೆಲ್ಲ ಯುದ್ಧಕ್ಕೆ ಹೊರಡುವ ಮೊದಲು ಸ್ನಾನ, ಅನುಷ್ಠಾನ ಮಾಡಿ, ಯಜ್ಞ ಮಾಡಿ, ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯುತ್ತಿದ್ದರು. ಎಷ್ಟರ ಮಟ್ಟಿಗೆ ಅಂದರೆ ಅವರ ಯಜ್ಞಾಹುತಿಯ ಘಮ ಯುದ್ಧ ಭೂಮಿಯವರೆಗೆ ಬರುವಂತೆ. ರಾಕ್ಷಸರಿಗೆ ಶಕ್ತಿ ಅಲ್ಲಿಂದಲೇ ಬೇಕು. ಆದರೆ ದುರ್ಬಳಕೆ. 


ಹನುಮಂತ ಅಶೋಕವನದಲ್ಲಿರುವಾಗ ಬೆಳಗಿನಜಾವ ರಾವಣ ಏಳುವ ಸಮಯ. ಅವನು ಏಳುವಾಗ ಹನುಮಂತನಿಗೆ ವೇದಘೋಷ ಕೇಳಿತಂತೆ. ವೇದ ಬಲ್ಲವರು, ಮಹಾ ಯಾಗಗಳನ್ನು ಮಾಡಿಸಬಲ್ಲ 'ಬ್ರಹ್ಮ ರಾಕ್ಷಸರು' ಮಾಡಿದ ವೇದಘೋಷ ಕೇಳಿಬಂದಿತು. ಬ್ರಹ್ಮ ರಾಕ್ಷಸರು ಎಂದರೆ ರಾಕ್ಷಸರಲ್ಲ ಬ್ರಾಹ್ಮಣರೇ. ಆದರೆ ರಾಕ್ಷಸರಿಗೆ ಆಶೀರ್ವಾದ ಮಾಡಿ ಶಕ್ತಿ ತುಂಬುವವರಾದ್ದರಿಂದ ಅವರು ಬ್ರಹ್ಮ ರಾಕ್ಷಸರು. ಬೇರೆಯವರ ಯಜ್ಞ, ಯಾಗ, ತಪಸ್ಸುಗಳನ್ನು ಭಂಗ ಮಾಡುವ ಪ್ರಸಿದ್ಧಿ ರಾವಣನದು, ಆದರೆ ಅವನ ಸ್ವಂತಕ್ಕೆ ಅದೆಲ್ಲವೂ ಬೇಕು. 


ರಾವಣನಿಗೆ ಯುದ್ಧ ಪೂರ್ವದಲ್ಲಿ ವಿಭೀಷಣ ಬುದ್ಧಿ ಹೇಳುವ ಸಂದರ್ಭವಿದೆ. ಅವನು ರಾವಣನ ಮನೆಯನ್ನು ಪ್ರವೇಶ ಮಾಡುವಾಗ ಪುಣ್ಯಘೋಷಗಳು ಕೇಳಿಬರುತ್ತಿತ್ತು. ಹಾಗೆಯೇ ಸ್ವರ್ಣ ಪಾತ್ರೆಗಳನ್ನು ಪೂಜಾ ಕಾರ್ಯಕ್ಕಾಗಿ ಬ್ರಾಹ್ಮಣರಿಗೆ ದಾನ ಕೊಡುವುದಕ್ಕಾಗಿ ಸೇರಿಸಿಟ್ಟಿದ್ದರು. ವಿಭೀಷಣ ಲಂಕೆಯಲ್ಲಿ ಆಗಿರುವ ಅಪಶಕುನಗಳ ಬಗ್ಗೆ ಹೇಳಲು ಹೊರಟಿರುತ್ತಾನೆ. ಅದರ ಪಟ್ಟಿಯಲ್ಲಿ ಇದ್ದ ಕೆಲವು ಅಂಶಗಳು, "ನಮ್ಮ ಅಗ್ನಿ ಶಾಲೆಗಳಲ್ಲಿ ಹಾವುಗಳು ಸೇರಿಕೊಳ್ಳುತ್ತಿದೆ. ವೇದಾಧ್ಯಯನ ಮಾಡುವಲ್ಲಿಯೂ ಅಂತಹ ಪ್ರಾಣಿಗಳು ಪ್ರವೇಶ ಮಾಡುತ್ತಿವೆ. ಹಾಗೆಯೇ ಹೋಮಕ್ಕೆ ಬಳಸುವ ಹವಿಸ್ಸುಗಳಲ್ಲಿ ಇರುವೆಗಳು ಮಾತ್ರವಲ್ಲದೆ ಹೋಮ ನಡೆಯುವಾಗ ಬೆಂಕಿಯ ಕಿಡಿ ಬರುತ್ತಿದೆ." ಇದೆಲ್ಲ ಲಂಕೆಯಲ್ಲಿ ಎಷ್ಟು ಹೋಮ ಹವನಗಳು, ಪೂಜಾ ವಿಧಿಗಳು ನಡೆಯುತ್ತಿತ್ತು ಎನ್ನುವುದನ್ನ ತೋರಿಸುತ್ತವೆ. 


ಹಾಗಂತ ರಾವಣ ಒಳ್ಳೆಯವನೋ? ಖಂಡಿತವಾಗಿಯೂ ಇಲ್ಲ. ಇವತ್ತು ಕೂಡ ನಾವು ಇದನ್ನ ಕಾಣಬಹುದು. ದೊಡ್ಡ ದೊಡ್ಡ ರಾಜಕಾರಣಿಗಳು ವೇದಗಳನ್ನು, ಶಾಸ್ತ್ರ, ದೇವರು, ಪರಂಪರೆಯನ್ನು ದೂಷಣೆ ಮಾಡುತ್ತಾರೆ ಇಲ್ಲವೇ ದೂರವಿರುತ್ತಾರೆ. ಆದರೆ ಖಾಸಗಿಯಾಗಿ ಅವರಷ್ಟು ಹೋಮ ಹವನ ಮಾಡುವವರಿಲ್ಲ. ಹೀಗೆ ಧರ್ಮಾಚರಣೆಗಳು ರಾಕ್ಷಸರಿಗೆ ಶಕ್ತಿ ಕೊಡುತ್ತಿದ್ದವು, ಅದು ದುರುಪಯೋಗವಾಗುತ್ತಿತ್ತು. ಹಾಗಾಗಿ ಅದನ್ನು ಬೇರಿನಲ್ಲಿಯೇ ಕತ್ತರಿಸುವ ಉದ್ದೇಶ. ಚಾಣಕ್ಯನ ಮಾರ್ಗವಿದು. ಹಾಗಾಗಿ ಮಾಯಾಶಕ್ತಿಯನ್ನು ಕೇಶವ ಪುನರವತರಿಸಿದ.  


ಇದಕ್ಕೆ ಎರಡು ಪ್ರಯೋಜನಗಳು. ತಾತ್ಕಾಲಿಕವಾದದ್ದು ಲಕ್ಷ್ಯ ಒಂದು ಸಾರಿ ಆ ಕಡೆ ಹೋದರೆ ಸಾತ್ವಿಕರಿಗೆ ಉಸಿರಾಡಲು ಜಾಗ ಸಿಗುತ್ತದೆ. ಶಾಶ್ವತವಾದ ಪ್ರಯೋಜನ ಆತನ ಸಂಹಾರ. ಮೋಹಿನಿ ಕುರಿತು ಹರಿ "ನಿನ್ನ ದೃಷ್ಟಿಯ ಸೆಳೆತವನ್ನು ಗೆಲ್ಲುವ ಶಕ್ತಿ ಸಾಮಾನ್ಯ ಜೀವಿಗಳಿಗೆ ಇಲ್ಲವೇ ಇಲ್ಲ. ಹಾಗಾಗಿ ಈ ಸಾಮರ್ಥ್ಯವನ್ನು ಬಳಸಿ ದೇವತೆಗಳನ್ನು, ಲೋಕವನ್ನು ರಕ್ಷಣೆ ಮಾಡು. ಅದಕ್ಕಾಗಿ ಹಿಮಾಲಯ ತಪ್ಪಲಿಗೆ ತೆರಳು ಹಾಗು ಕೇವಲ ಭಂಡಾಸುರ ಮಾತ್ರವಲ್ಲ ಆತನ ಅನುಚರರೂ ಮೋಹಗೊಳ್ಳುವಂತೆ ಮಾಡು" ಎಂದು ಹೇಳಿದ. ಏಕೆಂದರೆ ಅವರು ಕೂಡ ಈ ಕರ್ಮಗಳನ್ನು ಮಾಡದೆ ಇರಲಿ ಎನ್ನುವ ಕಾರಣದಿಂದ. ಅವರು ಈತನನ್ನು ಪುನಃ ದಾರಿಗೆ ತರಬಹುದು. ಮಂತ್ರಿಗಳಿಗೆ ರಾಜನನ್ನು ದಾರಿಗೆ ತರುವ ಜವಾಬ್ದಾರಿಯಿದೆ. ಹಾಗಾಗಿ ಅವರೂ ಕೆಟ್ಟರೆ ಅದಕ್ಕೆ ಅವಕಾಶವಿಲ್ಲ. ಇದನ್ನು ಮಾಡಲು ಮೋಹಿನಿ ಒಬ್ಬಳ ಬಳಿ ಸಾಧ್ಯವಿಲ್ಲ. ಹಾಗಾಗಿ ಆಕೆ ತನಗೊಂದು ಪರಿವಾರ ಬೇಕೆಂದು ಕೋರಿದಳು. ಶ್ರೇಷ್ಠ ಅಪ್ಸರೆಯರಾದ ಘರಿತಾಚಿ, ವಿಶ್ವಾಚೆ ಮೊದಲಾದವರ ಕರೆದು ಕಳುಹಿಸುತ್ತಾನೆ. ರಾಕ್ಷಸರು ಅಪ್ಸರೆಯರನ್ನು ಕಾಣದವರಲ್ಲ. ಆದರೆ ಮೋಹಿನಿಯ ಜೊತೆ ಅವರ ಶಕ್ತಿ ಅಧಿಕ. 


ಮೋಹಿನಿ ಅವರೆಲ್ಲರ ಕೂಡಿ ಮಾನಸ ಸರೋವರದ ತೀರಕ್ಕೆ ಹೋಗುತ್ತಾಳೆ. ಭಂಡಾಸುರ ವಿಹರಿಸುವ ತಾಣವದು. ತಪಸ್ಸು ಮಾಡುವಂತಹ ಜಾಗದಲ್ಲಿ ಆತನ ಲೀಲಾವಿಲಾಸ, ಭೋಗವೈಭವ ನಡೆಯುತ್ತಿರುತ್ತದೆ. ಆ ಪರಿಸರಕ್ಕೆ ಮೋಹಿನಿ ಹೋಗುತ್ತಾಳೆ. ಮಾನಸ ಸರೋವರದ ಪಕ್ಕದಲ್ಲಿ ಮಾನಸವವನ್ನು ಕದಡುವಂತಹ ಕೆಲಸ ಆಗುತ್ತಿರುತ್ತದೆ. "ಯತ್ರ ಕ್ರೀಡತಿ ದೈತ್ಯೇಂದ್ರಹ ನಿಜನಾರೀಭಿರನ್ವಿತಃ". ಭಂಡಾಸುರ ತನ್ನ ನಾಲ್ವರು ಪತ್ನಿಯರೊಂದಿಗೆ ಅಲ್ಲಿ ಬಂದು ವಿಹರಿಸುತ್ತಿರುತ್ತಾನೆ. ಮೋಹಿನಿ ಅಲ್ಲಿಗೆ ತೆರಳಿ, ಸಂಪಿಗೆ ಮರದ ಬುಡದಲ್ಲಿ ಕುಳಿತು ವೀಣೆಯನ್ನು ನುಡಿಸುತ್ತಾಳೆ ಮತ್ತು ರಮ್ಯವಾಗಿ, ರಮಣೀಯವಾಗಿ ಹಾಡುತ್ತಾಳೆ. ಅದು ಆಮಂತ್ರಣ. ಭಂಡಾಸುರನನ್ನು ಆಮಂತ್ರಿಸುವುದು. ನಾವು ಪೂಜೆ ಮಾಡುವಾಗ ಮೊದಲು ಘಂಟಾನಾದವನ್ನು ಮಾಡುತ್ತೇವೆ. ದೇವತೆಗಳೇ ಬನ್ನಿ ಎಂದು ದೇವತೆಗಳನ್ನು ಆಮಂತ್ರಿಸುವುದು ಅದು. ಹಾಗೆಯೇ ಈ ಅಸುರನನ್ನು ಆಮಂತ್ರಿಸಲು ವೀಣೆಯನ್ನು ನುಡಿಸುತ್ತಾಳೆ. "ಮಧುರಸ್ವನಂ", ತುಂಬಾ ರಮ್ಯವಾಗಿ ಕಿವಿಗೆ ಇಂಪಾಗಿ ಕೇಳುವಂತೆ ಹಾಡುತ್ತಾಳೆ. ಭಂಡನಿಗೆ ವೀಣಾನಾದವು ಕೇಳಿಸಿತು. ಅದು ಆತನಿಗೆ ತುಂಬಾ ವಿಶೇಷವೆನಿಸಿತು. ಏಕೆಂದರೆ ಆತನಿಗೆ ಗಾಯನ, ವಾದನ ಹೊಸತಲ್ಲ. ಆದರೆ ಈ ಪರಿಯ ಗಾಯನವನ್ನು ಆತ ಎಂದೂ ಕೇಳಿದ್ದಿಲ್ಲ. ಅಲೌಕಿಕವಾದ ಗಾಯನ, ವೀಣಾವಾದನ ಭಂಡಾಸುರನನ್ನು ಅತ್ತ ಸೆಳೆಯಿತು. ಭಂಡಾಸುರ ಮಾತ್ರವಲ್ಲದೇ ಆತನ ಬಳಗ, ಪರಿವಾರದವರಿಗೂ ಸಹ ವಿಶೇಷವೆನಿಸಿತು. ಆ ನಾದ ಎಲ್ಲಿಂದ ತೇಲಿಬರುತ್ತಿತ್ತೋ ಆ ಕಡೆಗೆ ಭಂಡಾಸುರ ಮತ್ತು ಆತನ ಬಳಗ ಮುಂದುವರೆಯುತ್ತಾರೆ. ಮುಂದುವರೆದಲ್ಲಿ ಮಾಯಾಮೋಹಿನಿಯ ದರ್ಶನ. ಬಳಗ ಸಹಿತವಾದ, ನಾರಿಯರ ಘಟಣದಿಂದ ಕೂಡಿರುವಂತಹ  ಮಾಯಾಮೋಹಿನಿಯ ದರ್ಶನ ಮತ್ತು ರಮಣೀಯವಾದ ಸಂಗೀತದ ಶ್ರವಣ. 


ಹಿಂದಿನ ಕಾಲದಲ್ಲಿ ಜಿಂಕೆಗಳನ್ನು ಬೇಟೆಯಾಡುವ ಕ್ರಮವಿತ್ತು. ಅವುಗಳಿಗೆ ಸಂಗೀತ ಬಹಳ ಪ್ರಿಯವಂತೆ. ಅತ್ಯಂತ ಸುಂದರವಾಗಿ ಹಾಡಿದರೆ ಅವು ಬೇರೆ ಎಲ್ಲವನ್ನೂ ಮರೆತು ಆಕಡೆಗೆ ಬರುತ್ತಿತ್ತಂತೆ. ಆದ್ದರಿಂದ ಪಂಚೇಂದ್ರಿಯಗಳಲ್ಲಿ ಒಂದೊಂದು ಇಂದ್ರಿಯಗಳೂ ಒಂದೊಂದು ಪ್ರಾಣಿಯ ಅವಸಾನಕ್ಕೆ ಕಾರಣವೆನ್ನುತ್ತಾರೆ.


ಉದಾಹರಣೆಗೆ ಪತಂಗ, ಅದು ನೇತ್ರೇಂದ್ರಿಯ. ಅದಕ್ಕೆ ಪ್ರಜ್ವಲಿಸುವ ದೀಪವು ಕಾಣುತ್ತದೆ. ಆ ಕಣ್ಣೆ ಅದಕ್ಕೆ ಸಾವು. ಮಧುಕರ, ಅದು ಪರಿಮಳದ ಆಕರ್ಷಣೆಗೆ ಒಳಗಾಗುತ್ತದೆ. ಅದು ಹೋಗಿ ಕಮಲದೊಳಗೆ ಕುಳಿತುಕೊಂಡಾಗ ಸಮಯ ಕಳೆದಿದ್ದು ತಿಳಿಯದೇ ಸೂರ್ಯಾಸ್ತವಾದಾಗ ಕಮಲ ಮುಚ್ಚಿಕೊಂಡರೆ ಮುಗಿಯಿತು. ಹೀಗೆಯೇ ಜಿಂಕೆಗೆ ಶ್ರವಣೇಂದ್ರಿಯ. ಇಂಪಾದ ಹಾಡನ್ನು ಕೇಳಿದರೆ ಅದು ಆ ಕಡೆಗೆ ಆಕರ್ಷಿತವಾಗುತ್ತದೆ. ತನ್ನ ಎಚ್ಚರಿಕೆಯನ್ನು ಕಳೆದುಕೊಳ್ಳುತ್ತದೆ. ಆಗ ಅದನ್ನು ಬೇಟೆಯಾಡುತ್ತಾರೆ. ಇದೂ ಹಾಗೆಯೇ ಆಯಿತು. 


ಸೀತೆಯೂ ಸಹ ರಾವಣನನ್ನು ಸಂಹಾರ ಮಾಡಲು ಒಂದು ಗಾಳವಿದ್ದಂತೆ. ಸೀತಾವತಾರ ಏಕೆ ಆಯಿತೆಂದರೆ, ರಾಮಾವತಾರದ ಪ್ರಮುಖ ಉದ್ದೇಶಕ್ಕೆ ಸೀತಾವತಾರವೇ ಕಾರಣ. ಸೀತೆಗೆ ರಾಮಾಯಣದಲ್ಲಿ ಅನೇಕ ಕಾರ್ಯಗಳು ಉಂಟು. ಆಕೆ ಇಲ್ಲದಿದ್ದರೆ ರಾಮಾಯಣವೇ ಇಲ್ಲ. ಹಾಗೆಯೇ ಇಲ್ಲೂ ಸಹ. 


'ಹೊಂಡಕ್ಕೆ ಬಿದ್ದ ಭಂಡ' ಎಂದು. ಹಾಗೆಯೇ ಭಂಡಾಸುರ ಹೊಂಡಕ್ಕೆ ಬಿದ್ದ. ಆತ ಬಂದು ಮೋಹಿನಿಯನ್ನು ನೋಡಿದ. ಬಂದು ನೋಡಿದರೆ ಮುಗಿಯಿತು, ಮತ್ತೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ದೃಷ್ಟಿಪಾಶವೇ ಅಂತಹದ್ದು. ಆದ್ದರಿಂದ "ಮಾಯಾಮೋಹಾಮಹಾರ್ಗತೇ ಪತಿತಃ". ಗರ್ತ ಎಂದರೆ ಹೊಂಡ. ಮಾಯಾಮೋಹವೆಂಬ ಮಹಾಗರ್ತ, ದೊಡ್ಡ ಹೊಂಡದಲ್ಲಿ ಭಂಡಾಸುರ ಬಿದ್ದ. ಆತ ಒಬ್ಬನೇ ಅಲ್ಲ, ಬಳಗ ಸಹಿತವಾಗಿ. ಯೋಜನೆಯ ಮೊದಲನೆಯ ಹಂತವಾಯಿತು. ಅವರೆಲ್ಲರೂ ಕೂಡ ವಶವಾಗಿದ್ದಾರೆ. ಜೊತೆಯಲ್ಲಿರುವವರೆಲ್ಲರೂ ಸಹ ಒಂದೊಂದು ಅಪ್ಸರೆಯರನ್ನು ಆರಿಸಿಕೊಂಡಿದ್ದಾರೆ. 


ಮುಂದೆ ನಡೆದದ್ದು ಒಂದು ದೀರ್ಘಸಂವಾದ. ಭಂಡಾಸುರ ಮೋಹಿನಿಯಲ್ಲಿ ನೀನು ನನ್ನ ಮನೆಗೆ ಬರಬೇಕು, ನನ್ನ ಮಡದಿಯಾಗಬೇಕು ಎಂದು ಹೇಳಿದ. ಇಲ್ಲ ನಾನು ಬರುವುದಿಲ್ಲ ಎಂದು ಮೋಹಿನಿ ಹೇಳಿದಳು. ಈ ಬರುವುದಿಲ್ಲ ಎನ್ನುವುದೂ ಸಹ ಆಕರ್ಷಣೆಯ ಒಂದು ಭಾಗ. ಒಂದೇ ಬಾರಿಗೆ ಒಪ್ಪದೇ, ಸ್ವಲ್ಪ ಆಟವಾಡಿಸಿ ಆತನನ್ನು ಗಟ್ಟಿಮಾಡಿ, ಹೇಳಿದಂತೆ ಕೇಳುವ ಸ್ಥಿತಿಗೆ ತಂದು ಮತ್ತೆ ಹೋಗಬಹುದು ಎಂದು. ಇದನ್ನು ಹೀಗೆಯೂ ಸಹ ಅರ್ಥೈಸಬಹುದು. ಇದನ್ನು ಇನ್ನೊಂದು ಬಗೆಯಲ್ಲಿಯೂ ವ್ಯಾಖ್ಯಾನಿಸಬಹುದು. ಅದೇನೆಂದರೆ ಒಂದು ಅವಕಾಶವನ್ನು ಪ್ರಕೃತಿ ಕೊಟ್ಟಿದೆ ಎಂದು. ಬೇಡ ಬೇಡ ಹೋಗು ಎನ್ನುವಾಗ ಅದೊಂದು ಅವಕಾಶ. ಬೇಡ ಹೋಗು, ನಿನಗೆ ಈ ಸಹವಾಸ ಬೇಡ, ನೀನು ಬೀಳುತ್ತೀಯ ಎಂದು ಮೋಹಿನೀಯೇ ಹೇಳಿದಂತೆ. 


ಹಾಗೆಯೇ ಲಲಿತೋಪಖ್ಯಾನದ ಪ್ರಕಾರ "ತೇನ ದೈತೇಯನಾಥೇಯನ ಚಿರಂ ಸಂಪ್ರಾರ್ಥಿತ ಸತಿ". ಭಂಡಾಸುರ ಬಹುಕಾಲ ಬೇಡಿಕೊಂಡ ಮೇಲೆ, ಅನೇಕ ಬಾರಿ ಪರಿಪರಿಯಾಗಿ ಅನುನಯಿಸಿದ ಮೇಲೆ, ನಾನಾಪ್ರಕಾರವಾಗಿ ಬೇಡಿಕೊಂಡು ಬಹುಕಾಲ ಕಳೆದ ನಂತರ ದೊಡ್ಡ ಅನುಗ್ರಹದ ರೀತಿಯಲ್ಲಿ ಮೋಹಿನಿಯು ಒಪ್ಪಿಗೆ ನೀಡುತ್ತಾಳೆ. ಜೊತೆಯಲ್ಲಿ ಉಳಿದ ಅಪ್ಸರೆಯರೂ ಸಹ ಒಪ್ಪುತ್ತಾರೆ. ಸುಲಭದಲ್ಲಿ ಅವರು ವಶವಾಗಲಿಲ್ಲ. ಈ ಮಾಯಾ-ಮೋಹಗಳೆಲ್ಲಾ ಇಂತದ್ದೇ. ನಾವು ಬೇಕೆಂದರೆ ಅದು ಬೇಡ ಎಂದು ಹೇಳುವಂತದ್ದು, ನಾವು ಬೇಡ ಎಂದರೆ ಅದು ಬೇಕು ಎಂದು ಹೇಳುವಂತದ್ದು. 


ಉದಾಹರಣೆಗೆ ನೆರಳನ್ನು ನೀವು ಹಿಡಿಯಲು ಹೋದರೆ ಅದು ಮುಂದೆ ಮುಂದೆ ಹೋಗುತ್ತಿರುತ್ತದೆ. ಕೊನೆಯವರೆಗೂ ಹಿಡಿಯಲು ಸಿಗುವುದಿಲ್ಲ. ಅಂತೆಯೇ ನೀವು ನೆರಳಿಗೆ ಬೆನ್ನುಹಾಕಿ ಹೋಗುತ್ತಿದ್ದರೆ ಅದು ನಿಮ್ಮ ಹಿಂದೆಯೇ ಬರುತ್ತದೆ. ಬೇಡ ಎಂದು ಹೋದರೆ ನಿಮ್ಮ ಹಿಂದೆಯೇ ಬರುತ್ತದೆ, ಅದೇ ನೀವು ಬೇಕು ಎಂದು ಹೋದರೆ ಸಿಗುವುದಿಲ್ಲ. ಈ ಮಾಯೆಯ ಗುಣ, ಸ್ವಭಾವವೇ ಹೀಗೆ. ಯಾವುದನ್ನು ಬೇಕು ಎಂದು ಹಿಂದೆ ಬೀಳುತ್ತವೆಯೋ ಅದು ನಮ್ಮನ್ನು ಆಟ ಆಡಿಸುತ್ತದೆ, ಸತಾಯಿಸುತ್ತದೆ. ಬೇಡ ಎಂದರೆ ನಮ್ಮ  ಹಿಂದೆಯೇ ಬರುತ್ತದೆ. ಹಾಗೆಯೇ ಇದು. 


ಲಲಿತೋಪಖ್ಯಾನ ಹೇಳುತ್ತದೆ: ಅಶ್ವಮೇಧ ಮೊದಲಾದ ಯಜ್ಞಗಳನ್ನು ಮಾಡಿದರೂ ಸಹ ಈ ನಾರಿಯರನ್ನು ಪಡೆಯುವುದು ಸುಲಭವಲ್ಲ. ಅಂತಹ ವರನಾರಿಯರು ಒಲಿದು ಬಂದರು ಎಂದು ಅಲ್ಲ ಇದು, ಇವರ ಜೊತೆಯಲ್ಲಿ ಬಂದರು ಅಷ್ಟೇ. ಮನಸ್ಸು ಬಂದಿದೆಯೋ ಇಲ್ಲವೋ ಎಂದು ನೋಡಬೇಕು. ಶರೀರ ಮಾತ್ರ ಬಂದರೆ ಸಾಲದು, ಇದು ಪ್ರಮುಖವಾದದ್ದು. ಮನಸ್ಸು ಬಂದರೆ ಒಳ್ಳೆಯದಾಗಬಹುದು, ಮನಸ್ಸು ಬಾರದೇ ಶರೀರ ಮಾತ್ರ ಬಂದರೆ ಮುಂದೆ ಅದರಿಂದ ಕೇಡು ಕಾದಿರುತ್ತದೆ. ಅವಘಡ ನಡೆಯುತ್ತದೆ. ಇಲ್ಲಿ ಮನಸ್ಸು ಬಂದು ಅವರ ಜೊತೆಯಲ್ಲಿ ತೆರಳುತ್ತಿರುವುದಲ್ಲ, ಇದು ಕಾರ್ಯಸಾಧನೆಯ ಸಲುವಾಗಿ. ಇವರನ್ನು ಹಾಳು ಮಾಡುವುದೇ ಕಾರ್ಯ. ಆ ಕಾರ್ಯಕ್ಕಾಗಿ ಜೊತೆಯಲ್ಲಿ ಬರುತ್ತಿರುವುದು. ಹಾಗೆಯೇ ಆ ನಾರಿಯರ ಬಳಗ ಭಂಡಾಸುರನ ಬಳಗದ ಜೊತೆಯಲ್ಲಿ ಶೋಣಿತ ನಗರಕ್ಕೆ ಆಗಮಿಸಿದರು. ಇಲ್ಲಿಗೆ ಭಂಡಾಸುರನ ಹೊಸ ಪತನದ ಅಧ್ಯಾಯ ಪ್ರಾರಂಭವಾಯಿತು. ಈ ಮೋಹದ ಸ್ವಭಾವವೇ ಹಾಗೆ, ಅದು ಬರುವುದೇ ತಿಳಿಯುವುದಿಲ್ಲ. ಆ ಸಮಯದಲ್ಲಿ ನಾನು ಸರಿ ಇದ್ದೇನೆ, ನನಗೆ ಒಳ್ಳೆಯದೇ ಆಗುತ್ತಿದೆ, ನಾನು ಖುಷಿಯಾಗಿದ್ದೇನೆ, ನನ್ನ ಅದೃಷ್ಟ ಎಂದೆಲ್ಲಾ ಅನ್ನಿಸುತ್ತದೆ. ವಾಸ್ತವ ಏನೆಂದರೆ ಬಂದಿರುವುದು ದೊಡ್ಡ ರೋಗ. ಮೃತ್ಯುವಿಗೆ, ನಾಶಕ್ಕೆ ಕಾರಣವಾಗುವಂತಹದ್ದು. ನಾಯಕನೇ ಬಿದ್ದ ಮೇಲೆ ಸೇವಕರು ಬೀಳುವುದು ಸಹಜ. ಹಾಗೆಯೇ ಭಂಡಾಸುರ ಹೊಂಡಕ್ಕೆ ಬಿದ್ದ. ಸಾಲಾಗಿ ಹಿಂದೆ ಇರುವವರೆಲ್ಲರೂ ಬಿದ್ದರು. 'ಯಥಾ ರಾಜ ತಥಾ ಪ್ರಜಾ'. ದೊಡ್ಡವರು ಅತ್ಯಂತ ಜಾಗ್ರತೆಯಿಂದ ಇರಬೇಕು. ಏಕೆಂದರೆ ಅವರ ದಾರಿಯನ್ನು ಉಳಿದವರು ಅನುಸರಿಸುತ್ತಾರೆ. ಅವರು ಮಾಡಿದ್ದನ್ನು ಬೇರೆಯವರೂ ಸಹ ಮಾಡುತ್ತಾರೆ.


ಕೃಷ್ಣ ಒಂದು ಕಡೆ ಹೇಳುತ್ತಾನೆ, "ಲೋಕ ಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸೀ". ಈಗ ಸಾಧನೆಯನ್ನು ಮಾಡಿ ಸಿದ್ಧಿ ಪಡೆದ ಮೇಲೆ ಶಾಸ್ತ್ರಗಳೆಲ್ಲ ಬೇಕಾಗುವುದಿಲ್ಲ. ಈ ಸಂಪ್ರದಾಯಗಳು, ಅನುಷ್ಠಾನಗಳು, ಆಚರಣೆಗಳು ಬೇಕಾಗದೇ ಇರಬಹುದು ಆದರೂ ಸಹ ಮಾಡಬೇಕು. ಏಕೆಂದರೆ ದೊಡ್ಡವರು ಮಾಡಿದ್ದನ್ನು ಉಳಿದವರು ಅನುಸರಿಸುತ್ತಾರೆ. ಅವರು ಮಾಡದೆ ಇದ್ದರೆ ಉಳಿದವರೂ ಸಹ ಮಾಡುವುದಿಲ್ಲ. ಹಾಗಾಗಿ ಯಾರು ದೊಡ್ಡವರೋ ಅವರಿಗೆ ಅಗತ್ಯ ಇಲ್ಲದೇ ಇದ್ದರೂ ಮಾಡಬೇಕಾಗುತ್ತದೆ. ದೊಡ್ಡವರಿಗೆ ತುಂಬಾ ಜಾಗ್ರತೆ ಬೇಕು. 


ವಿಸ್ಮರಣೆ ಪ್ರಾರಂಭವಾಯಿತು. ಭಂಡಾಸುರ ಮತ್ತು ಆತನ ಅನುಚರರು ವೇದವನ್ನು ಮರೆತರು. ವೇದ, ದೇವರನ್ನು ಮರೆತರು. ವೇದ-ದೇವ ಅದು ಒಂದು ನಾಣ್ಯದ ಎರಡು ಮುಖಗಳು. ಒಂದು ಶಬ್ದರೂಪ, ಇನ್ನೊಂದು ಸಾಕಾರ, ಜ್ಯೋತಿರೂಪ, ಅರ್ಥರೂಪ. ಶಬ್ದ ಮತ್ತು ಅರ್ಥ. ಹಾಗಾಗಿ ಇವೆರಡನ್ನೂ ವೇದ ಮತ್ತು ದೇವನನ್ನು ಭಂಡಾಸುರ ಮತ್ತು ಅವನ ಬಳಗ ಮರೆಯಿತು. ವೇದ ಪ್ರೋಕ್ತವಾದ ವಿಧಿ-ವಿಧಾನಗಳನ್ನು, ಯಜ್ಞಯಾಗಾದಿಗಳನ್ನು ಕೂಡಾ ಮರೆತರು. ಗುರುವನ್ನೂ ಮರೆತರು, ತಿರಸ್ಕರಿಸಿದರು. ಒಂದು ಹೆಜ್ಜೆ ಮುಂದೆ ಹೋಗಿ ಇವೆಲ್ಲವನ್ನು ಮರೆತಿದ್ದು ಮಾತ್ರವಲ್ಲದೇ ಶಿವಪೂಜೆಯನ್ನೂ ಬಿಟ್ಟರು. ವೇದಾಧ್ಯಯನ, ಶಾಸ್ತ್ರಾಧ್ಯಯನ, ಯಜ್ಞಯಾಗಾದಿಗಳನ್ನು ಬಿಟ್ಟರು. ಬಿಟ್ಟಿದ್ದು ಮಾತ್ರವಲ್ಲದೇ ಗುರುವನ್ನು ಅಪಮಾನಿಸಿದರು. ಏಕೆ ಅಪಮಾನಿಸಿದರೆಂದರೆ, ಶುಕ್ರಾಚಾರ್ಯರು ಇವರು ದಾರಿ ತಪ್ಪುವುದನ್ನು ಕಂಡಾಗ, ಬುದ್ಧಿ ಹೇಳಿದರು. "ನೀವು ವೇದಗಳನ್ನು ಮರೆಯುತ್ತಿದ್ದೀರಿ, ಶಿವಪೂಜೆಯನ್ನು ಬಿಟ್ಟಿದ್ದೀರಿ ಇದು ಒಳ್ಳೆಯದಲ್ಲ, ಕೇಡು ಕಾದಿದೆ. ಯಜ್ಞಯಾಗಾದಿಗಳನ್ನು ಬಿಟ್ಟಿದ್ದೀರಿ ಇದರಿಂದ ನಿಮ್ಮ ಶ್ರೇಯಸ್ಸಿನ ಮಾರ್ಗ ಮುಚ್ಚಿಹೋಗುತ್ತಿದೆ. ನೀವು ಈ ನಾರಿಯರ ಹಿಂದೆ ಬಿದ್ದಿದ್ದೀರಿ, ದಾರಿ ತಪ್ಪಿದ ಕಾಮ ಒಳ್ಳೆಯದಲ್ಲ" ಎಂದು. ಕಾಮದಲ್ಲಿ ಎರಡು ಬಗೆ. ಒಂದು ಪುರುಷಾರ್ಥದಲ್ಲಿ ಬರುವ ಧರ್ಮ, ಅರ್ಥ, ಕಾಮ, ಮೋಕ್ಷ. ಇದು ಧರ್ಮ ಮತ್ತು ಮೋಕ್ಷದ ನಡುವೆ ಇರುವಂತಹದ್ದು. ಇನ್ನೊಂದು ಷಡ್ವೈರಿಗಳ ಜೊತೆಯಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. ಆ ಕಾಮ ಕೇಡು, ಅದು ವೈರಿ. ಹಾಗಾಗಿ ಅಂತಹ ಕಾಮಕ್ಕೆ ನೀವು ಬೀಳುತ್ತಿದ್ದೀರಿ ಇದು ಒಳ್ಳೆಯದಲ್ಲ ಎಂದು ಗುರುಗಳಾದ ಶುಕ್ರಾಚಾರ್ಯರು ಹೇಳಿದಾಗ ಇವರಿಗೆ ಕೋಪ ಬಂದಿತು. ಅದು ಹಾಗೆಯೇ. ಇದೆಲ್ಲಾ ನಾವು ಮೋಹಕ್ಕೆ ಒಳಗಾದ ಲಕ್ಷಣಗಳು. ಯಾರಾದರೂ ತಿಳಿದವರು ಬಂದು ನಮಗೆ ಬುದ್ಧಿ ಹೇಳಿದಾಗ ಅವರ ಮೇಲೆ ಕೋಪ ಬರುತ್ತದೆ. ಅವರು ಶತ್ರು ಎನ್ನಿಸುತ್ತದೆ. ಅವರ ಮೇಲೆ ದ್ವೇಷ ಬರುತ್ತದೆ. ಮೋಹ ಮುಸುಕಿದಾಗ, ಮಾಯೆಯು ನಮ್ಮನ್ನು ವಶಕ್ಕೆ ತೆಗೆದುಕೊಂಡಾಗ ಬುದ್ಧಿ ಹೇಳಿದವರು ಶತ್ರುಗಳಾಗುತ್ತಾರೆ. ನಾವು ಬುದ್ಧಿ ಹೇಳಿದವರನ್ನು ಅಪಮಾನಿಸುತ್ತೇವೆ. ದೂರ ಮಾಡುತ್ತೇವೆ. ಕೆಡುವಕಾಲ ಬಂದಾಗ ಈ ಹಿತೋಪದೇಶ ರುಚಿಸುವುದಿಲ್ಲ. ಸಂಸ್ಕೃತದಲ್ಲಿ, ಪುರಾಣ, ರಾಮಾಯಣ ಮೊದಲಾದವುಗಳಲ್ಲಿ ಮತ್ತೆ ಮತ್ತೆ ಬರುವ ಒಂದು ಮಾತು "ಮರ್ತು ಕಾಮ ಇವ ಓಷಧಂ" ಸಾವು ನಿಶ್ಚಿತ. ಒಬ್ಬನ ಆಯಸ್ಸು ಮುಗಿಯುತ್ತಿದ್ದರೆ ಅವನಿಗೆ ವೈದ್ಯ ಬೇಡ, ಚಿಕಿತ್ಸೆ ಬೇಡ, ಔಷಧ ಬೇಡ ಎನಿಸುವುದೆಂದರೆ ಅದು ಸಾವಿನ ಚಿಹ್ನೆ, ಸಾವಿನ ಕುರುಹು. ಹೀಗಾಗಿ ಉಳಿದ ಶುಭಗಳನ್ನು ತ್ಯಾಗ ಮಾಡಿದರು. ಪರಮಶುಭನಾದ ಗುರುವನ್ನು ಅಪಮಾನಿಸಿದರು, ತಿರಸ್ಕರಿಸಿದರು. "ಅವಮಾನಾಹತಶ್ಚಾಸೀತ್ ತೇಷಾಮಭಿಪುರೋಹಿತಃ" ಶುಕ್ರಾಚಾರ್ಯರು ಅವಮಾನದಿಂದ ಆಹತರಾದರು. ಅವರಿಗೆ ಪೆಟ್ಟಾಯಿತು, ನೋವಾಯಿತು. ಗುರುವಿನ ಆಶೀರ್ವಾದ ಇಲ್ಲವೆಂದಾದರೆ ಅಲ್ಲಿಗೆ ಮುಗಿಯಿತು. ದೊಡ್ಡ ರಕ್ಷಣೆ ಹೋಯಿತು ಎಂದರ್ಥ. ಶರೀರದ ಒಳಗೆ ರೋಗನಿರೋಧಕ ಶಕ್ತಿಗಳು, ಜೀವಾಣುಗಳು ಇರುತ್ತವೆ. ಅವುಗಳು ಇಲ್ಲ ಎಂದಾದರೆ ಮನುಷ್ಯ ಸಾಯುತ್ತಾನೆ ಎಂದಲ್ಲದಿದ್ದರೂ, ಜ್ವರ ಬಂದರೂ, ಸಣ್ಣ ಕಾಯಿಲೆ ಬಂದರೂ ಸಾಯಬಹುದು. ಏಕೆಂದರೆ ಕೆಡುಕು ಶರೀರವನ್ನು ಪ್ರವೇಶಿಸಿದಾಗ ಅದರ ವಿರುದ್ಧ ಹೊರಾಡತಕ್ಕಂತಹ ಜೀವಾಣುಗಳು ಇರುವುದಿಲ್ಲ. ಹಾಗಾಗಿ ಗುರುವಿನ ಕರುಣೆ ತಪ್ಪಿತೆಂದರೆ ರಕ್ಷಣೆ ತಪ್ಪಿತು ಎಂದರ್ಥ. ಹಾಗಾಗಿ ಗ್ರಹಗಳಲ್ಲಿ ಕೂಡ 'ಗುರು' ಎಂದೂ ಕೆಡುಕು ಮಾಡುವುದಿಲ್ಲ. ಬೇರೆ ಗ್ರಹಗಳು ಮಾಡುತ್ತವೆ. ಶನಿ, ಕುಜ ನೋಡಿದರೆ ಅಥವಾ ಆ ಭಾವಕ್ಕೆ ಬಂದರೆ ನೇರವಾಗಿ ಕೆಡುಕು ಮಾಡುತ್ತವೆ. ಆದರೆ ಗುರುವಿನದ್ದು ಹಾಗಲ್ಲ. ಗುರುದೃಷ್ಟಿ ಇಲ್ಲದಿರುವಾಗ ನಿಮಗೆ ಗುರುಕೃಪೆಯ ರಕ್ಷಾಕವಚ ಸಿಗುವುದಿಲ್ಲ. ಕುಜನ ದೃಷ್ಟಿ, ಶನಿಯ ದೃಷ್ಟಿ ಇದ್ದೇ ಇದೆ. ಅವು ಕೆಡುಕನ್ನು ಮಾಡುತ್ತವೆ. ಆ ಸಮಯದಲ್ಲಿ ರಕ್ಷಣೆಯಿಲ್ಲ.


ಅದು ಒಂದಾದರೆ ಇನ್ನೊಂದೆಡೆ ಗುರುವಿಗೆ ನೋವಾಗಿದೆ, ಅವಮಾನವಾಗಿದೆ. ನೊಂದವರು ಶಪಿಸುವುದು ಬೇಡ, ಆ ನೋವೇ ಗಂಡಾಂತರಕ್ಕೆ ಕಾರಣವಾಗುವಂತಹದ್ದು. ಅದು ಆಗಿಯೇ ಹೋಯಿತು. ಹೀಗೆ ವೇದಗಳ, ಯಜ್ಞಗಳ, ಶುಭಕರ್ಮಗಳ ವಿಸ್ಮರಣೆ, ಶಿವನ ವಿಸ್ಮರಣೆ, ಗುರುವಿನ ವಿಸ್ಮರಣೆ ಮಾತ್ರವಲ್ಲ ಗುರುವಿಗೆ ಅಪಮಾನವೂ ನಡೆದೇ ಹೋಯಿತು. 


ಮತ್ತೆ ಎಂಟುನೂರು ವರ್ಷಗಳು ಕಳೆದವು. ಅಲ್ಲಿಯವರೆಗೆ ಚೆನ್ನಾಗಿಯೇ ಇದ್ದರು. ಅದು ಹೇಗೆ ಚೆನ್ನಾಗಿದ್ದರೆಂದರೆ ಅದು ಹಳೆಯ ಪುಣ್ಯ. ಇಂಜಿನ್ ನಿಲ್ಲಿಸಿದ ಬಳಿಕವೂ ಹಳೆಯ ವೇಗದ ಪರಿಣಾಮವಾಗಿ ಸ್ವಲ್ಪದೂರ ಮುಂದೆ ಚಲಿಸುವ ವಾಹನದಂತೆಯೇ ಒಂದು ಸ್ವಲ್ಪ ಕಾಲ ಮತ್ತೆಯೂ ಕೂಡ ರಾಕ್ಷಸರ ರಥ ನಡೆಯಿತು.

   

ಹೀಗೆಯೇ ಭಂಡಾಸುರನ ಪೀಡಿಗೆ ಒಂದು ತಡೆಯಾಜ್ಞೆ ಬಂತು. ಇಲ್ಲಿ ಪ್ರಕರಣ ಪೂರ್ತಿ ಇತ್ಯರ್ಥ ಆಗಲಿಲ್ಲ. ನ್ಯಾಯಾಲಯದ ಭಾಷೆಯಲ್ಲಿ ಹೇಳುವುದಾದರೆ ಎರಡು ಕ್ರಮ ಇದೆ. ಒಂದು ತಾತ್ಕಾಲಿಕವಾಗಿ ತಡೆಯಾಜ್ಞೆ ಸಿಗುವಂತಹದ್ದು. ಸದ್ಯಕ್ಕೆ ಸಮಾಧಾನ ಎನ್ನುವಂತಹದ್ದು. ಇನ್ನೊಂದು ಪ್ರಕರಣ ಪೂರ್ತಿ ಇತ್ಯರ್ಥ ಆಗುವಂತಹದ್ದು. ಇದು ಪ್ರಕರಣ ಇತ್ಯರ್ಥವಾಗಿದ್ದಲ್ಲ, ತಡೆಯಾಜ್ಞೆ ಬಂದದ್ದು. ಮೋಹಿನಿಯ ರೂಪದಲ್ಲಿ. ಹೀಗಾಗಿ ದೇವತೆಗಳು ಉಸಿರಾಡುವಂತಾಯಿತು. ದೇವತೆಗಳು ಸ್ವತಂತ್ರರಾದರು. ಅವರಿಗೆ ತಮ್ಮ ಉತ್ಕರ್ಷಕ್ಕೆ, ತಮ್ಮ ಮೊದಲನೇ ಸ್ಥಿತಿಯ ಪುನಃಪ್ರಾಪ್ತಿಗೆ ಬೇಕಾದಂತಹ ಪ್ರಯತ್ನ ಮಾಡಲು ಒಂದು ಅವಕಾಶ ಸಿಕ್ಕಿತು. ಈ ಅವಕಾಶವನ್ನು ಬಳಸಿಕೊಂಡರೆ ಶಾಶ್ವತ ಪರಿಹಾರಕ್ಕೆ ಪೀಠಿಕೆ ಆಗಬಹುದು. ಹಾಗಾಗಿ ದೇವತೆಗಳು ಒಮ್ಮೆ ನಿರಾಳರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top