- 80ನೆಯ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಪನ್ನ
- ಅಧ್ಯಕ್ಷರಾಗಿ ಡಾ. ಕಜೆ 9 ನೆಯ ಬಾರಿಗೆ ಪುನರಾಯ್ಕೆ
ಬೆಂಗಳೂರು: ಮುಂದಿನ ವರ್ಷ (2024) ಡಿಸೆಂಬರ್ನಲ್ಲಿ 3ನೆಯ ವಿಶ್ವಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಅಮೇರಿಕ, ಸಿಂಗಾಪುರ ಹಾಗೂ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿಯೂ ಪೂರ್ವಭಾವಿ ಸಮ್ಮೇಳನವನ್ನು ಸಂಘಟಿಸಲು ಆಲೋಚಿಸಲಾಗಿದೆ ಎಂದು ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಡಾ.ಗಿರಿಧರ ಕಜೆಯವರು ಉದ್ಘೋಷಿಸಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 80ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಡಾ.ಕಜೆಯವರು, ವಿಶ್ವಹವ್ಯಕ ಸಮ್ಮೇಳನದ ಪೂರ್ವಭಾವಿಯಾಗಿ ಹವ್ಯಕ ನ್ಯಾಯವಾದಿಗಳ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ, ಹವ್ಯಕ ಸಂಗೀತ ಉತ್ಸವ, ಹವ್ಯಕ ಯಕ್ಷಗಾನ ಉತ್ಸವ, ಹವ್ಯಕ ವೈದೀಕ ಸಮಾವೇಶ, ಗಾಯತ್ರೀ ಮಹೋತ್ಸವ, ಸಂಸ್ಕಾರೋತ್ಸವ, ಹವ್ಯಕ ಸಾಹಿತ್ಯ- ಭಾಷಾ ಸಮಾವೇಶ, ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶ ಮುಂತಾದವುಗಳು ವರ್ಷಪೂರ್ತಿ ನಡೆಯಲಿದ್ದು, ಸಮಾಜವನ್ನು ಆ ಮೂಲಕ ಜಾಗೃತಗೊಳಿಸಲಾಗುವುದು ಎಂದರು.
ಹವ್ಯಕ ಸಮಾಜ ಜನಸಂಖ್ಯಾದೃಷ್ಟಿಯಲ್ಲಿ ಅತಿಚಿಕ್ಕ ಸಮಾಜವಾದರೂ, ನಾವು ಸಂಘಟಿತವಾದರೆ ಎಲ್ಲವೂ ಸಾಧ್ಯ. ಸಂಘಟನೆಗೆ ಅದ್ಭುತವಾದ ಶಕ್ತಿಯಿದ್ದು, ಇನ್ನಷ್ಟು ಸಂಘಟಿತವಾಗುವ ಮೂಲಕ ಸಮಾಜವನ್ನು ಸಶಕ್ತವಾಗಿಸೋಣ ಎಂದು ಕರೆನೀಡಿದರು.
ಅಡಿಕೆ ಎಲೆಚುಕ್ಕಿ ರೋಗ: ಅಡಿಕೆ ಹವ್ಯಕರ ಪಾರಂಪರಿಕ ಕೃಷಿಯಾಗಿದ್ದು, ಪ್ರಸ್ತುತ ಅಡಿಕೆ ಎಲೆಚುಕ್ಕಿ ರೋಗ ಕೃಷಿಕರನ್ನು ಬಾಧಿಸುತ್ತಿದೆ. ಸಮಾಜದ ಕಷ್ಟಕ್ಕೆ ಮಹಾಸಭೆ ಸರ್ವದಾ ಸ್ಪಂದಿಸಲಿದ್ದು, ಹವ್ಯಕ ಕೃಷಿಕರ ಸಮಾವೇಶವನ್ನು ಆಯೋಜಿಸಿ, ಕೃಷಿಕರ ಜೊತೆಗೆ ಕೃಷಿ ವಿಜ್ಞಾನಿಗಳ ಸಂವಾದವನ್ನು ನಡೆಸಿ ಸಮಕಾಲೀನ ಸವಾಲುಗಳಿಗೆ ಉತ್ತರಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.
ಹವ್ಯಕ ಮಹಾಸಭೆಯ ಸಮಾಜಮುಖೀ ಕಾರ್ಯವನ್ನು ಗುರುತಿಸಿ ಮಂಜುನಾಥ ಬಿಲ್ಲವ ಅವರು ಭಟ್ಕಳ ಸಮೀಪ ದುರ್ಗಾಪರಮೇಶ್ವರೀ ದೇವಾಲಯ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ದಾನರೂಪದಲ್ಲಿ ನೀಡಿದ್ದು, ಇಲ್ಲಿ ನವರಾತ್ರಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸಭೆಯನ್ನು ನಡೆಸಿ; ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.
ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ; ಖರ್ಚುವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಬೇರೆಬೇರೆ ಪ್ರಾಂತಗಳ ನಿರ್ದೇಶಕರು - ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.
~~~~~~~
ಡಾ.ಕಜೆ 9ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆ
ಡಾ.ಗಿರಿಧರ ಕಜೆಯವರು ಮಹಾಸಭೆಯ ಅಧ್ಯಕ್ಷರಾಗಿ 9 ನೆಯ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು.
ನೂತನ ಆಡಳಿತ ಮಂಡಳಿ:
ನಿರ್ದೇಶಕರ ಸಭೆಯಲ್ಲಿ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ಆಡಳಿತ ಮಂಡಳಿ
ಡಾ. ಗಿರಿಧರ ಕಜೆ - ಅಧ್ಯಕ್ಷರು
ಆರ್ ಎಂ ಹೆಗಡೆ - ಉಪಾಧ್ಯಕ್ಷರು
ಶ್ರೀಧರ ಜೆ ಭಟ್ಟ ಕೆಕ್ಕಾರು - ಉಪಾಧ್ಯಕ್ಷರು
ಸಿಎ. ವೇಣುವಿಘ್ನೇಶ ಸಂಪ - ಪ್ರಧಾನ ಕಾರ್ಯದರ್ಶಿ
ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ - ಕಾರ್ಯದರ್ಶಿ
ಆದಿತ್ಯ ಹೆಗಡೆ ಕಲಗಾರು - ಕಾರ್ಯದರ್ಶಿ
ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ - ಕೋಶಾಧಿಕಾರಿ
ಇದಕ್ಕೂ ಮೊದಲು ವಿವಿಧ ಪ್ರಾಂತ್ಯಗಳ 15 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ