ಬೆಂಗಳೂರು ಕಂಬಳದ ವ್ಯವಸ್ಥಿತ ಆಯೋಜನೆಗೆ ಎಲ್ಲ ರೀತಿಯ ಸಿದ್ಧತೆ: ಶಾಸಕ ಅಶೋಕ್ ಕುಮಾರ್ ರೈ

Upayuktha
0


ಪುತ್ತೂರು: ನವೆಂಬರ್ 25-26ರಂದು ರಾಜಧಾನಿ ಬೆಂಗಳೂರಿನಲ್ಲಿ 'ಬೆಂಗಳೂರು ಕಂಬಳ-ನಮ್ಮ ಕಂಬಳ' ವಿಜೃಂಭಣೆಯಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ. ಅದಕ್ಕೆ ಎಲ್ಲ ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ. ಮೊನ್ನೆಯಷ್ಟೇ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ದೇವಿಯ ಆಶೀರ್ವಾದವನ್ನು ಬೇಡಿದ್ದೇವೆ. ಇವತ್ತು ಸೀಮೆಯ ದೇವರಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಆಶೀರ್ವಾದವನ್ನು ಬೇಡಿದ್ದೇವೆ ಎಂದು ಕಂಬಳದ ರೂವಾರಿ, ಶಾಸಕ ಅಶೋಕ್‌ ಕುಮಾರ್ ರೈ ತಿಳಿಸಿದರು.


ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. 

 

ಕರಾವಳಿ ಜಿಲ್ಲೆಗಳ ಜಾನಪದ ಕ್ರೀಡೆ ಕಂಬಳವನ್ನು ಮತ್ತು ಕಂಬಳದ ವೈಭವವನ್ನು ರಾಜ್ಯದ ರಾಜಧಾನಿಯ ಜನರ ಮುಂದೆ ತೆರೆದಿಡುವ ಮೂಲಕ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಕಂಬಳವನ್ನು ಆಯೋಜಿಸಲಾಗುತ್ತಿದೆ. ಅದು ವಿಜೃಂಭಣೆಯಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯಲಿಕ್ಕಿದೆ. ಮೊದಲನೆಯದಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹವನ್ನು ಪಡೆದುಕೊಳ್ಳಲು ವಿಶೇಷ ಪ್ರಾರ್ಥನೆ, ಪೂಜೆಗಳನ್ನು ನೆರವೇರಿಸಲಾಗಿದೆ. ಬೆಂಗಳೂರು ಕಂಬಳದ ವ್ಯವಸ್ಥಿತ ಆಯೋಜನೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸುಮಾರು 78 ಜೋಡಿ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಶಾಸಕರು ತಿಳಿಸಿದರು.


ಮಂಗಳೂರಿನಿಂದ ನವೆಂಬರ್ 24ನೇ ತಾರೀಕಿನಂದು ಬೆಂಗಳೂರಿಗೆ ಹೊರಡುವ ರೈಲು ಪೂರ್ತಿ ಭರ್ತಿಯಾಗಿದೆ. ಅಂದು ಮಂಗಳೂರಿನಿಂದ ಹೊರಡುವ ಎಲ್ಲ ಬಸ್ಸುಗಳೂ ಭರ್ತಿಯಾಗಿವೆ. ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳು ಕೂಡ ಈಗಾಗಲೇ ಬುಕಿಂಗ್ ಆಗಿವೆ. ಒಂದು ಅಥವಾ ಎರಡು ಹೆಚ್ಚುವರಿ ರೈಲುಗಳನ್ನು ಮಂಗಳೂರು-ಬೆಂಗಳೂರು ಮಧ್ಯೆ ಓಡಿಸುವ ಬಗ್ಗೆ ರೈಲ್ವೇ ಸಚಿವರಿಗೆ ಮನವಿ ಮಾಡುವ ಪ್ರಯತ್ನದಲ್ಲೂ ಇದ್ದೇವೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 15,000 ಜನರು ಬೆಂಗಳೂರು ಕಂಬಳಕ್ಕೆ ತೆರಳಲಿದ್ದಾರೆ. ಬೆಂಗಳೂರಿನ ಜನರು ಕೂಡ ಕರಾವಳಿ ಕ್ರೀಡೆಯಾದ ಕಂಬಳವನ್ನು ಪ್ರತ್ಯಕ್ಷವಾಗಿ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು.


ಸರಕಾರದ ಹಲವು ಸಚಿವರು ಕೂಡ ಕಂಬಳವನ್ನು ನೋಡಲು ಉತ್ಸುಕರಾಗಿದ್ದಾರೆ. ಸರಕಾರದಿಂದಲೂ ನಮಗೆ ಬಹಳಷ್ಟು ಸಹಕಾರ ದೊರೆತಿದೆ. ಕಂಬಳವನ್ನು ಬೆಂಗಳೂರಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಒಟ್ಟಾರೆ ಈ ಎರಡು ದಿನಗಳ ಉತ್ಸವಕ್ಕೆ ಕನಿಷ್ಠ 7ರಿಂದ 8 ಕೋಟಿ ರೂ.ಗಳಷ್ಟು ವೆಚ್ಚ ಅಂದಾಜಿಸಲಾಗಿದೆ. 48 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡ -ಉಡುಪಿಯನ್ನು ದೇಶಕ್ಕೆ ಪರಿಚಯಿಸುವ ಕೆಲಸ ಬೆಂಗಳೂರು ಕಂಬಳದ ಮೂಲಕ ಆಗಲಿದೆ. ಇದರಲ್ಲಿ ಯಾವುದೇ ಪಕ್ಷದ ವಿಚಾರವಿಲ್ಲ. ಎಲ್ಲ ಪಕ್ಷದವರೂ ಸೇರಿಕೊಂಡು ಕರಾವಳಿಯ ಕಂಬಳವನ್ನು ಬೆಂಗಳೂರಿಗೆ ಪರಿಚಯಿಸಲು ಮುಂದಾಗಿದ್ದೇವೆ ಎಂದು ಅವರು ವಿವರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top