ಯುವಶಕ್ತಿ ಸಂಘಟನೆಯ ಜೀವಾಳ: ನಿವೃತ್ತ ಡಿಜಿಪಿ ಟಿ. ಮಡಿಯಾಳ್

Upayuktha
0

ಹವ್ಯಕ ಮಹಾಮಂಡಲದಿಂದ ಜ್ಞಾನದಾಹಿ ಪ್ರಶಿಕ್ಷಾ ವರ್ಗ



ಗೋಕರ್ಣ: ಸಂಘಟನೆ ನಿಜವಾದ ಶಕ್ತಿ. ವೈಯಕ್ತಿಕವಾಗಿ ಸಾಧಿಸಲಾಗದ್ದನ್ನು ಸಮಷ್ಟಿಯಲ್ಲಿ ಸಾಧಿಸಬಹುದು. ಯುವಶಕ್ತಿ ಯಾವುದೇ ಸಂಘಟನೆಗಳ ಜೀವಾಳ. ಯುವಶಕ್ತಿ ತುಂಬುವ ಮೂಲಕ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ ಮತ್ತು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್ ಕರೆ ನೀಡಿದರು.


ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ವತಿಯಿಂದ 'ನಾನು- ನಮ್ಮ ಮಠ' ಪರಿಕಲ್ಪನೆಯಡಿ ಭಾನುವಾರ ಬೆಂಗಳೂರಿನ ಶ್ರೀ ಭಾರತಿ ವಿದ್ಯಾಲಯದಲ್ಲಿ ನಡೆದ ಮಾಸ್ಟರ್ ಟ್ರೈನರ್ಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ಸಂಘಟನೆಯಲ್ಲಿ ಸಣ್ಣ ಪುಟ್ಟ ಅಭಿಪ್ರಾಯ ಬೇಧಗಳು ಸಹಜ. ಆದರೆ ಇದನ್ನು ಮರೆತು ಸಮಷ್ಟಿಯೊಂದೇ ನಮ್ಮ ಗುರಿಯಾಬೇಕು. ಆಗ ಮಾತ್ರ ಸಂಘಟನೆ ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಶ್ರೀಮಠದ ಪರಂಪರೆ, ಮಹತ್ವ, ಸಾಧನೆ, ಸೇವಾ ಕಾರ್ಯಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ವಕ್ತಾರರನ್ನು ಸಜ್ಜುಗೊಳಿಸುವ ಇಂಥ ಕಾರ್ಯಾಗಾರ ಅರ್ಥಪೂರ್ಣ ಎಂದು ಹೇಳಿದರು.


ಸಮಾರಂಭಕ್ಕೆ ವಿಡಿಯೊ ಸಂದೇಶ ಮೂಲಕ ಆಶೀರ್ವಚನ ಅನುಗ್ರಹಿಸಿದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು, "ಎಷ್ಟೇ ಶಿಕ್ಷಣವಂತರಾದರೂ ಯುವಜನತೆ ಸರಿದಾರಿಯಲ್ಲಿ ಮುನ್ನಡೆಯಬೇಕಾದರೆ, ನಮ್ಮ ಪರಂಪರೆ- ಸಂಸ್ಕøತಿ ಬಗ್ಗೆ ಅರಿವು ಹೊಂದಿರುವುದು ಅನಿವಾರ್ಯ. ಕೌಟುಂಬಿಕ ವ್ಯವಸ್ಥೆ, ನಮ್ಮ ಆಚಾರ- ವಿಚಾರ, ಆಹಾರ- ವಿಹಾರ, ಉಡುಗೆ- ತೊಡುಗೆ, ಸಂಪ್ರದಾಯ- ಆಚರಣೆಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಸಂಸ್ಕಾರವಂತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಇಂಥ ಕಾರ್ಯಾಗಾರಗಳು ಅತ್ಯಗತ್ಯ" ಎಂದು ಅಭಿಪ್ರಾಯಪಟ್ಟರು.


ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, "ಕಳೆದ ಮೂರು ದಶಕಗಳಲ್ಲಿ ಶ್ರೀಮಠ ಸಮಾಜದ ಉನ್ನತಿಗೆ ಅಭೂತಪೂರ್ವ ಕೊಡುಗೆ ನೀಡಿದೆ. ಶಂಕರಾಚಾರ್ಯ ಮಠಗಳ ಪೈಕಿ ದೇಶದ ಏಕೈಕ ಅವಿಚ್ಛಿನ್ನ ಪರಂಪರೆಯ ಮಠ ಎನಿಸಿದ ನಮ್ಮ ಮಠ ಶ್ರೀಶಂಕರರ ಆಶಯಗಳನ್ನು ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ, ಸಾಮಾಜಿಕವಾಗಿ ಕಾರ್ಯಗತಗೊಳಿಸುವ ಕಾಯಕದಲ್ಲಿ ತೊಡಗಿ ಸಾಮಾಜಿಕ ಕ್ರಾಂತಿ ಮಾಡಿದೆ. ಈ ಚಳವಳಿ ದೇಶದ ಸಂಸ್ಕøತಿ- ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ" ಎಂದು ಬಣ್ಣಿಸಿದರು.


"ಶ್ರೀಮಠದ ಪರಂಪರೆ, ಮಹತಿ, ವೈಶಿಷ್ಟ್ಯಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಿ ಅವರನ್ನು ಶ್ರೀಮಠದ ರಾಯಭಾರಿಗಳಾಗಿ ರೂಪಿಸಿ, ಈ ವಿಚಾರಗಳು ಸಮಾಜದಲ್ಲಿ ಎಲ್ಲೆಡೆ ಪಸರಿಸುವಂತಾಗುವ ನಿಟ್ಟಿನಲ್ಲಿ ಇಂಥ ಸರಣಿ ಕಾರ್ಯಕ್ರಮಗಳನ್ನು ಮಹಾಮಂಡಲ ಎಲ್ಲ ಪ್ರಾಂತಗಳಲ್ಲೂ ಹಮ್ಮಿಕೊಳ್ಳಲಿದೆ" ಎಂದು ವಿವರಿಸಿದರು.


ವಿದ್ವಾನ್ ಶಿವರಾಮ ಅಗ್ನಿಹೋತ್ರಿಗಳು, ವಿದ್ವಾನ್ ಜಗದೀಶ ಶರ್ಮಾ, ಡಾ.ರಾಮಕೃಷ್ಣ ಭಟ್ ಕೂಟೇಲು, ಶ್ರೀಮಠದ ಆಡಳಿತ ಖಂಡದ ಸಂಯೋಜಕ ಪ್ರಮೋದ್ ಪಂಡಿತ್, ಸಂಘಟನಾ ಖಂಡದ ಶ್ರೀಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ, ಹಿರಿಯ ಲೆಕ್ಕ ಪರಿಶೋಧಕ ವೇಣುವಿಘ್ನೇಶ್ ಸಂಪ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ನೀಲಕಂಠ ಯಾಜಿ ಬೈಲೂರು, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ದೇವಿಕಾ ಶಾಸ್ತ್ರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಅವಲೋಕನ ನಡೆಸಿಕೊಟ್ಟರು.


ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ.ಹೆಗಡೆ, ಪ್ರಾಂತ ಕಾರ್ಯದರ್ಶಿ ಗೀತಾ ಮಂಜಪ್ಪ, ಸಾಗರ ಪ್ರಾಂತ ಉಪಾಧ್ಯಕ್ಷ ವೆಂಕಟೇಶ್ ಹಾರೆಬೈಲು, ಕಾರ್ಯದರ್ಶಿ ರುಕ್ಮಾವತಿ ಹೆಗಡೆ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧೆಡೆಗಳಿಂದ ಬಂದ 50ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top