ರಾಮಾಯಣ ಹಕ್ಕಿನೋಟ-51: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0


ರಾಮನ ಇರವಿನ ಸುಳಿವು ಸಿಕ್ಕಿತು.ಹೊಗೆ ಬೆಂಕಿಯನ್ನು,ಬೆಂಕಿ ಎಲೆಮನೆಯನ್ನು(ಎಲೆವನೆ) ಎಲೆಮನೆ ಮನೆಯವರನ್ನು ತೋರಿತು.ಭರತನು ರಾಮನು ಸಿಕ್ಕಿದ ಸಂತಸದಲ್ಲಿ ತನ್ನನ್ನು ತಾನು ಹಳಿದುಕೊಳ್ಳುತ್ತಾ, ತನ್ನೊಂದಿಗೆ ಬಂದವರಿಗೆ ಕೂಗಿ ಹೇಳಿ ರಾಮನತ್ತ ಶತ್ರುಘ್ನ ಸುಮಂತ್ರರೊಡನೆ ನಡೆದನು.ವಸಿಷ್ಠರಲ್ಲಿ ನಿಧಾನವಾಗಿ ತಾಯಂದಿರೊಡನೆ ಬರಲು ವಿನಂತಿಸಿದನು.


ಕಡಿದಾದ ದಾರಿ.ದಾರಿ ತಪ್ಪಬಾರದೆಂದು ಅಲ್ಲಲ್ಲಿ ಗುರುತುಗಳು.ಅವನ್ನು ಅನುಸರಿಸಿ ಹೋದಾಗ ಪರ್ಣಕುಟಿ,ಹೋಮಕ್ಕಾಗಿ ವಿಶೇಷ ಕುಟೀರ... ಇವುಗಳು ಕಂಡುಬಂದವು.ಮುಂದೆ ಹೋಗುತ್ತಿದ್ದಂತೆ ಹೋಮದೆದುರು ದರ್ಭೆಯ ಮೇಲೆ ವೀರಾಸನದಲ್ಲಿ ಕುಳಿತ ರಾಮನನ್ನು, ಪಕ್ಕದಲ್ಲಿ ಸೀತೆಯನ್ನು ಮತ್ತು ಲಕ್ಷ್ಮಣನನ್ನೂ ಕಂಡರು.ಭರತನ ನಡೆ ತಪ್ಪತೊಡಗಿತು.ಅಣ್ಣನನ್ನು ಕಾಣುತ್ತಲೇ ಈ ತನಕ ಅನುಭವಿಸಿದ ನೋವು,ಸಂಶಯ, ಅವಮಾನ ಅಸಮಾಧಾನ... ಗಳೆಲ್ಲವೂ ಮೇಲಿಂದ ಮೇಲೆ ದಾಳಿಯಿಡುವಂತೆ ಬಂದು ಕೊನೆಗೆ ಸಹಿಸಲಾರದೆ ರಾಮನ  ಬಳಿ ಆರ್ಯಾ.. ಎಂದು ದೀನ ಸ್ವರದಲ್ಲಿ ಕರೆಯುತ್ತಾ ಕುಸಿದು ಪಾದಗಳಿಗೆ ನಮಿಸಿದನು. ಶತ್ರುಘ್ನನೂ ಅಳುತ್ತಳುತ್ತಾ ಅಣ್ಣನ ಚರಣಗಳಿಗೆ ವಂದಿಸಿದನು.ಅರಮನೆಯಲ್ಲಿ ಒಟ್ಟಾಗಿರಬೇಕಾದವರು ಸದ್ಯ ಎಲೆವನೆಯಲ್ಲಿ ಒಟ್ಟಾದುದನ್ನು ಕಂಡು ಉಳಿದವರೂ ಕಣ್ಣೀರಾದರು.


ಗುರುತು ಸಿಗದಷ್ಟು ಕೃಶನಾಗಿದ್ದ ಭರತನನ್ನು ನೋಡಿ ರಾಮನು ಅವನನ್ನು ಹಿಡಿದೆತ್ತಿ ಆಲಂಗಿಸಿ ಕ್ಷೇಮ ಸಮಾಚಾರರಗಳನ್ನು ಕೇಳಿದನು.ಅದರೊಂದಿಗೆ ತಂದೆ ತಾಯಂದಿರು, ಗುರುಗಳನ್ನು,ಸಚಿವ- ಪ್ರಜೆಗಳನ್ನು ಅವರವರ ಕಾರ್ಯಗಳನ್ನು ಉಲ್ಲೇಖಿಸುತ್ತಾ ಕೇಳಿದನು.ಪರೋಕ್ಷವಾಗಿ ಭರತ ಮತ್ತು  ಜವಾಬ್ದಾರಿಗಳನ್ನು ಹೊಂದಿರುವ ಇತರರು ಮಾಡಬೇಕಾದ ಕರ್ತವ್ಯಗಳನ್ನು ನೆನಪಿಸಿ ಕುಶಲ ಪ್ರಶ್ನೆಗಳನ್ನು ಕೇಳಿದನು.ಧರ್ಮ ಅರ್ಥ ಕಾಮ ಮೋಕ್ಷಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳು ರಾಜ್ಯದ ಎಲ್ಲೆಡೆಗಳಲ್ಲಿ ಈ ಹಿಂದಿನಂತೆ ನಡೆಯುತ್ತಿದೆಯೇ ಎಂದು ವಿಚಾರಿಸಿದನು.ನಮ್ಮ ವಂಶದ ಹಿರಿಯರು ತುಳಿದ ಸತ್ಪಥದಲ್ಲೇ ನೀನೂ ಹೋಗುತ್ತಾ ಇರುವೆಯಲ್ಲಾ!? ಎಂದೂ ಕೇಳಿದನು.


ಭರತ ಏನೆಂದು ಉತ್ತರಿಸಲಿ!!?


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter     

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top