ರಾಮಾಯಣ ಹಕ್ಕಿನೋಟ-49: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
 ಶ್ರೀರಾಮಾಯನಮ:


ರಾಮನಿಗೆ ಅನುಕೂಲವಾಗಿ ಸೀತೆ, ಸೀತೆಗೆ ಅನುಕೂಲವಾಗಿ ರಾಮ, ಅವರಿಬ್ಬರಿಗೂ ಅನುಕೂಲವಾಗುವಂತೆ ಲಕ್ಷ್ಮಣ- ಹೀಗೆ ಚಿತ್ರಕೂಟದಲ್ಲಿ ಅವರು ಆನಂದದಿಂದ ವಿಹರಿಸುತ್ತಾ ವಾಸಿಸುತ್ತಿದ್ದರು.ಅಯೋಧ್ಯೆಯ ವೈಭವವನ್ನು ಮರೆಸುವ ಪ್ರಕೃತಿ ಸಹಜ ಸೌಂದರ್ಯ ಅಲ್ಲಿತ್ತು.ಅಯೋಧ್ಯೆಯಲ್ಲಿ ಸಿಕ್ಕಿದ ನೋವನ್ನು ಮರೆಸುವ ಪ್ರಶಾಂತ ಬದುಕು ಅಲ್ಲಿತ್ತು.ರಾಮನ ಮಾತಿನಲ್ಲಿ ಹೇಳುವುದಾದರೆ- "ನಮಗೀ ಚಿತ್ರಕೂಟವೇ ಸಾಕು.ಅಯೋಧ್ಯೆ ಬೇಡ!"ಎಂಬಂತಹ ಬದುಕು ಅಲ್ಲಿತ್ತು.


ಹೀಗಿರುವಾಗಲೇ ಕಾಡಿನಲ್ಲಿ ಪ್ರಾಣಿಗಳ ಅಸಹಜ ಓಡಾಟ ಕೂಗುವಿಕೆ ಅನುಭವಕ್ಕೆ ಬಂತು.ರಾಮನು ಲಕ್ಷ್ಮಣನಲ್ಲಿ ಅದೇನೆಂದು ಗಮನಿಸಲು ಹೇಳಿದನು.

ಲಕ್ಷ್ಮಣನು ಆಶ್ರಮದ ಸಮೀಪದಲ್ಲಿರುವ ಸಾಲವೃಕ್ಷ ವೊಂದನ್ನು ಹತ್ತಿ ನೋಡಲು ದೊಡ್ಡ ಚತುರಂಗ ಬಲವನ್ನು ಕಂಡನು.


ಸಪರಿವಾರ ಭರತಾಗಮನವಾಗಿತ್ತು.


ರಾಮನು ಲಕ್ಷ್ಮಣನಲ್ಲಿ ಸೂಕ್ಷ್ಮವಾಗಿ ಗಮನಿಸಿ ನೋಡಲು ಹೇಳಿದಾಗ ಅದು ಅಯೋಧ್ಯಾ ಸೇನೆಯೆಂಬುದು ಸ್ಪಷ್ಟವಾಯಿತು.ಭರತನು ತಮ್ಮ ನಾಶಕ್ಕಾಗಿ ಬಂದನೆಂದೇ ಲಕ್ಷ್ಮಣನು ಭಾವಿಸಿದನು.ಲಕ್ಷ್ಮಣನು ತತ್ಕ್ಷಣ ಬೆಂಕಿಯನ್ನಾರಿಸಿ ಯುದ್ಧಕ್ಕೆ ಸಿದ್ಧವಾಗಲು ರಾಮನಲ್ಲಿ ಹೇಳಿ ತಾನೂ ಸರ್ವಸನ್ನದ್ಧನಾದನು.ಆದರೆ ರಾಮನು ಲಕ್ಷ್ಮಣನ ಈ ಅನಿಸಿಕೆಯನ್ನು ಅಲ್ಲಗಳೆದು ಭರತನು ಅಂತಹವನಲ್ಲ ಎಂದು ಹೇಳುತ್ತಾ ತಮ್ಮನನ್ನು ಸಂತೈಸಿ- ಒಂದೊಮ್ಮೆ ಭರತನು ತಮ್ಮ ನಾಶಕ್ಕಾಗಿ ಬಂದರೂ ನಾನು ಅವನನ್ನು ಸಂಹರಿಸಲಾರೆ.ಸಂಹರಿಸಿ ರಾಜ್ಯದಾಸೆಯಿಂದ ಪಿತೃವಾಕ್ಯಕ್ಕೆ ತಪ್ಪಿ ಅಯೋಧ್ಯೆಗೆ ಹೋಗಲಾರೆ.ಅಧರ್ಮದಿಂದ ಲಭಿಸಬಹುದಾದ ಇಂದ್ರಪದವಿಯೂ ನನಗೆ ಬೇಕಾಗಿಲ್ಲ.ತನ್ನ ತಾಯಿಯ ನಡೆಯಿಂದ ಕೋಪಗೊಂಡ ಭರತನು ನನ್ನನ್ನು ಮರಳಿ ಅಯೋಧ್ಯೆಗೆ ಕರೆದೊಯ್ದು ಪಟ್ಟಗಟ್ಟುವ ಇಂಗಿತದಿಂದ ಇಲ್ಲಿಗೆ ಸೇನೆಯೊಡಗೂಡಿ ಬಂದಿದ್ದಾನೆ- ಎಂದು ರಾಮನು ತನ್ನ ಅಭಿಪ್ರಾಯವನ್ನು ಹೇಳಿದನು.

ಲಕ್ಷ್ಮಣನು ಅಣ್ಣನ ಮಾತುಗಳನ್ನು ಕೇಳಿ ನಾಚಿ ನೀರಾದನು.


ಇತ್ತ ಚಿತ್ರಕೂಟದ ತಪ್ಪಲಿನಲ್ಲಿ ಹರಿಯುತ್ತಿರುವ ಮಂದಾಕಿನಿ ನದಿಯ ತೀರದಲ್ಲಿ ಭರತನು ರಾಮನಿರಬಹುದಾದ ಜಾಗವನ್ನು ಕಂಡುಹಿಡಿಯುವ ಕೆಲಸದಲ್ಲಿ ಇರುವಾಗಲೇ ಮನುಷ್ಯನಿರುವಿಕೆಯ ಸುಳಿವಾದ ಹೊಗೆಯು ಕಂಡಿತು.


( ಮಾನವನಿದ್ದಲ್ಲಿ ಹೊಗೆ-ಹಗೆ ಎರಡೂ ಇರುತ್ತವೆ.ಅಲ್ಲವೇ?)


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top