ಶ್ರೀರಾಮಾಯನಮ:
ದಶರಥನು ಕೌಸಲ್ಯೆಗೆ ತನ್ನ ಬದುಕಿನಲ್ಲಿ ತನಗೆ ಗೊತ್ತಿಲ್ಲದೆ ನಡೆದ ಅತ್ಯಂತ ದಾರುಣವಾದ "ಶ್ರವಣ ಕುಮಾರ"ನ ವಧಾ ಪ್ರಸಂಗವನ್ನು ಹೇಳಿದನು-
ಬಿಲ್ವಿದ್ಯೆಯಲ್ಲಿ ಪರಿಣತನಾಗಿದ್ದ ನಾನು ಹುಡುಗುತನದಲ್ಲೇ ಶಬ್ದವೇಧಿ ಬಾಣಪ್ರಯೋಗವನ್ನು ಕಲಿತಿದ್ದೆನು.ವರ್ಷಾಕಾಲದ ಒಂದು ದಿನ ಸರಯೂ ನದಿಯ ಪಕ್ಕದಲ್ಲಿ ಬೇಟೆಯಾಡಲು ಹೋದವನಿಗೆ ಎಷ್ಟೋ ಹೊತ್ತಿನ ತನಕ ಯಾವ ಪ್ರಾಣಿಯೂ ಸಿಗಲಿಲ್ಲ.ಮುಸ್ಸಂಜೆಯ ವೇಳೆಗೆ ನದಿಯ ಕಡೆಯಿಂದ ನೀರು ಕುಡಿಯುವ ಶಬ್ದ ಕೇಳಿಸಿತು.ಆನೆಯಿರಬಹುದೆಂದೆಣಿಸಿ ಶಬ್ದವೇಧಿ ಬಾಣಪ್ರಯೋಗವನ್ನು ಮಾಡಿದೆನು.ಬಾಣ ಗುರಿ ತಗುಲಿದಾಗ ಕೇಳಿದ್ದು ಮನುಷ್ಯನ ಆರ್ತನಾದ!
ಹೋಗಿ ನೋಡಲು ನನ್ನದೇ ವಯಸ್ಸಿನ ಹುಡುಗನೊಬ್ಬನ ದೇಹದ ಮರ್ಮಸ್ಥಾನಕ್ಕೆ ಬಾಣತಗುಲಿ ಮರಣಕಾಲದ ನೋವಿನಲ್ಲಿ ರಕ್ತದ ಮಡುವಿನಲ್ಲಿ ವಿಲವಿಲನೆ ಒದ್ದಾಡುತ್ತಿದ್ದನು.ಅವನು ಶ್ರವಣ ಕುಮಾರ. ತನ್ನ ಬಳಲಿದ ವೃದ್ಧ-ಕುರುಡ-ಅಬಲ ತಂದೆತಾಯಿಯರಿಗೆ ಕುಡಿಯಲು ನೀರಿಗಾಗಿ ಬಂದಿದ್ದನು.ಕೊಡವನ್ನು ನೀರಿನಲ್ಲಿ ಮುಳುಗಿ ಸುತ್ತಿರುವಾಗ ಬಂದ ಶಬ್ದವನ್ನು ನಾನು ತಪ್ಪಾಗಿ ಗ್ರಹಿಸಿ ಬಾಣಪ್ರಯೋಗ ಮಾಡಿದ್ದೆನು.ತಂದೆಯಿರುವ ತಾವನ್ನು ತಿಳಿಸಿದ ಅವನು ತಾನು ಮಾಡಿದ ತಂದೆತಾಯಿಗಳ ಸೇವೆಯ ಪುಣ್ಯದ ಫಲವಾಗಿ ಸ್ವರ್ಗವನ್ನು ಸೇರಿದನು.
ಅವನ ಹೆತ್ತವರಿಗೆ ನಾನೇ ವಿಷಯ ತಿಳಿಸಿ ಅವರನ್ನು ಮಗನ ಶವದ ಬಳಿಗೆ ಕರೆದುಕೊಂಡು ಹೋಗಿ ನನ್ನಿಂದ ಗೊತ್ತಾಗದೇ ಆದ ಈ ಮಹಾ ಪ್ರಮಾದವನ್ನು ಕ್ಷಮಿಸಿ ಎಂದು ಕಾಲಿಗೆ ಬಿದ್ದು ಪ್ರಾರ್ಥಿಸಿದೆನು.
ಮಗನಿಗೆ ತರ್ಪಣವನ್ನು ನೀಡಿದ ಬಳಿಕ ಮಗನ ಸಾವಿನ ನೋವನ್ನು ತಡೆಯಲಾರದೆ ಅವನ ತಂದೆಯು-ಪುತ್ರನ ವಿಯೋಗದಿಂದಾಗಿ ನಾನೀಗ ಎಂತಹ ದುಃಖವನ್ನು ಅನುಭವಿಸುತ್ತಿರುವೆನೋ-ಅದೇರೀತಿಯಲ್ಲಿ ನೀನೂ ನಿನ್ನ ಕಡೆಗಾಲದಲ್ಲಿ ನನ್ನಂತೆಯೇ ಪುತ್ರ ವಿಯೋಗದ ದುಃಖವನ್ನು ಅನುಭವಿಸಿ ಅದರಿಂದಲೇ ಪ್ರಾಣ ತೊರೆಯುವೆ"ಎಂದು ತಡೆಯಲಾರದ ಶೋಕದ ಮಾತುಗಳನ್ನು ಹೇಳಿದನು.ಅದೇ ಇಂದು ನನಗೆ ಶಾಪವಾಗಿ ಪರಿಣಮಿಸಿದೆ" ಎಂದು ದಶರಥನು ಕೌಸಲ್ಯೆಗೆ ಹೇಳಿದನು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ