ಮಂಗಳೂರು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಕೋಡಿಕಲ್ ಶಾಖೆ ವತಿಯಿಂದ ಈ ಬಾರಿಯ ಗಣೇಶೋತ್ಸವವನ್ನು ಸೆ.19ರಿಂದ 21ರ ವರೆಗೆ ಆಚರಿಸಲು ನಿರ್ಧರಿಸಲಾಗಿದೆ. ವೇದಮೂರ್ತಿ ವಿಶ್ವಕುಮಾರ್ ಜೋಯಿಸರ ಪೌರೋಹಿತ್ಯದಲ್ಲಿ 19ರಂದು ಬೆಳಗ್ಗೆ ಗಣೇಶನನ್ನು ಸ್ಥಾಪಿಸಿ 21ರ ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಸಾಗಿ ಫಲ್ಗುಣಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು. ಕೋಡಿಕಲ್ ಗಣೇಶೋತ್ಸವ ಎಂದೇ ಖ್ಯಾತಿ ಪೆದ ಈ ಸಂಭ್ರಮದಲ್ಲಿ ಮೂರು ದಿನಗಳಲ್ಲಿ ವಿಶೇಷ ಸೇವೆಗಳೊಂದಿಗೆ ವಿಶೇಷ ಧಾರ್ಮಿಕ ಪ್ರಕ್ರಿಯೆಗಳೂ ಜರಗಲಿವೆ ಎಂದು ಗಣೇಶೋತ್ಸವ ಸಮಿತಿಯ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಗಣೇಶ ಕ್ರೀಡೋತ್ಸವ: 19ರಂದು ಭಾನುವಾರ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೈಹಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಕೋಡಿಕಲ್ನ ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ. ಬಹುಮಾನಗಳನ್ನು ಗಣೇಶ ಮಂಟಪದಲ್ಲಿ ನೀಡಲಾಗುವುದು. ದ.ಕ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಭಾಗವಹಿಸಲಿರುವರು. ಗಣ್ಯರ ಕ್ರೀಡೋತ್ಸವವನ್ನು ಉದ್ಘಾಟಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ: 19ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ರಂಗಪೂಜೆಯ ಬಳಿಕ ಲಯನ್ ಡಿ. ಕಿಶೋರ್ ಶೆಟ್ಟಿಯವರ ಸಾರಥ್ಯದಲ್ಲಿ ನವೀನ್ ಶೆಟ್ಟಿ ಅಳಕೆಯವರು ಬರೆದ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸುವ ನಾಟಕ 'ಅವು ದಾಲಾಪುಜಿ' ಪ್ರದರ್ಶನಗೊಳ್ಳಲಿದೆ.
ವಿಶೇಷ ಆಕರ್ಷಣೆ: ಈ ಬಾರಿ ಕೋಡಿಕಲ್ ಶ್ರೀ ಗಣೇಶೋತ್ಸವಕ್ಕೆ 15 ವರ್ಷದ ಸಂಭ್ರಮವಾಗಿದ್ದು, ವಿಶೇಷವಾಗಿ ನಮ್ಮ ಸಂಸ್ಕಾರದ ಭಾಗವಾದ ನರ್ಥನಾ ಭಜನಾ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಥಮ ಬಹುಮಾನ 6,000 ರೂ, ದ್ವಿತೀಯ- 4,000 ರೂ ಬಹುಮಾನವಾಗಿ ಕೊಡಲಾಗುತ್ತಿದೆ. ಎಂಟು ತಂಡಗಳಿಂದ ಅರ್ಧ- ಅರ್ಧ ಗಂಟೆಯ ಭಜನೋತ್ಸವ ನಡೆಯಲಿದೆ.
ಭಾಗವಹಿಸುವ ಭಜನಾ ತಂಡಗಳು:
1. ಶ್ರೀ ಆದಿಶಕ್ತಿ ಭಜನಾ ಮಂಡಳಿ, ಬಡಗಬೆಳ್ಳೂರು (ಬಂಟ್ವಾಳ ತಾಲೂಕು), 2. ಕಾವ್ಯ ಭಜನಾ ವೃಂದ, ಕುಂಜತ್ತಬೈಲ್, 3. ಸೀತಾರಾಮ ಭಜನಾ ಮಂದಿರ, ನಾರಳ, 4. ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ನೃತ್ಯ ಭಜನಾ ತಂಡ, ಸುಂಕದಕಟ್ಟೆ, 5. ಧರ್ಮಶ್ರೀ ಭಜನಾ ಮಂದಿರ ಬೆಳುವಾಯಿ, 6. ಯೂತ್ ಸೆಂಟರ್ ಬಾಲ ವೃಂದ, ಪಡೀಲ್ ಮಂಗಳೂರು, 7. ಶ್ರೀ ಆದಿ ಕಿಲ್ಪಾಡಿ ಧೂಮಾವತಿ ಭಜನಾ ಮಂಡಳಿ, ಇಲ್ಪಾಡಿ ಮೂಲ್ಕಿ, 8. ಗುರುಕುಲ ಬಾಲಗೋಕುಲ ಸಮಿತಿ, ಪಾವೂರು ಹರೇಕಳ.
ವೈಭವದ ಶೋಭಾಯಾತ್ರೆ: ನಾಡಿನ ಅನೇಕ ಗಣ್ಯರು ಧಾರ್ಮಿಕ ಮುಂದಾಳುಗಳು, ದಿನವೂ ಅತಿಥಿಗಳಾಗಿ ಭಾಗವಹಿಸಿ ಗಣೇಶೋತ್ಸವವನ್ನು ಸಂಪನ್ನಗೊಳಿಸಲಿದ್ದಾರೆ. 21ರ ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ಜರಗಿ, ಗಣೇಶ ಮಂಟಪದಿಂದ ಶ್ರೀ ವಿನಾಯಕನ ವೈಭವದ ಶೋಭಾಯಾತ್ರೆ ಕೋಡಿಕಲ್ನ ಮುಖ್ಯರಸ್ತೆಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉರ್ವ ಸ್ಟೋರಿಗೆ ಬಂದು ನಂತರ ಅಶೋಕನಗರಕ್ಕೆ ಸಾಗಿ ದಂಬೆಲ್ನ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲ್ಪಡುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಪಿ. ಮಹಾಬಲ ಚೌಟ, ಗೌರವಾಧ್ಯಕ್ಷರಾದ ಕಿರಣ್ ಜೋಗಿ, ಸಾಂಸ್ಕೃತಿಕ ಕಾರ್ಯದರ್ಶಿ ರವಿ ಅಲೆವೂರಾಯ ವರ್ಕಾಡಿ, ವಿಶ್ವಹಿಂದೂ ಪರಿಷತ್ನ ಸೇವಾ ಪ್ರಮುಖ್ ಸತೀಶ್ ಶೆಟ್ಟಿ, ಉಪಾಧ್ಯಕ್ಷರಾದ ಮ.ನ.ಪಾ ಸದಸ್ಯ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ