ಅವಳನ್ನ ಕರೆಯೋದು ಭೂಮ್ತಾಯಿ ಅಂತಾನೇ. ತಾಯಿಗೆ ಹೆತ್ತ ಮಗು ಮಾತ್ರ ಮಗು. ಭೂಮ್ತಾಯಿಗೆ ಈ ಧರಣಿ ಮಂಡಲವೆಲ್ಲಾ ಮಕ್ಕಳು.
ನಂ ತಾಯಂತೆ- ಭೂಮ್ತಾಯ ಒಳಗೂ ಮಾತಿದೆ. ಈ ಮನುಷ್ಯರೆಂಬೋ ಉಡಾಳ ಮಕ್ಳು ಬಗ್ಗೆ ಏನೋ ಹೇಳೋಕಿದೆ. ಹೇಳದುಳಿದ ಸ್ವಗತಗಳಿವೆ. ನಾವು ತೆರೆದ ಕಿವಿ ಆಗ್ಬೇಕು ಅಷ್ಟೇ. ಅವಳ ಒಡಲೊಳಗೊಂದು ಶ್ರುತಿ ಬದ್ಧ ಹಾಡಿದೆ. ಆರ್ತ ಗದ್ಗದಿತ ಗಮಕವಿದೆ.
ಬತ್ತಿದ್ದಾಳೆ ತುಂಗೇ
ನೇತ್ರೆಯ ಕಥೆಯೂ ಹಂಗೇ.
ಮಂದ್ರದೆಲ್ಲಿತ್ತಿಕೊಂಡ ಉತ್ಕಟತೆಯ ನೋವಿನ ರಾಗ.
-ಇದಿಷ್ಟು ಭೂಮಿಯ ಭಾವ ಜಲಪಾತಕ್ಕೆ ನಿರ್ದೇಶಕರಾದ ರಮೇಶ್ ಬೇಗಾರ್ ಕೊಡುವ ಅಕ್ಷರ ಜಲಪಾತ. ಪ್ರತೀ ಉಡಾಳ ಮನುಷ್ಯನ ಒಳಗಡೆ ಒಂದು ಅರಿವಿನ ಜಲಪಾತ ಬೋರ್ಗೆರೆಯಬೇಕಿದೆ. ಅದು ಭೂಮಿಯ ನೋವಿನ ರಾಗಕ್ಕೆ ಅಮೃತಧಾರೆ ಆಗಬೇಕಿದೆ.
**
ಇಡೀ ಪ್ರಪಂಚವೇ ಹವಾಮಾನ ಬದಲಾವಣೆಯಿಂದ ಕಂಗೆಡುತ್ತಿದೆ. ಪರಿಸರ ಕರಗದ ಕಸದ ಗುಡ್ಡಗಳಾಗುತ್ತಿವೆ. ಮಣ್ಣಿನ ಗುಡ್ಡಗಳು ಕರಗುತ್ತಿವೆ. ನದಿಗಳು ಒಂದಾ ಬತ್ತುತ್ತಿವೆ ಇಲ್ಲಾ ಊರೇ ತೊಳೆದು ಹೋಗುವಂತೆ ನೆರೆ ಬಂದು ಹರಿಯುತ್ತಿವೆ. ಡ್ಯಾಮಲ್ಲಿ ನೀರಿಲ್ಲ. ಕೆರೆಯ ತಳದಲ್ಲಿ ಬತ್ತಿದ ಬಿರುಕು. ಅನ್ನದ ಸಸಿಗಳು ನೀರಿಲ್ಲದೆ ಫಸಲೇ ಇಲ್ಲ. ಗಾಳಿಯಲ್ಲಿ ಆಮ್ಲಜನಕ ಕ್ಷೀಣಿಸುತ್ತಿದೆ. ಪ್ರಾಣಿ, ಸಸ್ಯ, ಮಣ್ಣು, ಗಾಳಿ, ನೀರು ಎಲ್ಲ ಅನಾರೋಗ್ಯದಿಂದ ಬಳಲುತ್ತಿವೆ. ಭೂಮಿಗೇ ಎದೆ ಉರಿ, ಬಿಪಿ, ಶುಗರ್, ಹೃದಯದ ಖಾಯಿಲೆ!!!
ಭೂಮಿಗೆ ರೋಗ ತಂದ ಮನುಷ್ಯನೇ ಅವಳ ನೋವಿನ ರಾಗಕ್ಕೆ ಔಷಧಿ ಕಂಡುಕೊಳ್ಳಬೇಕಿದೆ.
ಇಡೀ ಜಗತ್ತೇ ಅಹಂಕಾರದಿಂದ ಹೊರ ಬರಬೇಕಿದೆ.
ಆ ನಿಟ್ಟಿನಲ್ಲಿ ನಿಧಾನವಾಗಿ ಜಾಗೃತಿಗಳು ಶುರುವಾಗಿವೆ. ಅಭಿಯಾನಗಳು ಹೆಜ್ಜೆ ಇಟ್ಟಿವೆ. ನಾವು ನೀವು ಕೈ ಜೋಡಿಸಬೇಕು.
ನಾವು ಬದುಕಬೇಕು ಅಂತಾದರೆ ಭೂಮಿಯನ್ನು ಉಳಿಸಬೇಕು.
ಜಲಪಾತ ಸಿನಿಮಾ ಒಂದು ಅರಿವಿನ ಅಭಿಯಾನ.
ಪರಿಸರ ಅರಿವಿನ ಆಧಾರಿತ ಕಥಾಲೋಕ ಜಲಪಾತ ಸಿನಿಮಾ ಶೀಘ್ರ ತೆರೆಗೆ ಬರಲಿದೆ.
**
ಜಲಪಾತ ಚಿತ್ರದ "ಎದೆಯ ಧನಿಯ ಹಾಡುಕೇಳು" ಎಂಬ ಥೀಂ ಸಾಂಗ್ ಲಿರಿಕಲ್ ವೀಡಿಯೋ ಈಗ ಬಿಡುಗಡೆಯಾಗಿದೆ.
ವಿಜಯ ಪ್ರಕಾಶ್ ಹಾಡಿದ, ಸಾದ್ವಿನಿ ಕೊಪ್ಪ ಸಂಗೀತ ನೀಡಿದ ಈ ಪರಿಸರದ ಅರಿವಿನ ವಿಭಿನ್ನ ಗೀತೆಯನ್ನು ವೀಕ್ಷಿಸೋಣ
ವೀಕ್ಷಣೆಗೆ ಈ ಲಿಂಕ್ ಒತ್ತಿ:
https://youtu.be/OorngwHoUIo
***
ಜಲಪಾತ ದ ಹಾಡಿನ ಸಾಹಿತ್ಯವೂ (ರಚನೆ ರಮೇಶ್ ಬೇಗಾರ್) ಒಂದು ಉತ್ತಮ ಜಾಗೃತಿಯ ಸಾಲುಗಳು.
ಎದೆಯ ದನಿಯ ಹಾಡು ಕೇಳು
ಹೃದಯ ಬಿರಿವ ಭೂಮಿ ಬಾಳು
ಮೇದಿನಿಗೂ ಮಾತಿದೆ
ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ
ಹೊಸದು ಹಾದಿ ಕರೆದಿದೆ
ಪರಿಸರವ ಉಳಿಸು ಅವಸರ
ಹೇಳೂ ಮನದ ಮಾತ
ಧುಮ್ಮಿಕ್ಕಲಿ - ಚಿಮ್ಮಿ ಹರಿಯಲಿ
ಈ ಅರಿವಿನ ಜಲಪಾತ // ಪ //
ಮಣ್ಣ ಕೊಟ್ಟವಳು
ಅದರಲನ್ನವನಿಟ್ಟವಳು
ಹಸಿರು ಕೊಟ್ಟವಳು
ಜೀವದುಸಿರಾ ಇಟ್ಟವಳು
ಹರಿಯುವ ನದಿಯ
ಗಿರಿತೊರೆ ಸಿರಿಯ
ನಮಗೇ ಬಿಟ್ಟವಳು
ಜೀವ ಸಂಕುಲದ
ಸೃಷ್ಟಿಯ ದೃಷ್ಟಿಯ
ತಿಲಕವನಿಟ್ಟವಳು
ಋಣವಿದೆ ನಮಗೆ ಕಣಕಣದಲ್ಲೂ
ತೀರಿಸು ಬಾರೋ ಕ್ಷಣ ಕ್ಷಣದಲ್ಲೂ
ಕಾಲದ ಕರೆಯಿದು ಸಾಗುವ ಜೊತೆ ಜೊತೆಯಲ್ಲೂ // 1 //
ಮೇದಿನಿಗೂ ಮಾತಿದೆ
ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ
ಹೊಸದು ಹಾದಿ ಕರೆದಿದೆ
ಅರಿತೋ ಅರಿಯದೆ ಮಾಡಿದ ತಪ್ಪು
ದುಬಾರಿಹೊತ್ತಲಿ ನಿಲ್ಲಿಸಿದೆ
ದುರಿತ ಕಾಲವ ಮೀರದೆ ಹೋದರೆ
ಪರಿ ಪರಿ ವಿಪತ್ತು ಕಾಯುತಿದೆ
ಏಳುವ ಸಮಯ- ಬದಲಾಗುವ ವಿನಯ
ನಾಳಿನ ಬಾಳಿಗೆ ಭವಿಷ್ಯ ಬರೆದರೆ
ನಮ್ಮದೆ ವಿಜಯ.
ನನ್ನಿಂದೇನು ಆಗುವುದೆಂಬ
ಸಂಕೋಚ ಮೀರು ಮೊದಲಲ್ಲಿ
ಬಿಂದುವಿನಿಂದಲೇ ಸಿಂಧುವು
ಎಂಬ ಸತ್ಯವನರಿತು ಸಂಕಲ್ಪದಲಿ
ಎದ್ದು ಬಾ ಧೃಡತೆಯ ಹೊದ್ದು
ಬಾ ಭೂರಮೆಯ ಋಣವನು ತೀರಿಸು ಬಾ....
ಮೇದಿನಿಗೂ ಮಾತಿದೆ
ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ
ಹೊಸದು ಹಾದಿ ಕರೆದಿದೆ.
ಎದೆಯ ಧನಿಯ ಹಾಡುಕೇಳು
ಹೃದಯ ಬಿರಿವ ಭೂಮಿ ಬಾಳು
ಮೇದಿನಿಗೂ ಮಾತಿದೆ
ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ
ಹೊಸದು ಹಾದಿ ಕರೆದಿದೆ
ಪರಿಸರವಾ ಉಳಿಸು ಅವಸರ
ಹೇಳೂ ಮನದ ಮಾತ
(ಕೇಳೂ ಅವಳ ಸ್ವಗತ)
ಧುಮ್ಮಿಕ್ಕಲಿ- ಚಿಮ್ಮಿ ಹರಿಯಲಿ
ಈ ಅರಿವಿನ ಜಲಪಾತ.
ರಚನೆ: ರಮೇಶ್ ಬೇಗಾರ್ ಶೃಂಗೇರಿ
ಸಂಗೀತ: ಸಾದ್ವಿನಿ ಕೊಪ್ಪ
ನಿರ್ಮಾಣ: ರವೀಂದ್ರ ತುಂಬರಮನೆ.
***
ಸಂಶೋಧನೆಯೇ ಹೇಳುವ ಪ್ರಕಾರ ಪ್ರಾಣಿ, ಸಸ್ಯ, ಮಣ್ಣು, ಗಾಳಿ, ನೀರು ಎಲ್ಲ ಅನಾರೋಗ್ಯದಿಂದ ಬಳಲಿದರೆ.... ಭೂಮಿಗೇ ಎದೆ ಉರಿ, ಬಿಪಿ, ಶುಗರ್, ಹೃದಯದ ಖಾಯಿಲೆ ಉಲ್ಬಣಿಸಿದರೆ... ಮುಂದಿನ ತಲೆಮಾರುಗಳಲ್ಲಿ ಇನ್ನಷ್ಟು ಅಂಗವಿಕಲ ಮಕ್ಕಳು ಹುಟ್ಟುತ್ತಾರೆ, ಬುದ್ದಿ ಮಾಂದ್ಯತೆ ಹೆಚ್ಚಾಗಲಿದೆ, ಸಾವಿನ ವಯಸ್ಸು ಹಿಂದಕ್ಕೆ ಬರಲಿದೆ, ಬದುಕು ನಿರಂತರ ಔಷಧಿಯ ಮೇಲೆ ನಿಲ್ಲುವಂತಾಗುತ್ತದೆ. ಮತ್ತು ಇವೆಲ್ಲ ಇನ್ನು ಮುಂದೆ ಪಕ್ಕದ ಮನೆಯವರಿಗೆ ಆಗುವುದಲ್ಲ!
ಕ್ರಿಯಾಶೀಲ ಅರಿವಿನ ಜಲಪಾತ ಆದಷ್ಟು ಬೇಗನೆ ಧುಮುಕಲಿ
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ