ತಿಮ್ಮಾಪೂರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಸೆ. 16 ಹಾಗೂ 28 ರಂದು ಹತಾರ ಸೇವೆ, ಹೇಳಿಕೆ, ಸುತಗಾಯಿ ಒಡೆಯುವ ಕಾರ್ಯಗಳು ಸಡಗರ ಸಂಭ್ರಮದಿoದ ನೆರವೇರಿದವು.
ಸೆ.16ರಂದು ಶನಿವಾರ ರಾತ್ರಿ 8 ಘಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಗಾಲಿನಿಂದ ತಿಮ್ಮಾಪೂರದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಕಿರಸೂರ ಗ್ರಾಮಕ್ಕೆ ತೆರಳಿದೆವು. ನಂತರ ಅಲ್ಲಿನ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡಗಲಿ ಸಮೀಪದ ಮಲಪ್ರಭಾ ನದಿಗೆ ಹೋಗಿ ಸ್ನಾನ ಮಾಡಿದ ನಂತರ ನದಿಯಲ್ಲಿ ಪೂಜೆ ಪುನಸ್ಕಾರಗಳು ನಡೆದವು. ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ಅಲ್ಲಿಯ ಹನಮಂತ ದೇವರಿಗೆ ಪೂಜೆ ಸಲ್ಲಿಸಿ ನಂತರ ಅಲ್ಲಿ ಮುಂಜಾನೆ 4 ರ ಸುಮಾರಿಗೆ ಹನಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಪೂಜಾರಿ (ಸಜೀವಪ್ಪ ಪೂಜಾರಿ) ದೈವಾಧೀನ ಕಾಲೋಚಿತ ಉತ್ತರಿ ಹಸ್ತ ಚಿತ್ತಿ ಸಾದಾರನ ಮಳಿ ಸಾದರನ ಬೆಳೆ ಎಂಬ ಗೂಡಾರ್ಥದ ಹೇಳಿಕೆಯನ್ನು ಹೇಳಿದರು. ನಂತರ ಪಲ್ಲಕ್ಕಿ ಹಾಗೂ ಭಕ್ತರು ತಿಮ್ಮಾಪೂರ ಗ್ರಾಮಕ್ಕೆ ಬಂದು ತಲುಪಿದರು.
ಸೆ.17ರಂದು ಭಾನುವಾರ ಬೆಳಿಗ್ಗೆ ಎರಡೂ ದೇವರಿಗೆ ರುದ್ರಾಭಿಷೇಕ, ಕಳಸದ ಮೆರವಣಿಗೆ, ಗೋಪುರಕ್ಕೆ ಕಳಸಾರೋಹಣ, ಹೊಳೆಯಿಂದ ತಂದ ನೀರನ್ನು ದೇವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರಸೇವೆ ನಡೆಯಿತು.
ಅಂದು ಸಾಯಂಕಾಲ ಪೂಜಾರಿ ಮನೆಯಿಂದ ‘ಮಾವಿನ ಮರತಪ್ಪ’ ಎಂಬ ಹತಾರಸೇವೆ ಹನಮಂತ ದೇವರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ನಂತರ ಹನಮoತ ದೇವರ ಅರ್ಚಕ ಬಸವರಾಜ ಯಮನಪ್ಪ ಪೂಜಾರವರು ಭರಮದೇವರ ಕಟ್ಟೆಯ ಮೇಲೆ ನಿಂತು "ಉತ್ತರಿ ಹಸ್ತ ಚಿತ್ತಿ ಸದರನ ಮಳೆ ಸಾದಾರನ ಬೆಳೆ" ಎಂಬ ಗೂಡಾರ್ಥದ ಹೇಳಿಕೆ ಹೇಳಿದರು.
ಇದೇ ಸಂದರ್ಭದಲ್ಲಿ ಸುತಗಾಯಿ ಒಡೆಯುವ ಕಾರ್ಯ ಸಂಭ್ರಮದಿಂದ ಜರುಗಿತು. ಈ ಜಾತ್ರೆಯಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು ಎಂದು ವ್ಯಾಪಾರಸ್ಥರು ತಿಳಿಸಿದರು. ಜಾತ್ರೆಯ ಅಂಗವಾಗಿ ಗ್ರಾಮದ ಪ್ರತಿಯೊಂದು ಮನೆಗಳ ಮುಂದೆ ರಂಗೋಲಿ ಓಣಿಗಳಲ್ಲಿ ಕಳಸದ ಮೆರವಣಿಗೆ ಸಂದರ್ಭದಲ್ಲಿ ಪೂಜೆ, ಕಾಯಿ ಒಡೆಯುವುದು ಮುಂತಾದ ಸಂಪ್ರದಾಯ ಪದ್ಧತಿಗಳು ಸಾಮಾನ್ಯವಾಗಿ ಕಂಡುಬoದವು.
ಈ ಜಾತ್ರಾ ಮಹೋತ್ಸವದಲ್ಲಿ ಚಿತ್ತರಗಿ, ಕಿರಸೂರ, ಹಡಗಲಿ, ಬೇವೂರ, ಹಳ್ಳೂರ, ಭಗವತಿ, ಹುನಗುಂದ, ಇಲಕಲ್ಲ ಮುಂತಾದ ಗ್ರಾಮಗಳ ಸದ್ಭಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿಯ ನಮನ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಪ್ರತಿ ವರ್ಷ ಮಾರುತೇಶ್ವರ ಮತ್ತು ಶ್ರೀ ಬಸವೇಶ್ವರ ಜಾತ್ರೆ ಹುಬ್ಬಿ ಮಳೆ ಕೊನೆಯ ವಾರದಲ್ಲಿ ಹಾಗೂ ಉತ್ತರಿ ಮಳೆ ಆರಂಭಗೊಳ್ಳುವ ಸಮಯದಲ್ಲಿ ದೇವರಿಗೆ ನೀರು ಹಾಕುವುದರೊಂದಿಗೆ ಆರಂಭವಾಗುವ ಈ ಜಾತ್ರೆಯು ಹಲವು ವಿಧಿ ವಿಧಾನ ಮತ್ತು ಸಂಪ್ರದಾಯಗಳನ್ನು ಆಚರಿಸುವ ವಿಶೇಷತೆ ಇಲ್ಲಿದೆ.
ಗಣ್ಯರ ಭೇಟಿ:
ಬಾಗಲಕೊಟೆಯ ಮಾಜಿಸಚಿವರಾದ ಎಸ್.ಆರ್. ಪಾಟೀಲ್ ಅವರ ಪತ್ನಿ ಉಮಾದೇವಿ ಪಾಟೀಲ್ ಅಳಿಯ ರಾಹುಲ್ ಗೌಡ ನಾಡ್ಗೌಡರ ಎಸ್ಆರ್ ಪಾಟೀಲ್ ಅವರ ಪುತ್ರಿ ಅನುಷಾ ನಾಡ್ಗೌಡರ ಸಾಹಿತಿಗಳಾದ ಜಿ.ಕೆ ತಳವಾರ ಹನಮಂತ ಜುಟ್ಟಲ್ ಎಸ್. ಎಸ್. ಹಳ್ಳುರ ಗ್ರಾಮದ ಗಣ್ಯರು ಭೇಟಿ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ