ಮೂಡುಬಿದಿರೆ: ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳು ತಾತ್ಕಲಿಕವಾಗಿದ್ದು, ಈ ಸಮಸ್ಯೆಗಳಿಗೆ ನಮ್ಮಲ್ಲೆ ಪರಿಹಾರವಿರುತ್ತದೆ. ತೊಡಕುಗಳು ಬಂದಾಗ ಧೈರ್ಯದಿಂದ ಹಿಮ್ಮೆಟ್ಟಿಸುವ ಎದೆಗಾರಿಕೆ ಬೆಳೆಸಿಕೊಂಡಿರಬೇಕೇ ಹೊರತು, ಬದುಕನ್ನೆ ಕೊನೆಗೊಳಿಸುವ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ಕುಮಾರ್ ನಾಯ್ಕ ತಿಳಿಸಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಬುಧವಾರ 2023-24ನೇ ಸಾಲಿನ ವಿದ್ಯಾರ್ಥಿ ಸೇರ್ಪಡೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಯೋಜಿಸಲಾದ ‘ಆಳ್ವಾಸ್ ಆಗಮನ’ದ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳಿತು. ಅಪರಿಚಿತ ಹಾಗೂ ಅನಪೇಕ್ಷಿತ ವ್ಯಕ್ತಿಗಳಿಂದ ಬರುವ ಸ್ನೇಹದ ವಿನಂತಿಗಳನ್ನು ಸ್ವೀಕರಿಸಬೇಡಿ. ಹೆಚ್ಚಿನ ಸಂಧರ್ಭದಲ್ಲಿ ಸುಂದರ ಹುಡುಗಿಯ/ ಹುಡುಗನ ಪೋಟೋ ಬಳಸಿ ಬರುವ ಫ್ರೆಂಡ್ ರಿಕ್ವೆಸ್ಟ್ಗಳ ಅಸಲಿಯತ್ತೆ ಬೇರೆ ಇರುತ್ತದೆ. ಲೋನ್ ಆ್ಯಪ್ಗಳ ಡೌನಲೋಡ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಯಾವುದೇ ಹೊಸ ಆ್ಯಪ್ಗಳನ್ನು ಡೌನಲೋಡ್ ಮಾಡಿಕೊಳ್ಳುವಾಗ ಷರತ್ತುಗಳನ್ನು ಗಮನವಿಟ್ಟು ಓದಿ. ಸಾಮಾಜಿಕ ಮಾಧ್ಯಮಗಳಲ್ಲಿ ಕನಿಷ್ಠ ಹೆಜ್ಜೆ ಗುರುತುಗಳನ್ನು ಬಿಡುವುದು ಲೇಸು. ಸೈಬರ್ ಅಪರಾಧಗಳಾದ ಲಾಟರಿ ವಂಚನೆ, ಲೋನ್ ಆ್ಯಪ್ ವಂಚನೆ, ಒಟಿಪಿ/ಸಿವಿವಿ ವಂಚನೆ, ರಿಮೋಟ್ ಆ್ಯಕ್ಸ್ಸ್ ಬಳಸಿ ವಂಚನೆ, ಫಿಶಿಂಗ್, ಸೆಕ್ಸ್ಟೋರ್ಷನ್, ಉದ್ಯೋಗ ವಂಚನೆ, ಡೀಪ್ಫೇಕ್ ಹಾಗೂ ಧ್ವನಿ ಕ್ಲೋನಿಂಗ್, ಕ್ರಿಪ್ಟೋ ಕರೆನ್ಸಿ ವಂಚನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಶೇಷ:
ನಮ್ಮಲ್ಲಿ ಹೆಚ್ಚಿನವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಅಕೌಂಟ್ಗಳ ಮಾಹಿತಿಗಳನ್ನು ಹಾಗೂ ಬ್ಯಾಂಕ್, ಜೀ ಮೈಲ್, ಎಟಿಎಮ್ ಪಾಸ್ವರ್ಡ್ಗಳನ್ನು ಮೊಬೈಲ್ನಲ್ಲಿ ಸಂಗ್ರಹಿಸಿಡುತ್ತಾರೆ. ಇದು ವಂಚಕರಿಗೆ ನಮ್ಮ ದತ್ತಾಂಶಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಿದ್ದು, ನಮ್ಮ ಅರಿವಿಗೆ ಬಾರದೆ ನಾವು ವಂಚನೆಗೊಳಗಾಗಿರುತ್ತೇವೆ. ಇಂತಹ ತಪ್ಪುಗಳನ್ನು ಯಾರು ಮಾಡಬೇಡಿ ಎಂದು ಸಲಹೆ ನೀಡಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾದಕ ವ್ಯಸನಗಳಿಗೆ ಆಕರ್ಷಿತರಾಗುವುದು ಬೇಗ. ಸಹಪಾಠಿಗಳ ಒತ್ತಡ, ಮನಸ್ಸನ್ನು ಒತ್ತಡದಿಂದ ಶಾಂತಗೊಳಿಸಲು, ಆಕಸ್ಮಿಕವಾಗಿ ಅವಕಾಶ ಸಿಕ್ಕಾಗ ಸೇವನೆ, ಹೊಸ ವಸ್ತುಗಳೆಡೆಗೆ ಆಕರ್ಷಣೆಯಂತಹ ಅಂಶಗಳ ಆರಂಭದಲ್ಲಿ ಮಾದಕ ವ್ಯಸನದ ಸಹ್ಯ ಬೆಳಸಲು ಕಾರಣವಾಗಿರುತ್ತವೆ. ಕ್ರಮೇಣ ಈ ಚಟಗಳು ನಮ್ಮ ಕೈಮೀರಿ ಸುಂದರ ಬದುಕನ್ನೆ ನಾಶ ಮಾಡುತ್ತವೆ. ಮಾದಕ ವಸ್ತು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎನ್ಡಿಪಿಎಸ್ ಕಾಯಿದೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವವರಿಗೆ ಶಿಕ್ಷೆ ವಿಧಿಸುವುದರೊಂದಿಗೆ ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷಿಸುವ ಅಧಿಕಾರ ಪೆÇಲೀಸರಿಗೆ ಇರುವುದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್ ಇದ್ದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ ಕ್ಯಾಥ್ರಿನ್ ನಿರ್ಮಲಾ ನಿರೂಪಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ಪ್ರಮೀಳಾ ಕೊಳಕೆ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ