ನಿಟ್ಟೆ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ವಿದ್ಯಾಸಂಸ್ಥೆಗಳಾಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್ ಕೋರ್ಸ್ ಹಾಗೂ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿವಿಧ ಕೋರ್ಸ್ ಗಳಿಗೆ 2023 ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ನೂತನ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮವು ಜು.31 ರಂದು ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ಜರುಗಿತು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್.ವಿನಯ ಹೆಗ್ಡೆ ಅವರು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. 'ಇಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಂಡು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮತಮ್ಮ ಐಚ್ಛಿಕ ವಿಷಯಗಳಲ್ಲಿ ಸಮರ್ಥ ಬೆಳವಣಿಗೆ ತೋರುವುದು ಅಗತ್ಯ. ನಿಟ್ಟೆ ವಿದ್ಯಾಸಂಸ್ಥೆಯು ನಿಮ್ಮನ್ನು ಈ ದೃಷ್ಠಿಯಲ್ಲಿ ತಯಾರುಮಾಡಲು ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ವಿದ್ಯೆ ಹಾಗೂ ಉದ್ಯೋಗದೊಂದಿಗೆ ವಿದ್ಯೆನೀಡಿದ ಸಂಸ್ಥೆ ಹಾಗೂ ಸಿಬ್ಬಂದಿಗಳನ್ನು ಸದಾನೆನೆಯಬೇಕು. ತಾಂತ್ರಿಕ ಶಿಕ್ಷಣದೊಂದಿಗೆ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ವೃದ್ದಿಯ ಹಿನ್ನಲೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಷಯಗಳಿಗೂ ಸಮಾನ ಮಹತ್ವವನ್ನು ನೀಡುವುದು ಅಗತ್ಯ' ಎಂದು ಅವರು ಹೇಳಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೋ.ಡಾ. ಗೋಪಾಲ್ ಮುಗೇರಾಯ ಅವರು ಮಾತನಾಡಿ ನಿಟ್ಟೆ ವಿದ್ಯಾಸಂಸ್ಥೆಯ ಇತಿಹಾಸ, ಬೆಳೆದುಬಂದ ಹಾದಿ ಹಾಗೂ ಸಮಾಜದ ಏಳಿಗೆಯಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಪಾತ್ರದ ಬಗೆಗೆ ನೂತನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವರಿಸಿದರು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ದೊರೆಯಬಹುದಾದ ಅವಕಾಶಗಳ ಬಗೆಗೆ ವಿವರಿಸಿದರು.
ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಡಾ.ಪ್ರಸಾದ್ ಶೆಟ್ಟಿ, ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ನ ಸಹಕುಲಸಚಿವೆ ಡಾ.ರೇಖಾ ಭಂಡಾರ್ಕರ್, ಸಹಪರೀಕ್ಷಾಧಿಕಾರಿ ಡಾ.ಸುಬ್ರಹ್ಮಣ್ಯ ಭಟ್, ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಬಿ.ಕೆ, ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ.ಐ ರಮೇಶ್ ಮಿತ್ತಂತಾಯ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕಿ ಡಾ.ರಶ್ಮೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ನಿಟ್ಟೆ ಸಮೂಹ ಸಂಸ್ಥೆಯ ಹಾಗೂ ಅದು ಬೆಳೆದು ಬಂದ ಹಾದಿಯ ಬಗೆಗೆ ಮಾತನಾಡಿದರು. ಉಪಪ್ರಾಂಶುಪಾಲ ಹಾಗೂ ಡೀನ್ ಎಕಾಡೆಮಿಕ್ಸ್ ಡಾ.ಐ ರಮೇಶ್ ಮಿತ್ತಂತಾಯ ಪಠ್ಯಕ್ರಮ, ತರಗತಿಗಳ ಬಗೆಗೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ವಿವರಿಸಿ ಪೋಷಕರ ಜೊತೆ ಸಂವಾದ ನಡೆಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ