ಮಂಗಳೂರು: ಗುರುಕುಲ ಪ್ರತಿಷ್ಠಾನ ದಕ್ಷಿಣ ಕನ್ನಡ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಸಡಗರವನ್ನು ಸಾಹಿತ್ಯ ಗೋಷ್ಠಿಯ ಮೂಲಕ ಸ್ಥಳೀಯ ಸ್ಕೌಟ್ ಮತ್ತು ಗೈಡ್ಸ್ ಸಭಾ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಉತ್ಸವದ ಅಂಗವಾಗಿ ಮೂವರು ಸಾಧಕರಿಗೆ ಸನ್ಮಾನ ಮತ್ರು ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಹಮ್ಮಿ ಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಾನಸಾ ಕೈಂತಜೆಯವರ ಸಾರಥ್ಯದಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ವಹಿಸಿದ್ದರು. ಅವರು ಮಾತನಾಡುತ್ತಾ ಸಾಹಿತ್ಯಕ್ಕೆ ಪರಿಧಿಯೇ ಇಲ್ಲ ಎನ್ನುತ್ತಾ ದೇಶ ವಿದೇಶಗಳಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿರುವ ಔಚಿತ್ಯವನ್ನು ಕೊಂಡಾಡಿದರು. ಒಂದು ಉತ್ತಮ ಸ್ವಾತಂತ್ರ್ಯ ಸಂಭ್ರಮದ ಈ ಗಳಿಗೆ ಅತ್ಯಮೂಲ್ಯ ಎಂದರು.
ಮುಖ್ಯ ಅತಿಥಿಗಳಲ್ಲೊಬ್ಬರಾದ ಮಂಗಳೂರಿನ ಮೂಲವ್ಯಾಧಿ ಮತ್ತಿತರ ರೋಗಗಳ ಮಿಶ್ರಪದ್ಧತಿ ತಜ್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿಯವರು ಗುರುಕುಲ ಎಂಬ ಅನ್ವರ್ಥ ನಾಮಧೇಯದ ಈ ಸಂಸ್ಥೆಯ ಕಾರ್ಯ ವೈಖರಿಗಳು ಜನ ಸಂಕುಲದಲ್ಲಿ ಭಾವ ಯಾನ ಮಾಡಿಸುತ್ತವೆ ಎನ್ನುತ್ತಾ ಸ್ವರಚಿತ ದೇಶ ಭಕ್ತಿ ಗೀತೆಯನ್ನು ವಾಚಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಡಿ.ಐ ಅಬ್ಬು ಬೋಕರ್ ಕೈರಂಗಳ ಅವರು ಗುರುಕುಲದ ಕಾರ್ಯಕ್ರಮಗಳು ತನಗೆ ಅತೀವ ಆಪ್ಯಾಯಮಾನ ಹಾಗೂ ಮುಂದೆಯೂ ಜನಹಿತ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿ ಕವನವನ್ನು ಓದಿದರು.
ಇನ್ನೋರ್ವ ಮುಖ್ಯ ಅತಿಥಗಳಾಗಿದ್ದ ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್ ಶುಭ ಕೋರಿದರು
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ ಕಜೆಯವರು ಮಾತನಾಡುತ್ತಾ, ಕೇವಲ ಧ್ವಜಾರೋಹಣ ಹಾಗೂ ಭಾಷಣಗಳಿಗೆ ಸೀಮಿತ ಗೊಳಿಸದೆ ಸಾಹಿತ್ಯಾಸ್ವಾದನೆಯ ಮೂಲಕ ಸ್ವಾತಂತ್ರ್ಯದ ಮಹತ್ವ ಸಾರಿದ ಈ ಗೋಷ್ಠಿ ಬಹು ಮೌಲ್ಯ ಪಡೆಯುತ್ತದೆ ಎಂದರು.
ಅನಂತರ ನಡೆದ ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದ ಸನ್ಮಾನಿತರಲ್ಲೊಬ್ಬರಾದ ಕುಡುಮಲ್ಲಿಗೆ ಕೃಷ್ಣ ಶೆಟ್ಟಿಯವರು ಚುಟುಕಿನಿಂದ ಆರಂಭವಾಗುವ ಸಾಹಿತ್ಯ ಹಲವಾರು ಮಜಲುಗಳನ್ನು ಪಡೆದಿದೆ. ಸಾಕಷ್ಟು ಯಕ್ಷಗಾನ ಪ್ರಸಂಗಗಳನ್ನು ತಾನು ಬರೆದಿದ್ದು ಅದಕ್ಕೆ ಸಾಹಿತ್ಯವೇ ಸ್ಪೂರ್ತಿ ಎಂದರು.
ಗುರುಕುಲ ಬಳಗದ ಡೊಂಬಯ್ಯ ಇಡ್ಕಿದು ಸ್ವಾಗತಿಸಿ, ಮಾನಸಾ ಕೈಂತಜೆ ಧನ್ಯವಾದ ಸಮರ್ಪಿಸಿದರು. ಪುಷ್ಪಲತಾ ಮತ್ತು ಸಾಕ್ಷಿಯವರು ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಸಂಸ್ಥೆಯ ಯು.ಆರ್ ಶಟ್ಟಿ ಮತ್ತು ಹಿರಿಯ ಬರಹಗಾರ ಕೊಳ್ಚಪ್ಪೆ ಗೋವಿಂದ ಭಟ್, ಗುಣಾಜೆ ರಾಮಚಂದ್ರ ಭಟ್, ಯಶವಂತ ಕುದ್ರೋಳಿ, ಅನಿತಾ ಶೆಟ್ಟಿ, ರೇಖಾ ಸುದೇಶ ರಾವ್, ಡಾ ಮಂಜುನಾಥ, ಶಿವಪ್ರಸಾದ್ ಬೋಳಂತೂರು, ಸತೀಶ್ ಬೆಳಿಯೂರು, ಆಕೃತಿ ಭಟ್, ವಿಂದ್ಯಾ ಎಸ್ ರೈ, ಹರೀಶ ಮೋಟುಗಾನ, ಆರದಯನ್ ಸವಣಾಲು, ಜ್ಯೂಲಿಯೆಟ್ ಪಿರೇರಾ, ಕುಮಾರಿ ಸೃಷ್ಟಿ ಮೊದಲಾದ ಇಪ್ಪತ್ತೈದು ಹಿರಿಯ ಕಿರಿಯ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.
ವರದಿ - ಡಾ ಸುರೇಶ ನೆಗಳಗುಳಿ, ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ