ದಿನಾಂಕ 28 ರಂದು ಚಂದ್ರಶೇಖರ ಏತಡ್ಕ ಅವರ ಮನೆಯಲ್ಲಿ ರಾಮನೈವೇದ್ಯಕ್ಕೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಎಂದು ತಿಳಿದಾಗಲೇ ಹೋಗಬೇಕೆಂಬ ಬಯಕೆ ಮೂಡಿತ್ತು. ಇಷ್ಟರವರೆಗೆ ತಿಂದು ಗೊತ್ತಿರದ ಆಟಿಗಂಜಿ ಇದೆಯೆಂದು ಗೊತ್ತಾದ ಮೇಲಂತೂ ತುದಿ ಕಾಲಿನಲ್ಲಿದ್ದೆ. ಆ ಸಮಯಕ್ಕೆ ಸರಿಯಾಗಿ ಈಶ್ವರಿಯತ್ತೆ ಕರೆದಾಗ, ಕೃಷಿ ಆಸಕ್ತಳಾದ ನಾನು ಓಡೋಡಿ ಬಂದವಳು. ಹೀಗೆ ನನಗೆ ಭಾಗವಹಿಸುವ ಅವಕಾಶ ದೊರೆಯಿತು.
ಅಲ್ಲಿ ತಲುಪಿದಾಗ ಅಪರೂಪದ ಮಾತೆಯರನ್ನೆಲ್ಲಾ ಕಂಡು ಖುಷಿಯಾಯಿತು. ಹಲಸಿನ ಎಲೆಯಿಂದ ತಯಾರಿಸುವ ಚಿಳ್ಳೆಯನ್ನು(ಹಲಸಿನ ಚಮಚ) ಕಿರಣತ್ತೆ ಹಾಗೂ ಈಶ್ವರಿಯತ್ತೆಯರು ಕಲಿಸಿ ಕೊಟ್ಟರು. ನಮ್ಮ ಈ ಕಾಲದ ಚಮಚದ ಬದಲಾಗಿ ಪ್ರಾಕೃತಿಕವಾದ ವಸ್ತುಗಳಿಂದ ಮಾಡಿದ, ನಮ್ಮ ಹಿರಿಯರು ಬಳಸುತ್ತಿದ್ದ ಚಿಳ್ಳೆ ತಯಾರಿಕೆಯನ್ನು ಕಲಿತೆ. ನಮ್ಮ ಹಳ್ಳಿಯ ವೈಶಿಷ್ಟ್ಯತೆಗೆ, ಸೃಜನಶೀಲತೆಗೆ ಹಿಡಿದ ಕನ್ನಡಿಯಲ್ಲವೇ ಅದು? ಅದನ್ನು ಕಲಿತು ಬಹಳ ಖುಷಿಯಾಯಿತು.
ಅನಂತರ ಕೆಸವಿನ ಎಲೆಯಲ್ಲಿ ಚೇಟ್ಲ, ಹಲಸಿನ ಸೊಳೆ ಹಾಗೂ ಹಲಸಿನ ಬೇಳೆಗಳನ್ನುಪಯೋಗಿಸಿ ಆಟಿ ತಿಂಗಳಿನಲ್ಲಿ ಪದಾರ್ಥ ಮಾಡುವುದು ನಮ್ಮ ಹಳ್ಳಿಯಲ್ಲಿ ವಾಡಿಕೆಯಂತೆ. ಅಂತಹ ಚೇಟ್ಲ ಮಾಡುವುದನ್ನು ಕಲಿತಂತಾಯಿತು. ಇದೊಂದು ಹೊಸ ಅನುಭವ.
ತದನಂತರ ನೇಜಿ ಕಟ್ಟನ್ನು ಹಿಡಿದು ಭತ್ತದ ಗದ್ದೆಯತ್ತ ಹೆಜ್ಜೆ ಹಾಕಿದೆವು. ಅಲ್ಲಿ ಮೊದಲು ಗುರುವಂದನೆ, ಗೋ ವಂದನೆಗಳನ್ನು ಮಾಡಿ ಆಟಿ ತಿಂಗಳ ವಿಶೇಷವಾದ ಆಟಿ ಗಂಜಿಯನ್ನು ಹಾಳೆ ತಟ್ಟೆಯಲ್ಲಿ ಹಾಕಿ ನಾವೇ ತಯಾರಿಸಿದ ಚಿಳ್ಳೆಯಲ್ಲಿ ಸವಿದಾಗ ಅದರ ಅನುಭವದ ಸುಖವೇ ಬೇರೆ.
ಆಮೇಲೆ ಗದ್ದೆಗಿಳಿದು ಕೆಸರು ಗದ್ದೆ ಓಟ, ಕಬಡ್ಡಿ ಇತ್ಯಾದಿ ಆಟಗಳನ್ನು ಆಡಿದ ಆ ಗಮ್ಮತ್ತು ಮಾತ್ರ ಅನನ್ಯ. ತುಳುನಾಡಿನಲ್ಲಿ ನೇಜಿ ನೆಡುವ ಸಂದರ್ಭದಲ್ಲಿ ನಡೆದ ಘಟನೆಗಳನ್ನೂ, ಕೆಲವು ಕಥೆಗಳನ್ನೂ ಹಾಡುತ್ತಾ ಸಾಲು ಸಾಲಿಗೂ 'ಓಬೇಲೆ ಓಬೇಲೆ' ಎನ್ನುತ್ತಾ ಹಾಡುವುದು ಮೊದಲಿನಿಂದ ನಡೆದು ಬಂದ ಆಚರಣೆ. ಅದರಂತೆ ಇಲ್ಲಿ ಅನ್ನಪೂರ್ಣತ್ತೆ ಓಬೇಲೆ ಎಂದು ಹಾಡಿದಾಗ ನಾವೆಲ್ಲರೂ ದನಿಗೂಡಿಸಿದೆವು. ಆಗ ನಮ್ಮ ಪೂರ್ವಜರ ಕೃಷಿ ಜೀವನದ ತುಣುಕೊಂದರ ರುಚಿ ಸಿಕ್ಕಿದ ಅನುಭವವಾಗಿತ್ತು.
ನೀರಾಟ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ?ಮುಂದೆ, ಪುಟ್ಟ ತೊರೆಯ ಶುದ್ಧವಾದ, ತಂಪಾದ ನೀರಿನಲ್ಲಿ ಆಟವಾಡಿದುದು ಮುದ ನೀಡಿತ್ತು.
ಅನಂತರ ಭತ್ತವನ್ನು ಎಣಿಸುವ ಒಂದು ಪುಟ್ಟ ಸ್ಪರ್ಧೆಯನ್ನೇರ್ಪಡಿಸಿ ತನ್ಮೂಲಕ ಅಕ್ಕಿಯ, ಭತ್ತ ಕೃಷಿಯ ಮಹತ್ವವನ್ನು ತಿಳಿಸಿ ಕೊಟ್ಟ ಪರಿ ಅನನ್ಯ.
ನಮಗೆಲ್ಲಾ ಆಟಿಗಂಜಿಯ ಕಿಟ್ ಒದಗಿಸಿ ಉತ್ತಮ ಆಟಿಗಂಜಿಯನ್ನುಣ್ಣುವಂತೆ ಮಾಡಿ, ಅದರ ಮಹತ್ವವನ್ನು ಮನದಾಳಕ್ಕಿಳಿಯುವಂತೆ ತಿಳಿಸಿ ಕೊಟ್ಟವರು ಡಾ. ಶಿವಕುಮಾರ್ ಅಡ್ಕ ಅವರು. ಆ ವಿಷಯ ನನಗೆ ತುಂಬಾ ಇಷ್ಟವಾಗಿತ್ತು.
ನಮ್ಮ ಪರಂಪರೆ ಆಹಾರ, ವಿಚಾರ, ಸಂಸ್ಕೃತಿಗಳು ಮುಂದುವರಿಯಬೇಕೆಂಬುದು ನಮ್ಮ ಮಾತೆಯರ ಉದ್ದೇಶವಾಗಿತ್ತು. ಆದ್ದರಿಂದ ಊಟದಲ್ಲಿಯೂ ಪ್ರತಿಯೊಂದು ಪದಾರ್ಥವೂ ಕೂಡಾ ಸಾಂಪ್ರದಾಯಿಕವಾಗಿತ್ತು.ಅದರ ರುಚಿಯೇ ವಿಶೇಷವಾಗಿತ್ತು. ಆದ್ದರಿಂದ ಹೊಸ ರುಚಿಗಳನ್ನು ಸವಿಯುವಂತಾಯಿತು.
ಒಟ್ಟಿನಲ್ಲಿ ಈ ಒಂದು ಕಾರ್ಯಗಾರದಲ್ಲಿ ಅನೇಕ ವಿಷಯಗಳನ್ನು ಕಲಿತಿದುದರಲ್ಲಿ ಸಂಶಯವಿಲ್ಲ. ಕಲಿವಿಕೆಯ ಜೊತೆಯಲ್ಲಿಯೇ ಆ ಕ್ಷಣಗಳನ್ನು ಆನಂದಿಸಲು ಲಭಿಸಿದ್ದು ವಿಶೇಷವೇ ಅಲ್ಲವೇ? ಅಂತೆಯೇ ಶ್ರೀ ರಾಮ ನೈವೇದ್ಯಕ್ಕೆ ಭತ್ತ ಬೆಳೆಸುವಲ್ಲಿ ನನ್ನದೊಂದು ಅಳಿಲುಸೇವೆ ಸಲ್ಲಿಸಲು ದೊರೆತಿದ್ದು ನನ್ನ ಸೌಭಾಗ್ಯವೇ ಸರಿ.
- ಶ್ರೀಜಾ ಉದನೇಶ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ