ಮಂಗಳೂರು: ಕಲೆಗಳಲ್ಲಿ ಬದಲಾವಣೆಗಳು ಸಹಜ. ಆದರೆ ಪ್ರೇಕ್ಷಕನಿಗಾಗಿ ಈ ಬದಲಾವಣೆ ಬೇಡ. ಕಲೆಗಳು ಸ್ವತಂತ್ರವಾಗಿರುತ್ತವೆ. ಕಲಾವಿದ ಅದಕ್ಕೆ ಅನಿವಾರ್ಯ ಅಲ್ಲ, ಕಲಾವಿದ ಕಲೆಯಿಂದಾಗಿ ಬೆಳೆಯುತ್ತಾನೆ. ಯಕ್ಷಗಾನದಲ್ಲಿ ಗುರುಸ್ಥಾನದಲ್ಲಿ ನಿಂತು ಮಾಡಿದ ಸತ್ಕಾರ್ಯಕ್ಕೆ ಯಕ್ಷಾರಾಧನಾ (ರಿ) ಕೇಂದ್ರದ ನಿರ್ದೇಶಕಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ ಮತ್ತು ಅವರ ಬಳಗ ನನ್ನನ್ನು ಯಕ್ಷಶಿಕ್ಷಣ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಂತಹ ಗುರು ಪರಂಪರೆಯನ್ನು ಎಲ್ಲರೂ ಮುಂದುವರಿಸಲಿ ಎಂದು ಯಕ್ಷ ಗುರು ವರ್ಕಾಡಿ ರವಿ ಅಲೆವೂರಾಯ ಹೇಳಿದರು. ಅವರು ಪುರಭವನದಲ್ಲಿ 14ನೇ ವರ್ಷದ ಯಕ್ಷಾರಾಧನಾ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ನಡೆದ ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದರು.
ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ಹರಿನಾರಾಯಣದಾಸರು, ಕಲೆಗಳಲ್ಲಿ ಸಾತ್ವಿಕ ಭಾವದ ಅವಶ್ಯಕತೆ ಇದೆ. ಅದರ ಪ್ರತಿಪಾದನೆ ಕಲಾವಿದನ ಮೂಲಕ ಆಗಿ ಪಾತ್ರದ ಪರಕಾಯ ಪ್ರವೇಶದಿಂದ ಕಲಾವಿದ ಮತ್ತು ಕಲೆ ಬೆಳಗುತ್ತದೆ. ಸುಮಂಗಲಾರತ್ನಾಕರ ರಾವ್ ರವರ 14 ವರ್ಷಗಳ ಪ್ರಯತ್ನದಿಂದಾಗಿ ಅನೇಕ ಕಲಾವಿದರು ಸಿದ್ಧರಾಗಿದ್ದಾರೆ ಎಂದು ನುಡಿದರು.
ಶ್ರೀಮತಿ ಸುಮಂಗಲಾ ರತ್ನಾಕರ್ ಸ್ವಾಗತಿಸಿದರು. ವಕೀಲ ಶಶಿರಾಜ್ ಕಾವೂರು ಧನ್ಯವಾದವಿತ್ತರು. ರಂಗೋಲಿಯ ಮಾಲಕರಾದ ಚಂದ್ರಹಾಸ ಶೆಟ್ಟಿ, ಡಾ. ಹರಿಕೃಷ್ಣ ಪುನರೂರು, ಮ.ನ.ಪಾ. ಸದಸ್ಯರಾದ ಜಗದೀಶ ಶೆಟ್ಟಿ, ರಾಧಾಕೃಷ್ಣ. ನಿವೃತ್ತ ಅಧ್ಯಾಪಕಿ ಕಲಾವತಿ, ಯಕ್ಷಕಲಾವಿದ ರಾಕೇಶ್ ರೈ ಅಡ್ಕ, ಟ್ರಸ್ಟಿ ರತ್ನಾಕರ ರಾವ್ ಉಪಸ್ಥಿತರಿದ್ದರು.