ಪತ್ರಿಕೋದ್ಯಮದಲ್ಲಿ ಮಾನವೀಯತೆಯ ಸೆಲೆ ಚಿಮ್ಮಿ ಹರಿಯವಂತಾಗಬೇಕು: ಡಾ.ಎಂ. ಮಹ್ಮದ್ ಬಾಷಾ ಗೂಳ್ಯಂ

Upayuktha
0

              ಪತ್ರಕರ್ತರಾಗಿ ಮಹಾತ್ಮಾ ಗಾಂಧೀಜಿ-ವಿಶೇಷ ಉಪನ್ಯಾಸ

ಬೆಂಗಳೂರು: ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಾರಂಭವಾಗಿ ಇಂದಿಗೆ 180 ವರ್ಷಗಳು ಸಂದಿವೆ . ಆ ದಿನದ ನೆನೆಪಿಗೆ ಆಚರಿಸುವ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಮಲ್ಲೇಶ್ವರ 8ನೇ ಅಡ್ಡರಸ್ತೆಯ ಬಿ.ಇ.ಎಸ್. ವಿದ್ಯಾಸಂಸ್ಥೆ ಸಭಾಂಗಣದಲ್ಲಿ  ‘ಪತ್ರಕರ್ತರಾಗಿ ಮಹಾತ್ಮಾ ಗಾಂಧೀಜಿ’ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ದಿ ಡೈಲಿ ನ್ಯೂಸ್ ಕನ್ನಡ ದೈನಿಕ ಸಂಪಾದಕರಾದ ಡಾ.ಎಂ. ಮಹ್ಮದ್ ಬಾಷಾ ಗೂಳ್ಯಂ ಉಪನ್ಯಾಸಕಾರರಾಗಿ ಆಗಮಿಸಿ ಮಾತನಾಡುತ್ತ, ಇಂದು ಪತ್ರಿಕೋದ್ಯಮ ಹಲವಾರು ಬದಲಾವಣೆಗಳನ್ನು ಕಂಡಿದೆ. ಅದರ ರೀತಿ ಮತ್ತು ಸ್ವರೂಪ ಬದಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಸಮಾಜದ ಕೈಗನ್ನಡಿಯಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತನ್ನದೇ ವಿಶಿಷ್ಠ ಛಾಪು ಮೂಡಿಸುತ್ತ ಬಂದಿದೆ ಎಂದರು. 

ಮಹಾತ್ಮ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರ ಮಾತ್ರವಲ್ಲದೇ, ಪತ್ರಕರ್ತರಾಗಿ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ಬರವಣಿಗೆಗಾರ ಕೂಡ ಹೌದು. ತಾವು ಬದುಕಿದ್ದ ಕಾಲದವರೆಗೂ ಜಗತ್ತು ಕಂಡ ಸರ್ವಶ್ರೇಷ್ಟ ಪತ್ರಕರ್ತರಾಗಿದ್ದರು. ಪತ್ರಿಕೋದ್ಯಮಕ್ಕೆ ಶ್ರೇಷ್ಠ ಮಾನದಂಡ ಹಾಕಿದ ಪತ್ರಕರ್ತ ಗಾಂಧೀಜಿಯವರು ಸ್ವತಃ ತಾವೇ ಹಲವಾರು ಪತ್ರಿಕೆಗಳನ್ನು ನಡೆಸುತ್ತಿದ್ದರು. 

ಆಡುಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಗಾಂಧೀಜಿಯವರು ಬರೆಯದೇ ಇರುವ ವಿಷಯಗಳೇ ಇರಲಿಲ್ಲ. ಇವರ ಬರವಣಿಗೆ ಎಲ್ಲಾ ವಿಷಯಗಳನ್ನು ವ್ಯಾಪಿಸಿರುತ್ತಿದ್ದವು. ಗಾಂಧೀಜಿಯವರ ಪ್ರಕಾರ ಪತ್ರಿಕೋದ್ಯಮ ಎಂದರೆ ಸಾರ್ವಜನಿಕ ಸೇವೆಗಿರುವ ಒಂದು ಪ್ರಮುಖ ಅಸ್ತ್ರ. ಬಾಪೂಜಿಯವರು ಆರು ನಿಯತಕಾಲಿಕೆಗಳೊಂದಿಗೆ ಸಂಪರ್ಕ ಹೊಂದಿದ್ದರು ಹಾಗೂ ನಾಲ್ಕು ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ತಮ್ಮ ಅಂಕಣಗಳ ಮೂಲಕ ನೈರ್ಮಲ್ಯ, ಸ್ವಯಂಶಿಸ್ತು, ಉತ್ತಮ ನಾಗರಿಕತೆಯ ಮಹತ್ವ ಸಾರಿದರು. ಪತ್ರಿಕೋದ್ಯಮದ ಏಕೈಕ ಗುರಿ ಜನತೆಯ ಸೇವೆಯಾಗಿರಬೇಕು ಎಂಬ ತತ್ವದಲ್ಲಿ ಅಪಾರ ನಂಬಿಕೆ ಹೊಂದಿದ್ದರು. ಗಾಂಧೀಜಿಯವರ ಪ್ರಕಾರ ಪತ್ರಿಕೆಯೆಂದರೆ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಸರ್ವಶ್ರೇಷ್ಠ ಮಾಧ್ಯಮ ಎಂದು ಡಾ. ಬಾಷಾ ಗೂಳ್ಯಂ ಅಭಿಪ್ರಾಯ ಪಟ್ಟರು. 

ಕರ್ನಾಟಕ ಸರ್ವೋದಯ ಮಂಡಲದ  ಗೌರವ ಕಾರ್ಯದರ್ಶಿ ಡಾ.ಯ.ಚಿ. ದೊಡ್ಡಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಇ.ಎಸ್. ವಿದ್ಯಾಸಂಸ್ಥೆ ಅಧ್ಯಕ್ಷೆ ಎನ್. ಶ್ರೀಮತಿ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಂಗರಾಜು,  ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲೆ ಕರ್ನಾಟಕ ಸರ್ವೋದಯ ಮಂಡಲ ಹಾಗೂ ಕಾರ್ಯದರ್ಶಿ ಸುಮ ಚಂದ್ರಶೇಖರ್ ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top