ನಾಲ್ವಡಿ ಭೂಪ... ಕರುನಾಡ ಮನೆ ಮನೆಯ ದೀಪ

Upayuktha
0

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನ 4 ಜೂನ್ ಪ್ರಯುಕ್ತ ಈ ಲೇಖನ


ಮೈಸೂರು ರಾಜ ಮನೆತನದ 24ನೇ ಕುಡಿಯಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹುಟ್ಟಿದ್ದು 4ನೇ ಜೂನ್ 1884 ರಲ್ಲಿ. ಅವರು  ಹತ್ತನೇ ವಯಸ್ಸಿನಲ್ಲಿ ಇರುವಾಗಲೇ ಕಲ್ಕತ್ತಾ ಗೆ ಪ್ರವಾಸಕ್ಕೆಂದು ಹೋಗಿದ್ದ ತಂದೆ ಗಂಟಲು ನೋವಿನಿಂದ ತೀರಿ ಹೋದರು. ತಾಯಿ ಕೆಂಪನಂಜಮ್ಮಣ್ಣಿಯವರ ನಿಗಾದಲ್ಲಿ ಬೆಳೆದು ತಮ್ಮ 11ನೇ ವಯಸ್ಸಿನಲ್ಲಿ ಯುವರಾಜರಾಗಿ ಪಟ್ಟಾಭಿಷೇಕ ಹೊಂದಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರವಾಗಿ ತಾಯಿ ಕೆಂಪ ನಂಜಮ್ಮಣ್ಣಿಯವರೇ ರೀಜೆ0ಟ್ ಅಂದರೆ ರಾಜ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು. ತಾಯಿಯವರ ತೀವ್ರ ನಿಗಾದಲ್ಲಿ ಗುರುಗಳಾದ ರಾಘವೇಂದ್ರ ರಾವ್ ಅವರ ಬಳಿ ಒಡೆಯರ್ ಅವರು ಆರಂಭಿಕ ಶಿಕ್ಷಣವನ್ನು ಪಡೆದರು. ಇದರ ಜೊತೆ ಜೊತೆಗೆ ಕನ್ನಡ, ಸಂಸ್ಕೃತ ಮತ್ತು ಆಂಗ್ಲ ಶಿಕ್ಷಣದಲ್ಲಿ ಹೆಚ್ಚಿನ ಅಧ್ಯಯನಗೈದರು. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಉತ್ತರ ಭಾರತದ

ಅಜ್ಮೀರ್ ನಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾದರಾದರೂ ಅನಾರೋಗ್ಯದ ಕಾರಣ ಮರಳಿ ಬಂದ ಅವರು ತತ್ವಶಾಸ್ತ್ರ ನ್ಯಾಯಶಾಸ್ತ್ರ ಮತ್ತು ಭಾರತೀಯ ಕಾನೂನು ಶಾಸ್ತ್ರಗಳಲ್ಲಿ ಬಾಂಬೇ ಸಿವಿಲ್ ಸರ್ವಿಸಸ್ ನ ಸರ್ ಸ್ಟುವರ್ಟ್ ಫ್ರೇಸರ್ ಅವರ ಬಳಿ ತರಬೇತಿ ಪಡೆದರು. ಮುಂದೆ 1905ರಲ್ಲಿ ಮೈಸೂರು ಸಂಸ್ಥಾನಕ್ಕೆ ಮಹಾರಾಜರಾಗಿ ಪಟ್ಟಾಭಿಷಿಕ್ತರಾದ ಅವರು ರಾಜ್ಯಕ್ಕೆ ಬೇಕಾದ ಆಡಳಿತ ಮತ್ತು ವ್ಯವಸ್ಥೆಯ ಕುರಿತು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಅಧ್ಯಯನ ಗೈದರು.


ಮೈಸೂರು ರಾಜ್ಯದಲ್ಲಿ ನಾಮ ಕೆ ವಾಸ್ತೆ ಇದ್ದ ಪ್ರಜಾಪ್ರತಿನಿಧಿ ಸಭೆಯನ್ನು ಪರಿಷ್ಕರಿಸಿ ಶಾಸನಬದ್ಧ ಸಂಸ್ಥೆಯನ್ನಾಗಿಸಿದರು.ಇದು ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿತು. ಪ್ರಜಾ ಪ್ರತಿನಿಧಿ ಸಭೆಯು ವರ್ಷಕ್ಕೆ ಎರಡು ಬಾರಿ (೧ ಜೂನ್ - ಮಹಾರಾಜರ ವರ್ಧಂತಿ, ೨ ಅಕ್ಟೋಬರ್ - ದಸರಾ ಮಹೋತ್ಸವ ) ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು.

ಅಲ್ಲಿ ವಾರ್ಷಿಕ ಆಯ-ವ್ಯಯ ಪರಿಶೀಲನೆ, ಪ್ರಶ್ನೋತ್ತರಗಳು, ಠರಾವುಗಳನ್ನು ಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು. ಪ್ರತಿನಿಧಿ ಸಭೆಯಲ್ಲಿದ್ದ ೨೭೫ ಸದಸ್ಯರಲ್ಲಿ ಹೆಚ್ಚು ಪ್ರತಿನಿಧಿಗಳು ಜನರಿಂದ ಆಯ್ಕೆಯಾದವರಾಗಿದ್ದರು. ಕಾಲಕ್ಕೆ ತಕ್ಕ ಹಾಗೆ ಚುನಾವಣೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರು.

ಪ್ರಜಾಪ್ರತಿನಿಧಿ ಸಭೆಯ ಜೊತೆ ಜೊತೆಗೆ 1907ರಲ್ಲಿ ನ್ಯಾಯವಿಧಾಯಕ ಸಭೆಯನ್ನು ಕೂಡ ಸ್ಥಾಪಿಸಿದರು. ಅದರಲ್ಲಿ 22ಕ್ಕೂ ಹೆಚ್ಚು ಜನರು ಜನರಿಂದಲೆ ಆಯ್ಕೆಯಾದ ಜನಪ್ರತಿನಿಧಿಗಳಾಗಿದ್ದರು. ನ್ಯಾಯವಿಧಾಯಕ ಸಭೆಗೆ ಪ್ರಜಾಪ್ರತಿನಿಧಿ ಸಭೆಯ ಆಗುಹೋಗುಗಳನ್ನು ಚರ್ಚಿಸುವ ಮತ್ತು ಕಾನೂನುಗಳ ಕುರಿತ ಉನ್ನತ ಅರಿವುಗಳ ನಿರ್ಣಯ ಮಾಡುವ ಅಧಿಕಾರವನ್ನು ಹೊಂದಿತ್ತು ನ್ಯಾಯವಿಧಾಯಕ ಸಭೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಮತ್ತು ಸರ ಮಿರ್ಜಾ ಇಸ್ಮಾಯಿಲ್ ರವರು ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದರು. ಕೃಷ್ಣರಾಜಸಾಗರ ಅಣೆಕಟ್ಟನ್ನು ಕಟ್ಟುವುದರ ಮೂಲಕ ನೀರಾವರಿ ಕ್ರಾಂತಿಯನ್ನು ಮಾಡಿದರಲ್ಲವೇ ವಾಣಿವಿಲಾಸ ಸಾಗರ ಜಲಾಶಯವನ್ನು ಕೂಡ ಕಟ್ಟಿದರು.

ಇವರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.

ಗ್ರಾಮ ನೈರ್ಮಲೀಕರಣ

ವೈದ್ಯ ಸಹಾಯ

ವಿದ್ಯಾ ಪ್ರಚಾರ

ನೀರಿನ ಸೌಕರ್ಯ

ಪ್ರಯಾಣ ಸೌಲಭ್ಯ 

ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಸಂಸ್ಥೆಗಳಾದವು.

ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಮೈಸೂರು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟುದು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು.1918ರಲ್ಲಿ ಸರ್ಕಾರದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್.ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಎಲ್ಲಾ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧ್ಯ ದೊರಕುವಂತೆ ಅಧ್ಯಯನ ಮಾಡಿ, ವರದಿ ನೀಡಲು ಆದೇಶ ಮಾಡಿದರು. ನಂತರ ಆಯೋಗದ ಶಿಫಾರಸ್ಸುಗಳಂತೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್ನರನ್ನು ಹೊರತು ಪಡಿಸಿ ಉಳಿದ ಎಲ್ಲಾ ಜಾತಿಗಳನ್ನು ಹಿಂದೂಗಳೆಂದು ಪರಿಗಣಿಸಿ, ೧೯೨೧ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ.೭೫ ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದ್ಧರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು "ಮೀಸಲಾತಿಯ ಜನಕ" ಎನ್ನುತ್ತಾರೆ.


"ಮಿಲ್ಲರ್ ಆಯೋಗ" ರಚನೆ ಸಾಮಾಜಿಕ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮಿಲ್ಲರ್ ಆಯೋಗ ಜಾರಿಗೆ ಬಂದ ಕಾರಣವಾಗಿ ಮೊಟ್ಟ ಮೊದಲ ಬಾರಿಗೆ ಮೈಸೂರು ಸಂಸ್ಥಾನಕ್ಕೆ ಕಾಂತರಾಜೇ ಅರಸ್ ದಿವಾನರಾಗಲು ಸಾಧ್ಯವಾಯಿತು. ಈ ಕಾಲದಲ್ಲೇ ಒಕ್ಕಲಿಗರ ಸಂಘ, ರೆಡ್ಡಿ ಜನಸಂಘ, ವೀರಶೈವರ ಜಾತಿ ಆಧಾರಿತ ಶಾಲಾ- ಕಾಲೇಜುಗಳು ಆರಂಭವಾದುವು.


ನೀರಾವರಿಯ ಮೂಲಕ ಜನಕ್ರಾಂತಿಯನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾರಿ ಕಣಿವೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯವನ್ನು ಕಟ್ಟಿದರು. 1903 ಆಗಸ್ಟ್ ಮೂರರಂದು ಶಿವನಸಮುದ್ರದಲ್ಲಿ ಏಷ್ಯಾದಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ಬೆಂಗಳೂರಿನಲ್ಲಿ ವಿದ್ಯುತ್ ಸರಬರಾಜು ಮಾಡಿ ದೀಪ ಹೊತ್ತಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು. ಈ ವಿದ್ಯುತ್ ನ್ನು ಕೋಲಾರದ ಚಿನ್ನದ ಗಣಿಗೂ ಕೂಡ ಅವರು ಸರಬರಾಜು ಮಾಡಿದರು.


ಬೆಂಗಳೂರು ಮೈಸೂರು ತರೀಕೆರೆ ಚಿತ್ರದುರ್ಗ ನಂಜನಗೂಡು ಮತ್ತು ಚಾಮರಾಜನಗರಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸಿ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಟ್ಟವರು.


ಸಾರ್ವಜನಿಕ ಶಾಲೆ ಮತ್ತು ಕಾಲೇಜುಗಳು ಎಲ್ಲರ ತೆರಿಗೆ ಹಣದಿಂದ ನಡೆಯುವುದರಿಂದ ಆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಜಾತಿ ಆಧಾರದ ಮೇಲೆ ಪ್ರವೇಶಗಳನ್ನು ಪಡೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಅದರಂತೆ ನಿಯಮಾವಳಿಗಳನ್ನು ರೂಪಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಗಳನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡುವ ಸಂಕಲ್ಪ ಮಾಡಿ ಅದರಲ್ಲಿ ಯಶಸ್ವಿಯಾದವರು ನಾಲ್ವಡಿ ಭೂಪರು.


ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯನ್ನು ಮೈಸೂರಿನಲ್ಲಿ ಹೃದ್ರೋಗ ಚಿಕಿತ್ಸೆ ಮತ್ತು ಕ್ಷಯ ರೋಗ ಚಿಕಿತ್ಸೆಗೆ ಆಸ್ಪತ್ರೆಯನ್ನು ಕೊಡಮಾಡಿದ ಅವರು ಮೈಸೂರು ಬ್ಯಾಂಕ್ ಅನ್ನು ಕೂಡ ಸ್ಥಾಪಿಸಿದರು. ರೈತ ಸ್ನೇಹೀ ಮತ್ತು ಅಡಮಾನ ಬ್ಯಾಂಕುಗಳು ಕೂಡ ಆರಂಭವಾದದ್ದು ಇದೇ ಸಮಯದಲ್ಲಿ. 


ಶೈಕ್ಷಣಿಕ ಕಾರ್ಯಗಳು:

ಅರಣ್ಯ ವಾಸಿಗಳಾದ ಬುಡಕಟ್ಟು ಜನಾಂಗಗಳಿಗೆ ಮತ್ತು ಗಿರಿ ಜನರಿಗೆ ಶಾಲೆಗಳನ್ನು ಪ್ರಾರಂಭಿಸಿದ್ದು ಕೂಡ ಮಹಾರಾಜರ ದೂರದೃಷ್ಟಿಯ ಫಲವೇ.

ಇಡೀ ಭಾರತ ದೇಶದಲ್ಲಿಯೇ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನೂರಾರು ಎಕರೆ ಜಮೀನು ದಾನ ನೀಡಿದ ಮತ್ತು ಮೈಸೂರು ವಿಶ್ವವಿದ್ಯಾಲಯದ ಪ್ರತಿ ಹಂತದ ಬೆಳವಣಿಗೆಯಲ್ಲಿ ಅದನ್ನು ದೇಖರೇಖಿ ಮಾಡುತ್ತಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು.

ಸ್ತ್ರೀ ಕುಲಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಸ್ತ್ರೀ ಶಿಕ್ಷಣವನ್ನು ಕಡ್ಡಾಯ ಮಾಡಿ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಶಾಲೆಗಳನ್ನು ಕಾಲೇಜುಗಳನ್ನು ತೆರೆದವರು ಸನ್ನಿಧಾನದವರು.

ಶಾಲಾ ಶುಲ್ಕವನ್ನು ರದ್ದುಗೊಳಿಸಿದ ಅವರು ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದರು. ಶಾಲಾ ಪ್ರವೇಶಕ್ಕೆ ಜಾತಿಯನ್ನು ಪರಿಗಣಿಸದಿರಲು ನಿಯಮಾವಳಿಗಳನ್ನು ಜಾರಿಗೆ ತಂದರು. ಹೆಣ್ಣು ಮಕ್ಕಳಿಗೆ ಮತದಾನದ ಹಕ್ಕನ್ನು ನೀಡಿದ್ದು ಕೂಡ ಅವರೇ.


ಸಾಮಾಜಿಕ ಕಾರ್ಯಗಳು:

ದೇವದಾಸಿ ಪದ್ಧತಿ, ಬಸವಿ ಪದ್ಧತಿ ಮತ್ತು ಗೆಜ್ಜೆಪೂಜೆಗಳನ್ನು ನಿಷೇಧಿಸಿ ಸಾಮಾಜಿಕ ಕಾನೂನನ್ನು ಹೊರ ತಂದ ಮೊತ್ತ ಮೊದಲ ವ್ಯಕ್ತಿ  ಕೃಷ್ಣರಾಜ ಒಡೆಯರು.

ಭಾರತದ ಆರ್ಥಿಕತೆಯ ಬೆನ್ನೆಲುಬು ಕೃಷಿ ಎಂದು ಅರಿತಿದ್ದ ಒಡೆಯರ್ ಅವರು ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದಕ್ಕಾಗಿ ನೀರಾವರಿ ವ್ಯವಸ್ಥೆ ರೂಪದಲ್ಲಿ ಜಲಾಶಯಗಳನ್ನು ಅಣೆಕಟ್ಟುಗಳನ್ನು ಕಟ್ಟಿದರು. ಇಂದಿಗೂ ಕೂಡ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಪ್ರತಿ ಮನೆಯಲ್ಲಿ ಕೃಷ್ಣರಾಜ ಒಡೆಯರನ್ನು ಪೂಜಿಸಲು ಕಾರಣ ಅವರು ಆ ಭಾಗದ ಜನರಿಗೆ ಮಾಡಿಕೊಟ್ಟ ನೀರಾವರಿ ಅನುಕೂಲಗಳು. ರೈತರಿಗೆ ಅನುಕೂಲವಾಗಲೆಂದು ಹಲವಾರು ಬ್ಯಾಂಕುಗಳನ್ನು ಸಹಕಾರಿ ಸಂಸ್ಥೆಗಳನ್ನು ಅಪೆಕ್ಸ್ ಬ್ಯಾಂಕುಗಳನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದು.


ಕೈಗಾರಿಕೆಗಳು:

ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದ ಒಡೆಯರ್ ಅವರು ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1934ರಲ್ಲಿ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ, 1936ರಲ್ಲಿ ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ,ಷಹಬಾದಿನ ಸಿಮೆಂಟ್ ಕಾರ್ಖಾನೆ,ಅರಗು ಮತ್ತು ಬಣ್ಣದ ಕ ಕಾರ್ಖಾನೆ ಮತ್ತು ಕೊಡಗಿನಲ್ಲಿ ಕಾಫಿ ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸಿದರು.

ಹೀಗೆ ಮೈಸೂರು ಸಂಸ್ಥಾನದ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ಕಂಡು ಸ್ವತಹ ಮಹಾತ್ಮ ಗಾಂಧೀಜಿ ಅವರು ರಾಮ ರಾಜ್ಯದ ಕನಸು ಮೈಸೂರು ರಾಜ್ಯದಲ್ಲಿ ನನಸಾಗಿದೆ ಎಂದು ಹೊಗಳಿದ್ದರು.

ಡಿವಿಜಿಯವರು 1880 ರಿಂದ 1941 ರವರೆಗಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲವನ್ನು ಮೈಸೂರಿನ ಸುವರ್ಣ ಯುಗ ಎಂದು ಕರೆದಿದ್ದಾರೆ.


ರಾಜರ್ಷಿ ಎಂದು ಕರೆಯಲ್ಪಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದರು. 19 1940 ಆಗಸ್ಟ್ ಮೂರರಂದು ಅವರು ಮೈಸೂರಿನಲ್ಲಿ ನಿಧನ ಹೊಂದಿದರು.

ಶತಮಾನಗಳ ನಂತರವೂ ಇಂದಿಗೂ ಮೈಸೂರ ಭಾಗದ ಜನತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭಕ್ತಿಯಿಂದ ಗೌರವದಿಂದ ಪೂಜಿಸುತ್ತಾರೆ. ಆದ್ದರಿಂದಲೇ  ಮೈಸೂರು  ರಾಜ್ಯದ ಪ್ರಜೆಗಳು ಅವರನ್ನು ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಕರೆದಿದ್ದಾರೆ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top