ಪರಿಸರ ರಕ್ಷಣೆ ಎಲ್ಲರ ಹೊಣೆ: ಡಾ.ರವಿ
ವಿದ್ಯಾಗಿರಿ (ಮೂಡುಬಿದಿರೆ): ನಮ್ಮ ನೈಸರ್ಗಿಕ ಸಂಪನ್ಮೂಲದ ಆಗರವೇ ಭೂಮಿ. ಈ ಭೂಮಿಯನ್ನು ರಕ್ಷಿಸಿ, ಪೋಷಿಸುವ ಜವಾಬ್ದಾರಿ ಯುವಜನರ ಮೇಲೆ ಇದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಡಾ. ರವಿ ಡಿ.ಆರ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ‘ವೈದಕೀಯ ಹಾಗೂ ಪರಿಸರ ಜೈವಿಕ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರದ ಕುರಿತು ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಮಾನವನ ವಿಪರೀತ ಚಟುವಟಿಕೆಗಳಿಂದ ಪರಿಸರ ಅಪಾಯದಲ್ಲಿದೆ. ಅಭಿವೃದ್ಧಿಯ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲ ಹಾನಿಗೊಳಗಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂದರು.
ವಿಜ್ಞಾನದ ಬೆಳವಣಿಗೆಯು ಮನುಷ್ಯನ ಹಲವಾರು ಸಂಕಷ್ಟಗಳನ್ನು ದೂರ ಮಾಡಿದೆ. ಆರೋಗ್ಯ ವಲಯದ ಮಹತ್ತರ ಬದಲಾವಣೆಯು ಪ್ರಗತಿಯ ಸಂಕೇತ. ಪರಿಸರ ಪೂರಕ ಅಭಿವೃದ್ಧಿ ಸಾಧಿಸಲು ಪ್ರತಿಯೊಬ್ಬರು ಚಿತ್ತ ಹರಿಸಬೇಕು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ.ಕುರಿಯನ್ ಮಾತನಾಡಿ, ಭೂಮಿ ಮೇಲಿನ ಸಕಲ ಜೀವರಾಶಿಗಳಲ್ಲಿ ಮಾನವನೇ ಮಿಗಿಲು. ಆತ ತನ್ನ ಜೀವನವನ್ನು ಸರಳವಾಗಿಸಲು ಹಲವು ವೈಜ್ಞಾನಿಕ ಆವಿಷ್ಕಾರಗಳಿಗೆ ಮುಂದಾಗಿದ್ದಾನೆ. ಆದರೆ ಪರಿಸರ ಸಂರಕ್ಷಣೆಯಲ್ಲಿ ಹಿಂದುಳಿದಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು. ಜೈವಿಕ ಸಂಪನ್ಮೂಲದ ರಕ್ಷಣೆಯ ಹೊಣೆಗಾರಿಕೆ ಬಗ್ಗೆ ಅರಿವು ಮೂಡಿಸಿ ಎಂದರು.
ವಿಭಾಗದ ಮುಖ್ಯಸ್ಥ ಡಾ ರಾಮ್ ಭಟ್ ಸ್ವಾಗತಿಸಿ, ವಿದ್ಯಾರ್ಥಿನಿ ತೇಜಸ್ವಿನಿ ಭಟ್ ನಿರೂಪಿಸಿ, ನವ್ಯ ಶೇಟ್ ವಂದಿಸಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಜೈವಿಕ ತಂತ್ರಜ್ಞಾನ ಕ್ಷೇತ್ರವು ಸಕಾರಾತ್ಮಕ ಬೆಳವಣಿಗೆ ಹೊಂದುತ್ತಿದ್ದು, ಅಭಿವೃದ್ಧಿಗೆ ಪೂರಕವಾಗಿದೆ. ಪರಿಸರ ಸ್ನೇಹಿ ಅಭಿವೃದ್ಧಿ ಅವಶ್ಯವಾಗಿದೆ. ನೈಸರ್ಗಿಕ ಸಂಪತ್ತು ರಕ್ಷಿಸಬೇಕು. ಈ ರೀತಿಯ ರಾಷ್ಟ್ರೀಯ ಸಮ್ಮೇಳನ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವಲ್ಲಿ ಸಹಕರಿಸುತ್ತದೆ .
-ಡಾ. ಶ್ರೀನಿವಾಸ್ ರೆಡ್ಡಿ, ಸಿಂಜೀನ್ ಬೆಂಗಳೂರು
ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಮೌಖಿಕ ಪ್ರಸ್ತುತಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಯೆನಪೋಯಾ ಕಾಲೇಜು ಪಡೆದರೆ, ಪೋಸ್ಟರ್ ಪ್ರಸೆಂಟೇಶನ್ನಲ್ಲಿ ಯೆನಪೋಯಾ ಕಾಲೇಜು ಪ್ರಥಮ, ಸಂತ ಅಲೋಷಿಯಸ್ ಕಾಲೇಜು ಹಾಗೂ ಆಳ್ವಾಸ್ ಕಾಲೇಜು ದ್ವಿತೀಯ ದ್ವಿತೀಯ ಸ್ಥಾನ ಪಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ