ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ, ಚರಿತ್ರೆ ಇದೆ. ಕಸಾಪ ಎನ್ನುವುದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ. ಕನ್ನಡದ ಅಸ್ಮಿತೆಯ ದ್ಯೋತಕ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆಯ ಮೋಹದಿಂದ ನಮ್ಮ ಆಡುಭಾಷೆ, ಮಾತ್ರ ಭಾಷೆ ಕನ್ನಡವನ್ನು ಕೀಳಾಗಿ ಕಾಣಬಾರದು ಎಂದು ಖ್ಯಾತ ಹಿರಿಯ ಸಾಹಿತಿ ಮತ್ತು ನಿವೃತ್ತ ಪ್ರಾಧ್ಯಾಪಕ ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ತಾವು ಕನ್ನಡದಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ ಕನ್ನಡ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡದ ಉಳಿಕೆ ಸಾಧ್ಯವಾಗದು. ಪ್ರತಿಯೊಬ್ಬ ಕನ್ನಡಿಗರು ಕನ್ನಡದ ರಾಯಭಾರಿಗಳಂತೆ ಕೆಲಸ ಮಾಡಿದಲ್ಲಿ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಅವರು ನುಡಿದರು.
ಶುಕ್ರವಾರದಂದು (ಮೇ 5) ನಗರದ ಬಲ್ಮಠದಲ್ಲಿರುವ ಬಜಾಜ್ ಸುಪ್ರೀಮ್ ಕಛೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಸಾಪ ಮಂಗಳೂರು, ಇದರ ಅಧ್ಯಕ್ಷ ಮಂಜುನಾಥ್ ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಜಾಜ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಘವೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಸಾಪ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ಜೀ ಅವರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸುಬ್ರಾಯಭಟ್ ವಂದಿಸಿದರು. ಇನ್ನೋರ್ವ ಕಸಾಪ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು.
ಖ್ಯಾತ ವೈದ್ಯರಾದ ಕಿಶನ್ ರಾವ್ ಬಾಳಿಲ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು. ಕಸಾಪ ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಬೆನೆಟ್ ಅಮ್ಮನ್ನ, ಕೃಷ್ಣಪ್ಪ, ಉದಯ ನಾಯ್ಕ್, ಶ್ರೀಕೃಷ್ಣ ಸುಣ್ಣಂಗುಳಿ, ಮುರಳೀಧರ ಉಪಾಧ್ಯಾಯ, ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಕಸಾಪ ಮಂಗಳೂರು ಘಟಕದ ಸುಮಾರು 50 ಮಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ