ವಿದೇಶ, ಹೊರ ರಾಜ್ಯದ ಮತದಾರರ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಪ್ರಯತ್ನ

Upayuktha
0



ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಮತದಾರರಿಗೆ ಜಾಗೃತಿ ಮತ್ತು ಮತದಾನದ ಮಹತ್ವ ಕುರಿತು ಅರಿವು ಮೂಡಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು, ಕಳೆದ ಬಾರಿಗಿಂತ ಹೆಚ್ಚಿನ ಮತದಾನ ನಡೆಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ವಿದೇಶದಲ್ಲಿ ಮತ್ತು ಹೊರರಾಜ್ಯದಲ್ಲಿ ನೆಲೆಸಿರುವ ಜಿಲ್ಲೆಯ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡಲು ವಿನೂತನ ಪ್ರಯತ್ನ ಮಾಡುತ್ತಿದೆ.


ಜಿಲ್ಲೆಯ ಸಾವಿರಾರು ಮಂದಿ ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕಾರಣಗಳಿಂದ ವಿದೇಶಗಳಿಗೆ ಮತ್ತು ಹೊರರಾಜ್ಯಗಳಿಗೆ ತೆರಳಿದ್ದು, ಇಲ್ಲಿಯೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಲ್ಲಿನ ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಬ್ಬ ಮುಂತಾದ ವಿಶೇಷ ದಿನಗಳಂದು ಊರಿಗೆ ಆಗಮಿಸುತ್ತಾರೆ. ಮತದಾನದ ದಿನದಂದು ಇವರು ಊರಿಗೆ ಆಗಮಿಸಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿ, ಆ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಚಿಂತನೆ ನಡೆಸಿದೆ.


ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಎಷ್ಟೇ ದೂರದಲ್ಲಿದ್ದರೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲಿದ್ದು, ಇದನ್ನು ಬಳಸಿಕೊಂಡು ಹೊರದೇಶ ಮತ್ತು ಹೊರ ರಾಜ್ಯದಲ್ಲಿರುವ ಜಿಲ್ಲೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ಝೂಮ್ ಅಥವಾ ಯು ಟೂಬ್ ಮೂಲಕ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆ ನಡೆಸಲಿದ್ದು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಚಿಂತನೆ ನಡೆದಿದೆ.


ವಿದೇಶದಲ್ಲಿರುವ ಜಿಲ್ಲೆಯ ನಾಗರೀಕರನ್ನು ಮತದಾನಕ್ಕೆ ಕರೆತರಲು, ಇಲ್ಲಿ ನಲೆಸಿರುವ ಅವರ ಪೋಷಕರು ಮತ್ತು ಅಪ್ತರ ಮೂಲಕ ಮತದಾನ ದಿನವಾದ ಮೇ 10 ರಂದು ಮನೆಗಳಿಗೆ ಆಗಮಿಸುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ಪೋಷಕರಿಂದ ತಮ್ಮ ಮಕ್ಕಳಿಗೆ ಪತ್ರ ಬರೆಯುವಂತೆ ಪ್ರೇರೇಪಿಸಲಾಗುತ್ತಿದೆ. ಈ ಪತ್ರದಲ್ಲಿ ಚುನಾವಣೆಗಾಗಿ ನೀವು ಓದಿದ ಶಾಲೆಯ ಕಟ್ಟಡಗಳು ಸಾಂಪ್ರಾದಾಯಿಕ ಚಿತ್ರಗಳ ವಿನ್ಯಾಸದೊಂದಿಗೆ ಆಕರ್ಷಕವಾಗಿ ಶೃಂಗಾರಗೊಂಡಿರುವ ಬಗ್ಗೆ, ಮತದಾನ ದಿನದಂದು ಮತದಾನಕ್ಕೆ ಆಗಮಿಸಲು ಬರುವ ನಿಮ್ಮ ನಿರೀಕ್ಷೆಯನ್ನು ಕಾತುರದಿಂದ ಕಾಣುತ್ತಿರುವ ನಿಮ್ಮ ಇಲ್ಲಿನ ಸ್ನೇಹಿತರನ್ನೂ, ಬಂಧುಗಳ ಆಶಯವನ್ನೂ ತಿಳಿಸುವ ಉದ್ದೇಶ ಹೊಂದಲಾಗಿದೆ.


ಜಿಲ್ಲೆಯ ಸಾವಿರಾರು ಮಂದಿ ವಿದೇಶ ಮತ್ತು ಹೊರರಾಜ್ಯದಲ್ಲಿ ನಲೆಸಿದ್ದು, ಜಿಲ್ಲೆಯೊಂದಿಗೆ ಎಲ್ಲಾ ರೀತಿಯ ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದು, ಜಿಲ್ಲೆಯ ಪ್ರಗತಿಯ ಬಗ್ಗೆ ವಿಶೇಷ ಕಾಳಜಿಯನ್ನೂ ಹೊಂದಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಘಟ್ಟವಾದ ಮತದಾನ ಪ್ರಕ್ರಿಯೆಯಲ್ಲಿ ಈ ಎಲ್ಲಾ ನಾಗರೀಕರು ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಬೇಕು, ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಪ್ರಸನ್ನ ಹೆಚ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top