ಮಂಗಳೂರು: ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇಲ್ಲಿ ಹೊಸದಾಗಿ ನೊಂದಾಯಿತರಾದ ಗೃಹರಕ್ಷಕರಿಗೆ ಏ. 10 ರಿಂದ 19 ರವರೆಗೆ ನಡೆಯುವ ವಾರ್ಷಿಕ ಮೂಲ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ಭಾರತಿ ಕಾಲೇಜು, ನಂತೂರುನಲ್ಲಿ ನಡೆಯಿತು.
ವಿಕ್ರಮ್ ಅಮಟೆ IPS, ಜಿಲ್ಲಾ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಇವರು ಜ್ಯೋತಿ ಬೆಳಗಿಸಿ ಮೂಲ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮವಸ್ತ್ರ ಧರಿಸಿದ ನಂತರ ಶಿಸ್ತಿನಿಂದ ಇಲಾಖೆಯ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು, ಗೃಹರಕ್ಷಕರು ಪೊಲೀಸರಂತೆ ಸಮವಸ್ತ್ರ ಧರಿಸಿ ಯಾವುದೇ ಸಮಯದಲ್ಲಿ ಎಲ್ಲಾ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇಲ್ಲಿ ನೀಡುವ ಎಲ್ಲಾ ರೀತಿಯ ತರಬೇತಿಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಸಮಾಜಕ್ಕೋಸ್ಕರ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಿ ಮತ್ತು ಸಮಾಜಕ್ಕೆ ಸಮರ್ಪಿಸಿಕೊಳ್ಳಿ ಎಂದು ನುಡಿದರು.
ಸಮಾರಂಭದ ಅಧ್ಯಕ್ಷರಾದ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ, ಈ ಹತ್ತು ದಿನದ ತರಬೇತಿಯಲ್ಲಿ ಲಾಠಿ ಡ್ರಿಲ್, ಮಾಚ್ ಫಾಸ್ಟ್, ಫೈರ್ ಫೈಟಿಂಗ್, ವೈರ್ಲೆಸ್ ತರಬೇತಿ ಮುಂತಾದ ತರಬೇತಿ ನೀಡಲಿದ್ದಾರೆ. ಹತ್ತು ದಿನಗಳಲ್ಲಿ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ ಆದರೆ ಒಂದಷ್ಟು ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಇರಬೇಕು, ಮಾಹಿತಿ ಇದ್ದರೆ ನಿಮಗೆ ಮುಂಬರುವ ದುರಂತಗಳನ್ನು ತಪ್ಪಿಸಲು ಅಥವಾ ಮುಂಬರುವಂತ ದುರಂತಗಳಿಂದ ಆಗುವಂತ ತೊಂದರೆಗಳನ್ನು ನಿಭಾಯಿಸಲು ಸಾಧ್ಯವಿದೆ. ಸ್ವಲ್ಪ ಸ್ವಲ್ಪ ಕಲಿತುಕೊಂಡರೆ ಸಧೃಡ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಗೃಹರಕ್ಷಕರು ಅತೀ ಅವಶ್ಯಕ. ಗೃಹರಕ್ಷಕರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ, ಗಡಿಯಲ್ಲಿ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರೋ ಹಾಗೆಯೇ ಗೃಹರಕ್ಷಕರು ದೇಶದೊಳಗಿನ ಸೈನಿಕರು. ಸಮವಸ್ತ್ರ ಧರಿಸಿಕೊಂಡು ಯಾವ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಗೌರವಿಸಬೇಕು, ಮಾತನಾಡಬೇಕು ಎನ್ನುವುದರ ಬಗ್ಗೆ ಪರಿಜ್ಞಾನ ಇರಬೇಕು. ಈ ಹಿನ್ನೆಲೆಯಲ್ಲಿ ನಿಮಗೆ ಮನದಟ್ಟು ಮಾಡುವ ಉದ್ದೇಶದಿಂದ ಮೂಲ ತರಬೇತಿ ಶಿಬಿರವನ್ನು ಆಯೋಜಿಸಿದ್ದೇವೆ ಎಂದು ನುಡಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮಂಗಳೂರು ನಗರದ ಚೀಫ್ಟ್ರಾಫಿಕ್ ವಾರ್ಡನ್ ಸುರೇಶ್ನಾಥ್ ಅವರು ಮಾತನಾಡಿ, ಗೃಹರಕ್ಷಕರು ಆಲ್ರೌಂಡರ್ ಇದ್ದಂತೆ. ಗೃಹರಕ್ಷಕರಿಗೆ 10 ದಿನಗಳ ಮೂಲ ತರಬೇತಿ ನೀಡುವುದು ಅತೀ ಅವಶ್ಯಕ. ನಿಮ್ಮನ್ನು ನೀವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ಸಮಾಜದ ಆಸ್ತಿಗಳನ್ನು ಹಾನಿ ಆಗದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿಕೊಟ್ಟರು.
ದ.ಕ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ರಮೇಶ್ ಅವರು ಸ್ವಾಗತ ಭಾಷಣ ಮಾಡಿದರು. ಮಂಗಳೂರು ಘಟಕದ ಗೃಹರಕ್ಷಕ ಕನಕಪ್ಪ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಛೇರಿಯ ಅಧೀಕ್ಷಕಿ ಶ್ರೀಮತಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಸುನಿಲ್, ರೇವತಿ ದಿನೇಶ್, ದಿವಾಕರ್ ಹಾಗೂ 30 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ