ಶ್ರೀ ಮಂಗಳಾದೇವಿಗೆ ವೈಭವದ ಜಾತ್ರೋತ್ಸವ

Upayuktha
1 minute read
0



 

ಮಂಗಳೂರು: ಶ್ರೀ  ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಫಾಲ್ಗುಣ ಕೃಷ್ಣ ಷಷ್ಠಿಯ ನಾಲ್ಕನೇ ದಿನವಾದ ಮಂಗಳವಾರದಂದು ಚತುರ್ಥ ದಿನದ ಉತ್ಸವಗಳು ನಡೆಯುತ್ತಿವೆ.


ಸಾಕ್ಷಾತ್ ಮಹಾರಾಣಿಯಂತೆ ಶುಭ್ರ ಶ್ವೇತ ವರ್ಣದ ಸೀರೆಯನ್ನು ಧರಿಸಿ ಸರ್ವಾಲಂಕೃತ ಭೂಷಿತೆಯಾಗಿ ಸುಶೋಭಿಸುತ್ತಾ ಗುಲಾಬಿ ಕೆಂಪು ವರ್ಣದ ಪೀತಾಂಬರವನ್ನು ಉತ್ತರೀಯವನ್ನಾಗಿ ವ್ಯಾಪಿಸಿಕೊಂಡಿರುವ ಸರ್ವ ಮಂಗಳೆಯು ಸರ್ವಾಭರಣ ಭೂಷಿತಳಾಗಿ ಚತುರ್ಭುಜೆಯಾದ ದೇವಿಯು ಅಭಯ ವರದ ಹಸ್ತಳಾಗಿ ತನ್ನ ಪಾರ್ಶ್ವ ಹಸ್ತದಲ್ಲಿ ಚಕ್ರವನ್ನು ಹಾಗೂ ವಾಮ ಹಸ್ತದಲ್ಲಿ ತ್ರಿಶೂಲ ಪಾಣಿಯಾಗಿ ಧನಸ್ಸು ಬಾಣವನ್ನು ಧರಿಸಿದ ಸನ್ಮಂಗಳಕಾರಿಣಿ ರಾಜೋಲ್ಲಾಸದಿಂದ ಕಾಲಂದುಗೆಯ ಮೇಲೆ ಪಾದವನ್ನು ಚಾಚಿ ರಾಜ ಗತ್ತಿನಿಂದ ಸಿಂಹ ರಾಜನ ಮೇಲೆ ಸುಖಾಸೀನಳಾಗಿ ವಿರಾಜಮಾನಳಾದ ಭಂಗಿಯಲ್ಲಿ ಸಿಂಹಾರೋಹಣಗೈದು ವೈಭವಿತಳಾಗಿದ್ದಾಳೆ.


ಇಂದು ಶ್ರೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಬಯನ ಬಲಿ ಉತ್ಸವದ ಕೊನೆಯ ದಿನ. ಸ್ವರ್ಣಮಯ ಪುಷ್ಪ ಕನ್ನಡಿಯ ಅಮೋಘ ಅಲಂಕಾರದಲ್ಲಿ ಗರ್ಭಗೃಹದಿಂದ ಉತ್ಸವದ ಸಲುವಾಗಿ ಹೊರಬಂದು ಸಾಯಂಕಾಲದ ಗೋಧೂಳಿ ಮುಹೂರ್ತಕ್ಕೆ ಸೌಭಾಗ್ಯದಾಯಿನಿಯಾಗಿ ಒಲಿದು ಬರುವ ಸನ್ನಿವೇಶ ಪುಣ್ಯಪ್ರದ ವಾದುದು.


ಸಾಯಂಕಾಲ 6:30ಕ್ಕೆ ಬಲಿ ಹೊರಟು ತಂತ್ರವು ನೆರವೇರಿ ದೇವಳದ ರಾಜಾಂಗಣದಲ್ಲಿ ವೈಶಿಷ್ಠ್ಯಪೂರ್ಣ ಉಡುಕೆ ಸುತ್ತು, ಚೆಂಡೆ ಸುತ್ತು, ಸ್ಯಾಕ್ಸೋಫೋನ್ ಸುತ್ತು, ಬ್ಯಾಂಡ್ ವಾದ್ಯಾದಿ ಸುತ್ತುಗಳೊಂದಿಗೆ ವಿಶೇಷವಾಗಿ ಪಂಚ ವಾದ್ಯಗಳ ಚೆಂಡೆ ಸುತ್ತು ಇಂದಿನ ಆಯನ ಬಲಿಯ ಪ್ರಧಾನ ಆಕರ್ಷಣೆ ಹಾಗೂ ಸಣ್ಣಬಂಡಿ ಸುತ್ತಿನ ಉತ್ಸವಗಳು ನಡೆದವು.

Post a Comment

0 Comments
Post a Comment (0)
To Top