ವ್ಯಕ್ತಿ ವಿಶೇಷ: ಬಡ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚುವ ಶಿಕ್ಷಣ ಪ್ರೇಮಿ ಮಾಧವ ಪ್ರಭು

Upayuktha
0

ಇದು ಇಪ್ಪತ್ತೊಂದನೇ ಶತಮಾನ. ಅನಕ್ಷರತೆ ಎನ್ನುವುದು ಮುಳುಗುತ್ತಿರುವ ಸಂದರ್ಭ. ಪ್ರತಿ ಊರಿನಲ್ಲೂ ಶಾಲೆ ಕಾಲೇಜುಗಳು ಸಾಮಾನ್ಯವಾಗಿದೆ. ವಿದ್ಯಾಲಯ ಎನಿಸಿಕೊಳ್ಳುವ ದೊಡ್ಡ ದೊಡ್ಡ ಕಟ್ಟಡಗಳು, ಕ್ರೀಡಾ ಮೈದಾನಗಳು, ಕೈಯಲ್ಲೆರೆಡು ಪುಸ್ತಕ ಹಿಡಿದು ಪಾಠ ಮಾಡುವ ಗುರುಗಳು, ಆವರಣದಲ್ಲಿ ಶುಭ್ರ ಸಮವಸ್ತ್ರ ಧರಿಸಿ ಓಡಾಡುವ ವಿದ್ಯಾರ್ಥಿಗಳು ಇವೆಲ್ಲವನ್ನು ನೋಡುವಾಗ ಎಷ್ಟೋ ಹಿರಿಯ ಜೀವಗಳಿಗೆ "ಅಬ್ಬಾ.. ನನಗಂತೂ ಎರಡಕ್ಷರ ಕಲಿಯಲು ಅವಕಾಶ ಸಿಗಲಿಲ್ಲ. ಈ ಮಕ್ಕಳಿಗಾದರೂ ಸಿಕ್ಕಿತಲ್ಲ" ಎನ್ನುವ ನೆಮ್ಮದಿ. ಆದರೂ ಪ್ರತಿ ಅರ್ಹ ವಿದ್ಯಾರ್ಥಿಗೂ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆಯಾ ಎಂದರೆ ಉತ್ತರ… ಇಲ್ಲ.


ಎಷ್ಟೋ ಶಿಕ್ಷಣದ ಹಸಿವಿನಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎನ್ನುವುದು ಕನಸಾಗಿಯೇ ಉಳಿದಿದೆ. ಇಂಥವರಲ್ಲಿ ನನ್ನ ಪ್ರೀತಿಯ ಅಕ್ಕ ಕೂಡ ಒಬ್ಬಳು. ಒಂದನೇ ತರಗತಿಯಿಂದ ಪಿಯುಸಿ ವರೆಗೆ ಚೆನ್ನಾಗಿಯೇ ಕಲಿಯುತ್ತಿದ್ದವರು. ಓದಿನಲ್ಲಿ ಮಾತ್ರವಲ್ಲ ಹೊರ ಪ್ರಪಂಚವನ್ನೂ ತನ್ನ ವಯಸ್ಸಿಗೆ ತಕ್ಕ ಮಟ್ಟದಲ್ಲಿ ಕಲಿತವಳು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ತಬ್ಬಲಿಯಾಗಿ ಸಣ್ಣ ವಯಸಿನಲ್ಲಿಯೇ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವಂತಾಯಿತು. ಮನೆಯಲ್ಲಿ ಕಡು ಬಡತನ. ತಮ್ಮ ಸಣ್ಣವ, ತಾಯಿ ತೋಟದ ಕೆಲಸಕ್ಕೆ ಹೋಗಿ ಮಕ್ಕಳನ್ನು ಸಾಕಬೇಕಾದ ದುಸ್ಥಿತಿ. ಈ ಎಲ್ಲಾ ಸಮಸ್ಯೆಯ ನಡುವೆ ಶಿಕ್ಷಣ ಪಡೆಯುವುದಾದರೂ ಹೇಗೆ ಹೇಳಿ...


ಇಂತಹ ಅದೆಷ್ಟೋ ಜನರಿಗೆ ಆಶಾಕಿರಣವಾಗಿರುವವರು ಮಾಧವ ಪ್ರಭು. ಇವರು ಪುತ್ತೂರಿನ ಕೂರ್ನಡ್ಕದವರು. 

ಹಸಿದವನಿಗೆ ಅನ್ನವನಿತ್ತರೆ ಒಂದು ಹೊತ್ತಿಗೆ ಶಕ್ತಿ ಕೊಡಬಹುದು, ಆದರೆ ಶಿಕ್ಷಣವನಿತ್ತರೆ ಅದು ಅವನಿಗೆ ಇನ್ನೊಬ್ಬನಿಗೆ ಅನ್ನ ಹಾಕುವ ಶಕ್ತಿ ಕೊಡಬಹುದು ಎನ್ನುವ ಮಾತಿದೆ. ಈ ಮಾತಿಗೆ ಸರಿ ಹೊಂದುವಂತಿದೆ ಪ್ರಭುರವರ ಸಮಾಜ ಸೇವೆ. ಶಿಕ್ಷಣದ ವಿಷಯಕ್ಕಾಗಿ ಸಹಾಯ ಕೇಳುತ್ತ ಬರುವ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರಭು ಉಚಿತವಾಗಿ ಪರಿಕರಗಳನ್ನು ಕೊಡುವ ಮೂಲಕ ಶಿಕ್ಷಣವೆಂಬ ಬೆಳಕು ಚೆಲ್ಲಲು ಸಹಾಯ ಮಾಡಿದ್ದಾರೆ. ಇದಲ್ಲದೆ ಕಾಲೇಜು ಸೇರಲು ಹಣವಿಲ್ಲದೆ ನೆರವಿನ ಹಸ್ತ ಚಾಚಿದ ವಿದ್ಯಾರ್ಥಿಗಳಿಗೂ ದಾನಿಗಳ ಮೂಲಕ ಹಣ ಸಂಗ್ರಹಿಸಿ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತಾರೆ.


ಇವರಿಗೆ ಈ ಸಮಾಜ ಸೇವೆಯ ಮನಸ್ಸು ಬರಲೂ ಹಿನ್ನೆಲೆಯಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಇವರು ಒಂದು ದಿನ ತನ್ನ ಅಂಗಡಿಯ ಮುಂದೆ ನಾಲ್ಕೈದು ಮಕ್ಕಳೊಂದಿಗೆ ಕುಳಿತು ಏಳನೇ ತರಗತಿಯ ಫಲಿತಾಂಶ ಕೇಳುತ್ತಿದ್ದರು. ಮುಗ್ಧ ಮಕ್ಕಳೂ ತಮ್ಮ ಫಲಿತಾಂಶವನ್ನು ಎಲ್ಲರೊಂದಿಗೆ ಹಂಚಿಕೊಂಡು ಖುಷಿ ಪಡುತ್ತಿದ್ದರು ಆದರೆ ಒಬ್ಬ ಹುಡುಗ ಮಾತ್ರ ಒಬ್ಬಂಟಿಯಾಗಿ ದೂರದಲ್ಲಿ ಮಂಕಾಗಿ ಕೂತಿದ್ದ. ಫೇಲಾಗಿರಬಹುದೇನೋ ಅಂದುಕೊಂಡರೆ, ಜೊತೆಗಿದ್ದ ಮಕ್ಕಳು "ಅವನೇ ನಮ್ಮ ಕ್ಲಾಸಿನ ಟಾಪರ್" ಎಂದರು. ಆ ಬಾಲಕ "ನನಗೆ ಇನ್ನು ಮುಂದಕ್ಕೆ ಕಲಿಯಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಕಡು ಬಡತನ ಇದೆ" ಎಂದನಂತೆ. ಅವನ ಮಾತಿಗೆ ಬೇಸರಗೊಂಡ ಪ್ರಭು, “ಇನ್ನು ಮುಂದೆ ನಿನಗೆ ಶಿಕ್ಷಣಕ್ಕೆ ಬೇಕಾದ ಯಾವುದೇ ಪರಿಕರ ಬೇಕಾದರೂ ನನ್ನ ಅಂಗಡಿಯಿಂದ ತಗೆದುಕೋ” ಎಂದರು. ಹೀಗೆ ಶುರುವಾದ ಈ ಸಿಹಿ ಪಯಣ ಇಂದಿಗೂ ಹಲವು ಜೀವಗಳಿಗೆ ಬೆಳಕು ಚೆಲ್ಲುತ್ತಾ ಸಾಗುತ್ತಿದೆ.


ಇವರು ಮಾಡಿದ ಸಹಾಯ ಎಷ್ಟು ದೊಡ್ಡ ಮಟ್ಟದ್ದು ಎಂಬುದು ಬಡತನದ ಪರಿಸ್ಥಿತಿಯಲ್ಲಿರುವವರಿಗೆ ಮಾತ್ರ ಗೊತ್ತಾಗಲು ಸಾಧ್ಯ. ದೇವರು ಮನುಷ್ಯ ರೂಪದಲ್ಲೂ ಬರಬಹುದು, ಕಷ್ಟಗಳೆಂಬ ಮುಳ್ಳಿನ ನಡುವೆ ಹೂ ಬೆಳೆಯಬಹುದು ಎನ್ನುವುದಕ್ಕೆ ಇದೊಂದು ಸಾಕ್ಷಿ.


ಪ್ರಭುರವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಇತ್ತೀಚೆಗೆ ʼಕಲರ್ಸ್ ಕನ್ನಡʼ ವಾಹಿನಿಯಲ್ಲಿ ನಡೆದ ಅನುಬಂಧ ಅವಾರ್ಡ್ಸ್ ಇವರಿಗೆ ʼಹೆಮ್ಮೆಯ ಕಲರ್ಸ್ ಕನ್ನಡಿಗʼ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿತು. ಇವರೊಬ್ಬರೇ ಅಲ್ಲದೇ ಸಮಾಜದಲ್ಲಿ ಅನೇಕ ಶಿಕ್ಷಣ ಪ್ರೇಮಿಗಳನ್ನು ನಾವು ಕಾಣಬಹುದು. ಇಂತಹ ಎಲ್ಲರನ್ನೂ ಸಮಾಜ ಗುರುತಿಸುವಂತಾಗಲಿ. 



-ದೀಪಕ್

ದ್ವಿತೀಯ ಬಿಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top