ಹೆಚ್.ಡಿ ತಮ್ಮಯ್ಯ ಅಭಿಮಾನಿಗಳಿಂದ ಅಭೂತಪೂರ್ವ ಬೈಕ್ ಜಾಥಾ
ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಹೆಚ್.ಡಿ ತಮ್ಮಯ್ಯನವರಿಗೆ ಭವ್ಯ ಸ್ವಾಗತ
ಚಿಕ್ಕಮಗಳೂರು : ಉಂಡಮನೆಗೆ ದ್ರೋಹ ಮಾಡಿದ ವ್ಯಕ್ತಿ ನಾನಲ್ಲ, ನಾನು ಯಾರ ಜೊತೆ ಇರುತ್ತೇನೆ ಅವರ ಕೆಲಸವನ್ನೂ ನಿಷ್ಠೆಯಿಂದ ಮಾಡುತ್ತೇನೆ. ನಮ್ಮ ನಾಯಕರು ಆತ್ಮಾವಲೋಕನ ಮಾಡಿಕೊಂಡು ಅವರ ಆಪ್ತನಾಗಿರುವ ನನ್ನ ಬಗ್ಗೆ ಮಾತನಾಡಬೇಕೆಂದು ಹೆಚ್.ಡಿ ತಮ್ಮಯ್ಯ ಹೇಳಿದರು.
ಅವರು ಇಂದು ಕಾಂಗ್ರೇಸ್ ಸೇರ್ಪಡೆಯಾದ ನಂತರ “ಚಿಕ್ಕಮಗಳೂರು ವಿಧಾನಸಭಾ ಬದಲಾವಣೆ ಸಂಕಲ್ಪಯಾತ್ರೆ” ಬೈಕ್ ರ್ಯಾಲಿಯಲ್ಲಿ ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನನಗೆ ಆಪ್ತರಾಗಿದ್ದ ಶಾಸಕ ಸಿ.ಟಿ ರವಿಯವರು ನನಗೆ ಈ ಪದ ಬಳಸಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ, ಆದರೆ ಬಿಜೆಪಿಯಲ್ಲಿ ಕಳೆದ 17 ವರ್ಷಗಳಿಂದ ಶಾಸಕರ ಬಲಗೈ ಆಗಿ ಕೆಲಸ ಮಾಡಿದ್ದೇನೆ. 2008ರಲ್ಲಿ ಯಾರ ಹೆಸರೇಳಿ ಗೆದ್ದಿರಿ. ಬಿ.ಎಸ್ ಯಡಿಯೂರಪ್ಪನವರನ್ನು ಮರೆತಿರಾ. 2018, 2004 ರಲ್ಲಿ ನಾಯಕರ ಹೆಸರೇಳಿ ಗೆದ್ದಿದ್ದು ಒಳ್ಳೆ ನಾಯಕತ್ವ ಇದೆ, ಸ್ಥಾನಮಾನಗಳಿವೆ. ಸಿ.ಟಿ ರವಿಯವರೇ ನಿಮಗೆ ಗೌರವ ಕೊಡುತ್ತೇನೆ ಎಂದರು.
ಆದರೆ ನಿಮ್ಮ ಜೊತೆ ಇದ್ದಾಗ ಹಲವು ಬಾರಿ ಕಿವಿಮಾತು ಹೇಳಿದ್ದೇನೆ. ಈ ರಾಜ್ಯ ಕಂಡ ಮಹಾನ್ ನಾಯಕರಲ್ಲಿ ಹೆಚ್.ಡಿ ದೇವೇಗೌಡರು, ಬಿ.ಎಸ್ ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ ಈ ಮೂವರು ಅಗ್ರಸ್ಥಾನದಲ್ಲಿದ್ದಾರೆ. ಇವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಹೇಳಿದ್ದೆ. ಅವರಿಂದ ಸಹಾಯ ಪಡೆದಿಲ್ಲ ಎಂದು ಹೇಳಿ ನೋಡೋಣ. ಇಲ್ಲಿ ತಮ್ಮಯ್ಯ ಇರಬಹುದು, ನೀವು ಇರಬಹುದು, ಗೌರವ ಕೊಡುತ್ತಿರುವುದು ಬಿಜೆಪಿ ಮತ್ತು ನನ್ನ ಜೊತೆ ಇದ್ದೀರೆಂದು ಮೊದಲು ಇದನ್ನೂ ಅರಿತುಕೊಳ್ಳಿ ಎಂದು ಸವಾಲು ಹಾಕಿದರು.
ಕತ್ತೆ ಅಡ್ಡೆ ಹೊತ್ತುಕೊಂಡು ಹೋದರೆ ಗೌರವ ಕೊಡುವುದು ಕತ್ತೆಗೆ ಅಲ್ಲ ಅಡ್ಡೆಗೆ ಎಂಬುದನ್ನು ತಿಳಿದುಕೊಳ್ಳಿ. ಈ ಪದ ಕೇಳಿ ನನ್ನ ಕಾರ್ಯಕರ್ತರು ಸುಮ್ಮನಿದ್ದಾರೆ. ನಾನೇನಾದರೂ ಆ ಸಭೆಯಲ್ಲಿದ್ದರೆ ಅಂದು ಅಲ್ಲೆ ಖಂಡಿಸುವ ಕೆಲಸ ಮಾಡುತ್ತಿದ್ದೆ. ಯಡಿಯೂರಪ್ಪಗೆ ಅವಮಾನ ಮಾಡಿ ನನಗೆ ಅವಹೇಳನ ಮಾಡುತ್ತಿರುವವರೊಂದಿಗೆ ಇನ್ನೂ ಮುಂದುವರೆಯುತ್ತೀರಾ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿ ಹೊರಬರುವಂತೆ ಮನವಿ ಮಾಡಿದರು.
ದಯಮಾಡಿ ಪ್ರಜಾಪ್ರಭುತ್ವ ಈ ಊರಿನಲ್ಲಿ ಗೆಲ್ಲಿಸಿ ಈ ಊರಿನಲ್ಲಿ ಒಳ್ಳೆ ಅಧಿಕಾರಿ, ಗುತ್ತಿಗೆದಾರರು ಬರುತ್ತಿಲ್ಲ. ಈ ಬಗ್ಗೆ ಶಾಸಕ ಸಿ.ಟಿ ರವಿಯವರು ಉತ್ತರ ಕೊಡಲಿ ನಂತರ ಅದಕ್ಕೆಲ್ಲಾ ಒಟ್ಟಿಗೆ ಉತ್ತರ ಕೊಡುತ್ತೇನೆ. ನನ್ನೆಲ್ಲಾ ಆತ್ಮೀಯ ಮಿತ್ರರು, ಕಾರ್ಯಕರ್ತರು ಕತ್ತೆಗೆ ಹೋಲಿಸಿದವರೊಂದಿಗೆ ಇರಬಾರದು. ಕೂಡಲೇ ನಿರ್ಧರಿಸಿ ಹೊರಬನ್ನಿ ಎಂದು ಎಚ್ಚರಿಸಿದರು.
ಬಿಜೆಪಿ ಪಕ್ಷದಲ್ಲಿದ್ದು ನಾನು ಯಾರಿಗೂ ದ್ರೋಹ ಮಾಡಿಲ್ಲ. ಅವರು ಮೂಡಿಗೆರೆ ಕ್ಷೇತ್ರದ ಶಾಸಕರ ಬಗ್ಗೆ ಎಷ್ಟು ಭಾರಿ ಯಾರು ಯಾರಿಗೆ ದ್ರೋಹ, ಮೋಸ, ವಂಚನೆ ಮಾಡಿದ್ದಾರೆ ಎಂಬುದನ್ನು ನಾನು ಈಗಲೇ ಬಹಿರಂಗ ಪಡಿಸುವುದಿಲ್ಲ ಎಂದರು.
ಇದಕ್ಕೂ ಮೊದಲು ಕರ್ತಿಕೆರೆ ಜಾಯ್ ಕಾಫಿ ಕ್ಯೂರಿಂಗ್ ಮುಂಭಾಗದಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ “ಬದಲಾವಣೆ ಸಂಕಲ್ಪಯಾತ್ರೆ” ಬೈಕ್ ರ್ಯಾಲಿ ಪಟಾಕಿ ಸಿಡಿಸುವ ಮೂಲಕ ಆರಂಭಗೊಂಡು ಬೇಲೂರು ರಸ್ತೆ ಮಾರ್ಗವಾಗಿ ಸಂಚರಿಸಿ ಹಿರೇಮಗಳೂರಿನಲ್ಲಿ ಹೆಚ್.ಡಿ. ತಮ್ಮಯ್ಯನವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಬೀಳ್ಕೊಟ್ಟರು. ನಂತರ ನಗರ ಪ್ರವೇಶಿಸಿದ ಸಂದರ್ಭದಲ್ಲಿ ಅಜಾದ್ ಪಾರ್ಕ್ನಲ್ಲಿ ಅಪಾರವಾದ ಅಭಿಮಾನಿಗಳು, ಆತ್ಮೀಯರು, ಹಿತೈಷಿಗಳು ಪಟಕಿ ಹಚ್ಚಿ ಹೂಮಳೆ ಸುರಿಸಿ ಸಂಭ್ರಮಿಸಿದರು.
ಜಾಥಾ ಡಿ.ಸಿ ಕಛೇರಿ ಮಾರ್ಗವಾಗಿ ಹೊಸಮನೆ ಬಡಾವಣೆ ಮೂಲಕ ಐಜಿ ರಸ್ತೆ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಎಂ.ಜಿ ರಸ್ತೆ ಮಾರ್ಗವಾಗಿ ಜಿಲ್ಲಾ ಕಾಂಗ್ರೇಸ್ ಕಛೇರಿ ತಲುಪಿತು.
ನಂತರ ಜಿಲ್ಲಾ ಕಾಂಗ್ರೇಸ್ ಕಛೇರಿಯನ್ನು ಪ್ರವೇಶಿಸಿದ ಹೆಚ್.ಡಿ ತಮ್ಮಯ್ಯ ಮತ್ತು ಅವರ ಬೆಂಬಲಿಗರು ಹಾಗೂ ಅಭಿಮಾನಿಗಳನ್ನೂ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಡಾ|| ಅಂಶುಮಂತ್ ಬೃಹತ್ ಹಾರ ಹಾಕಿ ಸ್ವಾಗತಿಸಿದರು.
ನಂತರ ಮಾತನಾಡಿದ ಡಾ|| ಅಂಶುಮಂತ್ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಮನಗಂಡು ರಾಜ್ಯಾದ್ಯಂತ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯಕರ್ತರು ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡಿ ಮತದಾರರ ಮನವೊಲಿಸುವ ಕಾರ್ಯ ಮಾಡಬೇಕೆಂದು ಹೇಳಿದರು.
ಕಾಂಗ್ರೇಸ್ ಪಕ್ಷ ಮತದಾರರನ್ನು ಸೈದ್ಧಾಂತಿಕವಾಗಿ ಗಟ್ಟಿ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿ ಕೇವಲ ಜನರ ಭಾವನೆ ಕೆರಳಿಸುವ ಮೂಲಕ ಜನಸಾಮಾನ್ಯರ ಮನಸ್ಸು ಗೆಲ್ಲಲು ಆಗುತ್ತಿಲ್ಲ. ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಕಾಂಗ್ರೇಸ್ಪಕ್ಷ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಹಿನ್ನೆಲೆಯಲ್ಲಿ ಯಾವುದೇ ಷರತ್ತುಗಳಿಲ್ಲದೆ ಹೆಚ್.ಡಿ ತಮ್ಮಯ್ಯ ಅವರು ಪಕ್ಷ ಸೇರಿರುವುದರ ಬಗ್ಗೆ ಕಾಂಗ್ರೇಸ್ ಪಕ್ಷದ ಎಲ್ಲಾ ಮುಖಂಡರ, ಕಾರ್ಯಕರ್ತರ, ಅಭಿಮಾನಿಗಳ ಪರವಾಗಿ ಮತ್ತೊಮ್ಮೆ ಅವರನ್ನು ಕಾಂಗ್ರೇಸ್ ಕುಟುಂಬಕ್ಕೆ ಸ್ವ್ವಾಗತಿಸುತ್ತೇನೆ. ಹಾಲಿ ಶಾಸಕರು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಕೇವಲ ಭ್ರಷ್ಟಾಚಾರದಲ್ಲಿ ತೊಡಗಿರುವ ಇವರನ್ನು ತಿರಸ್ಕರಿಸಿ ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಸೇರಿರುವ ಹೆಚ್.ಡಿ ತಮ್ಮಯ್ಯನವರ ಸಹಕಾರದೊಂದಿಗೆ ಬದಲಾವಣೆಯನ್ನು ತರಬೇಕೆಂದು ವಿನಂತಿಸಿದರು.
2023ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಜಯಭೇರಿ ಮಾಡುವಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಬದಲಾವಣೆ ತರಲು ಶ್ರಮಿಸಬೇಕೆಂದು ಕರೆ ನೀಡಿದ ಅವರು ಪ್ರತಿ ಭೂತ್ ಮಟ್ಟದಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಿ ಕಾಂಗ್ರೇಸನ್ನು ಅಧಿಕಾರಕ್ಕೆ ತರಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಮಾಜಿ ಜಿ.ಪಂ ಅಧ್ಯಕ್ಷ ಕೆ ಮೊಹಮ್ಮದ್, ನಗರ ಕಾಂಗ್ರೇಸ್ ಅಧ್ಯಕ್ಷ ತನೂಜ್ ಕುಮಾರ್ ನಾಯ್ಡು, ಸೇವಾದಳ ಜಿಲ್ಲಾಧ್ಯಕ್ಷ ಬಸವರಾಜ್, ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜಯರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ