ಕುಲಕ್ಷಯೇ ಪ್ರಣಶ್ಯಂತಿ
ಕುಲಧರ್ಮಾ: ಸನಾತನಾ: |
ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್
ಅಧರ್ಮೋಭಿಭವತ್ಯುತ || (01-40)
ಕುಲದ ನಾಶದಿಂದ ಸನಾತನವಾದ ಕುಲ ಧರ್ಮಗಳು ನಷ್ಟವಾಗುತ್ತವೆ. ಧರ್ಮವು ನಾಶವಾದ ನಂತರ ಸಂಪೂರ್ಣ ಕುಲದಲ್ಲಿ ಪಾಪವು ಕೂಡ ಬಹಳವಾಗಿ ಆವರಿಸಿಕೊಳ್ಳುತ್ತದೆ.
ತಮ್ಮ ತಮ್ಮ ಕುಲದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಶ್ರೇಷ್ಠವಾದ ಸಂಪ್ರದಾಯಗಳಿವೆಯೋ, ಯಾವುದರಿಂದ ಸದಾಚಾರವು ಸುರಕ್ಷಿತವಾಗಿರುತ್ತದೆಯೋ ಮತ್ತು ಕುಲದ ಸ್ತ್ರೀ ಪುರುಷರಲ್ಲಿ ಅಧರ್ಮದ ಪ್ರವೇಶ ಆಗುವುದಿಲ್ಲವೋ, ಆ ಶುಭ ಮತ್ತು ಶ್ರೇಷ್ಠವಾದ ಕುಲಸಂಪ್ರದಾಯಗಳನ್ನು "ಸನಾತನ ಕುಲಧರ್ಮ" ಎಂದು ಹೇಳುತ್ತಾರೆ. ಕುಲ ಧರ್ಮಗಳನ್ನು ಅರಿತಿರುವ ಮತ್ತು ಅವುಗಳನ್ನು ಆಚರಣೆಯಲ್ಲಿ ಇಟ್ಟುಕೊಂಡಿರುವ ಹಿರಿಯರ ಅಭಾವವಾಗುತ್ತದೋ ಆಗ ಅಳಿದುಳಿದವರಲ್ಲಿ ಇಂತಹ ಧರ್ಮಗಳು ಸ್ವಾಭಾವಿಕವಾಗಿ ಇರುವುದಿಲ್ಲ. ದೇವರ ಭಯ, ಶಾಸ್ತ್ರದ ಶಾಸನ, ಕುಲ ಮರ್ಯಾದೆಗಳು ನಾಶವಾಗುವ ಭಯ, ರಾಜ್ಯದ ಕಾನೂನು ಮತ್ತು ಶಾರೀರಿಕ ಹಾಗೂ ಆರ್ಥಿಕ ಅನಿಷ್ಟದ ಆಶಂಕೆ ಇವುಗಳು ಮನುಷ್ಯ ಅಧರ್ಮದಿಂದ ಪಾರಾಗಲು ಹಾಗೂ ಧರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರಲ್ಲಿ ಸಮರ್ಥನಾಗಿರಲು ಕಾರಣಗಳಾಗಿವೆ.
ದಿನಗಳು ಬದಲಾದಂತೆ ಮನಸ್ಸಿನ ಯೋಚನೆಗಳು ಹೆಚ್ಚಾಗುತ್ತವೆ. ಯಾವುದನ್ನು ಮಾಡಬೇಕು ಯಾವುದನ್ನು ಬಿಡಬೇಕು ಎಂಬ ದ್ವಂದ್ವ ಭಾವನೆಗಳು ಮನಸ್ಸನ್ನು ಕೆದಕಿ ಹತ್ತಿರ ಇರುವವರನ್ನು ದೂರ ತಳ್ಳುವಂತೆ ಮಾಡುತ್ತವೆ. ಹತ್ತಿರದ ಮನಸ್ಸುಗಳು ಎಂದೂ ಆ ರೀತಿ ಯೋಚಿಸುವುದಿಲ್ಲ. ಆದರೂ ತಪ್ಪು ಅದುವೇ ಹೊರಬೇಕಾಗುತ್ತದೆ. ಒಳಿತು ಮಾಡುವ ಜೀವ ಅದರ ಆಳ ಅಗಲಗಳೆಲ್ಲವನ್ನು ಕೂಲಂಕಷವಾಗಿ ಪರಿಶೀಲಿಸುತ್ತವೆ. ಮತ್ತು ಒಳಿತು ಕೆಡುಕುಗಳನ್ನು ವಿಶ್ಲೇಷಿಸುತ್ತವೆ. ಆಗ ಹಿತಮಿತವಾದುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಮನಸ್ಸು ಹುಚ್ಚು ಕುದುರೆಯಂತೆ ನೆಗೆಯುತ್ತಿರುತ್ತದೆ. ಬುದ್ಧಿ ತನ್ನ ಮಾತಿನಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹರಸಾಹಸ ಮಾಡುತ್ತದೆ. ಹೀಗೆ ಬದುಕಿನ ಭಾವನೆಗಳಿಗೆ ಬುದ್ಧಿಯ ಸೂಕ್ಷ್ಮ ಮಾತು ಅರ್ಥವಾದರೆ ಚೈತನ್ಯದಾಯಕವಾಗಿರುತ್ತದೆ.
"ಕಲ್ಲರಳಿ ಹೂವಾಗಿ " ಎಲ್ಲೋ ಇದ್ದ ಕಲ್ಲನ್ನು ಹೊತ್ತು ತಂದು ದಿನವೂ ಅದನ್ನು ನೀರಿನಲ್ಲಿ ಸ್ವಚ್ಛಗೊಳಿಸುತ್ತಾ ಅದಕ್ಕೆ ಸಂಸ್ಕಾರ ಕೊಡುವುದು. ಏನಪ್ಪಾ ಇದು ಎಂತಹ ಕಾಲ ಬಂತು? ಕಲ್ಲಿಗೆ ಸಂಸ್ಕಾರ ಕೊಡುವುದು ಅಂದ್ರೆ ಅದೇನು ಜೀವವಿರುವಂತಾದ್ದೇ? ಎಂಬ ಪ್ರಶ್ನೆ ಏಳುವುದು ಸಹಜ. ಕಲ್ಲಿನಂತಹ ಮನಸ್ಸು ಕರಗಿ ನೀರಾಗುವುದೂ ಇದೆ. ಕಲ್ಲಿನಂತಹ ಹೃದಯ ಕನಿಕರದಿಂದ ಮರುಗುವುದೂ ಇದೆ. ಜಾಡಿಯೊಳಗೆ ಕಲ್ಲನ್ನು ತುಂಬಿಸಿ ಭರ್ತಿ ಮಾಡಿದ ಮೇಲೂ ಇನ್ನು ಯಾವುದೇ ಹೆಚ್ಚುವರಿ ಕಲ್ಲು ಒಳಗೆ ಹೋಗದ ರೀತಿಯಾದದ್ದೂ ಇದೆ. ಆದರೂ ಸಣ್ಣ ಸಣ್ಣ ಕಲ್ಲುಗಳನ್ನು ಜಾಡಿ ಒಳಗೆ ತುಂಬಿಸಲು ಸಾಧ್ಯವಿದೆ. ಆಯಿತು ಇನ್ನೇನು ಅದೂ ತುಂಬಿತು. ಇನ್ನು ಜಾಗವೇ ಇಲ್ಲ ಎಂದರೂ ಮರಳು ಆ ಜಾಗವನ್ನು ತುಂಬಿಕೊಳ್ಳುವುದುಂಟು. ಇನ್ನು ಏನೇ ಹಾಕಿದರು ಹೊರಗೆ ಬೀಳಲೇಬೇಕು ಎಂಬಷ್ಟರ ಮಟ್ಟಿಗೆ ಜಾಡಿ ತುಂಬಿರುತ್ತದೆ. ಆದರೂ ನೋಡಿಯೇ ಬಿಡುವ ಎಂದುಕೊಂಡು ಒಂದು ಪಾತ್ರೆಯಿಂದ ನೀರನ್ನು ಆ ಜಾಡಿಗೆ ನಿಧಾನವಾಗಿ ಸುರಿದಾಗ, ಅಬ್ಬಾ ಏನಾಶ್ಚರ್ಯ! ದೊಡ್ಡ ಕಲ್ಲು, ಸಣ್ಣ ಕಲ್ಲು, ಮರಳಿನೊಂದಿಗೆ ಸೇರಿಕೊಂಡು ತನ್ನ ಅಧಿಪತ್ಯವನ್ನು ಸ್ಥಾಪಿಸಿ ಧ್ಯಾನಸ್ಥ ಸ್ಥಿತಿಗೆ ಏರುವಂತೆ ಮಾಡಿಯೇ ಬಿಡುತ್ತದೆ. ಸಿಹಿಯಾದ ಸಕ್ಕರೆಯನ್ನು ಮೂರು ನಾಲ್ಕು ಮುಷ್ಠಿ ಅಥವಾ ಹೆಚ್ಚು, ಜಾಡಿಯೊಳಗೆ ಸುರಿದರೂ ಯಾವುದೂ ಹೊರ ಚೆಲ್ಲುವುದಿಲ್ಲ. ಮನಸ್ಸಿನ ತನ್ಮಯತೆ ಎಂದರೆ ಹೀಗೇ ಇರಬೇಕೇನೋ. ಬೇಕಾದ್ದು ಸಿಕ್ಕಿದಾಗ ಬದುಕು ಪರಿಪೂರ್ಣವಾಗಿ ಬಿಡುತ್ತದೆ. ಆದರೆ ಇದು ಕೇವಲ ಬಾಹ್ಯ ತೋರಿಕೆ. ಆಂತರಿಕವಾಗಿ ಸರಳತೆಯನ್ನು ಮೈಗೂಡಿಸಿಕೊಂಡರೆ ಬದುಕಲ್ಲಿ ಭವಸಾಗರವನ್ನು ಸುಲಭವಾಗಿ ಈಜಬಹುದು. ಇಲ್ಲಸಲ್ಲದ ಆಲೋಚನೆಗಳು ಮನಸ್ಸನ್ನು ಧೂಳಿಪಟವಾಗಿಸಿ ಇನ್ನಿಲ್ಲದ ರಾದ್ಧಾಂತ ಮಾಡುತ್ತವೆ. ಜಾಡಿ ಒಳಗಿನ ಕಲ್ಲುಗಳಂತೆ ಮರಳಿನಂತೆ ನೀರಿನಂತೆ, ಸಕ್ಕರೆಯಂತೆ ಎಲ್ಲವೂ ಒಂದಾದಾಗ ಸಹಜವೇ ಆಗುತ್ತದೆ.
ಆದರೆ ಆ ಕಲ್ಲು ಮತ್ತೇನಾಯಿತು. ಕೆಲವೊಂದು ಸಲ ನೀರಿನಲ್ಲಿ ನೆನೆ ನೆನೆದು ಕಲ್ಲು ಮೆದುವಾಗುವುದುಂಟು. ವಾಲಿ ಯುದ್ಧಕ್ಕೆ ಹೋಗಿ ಸುಮಾರು ದಿನ ಕಳೆದರೂ ಬರದೇ ಇರಲು ಅದೇ ಗುಹೆಗೆ ಸುಗ್ರೀವ ಕಲ್ಲು ಬಂಡೆ ಇರಿಸಿದ್ದು ಕಲ್ಲಿನಂತಹ ಹೃದಯದಿಂದಲ್ಲ. ಆರ್ತನಾದ ಕೇಳಿದಾಗ ತನ್ನ ಅಣ್ಣ ವಾಲಿಯನ್ನು ಕೂಗಿದ ಕರೆದ. ಆದರೆ ಒಳಗಿನಿಂದ ಸದ್ದೇ ಕೇಳಲಿಲ್ಲ. ಆ ರಾಕ್ಷಸ ತನ್ನ ಅಣ್ಣನನ್ನು ಸಂಹಾರ ಮಾಡಿಯೇ ಬಿಟ್ಟನೇನೋ ಎಂಬ ಅಳುಕು ಸುಗ್ರೀವನನ್ನು ಆ ರೀತಿ ಮಾಡಿಸಿತು. ಕೆಲವೊಮ್ಮೆ ಸಂಶಯಗ್ರಸ್ತ ಮನಸ್ಸು ಬೇಡವಾದುದನ್ನೇ ಯೋಚಿಸುವುದುಂಟು. ಅಲ್ಲದೆ ಒಂದು ವೇಳೆ ಆ ರಾಕ್ಷಸನೇ ಜಯಶಾಲಿಯಾದರೂ ಆತ ಹೊರಗಡೆ ಬರಬಾರದೆಂದು ಗುಹೆಯ ಬಾಯಿಗೆ ಅಡ್ಡವಾಗಿ ದೊಡ್ಡ ಬಂಡೆಕಲ್ಲನ್ನು ಇಟ್ಟುಬಿಟ್ಟ. ಕಲ್ಲು ಇಟ್ಟು, ಭಾರವಾದ ಕಲ್ಲಾಗಿ ಮಾರ್ಪಟ್ಟ ಮನಸ್ಸಿನ ನಡುವೆ ದ್ವಂದ್ವಗಳೇ ಎದ್ದು, ಅಣ್ಣನಿಲ್ಲದ ನಾನು ಹೇಗೆ ಇನ್ನು ಮುಂದೆ ಎಂದು ಆತ ಚಿಂತಿತನಾದದ್ದು ಹೌದು. ಇಟ್ಟ ದೊಡ್ಡ ಆ ಬಂಡೆಕಲ್ಲು ಅವರ ನಡುವೆ ವೈರತ್ವಕ್ಕೆ ನಾಂದಿಯಾಯಿತು.
ಹಾಗೆಯೇ ಕಲ್ಲು ಎಂದಾಕ್ಷಣ ಕಲ್ಲಾಗಿ ಮಾತೇ ಆಡದೇ ಜನ್ಮಜನ್ಮಗಳೇ ಕಳೆಯುವ ಪರಿಸ್ಥಿತಿ ಅಹಲ್ಯೆಗೆ ದೊರಕಿದ್ದಾದರೂ ಹೃದಯವಂತ ಶ್ರೀ ರಾಮನ ಪಾದಸ್ಪರ್ಶದಿಂದ ಹೂವಿನಂತೆ ಪುನಃ ಎದ್ದು ಅರಳಿ ಬರುವ ಅದೃಷ್ಟವನ್ನು ಆ ಮಾತೆ ಪಡೆದುಕೊಂಡದ್ದು ಕಲ್ಲಿನ ಮಹಿಮೆಯಿಂದಲೇ ಎನ್ನಬಹುದು. ಕಲ್ಲು, ಮಣ್ಣು ಇವೆಲ್ಲಾ ಪ್ರಕೃತಿಗೆ ಪೂರಕವೇ ಆಗಿದೆ. ಆದರೆ ಮನುಷ್ಯನೆಂಬ ಪ್ರಾಣಿಯಲ್ಲಿ ಹಲವು ತೆರನಾದ ಕಲ್ಲು ಮನಸ್ಸುಗಳಿವೆ. ಇಂತಹ ಮನಸ್ಸುಗಳು ಪ್ರಕೃತಿಯೊಡನೆ ಎಲ್ಲೆಂದರಲ್ಲಿ ತಮ್ಮ ಕೆಟ್ಟ ಚಾಳಿಯನ್ನು ಮುಂದುವರಿಸುತ್ತ ಅಟ್ಟಹಾಸ ಮಾಡುವಂತೆ ಗೋಚರಿಸುತ್ತವೆ. ಯಾವುದೇ ಕ್ಷಣದಲ್ಲಿಯೂ ಪ್ಲಾಸ್ಟಿಕ್ ಎಂಬ ಪೆಡಂಭೂತವನ್ನು ಎಲ್ಲೆಂದರಲ್ಲಿ ಪ್ರದರ್ಶನ ಮಾಡುತ್ತಾ ಮುಂದೆ ಸಾಗುತ್ತಾ ಸಂಭ್ರಮ ಪಡುವವರೂ ಇದ್ದಾರೆ. ದುಡ್ಡು ಕೊಟ್ಟು ತಿಂದ ಕೈಗಳಿಗೆ ಅದನ್ನು ಸರಿಯಾಗಿ ವಿಲೇವಾರಿ ಮಾಡಿ ಸಂತೋಷ ಪಟ್ಟುಕೊಳ್ಳುವ ಸುಬುದ್ಧಿ ಇಲ್ಲವೇ ಇಲ್ಲ. ಕೊನೆಗೆ ಸಾಧಾರಣ ಮಳೆ ಬಂದಾಗಲೂ ಪ್ರವಾಹ ಬರದೇ ಇನ್ನೇನು ಆಗುತ್ತೆ. ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣಾಗುವುದಿಲ್ಲ. ಮತ್ತೆ ಎಂದೂ ಕರಗುವುದೂ ಇಲ್ಲ. ಹೀಗಾಗಿ ಅದು ನಿರ್ಮೂಲನೆ ಆಗದ ತೊಡಕಾಗಿ ಪರಿಣಮಿಸಿವೆ. ತಿನ್ನುವಾಗ ಇರುವ ಪ್ರಜ್ಞೆ ತಿಂದ ಬಳಿಕವೂ ಇರಬೇಕು. ಇಲ್ಲದೇ ಹೋದರೆ ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿದಂತೆ ಆದರೂ ಕೋತಿ ಪ್ರಕೃತಿಗೇನೂ ಹಾನಿ ಮಾಡಿಲ್ಲ. ಪ್ರಾಣಿಗಳು ನಿಯತ್ತಿನಿಂದಿರುತ್ತವೆ. ಇದ್ದ ಬದ್ದ ಮಾರ್ಗದ ಇಕ್ಕೆಲಗಳಲ್ಲಿ, ಪ್ಲಾಸ್ಟಿಕ್ ಗಳಲ್ಲಿ ಏನೇನೋ ತಂದು ಬಿಸಾಡುವ ಅಮಾನವೀಯ ಹೇಡಿಗಳು ಹೊಲಸನ್ನು ತಿನ್ನುವವರೇ ಆಗಿರಬಹುದು. ಪರಿಸರವನ್ನು ಸ್ವಚ್ಛಗೊಳಿಸುವುದು ಹಾಗಿರಲಿ, ಅವರ ಮನವನ್ನು ಮೊದಲು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನ ಪಡಲಿ. ಶಾಂತಿಯಿಂದ ಪ್ರಯತ್ನಿಸಿ ಪ್ರಕೃತಿಯ ಉಳಿವಿಗೆ ಸಹಕರಿಸಿ. ಪ್ರಕೃತಿಯನ್ನು ಕಡೆಗಣಿಸಿ ಮುಂದೆ ಘೋರ ಪರಿಣಾಮಕ್ಕೆ ಸಾಕ್ಷಿಯಾಗದಿರಿ. ಪ್ರಕೃತಿ ಪೂಜ್ಯಳಾಗಿರಲಿ.
ಮಲ್ಲಿಕಾ ಜೆ ರೈ
ತುಳು- ಕನ್ನಡ ಸಾಹಿತಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ