ಬೆಂಗಳೂರು: ಮಾಗಡಿ ಮುಖ್ಯ ರಸ್ತೆಯಲ್ಲಿರುವ ಶ್ರೀ ವಿದ್ಯಾ ಕೇಂದ್ರದ ಸ್ಮಾರ್ಟ್ ಸ್ಕೂಲ್' ಸಿಬಿಎಸ್ಇ ಶಾಲೆಯಲ್ಲಿ ಜ್ಞಾನ, ವಿಜ್ಞಾನ, ವಾಣಿಜ್ಯ, ಕಲೆಗಳ ಮೇಳ 'ಮುಕ್ತ ದಿನ' ವನ್ನು ಶನಿವಾರ (ಜ.28) ಆಚರಿಸಲಾಯಿತು.
ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೂ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಇಂಡಿಯನ್ ಸೋಲ್ ವಿಥ್ ಗ್ಲೋಬಲ್ ಔಟ್ಲುಕ್ (Indian soul with global outlook) ಎನ್ನುವ ಧ್ಯೇಯವಿಟ್ಟು ಕೊಂಡಿರುವ ಈ ಶಾಲೆಯ ಸಂಸ್ಥಾಪಕರು ಶ್ರೀಯುತ ಎಲ್ಎಸ್ ಶ್ಯಾಮ ಸುಂದರ್ ಶರ್ಮ ಇವರು.
6ನೇ ತರಗತಿಯಿಂದ 9ನೇ ತರಗತಿಯ ವರೆಗಿನ ಸುಮಾರು 900 ಮಕ್ಕಳು ಈ ಮೇಳದಲ್ಲಿ ಭಾಗವಹಿಸಿದ್ದರು. ಸಾವಿರಕ್ಕೂ ಹೆಚ್ಚು ಜನ ಶಾಲಾ ಕ್ಯಾಂಪಸ್ಗೆ ಭೇಟಿ ನೀಡಿ ವಿದ್ಯಾರ್ಥಿಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ಗಮನಿಸಿ ಪ್ರಶಂಸಿಸಿದರು.
ಶಾಲೆಯ ವಿಜ್ಞಾನ ಉದ್ಯಾನದ ಸುಮಾರು 50ಕ್ಕೂ ಹೆಚ್ಚು ವೈಜ್ಞಾನಿಕ ಆಟಿಕೆಗಳು, ಭೂ ಉದ್ಯಾನದ ವೈವಿಧ್ಯ,ಶಿಲಾ ಉದ್ಯಾನ, ನೂರಾರು ರತ್ನಗಳು ಮತ್ತು ಪಳೆಯುಳಿಕೆಗಳು ಇರುವ ಶಾಲೆಯ ವಸ್ತು ಸಂಗ್ರಹಾಲಯ, ಸುಮಾರು 300 ರೀತಿಯ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ವೈವಿಧ್ಯತೆಯ ತಳಿಗಳಿರುವ ಸಸ್ಯಶಾಸ್ತ್ರೀಯ ಉದ್ಯಾನ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ವಿದ್ಯುತ್ ಕಾಂತೀಯ ವಿಕಿರಣ, ಕಾಂತೀಯತೆ ಮತ್ತು ವಿದ್ಯುತ್ ಪರಿಕಲ್ಪನೆ ಇಂತಹ ವಿಷಯಗಳುಳ್ಳ ಸುಮಾರು 150 ಕಾರ್ಯ ಮಾದರಿಗಳು, ವಾಯು, ನೀರು, ಆಹಾರ ಮತ್ತು ಸಾರಿಗೆ ಸಂವಹನ, ಬಗೆಗಿನ ಪ್ರದರ್ಶನಗಳು, ಗಣಿತ ಪ್ರಪಂಚ ಮತ್ತು ಗಣಿತ ಮ್ಯಾಜಿಕ್- ಇನ್ನೂ ಹತ್ತು ಹಲವು ವೈವಿಧ್ಯಗಳಿಂದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳಿಂದ ನಡೆದವು.ಆರೂವರೆ ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಶಾಲೆ ಒಂದು ಜ್ಞಾನ ಭಂಡಾರವೇ ಸರಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆ, ಶಾಲೆಯ ಮುಖ್ಯಸ್ಥರು ಹಾಗೂ ಉಪಾಧ್ಯಾಯರು ಸತತವಾಗಿ ಶ್ರಮಿಸುತ್ತಿರುವುದು 'ಮುಕ್ತ ದಿನ'ದ ಪ್ರಾತ್ಯಕ್ಷಿಕೆಗಳಲ್ಲಿ ಜ್ವಲಂತ ನಿದರ್ಶನವಾಯಿತು.
ಚಿತ್ರ, ವರದಿ: ಲಕ್ಷ್ಮೀ ಟಿ.ಎನ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ