ಪರೀಕ್ಷಾ ಪೆ ಚರ್ಚಾ: ಸರ್ಕಾರದ ಸಕಾಲಿಕ ಸ್ಪಂದನೆ- ರಾಜ್ಯದ ಮಕ್ಕಳಿಗೆ ಮೊದಲ ಸಾಲಿನ ಆಸನ!

Upayuktha
0

ಇದೊಂದು ಸಣ್ಣ ವಿಚಾರ ಎನ್ನಬಹುದಾದ ಘಟನೆ, ಆದರೆ ಕೆಲವು ಮುಗ್ಧ ಮಕ್ಕಳ ಮನಸ್ಸಿನ ಮೇಲೆ ಬಹುಕಾಲ ಕಹಿ ನೆನಪಾಗಿ ಉಳಿಯಬಹುದಾಗಿತ್ತು. ಆದರೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ಕೆಲವು ಮುಖಂಡರ ಸಕಾಲಿಕ ಸ್ಪಂದನೆಯಿಂದ ಆ ಮಕ್ಕಳಿಗೆ ಅದ್ಭುತ ಎನ್ನಬಹುದಾದ ಸಿಹಿ ಅನುಭವ ಲಭಿಸಿತು.


ಜನವರಿ 27 ರಂದು ಮೋದಿಯವರ ಪ್ರತೀ ವರ್ಷದಂತೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಪರೀಕ್ಷಾ ಪೆ ಚರ್ಚಾ (ದೇಶಾದ್ಯಂತ ಸುಮಾರು 38 ಲಕ್ಷ ವಿದ್ಯಾರ್ಥಿಗಳು ಭಾಗಿ) ಕಾರ್ಯಕ್ರಮ ನಿಗದಿಯಾಗಿತ್ತು. ಪ್ರತೀ ರಾಜ್ಯದಿಂದ ಆಯ್ದ ಕೆಲವು ಪ್ರತಿಭಾವಂತ ಮಕ್ಕಳಿಗೆ ನವದೆಹಲಿಯಲ್ಲಿ ಖುದ್ದು ಪ್ರಧಾನಿಯವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ದೊರೆತಿತ್ತು. ಇವರಲ್ಲಿ ಕರ್ನಾಟಕದಿಂದ ತೇಜ ಚಿನ್ಮಯಿ ಹೊಳ್ಳ , ಪಲ್ಲವಿ, ಪ್ರಹ್ಲಾದ್ ಭಟ್, ಹುಲ್ಲೇಶ್ ಛಲವಾದಿ ಅವಕಾಶ ಪಡೆದಿದ್ದರು.


ಈ ಮಕ್ಕಳ ಮತ್ತವರ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಕೆಲವು ಸೂಚನೆಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಕ್ಕಳು 24 ರಂದೇ ದೆಹಲಿ ಸೇರಿದ್ದರು. ಇವರ ಮೇಲುಸ್ತುವಾರಿಗಾಗಿ ಛಾಯಾ ಎಂಬವರನ್ನು ಸರ್ಕಾರ ನೇಮಿಸಿತ್ತು. ಅಲ್ಲಿ ಮಕ್ಕಳಿಗೆ ಆಘಾತ ಎದುರಾಗಿತ್ತು. ಇತೆರೆಲ್ಲಾ ರಾಜ್ಯದ ಮಕ್ಕಳು ಸೂಕ್ತ ರೀತಿಯಲ್ಲಿ ನಿಯಮ ಅನುಸರಿಸಿ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಪಡೆದಾಗಿತ್ತು. ಆದರೆ ಈ ಮಕ್ಕಳಿಗೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಪ್ರವೇಶ ನಿರಾಕರಿಸಲಾಯಿತು. ನಂತರ ತಿಳಿದು ಬಂದಂತೆ ರಾಜ್ಯದ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳ ಸಣ್ಣ ಕಣ್ತಪ್ಪಿನಿಂದ ಮಕ್ಕಳಿಗೆ ಕೈಗೆ ಬಂದದ್ದು ಬಾಯಿಗೆ ಇಲ್ಲ ಎಂಬ ಸ್ಥಿತಿ ಬಂದಿತ್ತು. ಅಧಿಕಾರಿಗಳಲ್ಲಿ ಪರಿಪರಿಯಾಗಿ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಬಹಳ ಕಷ್ಟದಲ್ಲಿ ವಸತಿ  ವ್ಯವಸ್ಥೆಯನ್ನು ಮಾತ್ರ ಮಾಡಿಕೊಟ್ಟಿದ್ದರು. ಇತ್ತ ಈ ಮಕ್ಕಳಿಗೆ ಮತ್ತು ಮಾಹಿತಿ ತಿಳಿದ ಪೋಷಕರಿಗೆ, ಶಾಲಾ ಶಿಕ್ಷಕರಿಗೆ ಅಸಹಾಯಕ ಸ್ಥಿತಿ.


ಕೊನೇ ಕ್ಷಣದ ಪ್ರಯತ್ನವಾಗಿ ಮಕ್ಕಳು ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರನ್ನು ಸಂಪರ್ಕಿಸಲಾರಂಭಿಸಿದರು. ಈ ನಡುವೆ ವಿದ್ಯಾರ್ಥಿಗಳ ಪೈಕಿ ಪ್ರಹ್ಲಾದ್ ಭಟ್ ನ ತಂದೆ ಮಂಗಳೂರು ಜಿಲ್ಲೆ ಕಡಂದಲೆ ನಿವಾಸಿ ಸ್ಕಂದ ಪ್ರಸಾದ ಅವರು ತಮ್ಮ ಗುರುಗಳಾದ ಶ್ರೀ ಪೇಜಾವರ ಮಠಾಧೀಶರಿಗೆ ಆತಂಕದಿಂದಲೇ ವಿಷಯ ತಿಳಿಸಿ ಉಪಕಾರಕ್ಕೆ ವಿನಂತಿಸಿದರು. ತಮ್ಮ ಆಪ್ತರಿಗೆ ಈ ಬಗ್ಗೆ ಉಪಕ್ರಮಿಸುವಂತೆ ಸೂಚನೆ ನೀಡಿ, ಮಕ್ಕಳು ಅವಕಾಶದಿಂದ ವಂಚಿತರಾಗಬಾರದು ಎಂದು ಕಟ್ಟಪ್ಪಣೆ ನೀಡಿದ್ದರು.


ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಕಡೆಯಿಂದ ಪರಿಸ್ಥಿತಿಯ ಕುರಿತಾಗಿ ಲಿಖಿತ ಮಾಹಿತಿ ಪಡೆದು ಕೇಂದ್ರದ ಮಂತ್ರಿ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸಪೂಜಾರಿ, ಶಿಕ್ಷಣ ಸಚಿವ ನಾಗೇಶ್, ಉಡುಪಿ ಶಾಸಕ ರಘುಪತಿ ಭಟ್, ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್ ವಿಶಾಲ್ ಹೀಗೆ ಪ್ರತಿಯೊಬ್ಬರಿಗೂ ವಾಟ್ಸಾಪ್ ಮೂಲಕ ಮಕ್ಕಳು ಕಳಿಸಿದ ಲಿಖಿತ ವಿಷಯ ಕಳಿಸಿದ ಬಳಿಕ ಮೊಬೈಲ್ ಕರೆ ಮಾಡಲಾರಂಭಿಸಿದರು. ಇಷ್ಟು ಜನರನ್ನು ಸಂಪರ್ಕಿಸಬೇಕಾದ ಅಗತ್ಯ ಇತ್ತೋ ಇಲ್ಲವೋ; ಆದರೆ ಹೇಗಾದರೂ ಕೆಲಸ ಸಾಧಿಸಬೇಕಾದ ಅನಿವಾರ್ಯತೆ. ಅಂತೂ ಎಲ್ಲರಿಗೂ ಕರೆ ಮಾಡಿ ವಿಷಯ ತಿಳಿಸಿದ್ದೂ ಆಯಿತು. ಒಂದರ್ಧ ಘಂಟೆಯಲ್ಲೇ ಅಚ್ಚರಿಯ ಬೆಳವಣಿಗೆ ಆರಂಭವಾಗಿತ್ತು. ಪ್ರತಿಯೊಬ್ಬರೂ ಪ್ರಯತ್ನ ಆರಂಭಿಸಿದರು. ಈ ಮಾಹಿತಿಯನ್ನು ಪೇಜಾವರ ಶ್ರೀಗಳ ಆಪ್ತರಿಗೂ ತಿಳಿಸಲಾರಂಭಿಸಿದಾಗ ಏನೋ ಭರವಸೆಯ ಬೆಳಕು ಸಿಕ್ಕ ಅನುಭವ. ಮಕ್ಕಳಿಗೂ ಈ ವಿಷಯ ತಿಳಿಸಿ ಧೈರ್ಯ, ವಿಶ್ವಾಸ ತುಂಬಲಾಯಿತು.


ಕಾರ್ಯಕ್ರಮ ನಡೆಯುವ ಕೆಲವೇ ಘಂಟೆಗಳ ಮೊದಲು ಕಾರ್ಯಾಚರಣೆ ಆರಂಭವಾಗಿತ್ತು. ವಿಚಾರ ತಿಳಿದ ಪ್ರತಿಯೊಬ್ಬರೂ ದೆಹಲಿ ಮಟ್ಟದಲ್ಲಿ ಪರಿಸ್ಥಿತಿಯ ಮಾಹಿತಿ ಪಡೆದು ಪ್ರಧಾನ ಮಂತ್ರಿಗಳ ಕಚೇರಿಗೆ ವಿಷಯ ತಿಳಿಸಿದರು. ಪ್ರಧಾನಮಂತ್ರಿ ಕಾರ್ಯಾಲಯದವರು ಮಧ್ಯಪ್ರವೇಶಿಸುವಂತೆ ಭಿನ್ನವಿಸುತ್ತಿದ್ದೇವೆ ಎಂದು ಎಲ್ಲರೂ ಶ್ರೀಗಳಿಗೆ ಮಾಹಿತಿ ನೀಡಿದರು. ಈ ನಡುವೆ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್ ಕೂಡಾ ತುರ್ತಾಗಿ ಪ್ರಯತ್ನದ ಜೊತೆಗೆ ಕೈಜೋಡಿಸಿದ್ದರು. ಮಾಹಿತಿ ಪ್ರಧಾನಿ ಮೋದಿಯವರಿಗೂ ತಲುಪಿತು. ಕರ್ನಾಟಕದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಭದ್ರತಾ ವಿಭಾಗಕ್ಕೆ ಸೂಚನೆ ರವಾನೆಯಾಗಿತ್ತು. ಈ ಬೆಳವಣಿಗೆಗಳು ಎಲ್ಲಾ ಮುಖಂಡರಿಗೆ, ಶ್ರೀಗಳಿಗೆ,  ಮಕ್ಕಳಿಗೆ, ಮಕ್ಕಳ ಪೋಷಕರು-ಶಿಕ್ಷಕರಿಗೆ ತಿಳಿಯುತ್ತಲೇ ಎಲ್ಲರಲ್ಲಿ ಮಿಂಚಿನ ಸಂಚಾರ! ಆಕಾಶವೇ ತಲೆ ಮೇಲೆ ಬಿದ್ದಂತಾಗಿದ್ದ ಮಕ್ಕಳು ಪುಟಿದೆದ್ದು ನೆಗೆದರು. ಪೋಷಕರಂತೂ ಆನಂದ ಬಾಷ್ಪ ಸುರಿಸುತ್ತಲೇ ಶ್ರೀಗಳಿಗೆ ಕರೆ ಮಾಡಿ ಧನ್ಯತೆ ಅರ್ಪಿಸಲಾರಂಭಿಸಿದರು. ಇತ್ತ ಕೇಂದ್ರ ಸಚಿವರಾದ ಜೋಶಿ, ಖೂಬಾ, ಶೋಭಾ ಅವರು ಸ್ವತಃ ಮಕ್ಕಳಿಗೆ ಕರೆ ಮಾಡಿ ಧೈರ್ಯ ಹೇಳಿದರು.

ಅಂತೂ 27 ರ ಮುಂಜಾನೆ ನಸುಕಿನ ಮೂರು ಘಂಟೆ ವೇಳೆಗೆ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರವೇಶಾತಿ ಲಭಿಸಿದ ಅಧಿಕೃತ ಮಾಹಿತಿ ಬಂದಾಗಲಂತೂ ಮಕ್ಕಳ ಪಾಲಿಗೆ ದೊಡ್ಡ ವಿಜಯ ಸಾಧಿಸಿದ ಆನಂದಾಚ್ಚರಿಯ ಭಾವ!


ರಾಜ್ಯ ಸರ್ಕಾರದ ಸಕಾಲಿಕ ಸ್ಪಂದನೆಯಿಂದ ಸಿಕ್ಕ ಅಮೂಲ್ಯ ಅವಕಾಶದಿಂದ ವಂಚಿತರಾಗಬಹುದಾಗಿದ್ದ ರಾಜ್ಯದ ನಾಲ್ಕು ಮಕ್ಕಳು ಪರೀಕ್ಷಾ ಪೇ ಚರ್ಚೆಯಲ್ಲಿ ಮುಂದಿನ ಸಾಲಿನಲ್ಲೇ ಆಸನ‌ಗಿಟ್ಟಿಸಿದ್ದರು. ಅಲ್ಲದೇ, ಮೋದಿ ಜತೆ ಸಂಭಾಷಣೆ ನಡೆಸಿ ಸೆಲ್ಫಿಯನ್ನೂ ಕ್ಲಿಕ್ಲಿಸಿಕೊಂಡು ಸ್ಮರಣಯೋಗ್ಯವಾದ ಸಂದರ್ಭವನ್ನು ಕಣ್ಮನಗಳಲ್ಲಿ ತುಂಬಿಕೊಂಡು ಬರುತ್ತಿರುವುದಕ್ಕೆ ನಾವೆಲ್ಲ ಹೆಮ್ಮಪಡಲೇ ಬೇಕು. ಸಕಾಲಿಕವಾಗಿ ಸ್ಪಂದಿಸಿದ ಮುಖಂಡರೆಲ್ಲರೂ ಅಭಿನಂದಾರ್ಹರು.  



-ಜಿ. ವಾಸದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top