ಸುಳ್ಯ: 1837ರ ಐತಿಹಾಸಿಕ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಮೊದಲ ಕಿಡಿ ಕಂಡ ಭೂಮಿಯೆಂಬ ಖ್ಯಾತಿಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ, ಇತಿಹಾಸ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹30 ಲಕ್ಷ ಅನುದಾನ ಮಂಜೂರು ಆಗಿರುವ ಕುರಿತು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಎಸ್.ಅಂಗಾರ ಅವರು ಹೇಳಿದ್ದಾರೆ. ಈ ಕುರಿತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ 'ರಿಕಾಲಿಂಗ್ ಅಮರ ಸುಳ್ಯ' ಪುಸ್ತಕದ ಲೇಖಕರಾದ ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಸಾಮಾಜಿಕ ಜಾಲತಾಣದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾಖಲಾಧಾರಿತ ಐತಿಹಾಸಿಕ ಮಾಹಿತಿಗಳನ್ನು ಹೊರಹಾಕುತ್ತ ಬರೆದಿರುವ ಅನಿಂದಿತ್, ಬೆಳ್ಳಾರೆ ಹಾಗೂ ಸುತ್ತಮುತ್ತಲಿನ ಪರಿಸರ ಅವರ ಊರು ಆದ್ದರಿಂದ ಪುಸ್ತಕದ ಮೇಲೆ ಬೀರಿರುವ ಸ್ಥಳದ ಪ್ರಭಾವದ ಕುರಿತು ವಿವರಿಸಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಸುಳ್ಯ ಪರಿಸರದಲ್ಲಿ ರೂಢಿಯಲ್ಲಿರುವ ಕೋವಿ ಡೆಪಾಸಿಟ್ ಇಡುವ ಪದ್ದತಿಯನ್ನು ಬಾಲ್ಯದಿಂದಲೇ ನೋಡಿಕೊಂಡು ಬಂದಿರುವ ಲೇಖಕರು ಈ ಸಂದರ್ಭದಲ್ಲಿ ಅದನ್ನು ನೆನಪಿಸಿಕೊಂಡಿದ್ದು, 'ನಮ್ಮ ಹಿರಿಯರು ಒಂದಾನೊಂದು ಕಾಲದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯನ್ನು ಒದ್ದು ಓಡಿಸಿಲು ಅದೇ ಸ್ಥಳಕ್ಕೆ ಕೆಚ್ಚೆದೆಯಿಂದ ನಡೆದು ಬಂದ ಸಂದರ್ಭವನ್ನು ಒಮ್ಮೆ ಕಣ್ಣೆದುರಿಗೆ ತರುತ್ತದೆ!' ಎಂಬ ಭಾವನೆಯನ್ನು ಹಂಚಿಕೊಂಡಿದ್ದಾರೆ.