ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರಿಯನ್ನು ತಲುಪಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಸಾಧನೆಗೆ ಯಾವುದೇ ವಯಸ್ಸು, ಜಾತಿ ಅಡ್ಡಿಯಾಗುವುದಿಲ್ಲ. ತನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ಬದಿಗೊತ್ತಿ, ತನ್ನಿಂದ ಸಾಧ್ಯ ಎಂಬ ದೃಢತೆಯಿಂದ ಪ್ರಯತ್ನದ ಹಾದಿಯಲ್ಲಿ ಹೆಜ್ಜೆಯನ್ನಿಟ್ಟು ಸಾಗಿದಾಗ ತನ್ನ ಕನಸಿನ ಗಮ್ಯಸ್ಥಾನ ತಲುಪಲು ಸಾಧ್ಯ. ಈ ರೀತಿಯ ಪರಿಶ್ರಮದಿಂದ ಕಥಾ ಬರವಣಿಗೆ, ನಿರ್ದೇಶನ, ಭಾಷಣ, ನಟನೆ, ಚರ್ಚೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿರುವ ಪ್ರತಿಭಾವಂತ ಯುವಕ ಸುಳ್ಯದ ಕೀರ್ತನ್ ಶೆಟ್ಟಿ.
ಹಲವಾರು ಹಾಡುಗಳ ಆಲ್ಬಮ್ ಮತ್ತು ಕಿರುಚಿತ್ರಗಳನ್ನು ರಚಿಸಿ, ನಿರ್ದೇಶಿಸಿ ಮತ್ತು ನಟಿಸುವ ಮೂಲಕ ಒಬ್ಬ ಉತ್ತಮ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಅಂಜಲಿ, ನಿನ್ನ ಜೊತೆಯಲಿ, ಮೌನ ಮಾತಾದಾಗ, ಮೌನಿಯಾಗಿರುವೆ ಮುಂತಾದ ಕನ್ನಡ ಆಲ್ಬಮ್ ಹಾಡುಗಳು, ಎಚ್ಚರ, ಕನಸ ಕಂಗಳಲಿ ನಾನ್ಯಾರೋ, ಶಿಕಾರಿ ಮುಂತಾದ ಕಿರುಚಿತ್ರಗಳನ್ನು ಇವರು ರಚಿಸಿದ್ದಾರೆ. ಮೌನಿಯಾಗಿರುವೆ ಹಾಡಿಗೆ ನಾಯಕನಾಗಿ ನಟಿಸಿದ್ದಾರೆ. ಇದೀಗ, ಮೌನಿಯಾಗಿರುವೆ 2 ಆಲ್ಬಮ್ ಹಾಡಿನ ತಯಾರಿಯನ್ನು ನಡೆಸುತ್ತಿದ್ದು ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ತಪಸ್ಯ ಮೀಡಿಯಾ ಸುಳ್ಯ ಎಂಬ ಯುಟ್ಯೂಬ್ ಚಾನೆಲ್ ಮೂಲಕ ಹಾಡುಗಳು, ಕಿರುಚಿತ್ರಗಳನ್ನು ಬಿಡುಗಡೆಗೊಳಿಸಿಸುತ್ತಿದ್ದಾರೆ.
2019 ರಲ್ಲಿ ಪಟ್ಲ ಪ್ರತಿಭಾ ಪುರಸ್ಕಾರ, ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, ಸುಳ್ಯದಲ್ಲಿ ನಡೆದ ಪೆಟ್ರೋಲ್ ಬೆಲೆ ಏರಿಕೆ ವಿಷಯದ ಕುರಿತ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 100 ಕ್ಕಿಂತಲ್ಲೂ ಹೆಚ್ಚು ವೇದಿಕೆಯಲ್ಲಿ ಯಕ್ಷಗಾನ, ಭಾಷಣ ಮುಂತಾದ ಕಾರ್ಯಕ್ರಮಗಳನ್ನು ನೀಡಿರುವ ಇವರು 5 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಗುರುತಿಸಿಕೊಂಡಿದ್ದಾರೆ. ಬಲೇ ಬುಲಿಪಾಲೇ ಶೋ, ಸ್ಟಾಂಡ್ ಅಪ್ ಕಾಮಿಡಿ ಶೋದಲ್ಲಿ ಭಾಗವಹಿಸಿದ್ದಾರೆ.
ಕನಕಮಜಲಿನವರಾದ ಇವರು ಜನಾರ್ದನ ಶೆಟ್ಟಿ ಹಾಗೂ ಹೇಮಾವತಿ ರೈ ದಂಪತಿಯ ಪುತ್ರ. ತನ್ನ ಸಾಧನೆಗೆ ಪ್ರೋತ್ಸಾಹ ನೀಡಿ ಹುರುಪು ತುಂಬಿದ ಅಜ್ಜ ರಾಮಣ್ಣ ರೈ ಕಕ್ಕೂರು, ತಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಹಾಗೂ ಇತರ ಶಿಕ್ಷಕರು, ಎನ್.ಎಸ್. ಎಸ್ ನಿರ್ವಹಣಾ ಅಧಿಕಾರಿಗಳಾದ ಸುರೇಖಾ ಹಾಗೂ ಧನುರಾಜ್, ರಂಗನಾಟಕದ ಬಗ್ಗೆ ಮಾರ್ಗದರ್ಶನ ನೀಡಿದ ಗುರುಗಳಾದ ಪುಷ್ಪರಾಜ್ ಹಾಗೂ ಬಾಲಕೃಷ್ಣ ಮುಂತಾದವರನ್ನು ಸ್ಮರಿಸಿಕೊಳ್ಳುವ ಕೀರ್ತನ್ ತನ್ನಂತಹ ಸಣ್ಣ ಯುವಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವುದರ ಮೂಲಕ ನಮ್ಮವರು ನೀಡುವ ಪ್ರೋತ್ಸಾಹವೇ ನಮಗೆ ಸಿಗುವ ದೊಡ್ಡ ಸನ್ಮಾನ ಎನ್ನುತ್ತಾರೆ.
ಶಿಲ್ಪಾ ಜಯಾನಂದ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ (ಸ್ವಾಯತ್ತ) ಕಾಲೇಜು, ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ