ತುಳುನಾಡು ಎಂದರೆ ಸಂಸ್ಕೃತಿಗಳ ಖಜಾನೆ. ಭೂತರಾಧನೆ ಎಂಬುವುದು ತುಳುನಾಡಿನ ಆರಾಧನೆಗಳಲ್ಲಿ ಮುಖ್ಯವಾದುದಾಗಿದೆ. ದೈವ ನರ್ತನ ಸೇವೆಯನ್ನು ಮಾಡುವವರನ್ನು ದೈವನರ್ತಕರು ಎಂದು ಕರೆಯಲಾಗುತ್ತದೆ. ಇಂತಹ ಸೇವೆಗಳನ್ನು ನೀಡುವವರು ಅನೇಕರಿದ್ದಾರೆ. ಅದರಲ್ಲಿ ನಿಷ್ಠೆಯಿಂದ ತನ್ನನ್ನು ತಾನು ತೊಡಗಿಸಿಕೊಂಡವರು ಕೋಟಿ ಪರವ.
ಮೂಲತ: ಇವರು ಪುತ್ತೂರು ತಾಲೂಕಿನ ಮಾಡವು ಗ್ರಾಮ, ಸಂತೋಷನಗರದ ದೇವು ಪರವ ಹಾಗೂ ಕೊರಪೊಳು ದಂಪತಿಯವರ 5ಗಂಡು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಯ್ಯೂರು ನಲ್ಲಿ ಮುಗಿಸಿ ನಂತರ ತನ್ನ 12ನೇ ವಯಸ್ಸಿನಲ್ಲಿಯೇ ಕುಲಕಸುಬಾದ ದೈವನರ್ತನ ಸೇವೆಯಲ್ಲಿ ತೊಡಗಿಸಿಕೊಂಡರು. ದೈವ ಸೇವೆಯಲ್ಲಿ ಅಚಲವಾದಂತಹ ಭಕ್ತಿ ಹಾಗೂ ನಿಷ್ಠೆಯಿಂದ ಎಲ್ಲರ ಮನೆಮಾತಾದರು. ಭೂತರಾಧನೆಯಲ್ಲಿ ಹೊಂದಿದ ಪರಿಣಿತಿಯಿಂದಾಗಿ ಊರ ಹಾಗೂ ಪರವೂರುಗಳಲ್ಲಿಯೂ ಕೂಡ ಕೋಟಿ ಪರವ ಎಂಬ ಹೆಸರು ಅತ್ಯಂತ ಚಿರಪರಿಚಿತವಾದುದು.
ತಮ್ಮ ಮನೆತನದ ಹಿರಿಯರಿಂದ ಪರಂಪರಾಗತವಾಗಿ ಬಂದ ದೈವ ನರ್ತನ ವನ್ನು ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರ ನೇಮ ನಿಷ್ಠೆ ಹಾಗೂ ನಡವಳಿಕೆಗಳು ಇತರರಿಗೆ ಆದರ್ಶಪ್ರಯವಾದುದು. ಇವರು ಪಾಲ್ತಾಡು, ಇರ್ದೆ, ಪೆರುವಾಜೆ, ದುಗಲ, ಕೊಯ್ಕಳ, ಕೊಡೆಂಕಿರಿ, ಕೆಯ್ಯೂರು,ಆರ್ಲಪದವು, ಕುಂಟಿಕಾನ ಮುಂತಾದ ಕಡೆಗಳಲ್ಲಿ 'ಉಳ್ಳಾಕುಲು ಮುಡಿತ್ತ ನೇಮ 'ವನ್ನು ಶ್ರದ್ದಾ ಭಕ್ತಿಯಿಂದ ನಡೆಸುತ್ತಾ ಉಳ್ಳಾಕುಲು ಸಿರಿಮುಡಿ ಯನ್ನ ಹೊತ್ತು ನಡೆಸುವಂತಹ ವಲ ಸಿರಿ, ಬಂಡಿ ಸವಾರಿ ಹಾಗೂ ನುಡಿಕಟ್ಟು ಗಳಲ್ಲಿ ಅಪಾರವಾದ ಪರಿಣಿತಿ ಹೊಂದಿದ್ದಾರೆ.
ಇವರು ಉಳ್ಳಾಕುಲು ದೈವಗಳಲ್ಲದೆ ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ, ರುದ್ರಚಾಮುಂಡಿ, ಕೊಡಮಣಿತ್ತಾಯ, ಜುಮಾದಿ, ಹೊಸಮ್ಮ ದೈವ ಮಾತ್ರವಲ್ಲದೇ ಮಡಿಕೇರಿಯಲ್ಲಿ ಚಾಮುಂಡಿ, ರುದ್ರಚಾಮುಂಡಿ, ಭದ್ರಕಾಳಿ ಹಾಗೂ ವಿವಿಧ ಜಾತ್ರೋತ್ಸವದ ಸಂದರ್ಭ ದೇವಸ್ಥಾನಗಳಲ್ಲಿ ವಿವಿಧ ರೀತಿಯ ನರ್ತನ ಸೇವೆಯನ್ನು ನಡೆಸುತ್ತಾ ಬಂದಿದ್ದಾರೆ.
ಸತತ 58ವರ್ಷಗಳಿಂದ ದೈವ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಕೋಟಿ ಪರವರಿಗೆ ಈಗ 73ವರುಷ. ಈ ಪ್ರಾಯದಲ್ಲೂ ಸಹ ದೈವ ಸೇವೆಯನ್ನು ನೀಡುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ಹಾಗೂ ಊರ ಪರವೂರ ಭಕ್ತಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿ ಹಲವಾರು ಸನ್ಮಾನ ಹಾಗೂ ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾರೆ. ಇವರ ಸೇವೆಗೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹತ್ತು -ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ. ಅಲ್ಲದೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಕೂಡ ಇವರಿಗೆ ಗೌರವ ಪುರಸ್ಕಾರ ಸನ್ಮಾನಗಳು ಸಂದಿವೆ.
2015-16ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, 2000ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ,2006ರಲ್ಲಿ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪ್ರಶಸ್ತಿ,2009ರಲ್ಲಿ ಬೆಂಗಳೂರಿನ ರಾಮನಗರದಲ್ಲಿ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ 2017ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯನ್ನು ಪಡೆದುಕೊಂಡಿದ್ದಾರೆ.
ಮುಂದಿನ ಜನಾಂಗದವರು ಕೂಡ ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬಂದಿರುವ ಕುಲಕಸುಬಾದ ನರ್ತನ ಸೇವೆಯನ್ನು ಹಿರಿಯರಷ್ಟೇ ನಿಷ್ಠೆ ಹಾಗೂ ಗೌರವಯುತವಾಗಿ ಮುಂದುವರೆಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎನ್ನುತ್ತಾರೆ ಕೋಟಿ ಪರವ.
ಪ್ರಸ್ತುತ ಇವರು ತಮ್ಮ ಹಿರಿಯರಿಂದ ಬಂದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ತಮ್ಮ ಪತ್ನಿ ಸುಶೀಲಾ ಹಾಗೂ ಓರ್ವ ಪುತ್ರ(ಇವರು ಕೂಡ ದೈವ ನರ್ತಕರಗಿ ಸೇವೆ ಸಲ್ಲಿಸುತ್ತಿದ್ದಾರೆ) ಹಾಗೂ ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳೊಂದಿಗೆ ಮಾಡವು ಎಂಬಲ್ಲಿ ಸುಖಿ ಜೀವನ ವನ್ನು ನಡೆಸುತ್ತಿದ್ದಾರೆ. ಇವರ ನರ್ತನ ಕಾರ್ಯವು ಇನ್ನಷ್ಟು ಮುಂದುವರೆಯುವಂತಾಗಲಿ.
-ಪ್ರಸಾದಿನಿ.ಕೆ ತಿಂಗಳಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ