ಮೂಡಬಿದಿರೆ: ಯಾವುದೇ ಕಲೆ ಮತ್ತು ಕಲಿಕೆಯ ಹಿಂದೆ ಒಬ್ಬ ಗುರುವಿನ ಕೊಡುಗೆ ಇದ್ದೇ ಇರುತ್ತದೆ. ಆದರೆ, ಯಾವ ತರಬೇತಿಯನ್ನೂ ಪಡೆಯದೇ, ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಸ್ವತಃ ತಾವೇ ಕರಕುಶಲ ಕಲೆಯನ್ನು ಮೈಗೂಡಿಸಿಕೊಂಡು, ಅದನ್ನೇ ಉದ್ಯಮವನ್ನಾಗಿ ನಡೆಸಿಕೊಂಡು ಹೋಗುತ್ತಿರುವವರು ತೀರಾ ಕಡಿಮೆ. ಹೀಗೆ ಕಲಿತ ವಿದ್ಯೆಯನ್ನು ಇತರರಿಗೆ ಉಚಿತವಾಗಿ ಹೇಳಿಕೊಡುವವರಿದ್ದರೆ ಆಸಕ್ತರು ಹಿಂದುಳಿಯುವ ಮಾತೇ ಇಲ್ಲ.
ಆಳ್ವಾಸ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಕಲಾ ಮೇಳದಲ್ಲಿ ಇಂತಹದೊಂದು ಕರಕುಶಲ ಕಲೆಯ ವಿಶೇಷ ಉಚಿತ ತರಬೇತಿ ನಡೆಯುತ್ತಿದೆ. ದವಲಪ್ಪ ಟಿ. ಸಾತಪುತೆ ತಮ್ಮ ವಿಶೇಷ ಪ್ರತಿಭೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕಸದಿಂದ ರಸ ಪರಿಕಲ್ಪನೆಯಲ್ಲಿ ತಮ್ಮ ಹೊಲದಲ್ಲಿ ಸಿಗುವ ಜೊಂಡು ಹುಲ್ಲುಗಳು, ಜೋಳದ ಒಣ ಸಿಪ್ಪೆಗಳು ಮತ್ತು ಚರ್ಮಗಳನ್ನು ಬಳಸಿಕೊಂಡು ಕ್ರಿಯಾತ್ಮಕವಾಗಿ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಕಲೆಯ ಪರಿಚಯ ಮಾಡಿಕೊಡುತ್ತಿದ್ದಾರೆ.
ಒಣ ಹುಲ್ಲಿನಿಂದ ತರಹೇವಾರಿ ಬಾಸ್ಕೆಟ್ಗಳು, ಟೀಕೋಸ್ಟರ್ಸ್, ಹೋಮ್ ಡೆಕೋರರ್ಸ್, ಲಾಂಡ್ರೀ ಬಾಸ್ಕೆಟ್, ವೆನೆಟೀ ಬ್ಯಾಗ್ಗಳು ಮತ್ತು ಪರ್ಸ್ಗಳು ತಯಾರಾಗಿವೆ. ಚರ್ಮದಿಂದ ತಯಾರಿಸಿದ ಪರ್ಸ್ ಮತ್ತು ಬ್ಯಾಗ್ಗಳು ಆಕರ್ಷಕವಾಗಿವೆ. ಇನ್ನು ಜೋಳದ ಒಣ ಸಿಪ್ಪೆಗಳಿಂದ ತಯಾರಿಸಿದ ಬಣ್ಣ ಬಣ್ಣದ ಹೂವುಗಳು ನೋಡುಗರ ಗಮನ ಸೆಳೆಯುತ್ತಿದೆ. ಹೀಗೆ ಬೇಡಿಕೆ ಇರುವ ಹತ್ತು ಹಲವು ವಸ್ತುಗಳನ್ನು ಸ್ಪಾಟ್ನಲ್ಲಿಯೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ಊರಿನವರಾದ ಇವರು ಶಾಲಾ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಈ ಕಲೆಯ ಕುರಿತಾದ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ವಿಶೇಷವೆಂದರೆ ಜಾಂಬೂರಿಯ ಕಲಾ ಮೇಳದಲ್ಲಿ ಮಕ್ಕಳಿಗೆ ಇಂತಹದ್ದೊಂದು ವಿಶೇಷ ಕಲೆಯ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಲವಾರು ಆಸಕ್ತ ಮಕ್ಕಳು ಇದರಲ್ಲಿ ಭಾಗವಹಿಸಿದ್ದಾರೆ.
ದವಲಪ್ಪ ಟಿ. ಸಾತಪುತೆ ಸುಮಾರು 30 ವರ್ಷಗಳಿಂದ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ನಾವು ಕಲಿತ ಕಲೆಗೆ ಬೆಲೆ ಸಿಗುವುದು ಅದನ್ನು ನಾಲ್ಕು ಜನಕಲಿತು ಉಪಯೋಗಿಸಿಕೊಂಡಾಗ ಮಾತ್ರ ಎಂಬುದು ಅವರ ಅಭಿಪ್ರಾಯ.
ವರದಿ: ಪ್ರೀತಿ ಹಡಪದ
ದ್ವಿತೀಯ ವರ್ಷ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರಗಳು: ಭಾರತಿ ಹೆಗಡೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ