ಪಣಜಿ: ಕಳೆದ ಹಲವು ವರ್ಷಗಳ ಹಿಂದೆ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆಮಾಡಬೇಕು ಎಂಬ ಕನಸು ಕಂಡಿದ್ದೆವು. ಆದರೆ ಅಂದು ಅದು ಸಾಧ್ಯವಾಗಿರಲಿಲ್ಲ. ಇಂದು ಸಿದ್ಧಣ್ಣ ಮೇಟಿ ರವರ ನೇತೃತ್ವದಲ್ಲಿ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆಯಾಗಿದೆ. ಇಂದು 67 ನೇ ಕನ್ನಡ ರಾಜ್ಯೋತ್ಸವ, ಇಂತಹ ಒಂದು ಶುಭ ದಿನ ಪಣಜಿ ಘಟಕ ಸ್ಥಾಪನೆಯಾಗುತ್ತಿದೆ. ಒಬ್ಬ ಮನುಷ್ಯ ಮುಂದೆ ನಡೆದಾಗ ಆತನ ಕಾಲು ಜಗ್ಗುವವರು ಹೆಚ್ಚು, ಆದರೆ ಇವೆಲ್ಲವನ್ನು ಬಿಟ್ಟು ನಾವೆಲ್ಲರೂ ಕನ್ನಡಿಗರು ಎಂಬ ಭಾವನೆ ಬೇಕು. ಗೋವಾದಲ್ಲಿ ಮೂರು ಜನ ಕನ್ನಡದ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಇಲ್ಲಿನ ಕನ್ನಡಿಗರಿಗೆ ಇದೆ ಎಂದು ಇಂಡೋ ಪೋರ್ಚುಗೀಸ್ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಹೇಳಿದರು.
ಕನ್ನಡ ರಾಜ್ಯೋಜ್ಯದ ಶುಭ ಸಂದರ್ಭದಲ್ಲಿ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಉತ್ತರ ಗೋವಾದ ತಿಸವಾಡಿ ತಾಲೂಕಾ ಪಣಜಿ ಘಟಕದ ಪದಾಧಿಕಾರಿಗಳ ಪದಗೃಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ- ಗೋವಾದ ಜನರ ಕುಲದೇವರು ಕರ್ನಾಟಕದಲ್ಲಿದೆ, ಕರ್ನಾಟಕದ ಜನರ ಕುಲದೇವರು ಗೋವಾದಲ್ಲಿದೆ. ಹೀಗೆ ಕರ್ನಾಟಕ ಮತ್ತು ಗೋವಾ ಅವಿನಾಭಾವ ಸಂಬಂಧ ಹೊಂದಿದೆ. ನಾವು ಕೇವಲ ಘಟಕ ಸ್ಥಾಪನೆ ಮಾಡಿದರೆ ಸಾಲದು ಸದಸ್ಯತ್ವ ಅಭಿಯಾನ ವೇಗಗೊಳಿಸಬೇಕು. ಕನ್ನಡ ಸ್ವಾಭಿಮಾನಿಗಳಾಗಿ ಇಲ್ಲಿ ಇಷ್ಟೊಂದು ಜನರು ಸೇರಿದ್ದಾರೆ. ಇಂತಹ ಕಾರ್ಯಕ್ರಮ ಮಾಡಬೇಕಾದರೆ ಹಲವು ತೊಂದರೆ ಬರುವುದು ಸಹಜ ಎಂದು ಸಿದ್ಧಣ್ಣ ಮೇಟಿ ನುಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ಕನ್ನಡ ಸಮಾಜ ಪಣಜಿ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಸಾಪ ಪಣಜಿ ತಾಲೂಕಾ ಘಟಕದ ಅಧ್ಯಕ್ಷ ಹನುಮಂತ ಗೊರವರ್, ಉತ್ತರ ಗೋವಾ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಕೊಟ್ಟಿಗೇರಿ, ದಕ್ಷಿಣ ಗೋವಾ ಜಿಲ್ಲಾ ಅಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಜುವಾರಿ ನಗರ ದೇವಸ್ಥಾನದ ಅರ್ಚಕರಾದ ಸಂಗಯ್ಯ ಹಿರೇಮಠ, ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭದಲ್ಲಿ ಮಹಾಲಕ್ಷೀ ಸಂಗಡಿಗರು ನಾಡಗೀತೆ ಹಾಡಿದರು, ಕುಮಾರಿ ವೈಶಾಲಿ ಜೋಶಿ ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ಮಕ್ಕಳಿಂದ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ನಡೆಯಿತು. ಗೋವಾದಲ್ಲಿ ಸಾಧನೆಗೈದ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು. ಪಣಜಿ ತಾಲೂಕಾ ಘಟಕದ ಪದಾಧಿಕಾರಿಗಳ ಪದಗೃಹಣ ಸಮಾರಂಭ ನಡೆಯಿತು. ಸಂಗೀತ ಶಿಕ್ಷಕ ಬಾಬೂ ಬೂಸಾರಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಯಶೋದಾ ಹರಿಶೇಠ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಕಸಾಪ ಪಣಜಿ ಘಟಕದ ಗೌ.ಕೋಶಾಧ್ಯಕ್ಷ ನವೀನಕುಮಾರ್ ಹೊಸಪೇಟ ವಂದನಾರ್ಪಣೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ