ತುಳುನಾಡಿನಲ್ಲಿ ಪ್ರಜ್ವಲಿಸುತ್ತಿರುವ ಅಮೋಘ ಪ್ರತಿಭೆ ಪ್ರವೀಣ್ ಜಯ್ ವಿಟ್ಲ

Upayuktha
0

ಮುತ್ತು ,ರತ್ನಗಳ ನಾಡೆಂದೇ ಪ್ರಸಿದ್ಧಿ ಹೊಂದಿರುವ ತುಳುವ ನಾಡಿನಲ್ಲಿ ತಮ್ಮ ಪ್ರಾವೀಣ್ಯತೆ ಮೂಲಕ ಮಿಂಚುತ್ತಿದ್ದಾರೆ ಪ್ರವೀಣ್ ಜಯ್ ವಿಟ್ಲ. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ,ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ತಿಮ್ಮಪ್ಪ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಗಳ ಸುಪುತ್ರ. ಪ್ರಾರ್ಥಮಿಕ ಶಿಕ್ಷಣವನ್ನು ಅಗಲ್ಪಾಡಿ ಅನ್ನಪೂರ್ಣೇಶ್ವರಿ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ವಿಟ್ಲದ ಸೈಂಟ್ ರೀಟಾ ಶಾಲೆಯಲ್ಲಿ ಮುಗಿಸಿದ್ದಾರೆ. ಹಾಗೆಯೇ ಪಿಯುಸಿ ಶಿಕ್ಷಣವನ್ನು ವಿಠಲ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದಾರೆ. ಸಾಹಿತ್ಯ, ಸಂಗೀತ, ನಿರೂಪಣೆ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಗಳಿಸಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಸಾಧನೆ ಸಾಧಕನ ಕ್ಷೇತ್ರದ ಸಾರ್ಥಕತೆ


ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಿ ಸಹಕರಿಸಿದವರು ಇವರ ಗುರುಗಳಾದ "ಗಣರಾಜ್ ಭಟ್" ಬಂಟ್ವಾಳ. ಮಿತ್ರರ ಪ್ರೋತ್ಸಾಹದಲ್ಲಿ ಇವರ ಗಾನಸಿರಿಯ ಕಂಪು, ಹಸಿರು ಚೆಲ್ಲಿದ ಪ್ರಕೃತಿಯ ಹಾಗೆ ಕೇರಳ, ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಪಸರಿಸಿದೆ. ಇವರು ಸುಮಾರು 1,300ವೇದಿಕೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ತುಳು, ಕನ್ನಡ, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ಹಾಡುತ್ತಾರೆ. ಸುಮಾರು 15 ಹಾಡಿಗೆ ಸಂಗೀತ ನಿರ್ದೇಶನವನ್ನೂ ಮಾಡಿರುತ್ತಾರೆ. ಸಂಗೀತ ಕ್ಷೇತ್ರದಲ್ಲಿ "ಸಂಗೀತ ರತ್ನ ರಾಜ್ಯ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.


ಸಾಹಿತ್ಯಕ್ಕೂ ಸೈ


ಸಂಗೀತದಲ್ಲಿ ಅಷ್ಟೇ ಅಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಹಲವಾರು ಕಥೆ, ಕವನ, ವಿಮರ್ಶೆ, ಚುಟುಕುಗಳನ್ನು ಬರೆದು ಖ್ಯಾತಿ ಪಡೆದಿದ್ದಾರೆ. ಹಾಗೆ ತುಳುವಿನಲ್ಲಿ 'ಸತ್ಯತೆರಿನಗ', 'ಇಲ್ಲದ ಬೋಲ್ಪು', ಹಾಗೂ ಕನ್ನಡದಲ್ಲಿ 'ನಕ್ಷತ್ರ ಪ್ರಭ', 'ಕರುಣಾಳು ಬೆಳಕು', 'ಭಗವಾನ್ ನಿತ್ಯಾನಂದ' ಹೀಗೆ ಅನೇಕ ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಭಗವಾನ್ ನಿತ್ಯಾನಂದ ನಾಟಕದಲ್ಲಿ ನಿತ್ಯಾನಂದ ಅವರ ಭಕ್ತರನ್ನು ಸೇರಿಸಿ ನೂರಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ಕೊಟ್ಟ ಹಿರಿಮೆ ಇವರದು.


ವಿಶಿಷ್ಟ ಸಾಧನೆಗಳು


ತುಳು ಗೀತೆಗಳನ್ನು ರಚಿಸಿ ಆ ಹಾಡಿಗೆ ಧ್ವನಿಯಾಗಿದ್ದಾರೆ. ನಾಟಕ, ಗೀತೆ, ಕಿರುಚಿತ್ರ ರಚನೆ ಮತ್ತು ನಿರ್ದೇಶನಗಳನ್ನು ಮಾಡಿರುತ್ತಾರೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ. 'ಪಿಲಿ ಮಾದವನ್' ಕಿರುಚಿತ್ರವನ್ನು ನಿರ್ಮಾಣ ಮಾಡಿರುತ್ತಾರೆ, ಇದಲ್ಲದೆ ಫ್ರೆಂಡ್ ಶಿಪ್, ರಹದಾರಿ ಹಾಗೂ ಚಲನಚಿತ್ರವಾದ ಗುಡ್ಡೆದ ಭೂತ ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಿರುತ್ತಾರೆ.


ನೆನಪು, ಮಕರಜ್ಯೋತಿ, ಪಿಂಗಾರ, ಆರಾಧನೆ ಹೀಗೆ ಸುಮಾರು 30ಕ್ಕೂ ಆಲ್ಬಮ್ ಸಾಂಗ್ ಮಾಡಿದ್ದಾರೆ. ನಿನಗಾಗೆ ಕಾದಿರುವೆ, ಕಳೆದೋದೆನಾ, ಕುಡ್ಲದ ರಕ್ಕಮ್ಮ, ಶ್ರೀರಾಮ್, ಟ್ರಾಫಿಕ್ ಜಂಜಾಟ, ಇದೆಲ್ಲವೂ ಇತ್ತೀಚೆಗಷ್ಟೇ ತೆರೆಕಂಡ ಆಲ್ಬಮ್ ಸಾಂಗ್ಸ್ ಆಗಿದ್ದು, ಜನ ಮೆಚ್ಚುಗೆ ಪಡೆದಿದೆ.


ಪ್ರವೀಣ್ ಜಯ್ ರವರು ಮಕ್ಕಳಿಗೆ ಸಂಗೀತ ತರಬೇತಿ ತಂಡ ರಚಿಸಿ ಸುಮಾರು 100ಕ್ಕೂ ಅಧಿಕ ಮಕ್ಕಳಿಗೆ ಚಲನಚಿತ್ರ ಗೀತೆ, ಭಾವಗೀತೆ, ಭಕ್ತಿಗೀತೆ ತರಬೇತಿ ನೀಡಿ ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇವರ ಬಳಿ ಸಂಗೀತ ಕಲಿಯುವ ಮಕ್ಕಳು ಈಗಾಗಲೇ ಹಲವಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಭಕ್ತಿ ಪಿಂಗಾರ ,ಶಿವಗಂಗಾ, ಫೀಲ್ ಮೈ ಲವ್, ದೇವ ಸಂಗಮ, ಶಿವ ಲಹರಿ, ದುನಿಫ್, ಇವೆಲ್ಲದಕ್ಕೂ ಸಾಹಿತ್ಯ ಬರೆದು ಹಾಡಿರುತ್ತಾರೆ.


"ನನಗೆ ಸಮಾಜದಲ್ಲಿ ಗೌರವ ದೊರಕಿದೆ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ಈ ಸಾಧನೆಗೆ ತಂದೆ-ತಾಯಿ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹ ಕಾರಣ. ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿದೆ."

-ಪ್ರವೀಣ್ ಜಯ್ ವಿಟ್ಲ


ಹುಟ್ಟು ಉಚಿತ ಸಾವು ಖಚಿತ ಎಂಬಂತೆ ಹುಟ್ಟಿದವನು ಸಾಯಲೇಬೇಕು ಬದುಕಿರುವ ಸಮಯದಲ್ಲಿ ಜೀವನದಲ್ಲಿ ಸಾಧನೆ ಮಾಡಿ, ತಮ್ಮ ಹೆಸರು ಶಾಶ್ವತವಾಗಿ ಇರಬೇಕೆಂಬುದು ಇವರ ಧ್ಯೇಯ. ಪ್ರವೀಣ್ ಜಯ್ ವಿಟ್ಲ ಇವರು ಸಾಧನೆಯ ಶಿಖರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ. ಈ ಪ್ರತಿಭೆಯ ಕನಸೆಲ್ಲವೂ ಆದಷ್ಟು ಬೇಗ ನನಸಾಗಲಿ ಎಂಬುದೇ ನನ್ನ ಹಾರೈಕೆ.


✍ ದೀಕ್ಷಿತ ಗಿರೀಶ್

ಪತ್ರಿಕೋದ್ಯಮ ವಿದ್ಯಾರ್ಥಿನಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top